Homeಕರ್ನಾಟಕಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಲೇಬೇಕು; ಏಕೆ ಮತ್ತು ಹೇಗೆ?: ಕರ್ನಾಟಕ ಜನಶಕ್ತಿಯಿಂದ ಹೇಳಿಕೆ

- Advertisement -
- Advertisement -

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಶಿಪಾರಸ್ಸು ಮಾಡಿರುವ ಡಾ. ನಾಗಮೋಹನ್‌ ದಾಸ್‌ ವರದಿಯನ್ನು ಮತ್ತೆ ಮುಂದಕ್ಕೆ ತಗೆದುಕೊಂಡು ಹೋಗದೆ, ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ, ಈ ಕೂಡಲೇ ಜಾರಿ ಮಾಡಬೇಕೆಂದು ಕರ್ನಾಟಕ ಜನಶಕ್ತಿ ಹೇಳಿದೆ.

ಈ ಕುರಿತು ಸಂಘಟನೆಯ ಪರವಾಗಿ ನೂರ್‌ ಶ್ರೀಧರ್‌, ಮಲ್ಲಿಗೆ ಸಿರಿಮನೆ, ಕೆ.ಎಲ್. ಅಶೋಕ್,  ಕುಮಾರ್‌ ಸಮತಳ ಅವರು ಹೇಳಿಕೆ ಹೊರಡಿಸಿ, ಖಾಸಗೀಕರಣ ಹಾಗೂ ಗುತ್ತಿಗೆಕರಣಗಳು ಮೀಸಲಾತಿಯನ್ನು ನೆಲಸಮ ಮಾಡುತ್ತಾ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲಾ ಸಮುದಾಯಗಳಲ್ಲೂ ಶಿಕ್ಷಿತ ಯುವಜನರ ಸಂಖ್ಯೆ ಹೆಚ್ಚುತ್ತಿದೆ, ಆದರೆ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ. ಪ್ರತಿಯೊಂದು ತಳ ಸಮುದಾಯಗಳಲ್ಲೂ ವಿದ್ಯಾವಂತ ನಿರುದ್ಯೋಗಿಗಳ ಅಥವಾ ಅರೆಬರೆ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವಕಾಶಗಳೇ ವಿರಳವಾಗುತ್ತಿರುವ ಸಂದರ್ಭದಲ್ಲಿ ಒಳ ಮೀಸಲಾತಿಯ ವಿಚಾರ ಬಂದೊಡನೆ ʼಇರುವ ಮೀಸಲಾತಿಯನ್ನೂ ಇನ್ನ್ಯಾರು ಕಸಿದುಕೊಂಡುಬಿಡುತ್ತಾರೋ ಎಂಬ ಆತಂಕಕ್ಕೆ ಶೋಷಿತ ಸಮುದಾಯಗಳು ಒಳಗಾಗುತ್ತಿವೆ. ಪರ – ವಿರೋಧದ ವಾದ ವಿವಾದಗಳು ಶುರುವಾಗುತ್ತಿವೆ. ಈ ಆತಂಕವನ್ನು ರಾಜಕೀಯ ಅಸ್ತ್ರ ಮಾಡಿಕೊಳ್ಳಲು ಕಾಯುತ್ತಿರುವ ಶಕ್ತಿಗಳು ಉಪ್ಪು ಸವರಿ ಕೆರಳಿಸುವ ಕೆಲಸ ಮಾಡುತ್ತಿವೆ. ಈ ಪರಿಸ್ಥಿತಿ ನಮ್ಮನ್ನು ಮತ್ತಷ್ಟು ದುರ್ಬಲಗೊಳಿಸುತ್ತಿದೆ. ಶೋಷಿತ ಸಮುದಾಯಗಳ ನಡುವಿನ ಒಡಕನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶೋಷಿತ ಸಮುದಾಯಗಳ ಐಕ್ಯತೆ ಮತ್ತು ಎಲ್ಲಾ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಬಯಸುವವರೆಲ್ಲರೂ ಸಂಯಮದಿಂದ ಆಲೋಚಿಸಿ, ಕ್ರಿಯಾಶೀಲ ಪಾತ್ರವಹಿಸಿ ಈ ವಿವಾದವನ್ನು ಅಂತ್ಯಗೊಳಿಸಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲ, ಶೋಷಿತರೆಲ್ಲರೂ ಜೊತೆಗೂಡಿ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು, ಖಾಸಗಿ ಮತ್ತು ಗುತ್ತಿಗೆ ಕ್ಷೇತ್ರಗಳಲ್ಲೂ ಮೀಸಲಾತಿ ದಕ್ಕಿಸಿಕೊಳ್ಳಲು ಹೋರಾಟ ರೂಪಿಸಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯು ಸಲಹೆ ನೀಡಿದೆ.

ಸರ್ಕಾರ ಮತ್ತೆ ಕಾಲಾಹರಣ ಮಾಡದೆ, ರಾಜಕೀಯ ಲಾಭ – ನಷ್ಟಗಳ ಲೆಕ್ಕ ಹಾಕುತ್ತಾ ಕೂರದೆ, ಎಲ್ಲಾ ಸಮುದಾಯಗಳ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯ ಸಮ್ಮತವಾಗಿ ಮತ್ತು ವಿವೇಕಯುತವಾಗಿ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲು ಮುಂದಾಗಬೇಕಿದೆ ಎಂದು ಅದು ಒತ್ತಾಯಿಸಿದೆ.

ಮತ್ತೆ ಮುಂದೆ ಹೋಗದೆ, ಅಗತ್ಯ ಪರಿಷ್ಕರಣೆಗಳೊಂದಿಗೆ, ಡಾ. ನಾಗಮೋಹನ್‌ ದಾಸ್‌ ವರದಿ ಈ ಕೂಡಲೇ ಅನುಮೋದನೆಗೊಳ್ಳಬೇಕು ಏಕೆ? ಎಂದು ಪ್ರಕಟಣೆಯಲ್ಲಿ ಈ ಕೆಳಗಿನಂತೆ ವಿವರಿಸಿದೆ.

1. ಪರಿಶಿಷ್ಟ ಜಾತಿಗಳೊಳಗೆ ವಿವಿಧ ಕುಲ ಸಮುದಾಯಗಳು ಇರುವುದು ವಾಸ್ತವ, ಅವುಗಳ ಸಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಗಣನೀಯ ವ್ಯತ್ಯಾಸ ಇರುವುದೂ ಸತ್ಯ. ದೊಡ್ಡ ಸಂಖ್ಯಾಬಲವಿದ್ದರೂ ಅವಕಾಶಗಳನ್ನು ಸಾಪೇಕ್ಷವಾಗಿ ಕಡಿಮೆ ಪಡೆದಿರುವ ಮಾದಿಗ ಸಮುದಾಯ ಸುಮಾರು ಮೂರು ದಶಕಳಿಂದ ಒಳ ಮೀಸಲಾತಿಗಾಗಿ ಆಗ್ರಹಿಸಿ ಹೋರಾಡುತ್ತಾ ಬರುತ್ತಿದೆ. ತನ್ನ ಹೋರಾಟದ ಮೂಲಕ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಪ್ರೀಂ ಕೋರ್ಟು ಒಳ ಮೀಸಲಾತಿಯ ಹಕ್ಕೊತ್ತಾಯವನ್ನು ಅನುಮೋದಿಸುವಂತೆ ಮಾಡುವುದರಲ್ಲಿ ಯಶಸ್ವಿಗೊಂಡಿದೆ. ಇದು ಆ ಸಮುದಾಯ ಲಾಬಿ ಮಾಡಿ ಪಡೆಯುತ್ತಿರುವ ಹಕ್ಕಲ್ಲ, ಸತತ ಸಂಘರ್ಷ ನಡೆಸಿ ಪಡೆಯುತ್ತಿರುವ ಪಾಲು ಎಂಬುದನ್ನು ನಾವು ನೀವೆಲ್ಲರೂ ಒಪ್ಪಿಕೊಳ್ಳಲೇಬೇಕಿದೆ. ಈ ಸಮುದಾಯ ಬಹಳ ಕಾದಿದೆ. ಇನ್ನು ಕಾಯಿಸುವುದು ಯಾವ ರೀತಿಯಿಂದಲೂ ನ್ಯಾಯವಲ್ಲ. ಹಾಗಾಗಿಯೇ ಒಳ ಮೀಸಲಾತಿ ಈ ಬಾರಿ ಜಾರಿಯಾಗಲೇಬೇಕಿದೆ.

2. ಒಳ ಮೀಸಲಾತಿ ವಿವಾದದಿಂದಾಗಿ ಶೋಷಿತರ ನಡುವಿನ ಐಕ್ಯತೆಗೆ ಈಗಾಗಲೇ ಸಾಕಷ್ಟು ಧಕ್ಕೆಯಾಗಿದೆ. ಪರಸ್ಪರ ದೋಷಾರೋಪಣೆ ಮಾಡುವ, ಕೆಲವೊಮ್ಮೆ ಶತ್ರುಗಳಂತೆ ಕಾಣುವ ಮನೋಭಾವ ಸಮುದಾಯಗಳ ನಡುವಿನ ಬಂಧವನ್ನು ಸಾಕಷ್ಟು ದುರ್ಬಲಗೊಳಿಸಿದೆ. ಇದರ ದುರ್ಲಾಭ ಪಡೆದುಕೊಂಡ ಮನುವಾದಿ ಶಕ್ತಿಗಳು ಮಾದಿಗ ಸಮುದಾಯದ ಒಂದು ಭಾಗವನ್ನು ಈಗಾಗಲೇ ತಮ್ಮ ತೆಕ್ಕೆಗೆ ಎಳೆದುಕೊಂಡಿವೆ. ಮೀಸಲಾತಿಯನ್ನೇ ವಿರೋಧಿಸುವ ಮನುವಾದಿಗಳು ಅವಕಾಶವಾದಿ ರಾಜಕೀಯ ಉದ್ದೇಶದಿಂದ ತಾವು ಮಾದಿಗರ ಪರ ಇರುವಂತೆ ಕಪಟ ನಟನೆ ಮಾಡುತ್ತಿದ್ದಾರೆ. ಒಂದು ವೇಳೆ ಈ ಬಾರಿ ಇದು ಇತ್ಯರ್ಥಗೊಳ್ಳದೆ ಮುಂದುವರಿದಲ್ಲಿ ಪರಿಶಿಷ್ಟ ಸಮುದಾಯಗಳ ನಡುವಿನ ಮಾನಸಿಕ ಬಿರುಕು ಮತ್ತಷ್ಟು ಹೆಚ್ಚಾಗುತ್ತದೆ, ಮಾತ್ರವಲ್ಲ, ನಮ್ಮ ಸಮುದಾಯದ ಮತ್ತಷ್ಟು ಜನಸಂಖ್ಯೆಯನ್ನು ಬಿಜೆಪಿ ಮತ್ತು ಸಂಘಪರಿವಾರಗಳು ದಿಕ್ಕು ತಪ್ಪಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಅನಾಹುತವನ್ನು ತಡೆಗಟ್ಟಬೇಕಾದರೆ ಈ ಬಾರಿ ಒಳ ಮೀಸಲಾತಿ ಜಾರಿಯಾಗಲೇಬೇಕಿದೆ.

3. ಮೀಸಲಾತಿಯ ಪ್ರಮಾಣ ಹೆಚ್ಚಿಸಿಕೊಳ್ಳಲು ಮತ್ತು ಗುತ್ತಿಗೆ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗುವಂತೆ ಮಾಡಲು ಶೋಷಿತ ಸಮುದಾಯಗಳೆಲ್ಲವೂ ಒಗ್ಗೂಡಿ ಹೋರಾಟ ರೂಪಿಸಬೇಕಾದ ಅಗತ್ಯವಿದೆ. ಆದರೆ ಈಗಿನ ಒಳ ಭಿನ್ನಾಭಿಪ್ರಾಯಗಳನ್ನು ಅಂತ್ಯಗೊಳಿಸಿಕೊಂಡರೇನೇ ಐಕ್ಯ ಚಳವಳಿ ರೂಪಿಸುವ ನಿಟ್ಟಿನಲ್ಲಿ ಮುನ್ಸಾಗಲು ಸಾಧ್ಯವಾಗುತ್ತದೆ. ಹಾಗಾಗಿಯೂ ಒಳ ಮೀಸಲಾತಿ ವಿವಾದ ಇತ್ಯರ್ಥಗೊಳ್ಳಬೇಕಿದೆ.

ಸದ್ಯದ ಸ್ಥಿತಿಯಲ್ಲಿ, ಒಳ ಮೀಸಲಾತಿಯನ್ನು ಜಾರಿ ಮಾಡುವುದರ ಬಗ್ಗೆ ತಾತ್ವಿಕವಾಗಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ, [ಇದ್ದರೂ ಸುಪ್ರೀಂ ಕೋರ್ಟು ಆದೇಶ ನೀಡಿರುವುದರಿಂದ ಜಾರಿ ಮಾಡಲೇಬೇಕಿದೆ]. ಭಿನ್ನಾಭಿಪ್ರಾಯವಿರುವುದು ನಾಗಮೋಹನ್‌ ದಾಸ್‌ ವರದಿ ಶಿಫಾರಸು ಮಾಡಿರುವ ಹಂಚಿಕೆಯಲ್ಲಿ “ತಮಗೆ 0.5% ಅಥವಾ 1% ಕಡಿಮೆ ಆಯಿತು” ಅಥವಾ “ನಮ್ಮ ಪಂಗಡಕ್ಕೆ ಸೇರಬೇಕಾದ ಒಂದೆರಡು ಕುಲಗಳನ್ನು ಮತ್ತೊಂದು ಪಂಗಡದಡಿ ಸೇರಿಸಲಾಗಿದೆ” ಎಂಬ ಭಿನ್ನಸ್ವರಗಳು ಮಾತ್ರ. ಈ ಭಿನ್ನ ಅಭಿಪ್ರಾಯಗಳನ್ನು ದೊಡ್ಡ ಭಿನ್ನಾಭಿಪ್ರಾಯಗಳನ್ನಾಗಿ ಮಾಡಿಕೊಳ್ಳದೆ ಪರಸ್ಪರ ಕೊಟ್ಟು ತಗೆದುಕೊಳ್ಳುವ ವಿಶಾಲ ಮನೋಭಾವದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಎಲ್ಲಾ ಸಾಧ್ಯತೆಗಳಿವೆ ಎಂದು ಜನಶಕ್ತಿ ಸಂಘಟನೆಯು ಆಶಾಭಾವನೆಯನ್ನು ವ್ಯಕ್ತಪಡಿಸಿದೆ.

ಇಂದಿನ ತುರ್ತು ಅಗತ್ಯವೆಂದರೆ; ಸರ್ಕಾರ ಮೀನಾಮೇಶ ಎಣಿಸುತ್ತಾ ಕೂರದೆ, ಎಲ್ಲಾ ಸಮುದಾಯಗಳ ಆತಂಕ ಮತ್ತು ಅಹವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಆಗಸ್ಟ್‌ 19 ರ ಕ್ಯಾಬಿನೆಟ್‌ ಸಬೆಯಲ್ಲಿ ವಿವೇಕಯುವಾದ, ನ್ಯಾಯಸಮ್ಮತವಾದ ಮತ್ತು ಖಚಿತವಾದ ತೀರ್ಮಾನ ತೆಗೆದುಕೊಂಡು ವಿವಾದಕ್ಕೆ ತೆರೆ ಎಳೆಯಬೇಕಿದೆ. ಈ ವಿಚಾರದಲ್ಲಿ ತಮ್ಮ ವಿವೇಕ ಬಳಸಿ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಗಳಿಗೆ ಎಲ್ಲಾ ಶೋಷಿತ ಸಮುದಾಯಗಳೂ ಅವಕಾಶ ನೀಡಬೇಕಿದೆ. ಹಾಗೂ ಕೆಲವು ಅಸಮಾಧಾನಗಳು ಉಳಿದರೆ ಅವನ್ನು ಆಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಲು “ಪರಿಷ್ಕರಣಾ ಸಮಿತಿ” ಯೊಂದನ್ನು ಸರ್ಕಾರ ರಚಿಸಬೇಕಿದೆ ಎಂದು ಅದು ಹೇಳಿದೆ.

ಇದು ಒಂದು ಕುಟುಂಬದ ಸೋದರ-ಸೋದರಿಯರ ನಡುವೆ ಆಗುತ್ತಿರುವ ಪಾಲು ಹಂಚಿಕೆಯ ಪ್ರಶ್ನೆಯಾಗಿರುವುದರಿಂದ ಬಿಸಿಬಿಸಿ ಚರ್ಚೆಗಳು ಸಹಜ, ಆದರೆ ಕುಟುಂಬದ ಘನತೆಗೇ ಧಕ್ಕೆ ಬರದಂತೆ ನಡೆದುಕೊಳ್ಳುವ ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ತೋರಬೇಕಿದೆ. ವಿಶೇಷವಾಗಿ ಕರ್ನಾಟಕದ ಸಾಕ್ಷಿ ಪ್ರಜ್ಞೆಗಳಂತಿರುವ, ಸದಾ ತಳ ಸಮುದಾಯಗಳ ಹಿತ ಕಾಯಲು ತುಡಿದ, ದುಡಿದ ಹಿರಿಯ ಚೇತನಗಳಾದ ಡಾ. ನಾಗಮೋಹನ್‌ ದಾಸ್‌, ಕೋಟಗಾನಹಳ್ಳಿ ರಾಮಯ್ಯ, ದೇವನೂರ ಮಹಾದೇವ, ಎನ್. ವೆಂಕಟೇಶ್‌ ಮುಂತಾದ ಘನ ವ್ಯಕ್ತಿತ್ವಗಳಿಗೆ ಅಪಚಾರವಾಗದಂತೆ ಎಲ್ಲರೂ ಎಚ್ಚರಿಕೆ ವಹಿಸೋಣ ಎಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಘಟನೆಯು ಕೊನೆಯ ವಿನಮ್ರ ಮನವಿ ಮಾಡಿದೆ.

ಸಂಘಟನೆಯು ಈ ಕೆಳಗಿನಂತೆ ಬೇಡಿಕೆಗಳನ್ನು ಇಟ್ಟಿದೆ.

  • ಎಲ್ಲಾ ಶೋಷಿತ ಸಮುದಾಯಗಳ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾರ್ಪಾಡುಗಳ ಜೊತೆ ಸರ್ಕಾರ ಒಳ ಮೀಸಲಾತಿಯನ್ನು ಅನುಮೋದಿಸಿ ಜಾರಿಗೊಳಿಸಲಿ
  • ಪರಸ್ಪರ ಕೊಡುಕೊಳು ಮನೋಭಾವದ ಜೊತೆ ಸಮಸ್ಯೆ ಬಗೆಹರಿಯಲು ಎಲ್ಲಾ ಸಮುದಾಯಗಳು ಸಹಕರಿಸಲಿ
  • ದಶಕಗಳಿಂದ ಕಾದಿರುವ ಮತ್ತು ಹೋರಾಡಿರುವ ಸಮುದಾಯದ ಕನಸು ಈಗಾದರೂ ನನಸಾಗಲಿ
  • ಶೀಘ್ರವೇ ಮೀಸಲಾತಿಯ ವಿಸ್ತರಣೆ ಹಾಗೂ ಅನುಷ್ಠಾನಕ್ಕಾಗಿ ಎಲ್ಲಾ ಶೋಷಿತ ಸಮುದಾಯಗಳ ಐಕ್ಯ ಚಳವಳಿ ಮರುಹುಟ್ಟು ಪಡೆಯಲಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...