ನವದೆಹಲಿ: ದೆಹಲಿ ಪೊಲೀಸರು ಹಲವಾರು ವಿದ್ಯಾರ್ಥಿ ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ, ಪೊಲೀಸ್ ಕಸ್ಟಡಿಯಲ್ಲಿ ಅವರಿಗೆ ಕ್ರೂರ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪಗಳ ಕುರಿತು 29 ನಾಗರಿಕ ಹಕ್ಕುಗಳ ಸಂಘಟನೆಗಳು ಸಮಗ್ರ ಮತ್ತು ಸ್ವತಂತ್ರ ತನಿಖೆಗೆ ಜಂಟಿಯಾಗಿ ಆಗ್ರಹಿಸಿವೆ. ಜುಲೈ ಮಧ್ಯದಲ್ಲಿ ವರದಿಯಾದ ಈ ಘಟನೆಗಳು, ದೇಶದಲ್ಲಿ ಸರ್ಕಾರದ ದಮನಕಾರಿ ನೀತಿಗಳು ಹೆಚ್ಚುತ್ತಿವೆ ಎಂಬ ಆತಂಕವನ್ನು ಸೃಷ್ಟಿಸಿವೆ ಎಂದು ಸಂಘಟನೆಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
ಜುಲೈ 9ರಿಂದ ಜುಲೈ 19ರ ನಡುವೆ, ಭಗತ್ ಸಿಂಗ್ ಛಾತ್ರಾ ಏಕ್ತಾ ಮಂಚ್ (BSCEM) ಮತ್ತು ಫೋರಂ ಅಗೈನ್ಸ್ಟ್ ಕಾರ್ಪೊರೇಟೈಸೇಶನ್ ಮತ್ತು ಮಿಲಿಟರೈಸೇಶನ್ (FACAM) ನಂತಹ ಎಡಪಂಥೀಯ ಯುವ ಸಂಘಟನೆಗಳಿಗೆ ಸೇರಿದ ಅನೇಕ ವಿದ್ಯಾರ್ಥಿ ಕಾರ್ಯಕರ್ತರನ್ನು ದೆಹಲಿ ಮತ್ತು ಹರಿಯಾಣದ ವಿವಿಧ ಪ್ರದೇಶಗಳಿಂದ ಅಕ್ರಮವಾಗಿ ಬಂಧಿಸಿ ಕರೆದೊಯ್ಯಲಾಗಿದೆ ಎಂದು ಈ ಸಂಘಟನೆಗಳು ವರದಿ ಮಾಡಿವೆ. ಈ ಬಂಧನಗಳು ಯಾವುದೇ ಕಾನೂನುಬದ್ಧ ವಾರಂಟ್ ಇಲ್ಲದೆ ನಡೆದಿದ್ದು, ಬಂಧಿತರಿಗೆ ಕಾನೂನು ಸಲಹೆಗಾರರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ. ಅಲ್ಲದೆ, ಕಾನೂನುಬದ್ಧವಾಗಿ ನಿಗದಿಪಡಿಸಿದ 24 ಗಂಟೆಗಳ ಒಳಗಾಗಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸದೆ ಏಕಾಂತದಲ್ಲಿ ಇರಿಸಲಾಗಿತ್ತು ಎಂದು ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಭಾರತೀಯ ಕಾನೂನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ.
ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಬೆದರಿಕೆಗಳು
ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ಪೊಲೀಸ್ ಠಾಣೆಯಲ್ಲಿ ಬಂಧಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಈ ಮಾನವ ಹಕ್ಕು ಸಂಘಟನೆಗಳು ಗಂಭೀರ ಆರೋಪಗಳನ್ನು ಮಾಡಿವೆ. ಪೊಲೀಸರು ಕಾರ್ಯಕರ್ತರ ಬಟ್ಟೆಗಳನ್ನು ಬಿಚ್ಚಿಸಿ, ಕ್ರೂರವಾಗಿ ಥಳಿಸಿದ್ದಾರೆ ಮತ್ತು ವಿದ್ಯುತ್ ಶಾಕ್ ನೀಡಿದ್ದಾರೆ. ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಬೆದರಿಕೆಗಳಿಗೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಕೆಲವು ವಿದ್ಯಾರ್ಥಿಗಳ ತಲೆಗಳನ್ನು ಶೌಚಾಲಯದ ಬೌಲ್ಗಳಲ್ಲಿ ಮುಳುಗಿಸಿದ್ದು ಮತ್ತು ಬಂಧಿತ ವಿದ್ಯಾರ್ಥಿನಿಯರಿಗೆ ರಾಡ್ಗಳನ್ನು ತೋರಿಸಿ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಈ ಕ್ರೂರ ಕೃತ್ಯಗಳು ಬಲವಂತದ ನಾಪತ್ತೆಗಳು ಮತ್ತು ಕಸ್ಟಡಿ ಚಿತ್ರಹಿಂಸೆಗೆ ಸಮನಾಗಿವೆ, ಇದು ದೇಶೀಯ ಕಾನೂನು ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳನ್ನು ತೀವ್ರವಾಗಿ ಉಲ್ಲಂಘಿಸುತ್ತದೆ ಎಂದು ಸಂಘಟನೆಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
ವಿದ್ಯಾರ್ಥಿ ಕಾರ್ಯಕರ್ತೆ ಬಾದಲ್ ಅವರ ನುಡಿಮುತ್ತುಗಳು
ಕಳೆದ ವಾರ ಬಂಧಿತರಲ್ಲಿ ಒಬ್ಬರಾದ ವಿದ್ಯಾರ್ಥಿ ಕಾರ್ಯಕರ್ತೆ ಬಾದಲ್ ಅವರು ಮಾಧ್ಯಮವೊಂದಕ್ಕೆ ತಾವು ಅನುಭವಿಸಿದ ಚಿತ್ರಹಿಂಸೆಗಳ ಕಠಿಣ ಅನುಭವವನ್ನು ವಿವರಿಸಿದ್ದಾರೆ. “ನಾನು ನನ್ನ ಹುಟ್ಟೂರಲ್ಲಿ ಇದ್ದೆ. ಆದರೆ ದೆಹಲಿಗೆ ಮರಳಿದ ತಕ್ಷಣ, ದೆಹಲಿಯ ವಿಶೇಷ ಸೆಲ್ನ ಪೊಲೀಸ್ ಅಧಿಕಾರಿಗಳು ಯಾವುದೇ ಮುನ್ಸೂಚನೆ ಇಲ್ಲದೆ ನನ್ನನ್ನು ಕರೆದೊಯ್ದರು” ಎಂದು ಅವರು ಹೇಳಿದ್ದಾರೆ. ಒಂದು ವಾರ ಕಾಲ, ಬಾದಲ್ ಮತ್ತು ಇತರರನ್ನು ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಗಿದ್ದು, ಅಲ್ಲಿ ಅವರಿಗೆ ನಿರಂತರವಾಗಿ ಚಿತ್ರಹಿಂಸೆ ಮತ್ತು ಪೊಲೀಸ್ ದೌರ್ಜನ್ಯ ಎದುರಾಗಿದೆ. “ಪೊಲೀಸರು ನಮಗೆ ಹೊಡೆದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಗಿಂತ ಹೆಚ್ಚು ಥಳಿಸಲಾಗಿದೆಯಾದರೂ ಅಕ್ರಮವಾಗಿ ಬಂಧಿತ ಎಲ್ಲರಿಗೂ ಹಲ್ಲೆ ಮಾಡಲಾಗಿದೆ. ನನಗೆ ಮೌಖಿಕವಾಗಿ ಕಿರುಕುಳ ನೀಡಲಾಯಿತು, ಮತ್ತು ಒಬ್ಬ ಕುಡಿದ ಪೊಲೀಸ್ ಅಧಿಕಾರಿ ಕೂಡ ನನ್ನನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ ಎಂದು ಬಾದಲ್ ಅವರ ಹೇಳಿಕೆಯನ್ನು ಸಂಘಟನೆಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ. ಈ ನೇರ ಸಾಕ್ಷ್ಯವು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ಬಸ್ತರ್, ಮಣಿಪುರ ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಪೊಲೀಸ್ ಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಿ ಈ ರೀತಿ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ. ಈ ರೀತಿಯ ಪೊಲೀಸ್ ದೌರ್ಜನ್ಯವು ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸುವ ವ್ಯಾಪಕವಾದ ದಮನಕಾರಿ ಕಾರ್ಯತಂತ್ರದ ಭಾಗವಾಗಿವೆ ಎಂದು ಮಾನವ ಹಕ್ಕುಗಳ ಸಂಸ್ಥೆಗಳು ವಾದಿಸಿವೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಭಾರತೀಯ ಅಧಿಕಾರಿಗಳ ಸಾರ್ವಜನಿಕ ಹೇಳಿಕೆಗಳನ್ನು ಸಂಘಟನೆಗಳು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿವೆ. ಈ ಹೇಳಿಕೆಗಳು ನಾಗರಿಕ ಸಮಾಜವನ್ನು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೆಂದು ಬಿಂಬಿಸುತ್ತವೆ, ಇದು ಭಿನ್ನಮತೀಯ ಧ್ವನಿಗಳನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳನ್ನು ಸೂಚಿಸುತ್ತದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಭಾರತದಲ್ಲಿನ ಬಂಧನದಲ್ಲಿರುವವರ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಪ್ರಮುಖ ಕಾಳಜಿಗಳನ್ನು ವ್ಯಕ್ತಪಡಿಸಿ, ಹಿಂದುಸ್ ಫಾರ್ ಹ್ಯೂಮನ್ ರೈಟ್ಸ್ (UK ಮತ್ತು USA), ಇಂಡಿಯನ್ ವರ್ಕರ್ಸ್ ಅಸೋಸಿಯೇಷನ್ (GB), ಇಂಡಿಯನ್ ಅಮೇರಿಕನ್ ಮುಸ್ಲಿಂ ಕೌನ್ಸಿಲ್, ಮತ್ತು ಯುರೋಪ್ ಹಾಗೂ ಉತ್ತರ ಅಮೆರಿಕಾದಾದ್ಯಂತದ ಹಲವಾರು ವಿದ್ಯಾರ್ಥಿ ಮತ್ತು ಶೈಕ್ಷಣಿಕ ಸಂಸ್ಥೆಗಳು ಈ ಹೇಳಿಕೆಗೆ ಸಹಿ ಹಾಕಿವೆ.
ಹೇಳಿಕೆಯ ಪ್ರಮುಖ ಅಂಶಗಳು
ಬಂಧನ ದಾಖಲೆಗಳ ಕೊರತೆ, ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದಿರುವುದು, ಅಥವಾ ಕುಟುಂಬಗಳು/ಕಾನೂನು ಪ್ರತಿನಿಧಿಗಳೊಂದಿಗೆ ಔಪಚಾರಿಕ ಸಂವಹನ ಇಲ್ಲದಿರುವುದು ಭಾರತೀಯ ಸಾಂವಿಧಾನಿಕ ರಕ್ಷಣೆಗಳು ಮತ್ತು ಭಾರತವು ಸಹಿ ಮಾಡಿರುವ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದ (International Covenant on Civil and Political Rights – ICCPR) “ತೀವ್ರ ಉಲ್ಲಂಘನೆ” ಎಂದು ಹೇಳಿಕೆ ಸ್ಪಷ್ಟಪಡಿಸಿದೆ. “ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಪ್ರಭುತ್ವ ಹಿಂಸೆಯ ಸಾಮಾನ್ಯೀಕರಣ” ಎಂದು ಇದನ್ನು ವಿವರಿಸಲಾಗಿದೆ. ಈ ವಿಷಯಕ್ಕೆ ತಕ್ಷಣದ ಹೊಣೆಗಾರಿಕೆ, ಸಂತ್ರಸ್ತರಿಗೆ ಕಾನೂನು ಪರಿಹಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಹೇಳಿಕೆ ಕೋರಿದೆ.
ಧರ್ಮಸ್ಥಳ ಪ್ರಕರಣ: ಮಾಧ್ಯಮ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ


