ಒಂದೇ ಒಂದು ಚಾಕೊಲೇಟ್ ಕದ್ದ ಆರೋಪದ ಮೇಲೆ ಐವರು ಬಾಲಕರನ್ನು ಅಂಗಡಿ ಮಾಲೀಕನೋರ್ವ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಅಮಾನವೀಯ ಘಟನೆ ಬಿಹಾರದ ಗ್ರಾಮವೊಂದರಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಸೀತಾಮರ್ಹಿ ಜಿಲ್ಲೆಯ ಮಲ್ಲಾಹಿ ಗ್ರಾಮದ ಅಂಗಡಿ ಮಾಲೀಕ ದುಷ್ಕೃತ್ಯವೆಸಗಿದ್ದಾರೆ. ಬಾಲಕರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಒಂದೇ ಹಗ್ಗಕ್ಕೆ ಅವರೆಲ್ಲರನ್ನು ಕಟ್ಟಿ, ಕತ್ತಿಗೆ ಚಪ್ಪಲಿಯ ಹಾರಹಾಕಿ ಗ್ರಾಮದ ಮಾರುಕಟ್ಟೆ ಪ್ರದೇಶದಲ್ಲಿ ಮೆರವಣಿಗೆ ನಡೆಸಿದ್ದಾರೆ.
ಬಿಳಿ ಸೀಮೆಸುಣ್ಣದಿಂದ ಮಕ್ಕಳ ಮೈಮೇಲೆ ಗೆರೆಗಳನ್ನು ಹಾಕಿ ವಿಕೃತಿ ಮೆರೆಯಲಾಗಿತ್ತು. ಮಕ್ಕಳತ್ತ ಗುರಿ ಮಾಡಿ ಕೈಯಲ್ಲಿ ಬಡಿಗೆ ಹಿಡಿದಿದ್ದ ಅಂಗಡಿ ಮಾಲೀಕ, “ಎಲ್ಲ ಮಕ್ಕಳನ್ನು ನನ್ನ ಅಂಗಡಿಯಿಂದ ಕಳವು ಮಾಡಿದಾಗ ಹಿಡಿಯಲಾಗಿದೆ” ಎಂದು ಹೇಳಿದ್ದಾರೆ. ಅವಮಾನದಿಂದ ಮಕ್ಕಳು ಮುಖಮುಚ್ಚಿಕೊಂಡಿದ್ದರೆ, ಅವರ ಸುತ್ತಲೂ ಗ್ರಾಮಸ್ಥರು ಅಣಕವಾಡುತ್ತಿದ್ದರು ಎಂದು ವರದಿಗಳು ವಿವರಿಸಿವೆ.
ಇಷ್ಟೇ ಅಲ್ಲದೆ, ಅಂಗಡಿ ಮಾಲೀಕ ಕ್ಯಾಮರಾ ಮುಂದೆ ಮಕ್ಕಳು ತಮ್ಮ ಹಾಗೂ ತಮ್ಮ ತಂದೆಯಂದಿರ ಹೆಸರು ಹೇಳುವಂತೆ ಬಲವಂತಪಡಿಸಿದ್ದಾರೆ. ಬಾಲಕರ ಪೈಕಿ ಒಬ್ಬನ ತಲೆಯನ್ನು ಜಜ್ಜಿ ಕ್ಯಾಮರಾ ನೋಡು ಎಂದು ದೌರ್ಜನ್ಯ ನಡೆಸಿದ್ದಾರೆ ಎಂದಿವೆ.
ದೌರ್ಜನ್ಯದ ವೇಳೆ “ನಾನು ಒಂದೇ ಒಂದು ಸ್ನಿಕ್ಕರ್ಸ್ (ಚಾಕೊಲೇಟ್) ತೆಗೆದಿದ್ದೆ” ಎಂದು ಒಬ್ಬ ಬಾಲಕ ಹೇಳಿದ್ದಾನೆ. ಜನನಿಬಿಡ ಮಾರುಕಟ್ಟೆಯಲ್ಲಿ ಮಕ್ಕಳನ್ನು ಬೆತ್ತಲು ಮೆರವಣಿಗೆ ಮಾಡಿದರೂ, ದೌರ್ಜನ್ಯ ತಡೆಯಲು ಯಾರೂ ಮಧ್ಯಪ್ರವೇಶಿಸಿಲ್ಲ. ಬದಲಾಗಿ, ಅವರು ದುಷ್ಕೃತ್ಯ ವಿಡಿಯೋ ಸೆರೆ ಹಿಡಿಯುವುದರಲ್ಲಿ ನಿರತರಾಗಿದ್ದರು. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಪೊಲೀಸರು ಅಂಗಡಿ ಮಾಲೀಕ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ವಿಡಿಯೋ ಚಿತ್ರೀಕರಿಸಿದ ಮಾಧ್ಯಮ ಪ್ರತಿನಿಧಿಯ ವಿರುದ್ಧವೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸೀತಾಮರ್ಹಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರೋಹಿತ್ ವೇಮುಲ ಕಾಯ್ದೆಯ ಕರಡು ಪ್ರತಿಯನ್ನು ಮತ್ತಷ್ಟು ಬಲಪಡಿಸಲು ವಿಶ್ವಸಂಸ್ಥೆಯಿಂದ ಸರಕಾರಕ್ಕೆ ಪತ್ರ


