ತಮ್ಮ ಪಕ್ಷ ಗೆಲ್ಲಲು ಉದ್ದೇಶಿಸುವ ಕ್ಷೇತ್ರಗಳಿಗೆ ಇತರ ರಾಜ್ಯಗಳ ಜನರನ್ನು ಕರೆತರಲಿದೆ ಎಂದು ಬಿಜೆಪಿ ಕೇರಳ ಘಟಕದ ಉಪಾಧ್ಯಕ್ಷ ಬಿ. ಗೋಪಾಲಕೃಷ್ಣನ್ ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
“ನಾವು ಗೆಲ್ಲಲು ಉದ್ದೇಶಿಸಿರುವ ಕ್ಷೇತ್ರಗಳಿಗೆ ಜಮ್ಮುಕಾಶ್ಮೀರದಿಂದಲೂ ಜನರನ್ನು ಕರೆತರುತ್ತೇವೆ, ಅವರನ್ನು ಒಂದು ವರ್ಷದ ಅವಧಿಗೆ ಅಲ್ಲಿ ನೆಲೆಗೊಳಿಸಿ ಅವರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುತ್ತೇವೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಭವಿಷ್ಯದಲ್ಲಿಯೂ ಅದನ್ನು ಮತ್ತೆ ಮಾಡುತ್ತೇವೆ” ಎಂದು ಗೋಪಾಲಕೃಷ್ಣನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
2024ರ ಲೋಕಸಭಾ ಚುನಾವಣೆಗೆ ಮುನ್ನ ತ್ರಿಶೂರ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರ ನೋಂದಣಿ ಅಕ್ರಮಗಳು ನಡೆದಿವೆ ಎಂಬ ಕಾಂಗ್ರೆಸ್ ಆರೋಪಗಳ ನಡುವೆಯೇ ಗೋಪಾಲಕೃಷ್ಣನ್ರ ಈ ಹೇಳಿಕೆ ಹೊರಬಿದ್ದಿದೆ. ತ್ರಿಶೂರಿನ ಬಿಜೆಪಿ ಸಂಸದ ಸುರೇಶ್ ಗೋಪಿಯವರು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಸುಳ್ಳು ಘೋಷಣೆಯನ್ನು ಸಲ್ಲಿಸಿದ್ದರು ಎಂದೂ ಕಾಂಗ್ರೆಸ್ ಆರೋಪಿಸಿದೆ.
ಸುರೇಶ್ ಗೋಪಿ ಮೂಲಕ ಬಿಜೆಪಿ ಕೇರಳದಲ್ಲಿ ತನ್ನ ಮೊದಲ ಲೋಕಸಭಾ ಕ್ಷೇತ್ರವನ್ನು ಗೆದ್ದಿದೆ. ಸುರೇಶ್ ಗೋಪಿ ಸಿಪಿಐ ಅಭ್ಯರ್ಥಿ ವಿ.ಎಸ್ ಸುನಿಲ್ ಕುಮಾರ್ ಅವರನ್ನು 74,600ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಆದರೆ, 2019 ಮತ್ತು 2024ರ ನಡುವೆ ತ್ರಿಶೂರಿನಲ್ಲಿ ಮತದಾರರ ಸಂಖ್ಯೆಯಲ್ಲಿ 1,46,656ರಷ್ಟು ಶಂಕಾಸ್ಪದ ಮತ್ತು ಅಸಹಜ ಏರಿಕೆ ಕಂಡು ಬಂದಿದ್ದು,ಇದು ಜನಸಂಖ್ಯಾ ಪ್ರವೃತ್ತಿಗೆ ಅನುಗುಣವಾಗಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.
ತ್ರಿಶೂರಿನಲ್ಲಿ ಮತದಾರರ ನೋಂದಣಿಗಾಗಿ ಬಿಜೆಪಿಯು ಸುಳ್ಳು ವಿಳಾಸಗಳನ್ನು ಬಳಸಿಕೊಂಡಿತ್ತು ಎಂಬ ಆರೋಪಗಳನ್ನು ನಿರಾಕರಿಸಿದ ಗೋಪಾಲಕೃಷ್ಣನ್, ತಮ್ಮ ವಿಳಾಸಗಳಲ್ಲಿ ಹೊರಗಿನವರ ಹೆಸರುಗಳನ್ನು ಹೇಗೆ ಸೇರಿಸಲಾಗಿದೆ ಎನ್ನುವುದು ಮನೆ ಮಾಲಿಕರಿಗೆ ತಿಳಿದಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದ ಒಂದೆರಡು ಪ್ರಕರಣಗಳಿರಬಹುದು ಎಂದು ಹೇಳಿದ್ದಾರೆ. ಕ್ಷೇತ್ರದಲ್ಲಿ ನಕಲಿ ಮತದಾನ ನಡೆದಿಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಟಿ ರಮೇಶ್ ಅವರೂ ಆರೋಪಗಳನ್ನು ತಳ್ಳಿಹಾಕಿದ್ದು, ತ್ರಿಶೂರ್ ನಿವಾಸಿಗಳನ್ನು ಮಾತ್ರ ಮತದಾರರನ್ನಾಗಿ ನೋಂದಾಯಿಸಲಾಗಿತ್ತು ಎಂದಿದ್ದಾರೆ. ಚುನಾವಣಾ ಆಯೋಗವು ಮಾನ್ಯತೆ ನೀಡಿರುವ ಆರು ಗುರುತಿನ ಚೀಟಿಗಳಲ್ಲಿ ಒಂದನ್ನು, ಆರು ತಿಂಗಳು ವಾಸವಾಗಿರುವ ಪುರಾವೆ ಮತ್ತು ನೆರೆಹೊರೆಯವರ ದೃಢೀಕರಣ ಹೊಂದಿರುವ ಯಾರೇ ಆದರೂ ಕಾಶ್ಮೀರ ಸೇರಿದಂತೆ ಭಾರತದಲ್ಲಿ ಎಲ್ಲಿಯೇ ಆದರೂ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು ಎಂದು ಬೆಟ್ಟು ಮಾಡಿದ ಅವರು, ನಕಲಿ ಮತದಾರರನ್ನು ಸೇರಿಸಿದ್ದು ಬಿಜೆಪಿಯಲ್ಲ, ಸಿಪಿಎಂ ಮತ್ತು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.
ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಾಂಗ್ರೆಸ್ನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಸುರೇಶ್ ಗೋಪಿ, “ಮತದಾರರ ಪಟ್ಟಿಯಲ್ಲಿ ಕೈವಾಡ ನಡೆದಿದೆ ಎಂಬ ಆರೋಪಕ್ಕೆ ಚುನಾವಣಾ ಆಯೋಗವು ಉತ್ತರಿಸಬೇಕು. ನಾನು ಓರ್ವ ಸಚಿವ ಮತ್ತು ನಾನು ನನ್ನ ಕರ್ತವ್ಯಗಳನ್ನು ಪೂರೈಸಿದ್ದೇನೆ. ಉತ್ತರಿಸಬೇಕಾದವರು ಉತ್ತರಿಸುತ್ತಾರೆ. ನಿಮಗೆ ಹೆಚ್ಚಿನ ಪ್ರಶ್ನೆಗಳಿದ್ದರೆ ಅವರನ್ನು ಕೇಳಿ ಅಥವಾ ವಿಷಯವು ಸರ್ವೋಚ್ಚ ನ್ಯಾಯಾಲಯದ ಮುಂದೆ ಬರುವವರೆಗೆ ಕಾಯಿರಿ” ಎಂದು ಹೇಳಿದ್ದರು.


