Homeಮುಖಪುಟ'ಬಾಡಿ ಶೇಮಿಂಗ್' ಪ್ರಶ್ನೆ ಕೇಳಿದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ನಟಿ ಗೌರಿ ಕಿಶನ್ : ಸಾಮಾಜಿಕ...

‘ಬಾಡಿ ಶೇಮಿಂಗ್’ ಪ್ರಶ್ನೆ ಕೇಳಿದ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ನಟಿ ಗೌರಿ ಕಿಶನ್ : ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ

- Advertisement -
- Advertisement -

ಬಾಡಿ ಶೇಮಿಂಗ್ (ದೇಹಾಕೃತಿಯನ್ನು ಹಿಯಾಳಿಸುವ) ಮತ್ತು ಲೈಂಗಿಕ ಉದ್ದೇಶವನ್ನು ಹೊಂದಿರುವ ಪ್ರಶ್ನೆ ಕೇಳಿದ ಯೂಟ್ಯೂಬ್ ಪತ್ರಕರ್ತನನ್ನು ನಟಿ ಗೌರಿ ಕಿಶನ್ ತೀವ್ರ ತರಾಟೆ ತೆಗೆದುಕೊಂಡ ಘಟನೆ ನವೆಂಬರ್ 6ರಂದು ಚೆನ್ನೈನಲ್ಲಿ ನಡೆದಿದೆ.

ಗೌರಿ ಮತ್ತು ಪತ್ರಕರ್ತರ ನಡುವಿನ ವಾಗ್ವಾದ, ಗೌರಿ ಪುರುಷ ಪತ್ರಕರ್ತರನ್ನು ಏಕಾಂಗಿಯಾಗಿ ಮತ್ತು ಧೈರ್ಯವಾಗಿ ಎದುರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೌರಿಯ ನಡೆಗೆ ವ್ಯಾಪಕ ಬೆಂಬಲ ಮತ್ತು ಪ್ರಶಂಸೆ ವ್ಯಕ್ತವಾಗಿದೆ.

ತಮಿಳಿನ ’96’, ‘ಸೂರರೈ ಪೊಟ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಗೌರಿ ಕಿಶನ್, ತಮ್ಮ ಮುಂಬರುವ ಚಿತ್ರ ‘ಅದರ್ಸ್’ನ ಪ್ರಚಾರ ಪತ್ರಿಕಾಗೋಷ್ಠಿಯಲ್ಲಿ ತನ್ನ ಸಹ ನಟ ಆದಿತ್ಯ ಮಾಧವನ್ ಜೊತೆ ಕುಳಿತಿದ್ದರು. ಮಾಧವನ್ ಪತ್ರಕರ್ತರ ಜೊತೆ ಮಾತನಾಡುವಾಗ, ಯೂಟ್ಯೂಬ್ ಪತ್ರಕರ್ತ ಆರ್‌.ಎಸ್‌ ಕಾರ್ತಿಕ್ ಎಂಬವರು ಗೌರಿಯ ತೂಕದ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಹಾಕಿದ್ದಾರೆ.

“ಚಿತ್ರದಲ್ಲಿ ನೀವು ಗೌರಿಯನ್ನು ಎತ್ತುತ್ತೀರಾ.. ಆಕೆಯ ತೂಕ ಎಷ್ಟು?” ಎಂದು ಪತ್ರಕರ್ತ ಕಾರ್ತಿಕ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಕೋಪಗೊಂಡ ಗೌರಿ, ಮಾಧವನ್ ಅವರಿಂದ ಮೈಕ್ ತೆಗೆದುಕೊಂಡು ಪತ್ರಕರ್ತನಿಗೆ ತಿರುಗೇಟು ನೀಡಿದ್ದಾರೆ.

“ಇದು ಅಗೌರವ, ನನ್ನ ದೇಹವನ್ನು ನೀವು ಲೈಂಗಿಕೀಕರಿಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ಅವಮಾನ” ಎಂದು ಗೌರಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತ “ನಾನು ತಮಾಷೆಯಾಗಿ ಕೇಳಿದ್ದು” ಎಂದಿದ್ದಾರೆ.

ಈ ವೇಳೆ “ತಮಾಷೆ ಎಂದು ಮಹಿಳೆಯ ದೇಹದ ಬಗ್ಗೆ ಮಾತಾಡುವುದು ಸರಿಯಲ್ಲ. ಇದು ನಿಮ್ಮ ವೃತ್ತಿಗೆ ಕಳಂಕ” ಎಂದು ಗೌರಿ ತಿರುಗೇಟು ಕೊಟ್ಟಿದ್ದಾರೆ. ಆಗ ಇತರ ಪತ್ರಕರ್ತರು ಜೋರಾಗಿ ಕೂಗಿ ಗೌರಿಯ ಧ್ವನಿ ಅಡಗಿಸಲು ನೋಡಿದ್ದಾರೆ. ಆದರೆ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದ್ದಾರೆ.

ಅಲ್ಲದೆ, “ನೀವು (ಕಾರ್ತಿಕ್) ಈ ಹಿಂದಿನ ಸಂದರ್ಶನದಲ್ಲೂ ನನ್ನ ದೇಹದ ಕುರಿತು ಇದೇ ರೀತಿಯ ಪ್ರಶ್ನೆ ಕೇಳಿದ್ದೀರಿ. ಇದು ಬಾಡಿ ಶೇಮಿಂಗ್ ಪ್ರಶ್ನೆ” ಎಂದು ಗೌರಿ ಹೇಳಿದ್ದಾರೆ.

ವರದಿಗಳ ಪ್ರಕಾರ, ‘ವೇರೆ ಲೆವೆಲ್ ಸಿನಿಮಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಕಾರ್ತಿಕ್, ಚೆನ್ನೈ ಪತ್ರಿಕಾಗೋಷ್ಠಿಗಿಂತ ಎರಡ್ಮೂರು ದಿನ ಮೊದಲು, ಗೌರಿಯ ದೇಹಾಕೃತಿಯ ಅಥವಾ ತೂಕದ ಬಗ್ಗೆ ಆದಿತ್ಯ ಮಾಧವನ್ ಅವರಿಗೆ ಪ್ರಶ್ನಿಸಿದ್ದರು. “ಆಕೆಯ ತೂಕ ಎಷ್ಟು? ಎತ್ತುವುದು ಕಷ್ಟವಾಗಿತ್ತೇ? ತುಸು ಭಾರದವಳು ಎಂದು ಅನಿಸಿತೇ?” ಎಂದು ಕೇಳಿದ್ದರು.

ಗೌರಿಯ ಪ್ರತಿಕ್ರಿಯೆಗೆ ಕೋಪಗೊಂಡ ಕಾರ್ತಿಕ್, “ನನ್ನ ಪ್ರಶ್ನೆಯಲ್ಲಿ ಏನು ತಪ್ಪಿತ್ತು? ಇವು ನಿಯಮಿತವಾಗಿ ಕೇಳಲಾಗುವ ಪ್ರಶ್ನೆಗಳು” ಎಂದಿದ್ದಾರೆ. ಗೌರಿಯನ್ನು ‘ಆ ಹುಡುಗಿ’ ಎಂದು ಅಗೌರವದಿಂದ ಉಲ್ಲೇಖಿಸುತ್ತಾ, ಕಾರ್ತಿಕ್ ಆಕೆಯ ಮುಂದೆ ನಿರ್ದೇಶಕರಿಗೆ ದೂರು ನೀಡಿದ್ದಾರೆ. “ನಾನು ಅವಳ ತೂಕ ಕೇಳಿದಾಗ, ಅವಳು ನನ್ನ ತೂಕ ಕೇಳುತ್ತಾಳೆ. ನಾನು ನಟನೇ?” ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಗೌರಿಯನ್ನು ಮತ್ತಷ್ಟು ಕೀಳಾಗಿ ಟೀಕಿಸಿದ ಕಾರ್ತಿಕ್, “ಅವಳಿಗೆ ತಮಿಳು ಅರ್ಥವಾಗುವುದಿಲ್ಲ. ನನ್ನ ಪ್ರಶ್ನೆ ತುಂಬಾ ಆಸಕ್ತಿದಾಯಕವಾಗಿತ್ತು. ನಾನು 25 ವರ್ಷದಿಂದ ವರದಿಗಾರಿಕೆ ಮಾಡುತ್ತಿದ್ದೇನೆ. ಸಿನಿಮಾ ನೋಡುವ ಪ್ರೇಕ್ಷಕರ ದೃಷ್ಠಿಕೋನದಲ್ಲಿ ನಾನು ಪ್ರಶ್ನೆ ಕೇಳಿದೆ” ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಕಾರ್ತಿಕ್‌ನನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಗೌರಿ ನಿನ್ನ ತೂಕದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಏಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಕಾರ್ತಿಕ್‌ಗೆ ಕೇಳಿದ್ದಾರೆ. ಒಂದು ಕ್ಷಣ ಪತ್ರಿಕಾಗೋಷ್ಠಿಯಲ್ಲಿದ್ದ ಹಲವು ಪುರುಷರು ಗೌರಿಯ ವಿರುದ್ದ ಕೂಗಾಡಿ, ಆಕೆಯನ್ನು ಬೆದರಿಸಲು ನೋಡಿದ್ದಾರೆ. ಈ ವೇಳೆ ಪತ್ರಿಕಾಗೋಷ್ಠಿಯಲ್ಲಿದ್ದ ನಿರ್ದೇಶಕ ಅಬಿನ್ ಹರಿಹರನ್ ಗೌರಿಯ ಪರ ನಿಲ್ಲದೆ ಕಾರ್ತಿಕ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

“ಪುರುಷರಿಂದ ತುಂಬಿದ್ದ ಕೋಣೆಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಏಕಾಂಗಿಯಾಗಿ ಬಿಟ್ಟ ಗೌರಿ, “ಮೊದಲನೆಯದಾಗಿ, ನೀವು ಕೇಳಿದ್ದು ಬಾಡಿ ಶೇಮಿಂಗ್ ಪ್ರಶ್ನೆ. ಇಲ್ಲಿ ನನ್ನ ಹೊರತು ಬೇರೆ ಯಾವುದೇ ಮಹಿಳೆ ಇಲ್ಲ. ನಾನು ಮಹಿಳೆ ಎಂಬ ಕಾರಣಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಗೂ ವಿಭಿನ್ನ ದೇಹಕಾರವಿದೆ. ನನಗೆ ಯಾವ ಸಮಸ್ಯೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನನಗೆ ಹಾರ್ಮೋನುಗಳ ಸಮಸ್ಯೆಗಳಿವೆಯೇ ಎಂದು ನಿಮಗೆ ಗೊತ್ತಿದೆಯೇ? ನಾನು ಹಿರೋಯಿನ್ ಆಗಿದ್ದರೆ ನನ್ನ ಸೈಝ್ ಝೀರೋ ಆಗಿರಬೇಕೇ? ನನ್ನ ತೂಕವನ್ನು ತಿಳಿದುಕೊಂಡು ನೀವು ಏನು ಮಾಡುತ್ತೀರಿ? ಅದು ಚಿತ್ರಕ್ಕೆ ಅಪ್ರಸ್ತುತ” ಎಂದು ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಇಷ್ಟಾದರು ಸುಮ್ಮನಾಗದ ಕಾರ್ತಿಕ್, “ನೀನು ನಿನ್ನ ತೂಕ ಮತ್ತು ಎತ್ತರ ಎರಡೂ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳುತ್ತಿದ್ದೀಯಾ?” ಎಂದು ಪ್ರಶ್ನಿಸಿ ಮತ್ತಷ್ಟು ಅವಮಾನಿಸಿದ್ದಾರೆ. ಇದಕ್ಕೆ ತೀವ್ರ ಕೋಪಗೊಂಡ ಗೌರಿ, “ಹೀರೋಯಿನ್ ಆಯ್ಕೆ ನಿರ್ದೇಶಕರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸಲು ನೀವು ಯಾರು?” ಎಂದು ಕೇಳಿದ್ದಾರೆ.

ಆಗ ಕಾರ್ತಿಕ್, “ತೂಕ ಕಡಿಮೆ ಮಾಡಿಕೊಳ್ಳುತ್ತೇನೆ ಎಂದು ಹೇಳು. ನೀನು ಮಾಡುತ್ತಿರುವುದು ತಪ್ಪು” ಎಂದಿದ್ದಾರೆ.

ಈ ವೇಳೆ ಮಧ್ಯ ಪ್ರವೇಶಿಸಿದ ವ್ಯಕ್ತಿಯೊಬ್ಬ. ಓಕೆ, ಓಕೆ.. ಸಿನಿಮಾ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೌರಿ, ಏನು ಓಕೆ..? ಅವನು (ಕಾರ್ತಿಕ್) ನನ್ನ ಮೇಲೆ ಕೂಗಾಡುತ್ತಿದ್ದಾನೆ. ನನಗೆ ಅಡ್ಡಿಪಡಿಸುತ್ತಲೇ ಇದ್ದಾನೆ. ನನಗೂ ಒಂದು ದೃಷ್ಟಿಕೋನವಿದೆ. ಇಲ್ಲಿ ಪತ್ರಿಕೆಗಳಿಗೆ ಗೌರವ ಸಲ್ಲಿಸುತ್ತಾ, ನಾನು ಸಾಮಾನ್ಯೀಕರಿಸುತ್ತಿಲ್ಲ. ಆದರೆ, ಬಾಡಿ ಶೇಮಿಂಗ್ ಅನ್ನು ಏಕೆ ಸಾಮಾನ್ಯೀಕರಿಸಲಾಗುತ್ತಿದೆ? ಹೀರೋಯಿನ್‌ಗೇ ಏಕೆ ಈ ಪ್ರಶ್ನೆಯನ್ನು ಕೇಳುತ್ತಾರೆ? ನೀವು ಹೀರೋಗೆ ಇದೇ ಪ್ರಶ್ನೆಯನ್ನು ಕೇಳುತ್ತೀರಾ?” ಎಂದಿದ್ದಾರೆ.

“ನಾನು ಚಿತ್ರದಲ್ಲಿ ಮಾಡಿರುವ ಪಾತ್ರಗಳ ಬಗ್ಗೆ ಯಾವುದೇ ಪ್ರಶ್ನೆ ಕೇಳುತ್ತಿಲ್ಲ. ಅವರು (ಕಾರ್ತಿಕ್ ) ನನ್ನ ತೂಕದ ಬಗ್ಗೆ ಮಾತ್ರ ಪ್ರಶ್ನೆ ಮಾಡುತ್ತಿದ್ದಾರೆ. ಇದು ಹೇಗೆ ಸರಿಯಾಗುತ್ತದೆ? ನೀವು ನನ್ನ ತೂಕದ ಬಗ್ಗೆ ಪರೋಕ್ಷವಾಗಿ ನಾಯಕ ನಟನಿಗೆ ಪ್ರಶ್ನೆ ಕೇಳಿದ್ದೀರಿ. ಇದು ತಪ್ಪು ಮತ್ತು ಮೂರ್ಖತನದ ಪ್ರಶ್ನೆ. ನೀವು ಮಹಿಳಾ ಪಾತ್ರವನ್ನು ಲೈಂಗಿಕವಾಗಿ ಬಳಸುತ್ತಿದ್ದೀರಿ. ಇದು ಪತ್ರಿಕೋದ್ಯಮವಲ್ಲ, ನೀವು ಮಾಡುತ್ತಿರುವುದು ನಿಮ್ಮ ವೃತ್ತಿಗೆ ಅವಮಾನ” ಎಂದು ಖಾರವಾಗಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿದ್ದ ಪುರುಷರೆಲ್ಲರೂ ಗೌರಿಯನ್ನು ಅವಮಾನಿಸಿ ಏರು ಧ್ವನಿಯಲ್ಲಿ ಮಾತನಾಡಿದ್ದರೂ, ಆಕೆಯ ಚಿತ್ರದ ಸಹನಟ ಮತ್ತು ನಿರ್ದೇಶಕ ಆಕೆಯ ಪರ ನಿಂತಿಲ್ಲ. ಆದರೆ, ಇತರ ಕಲಾವಿದರು ಮತ್ತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಗೌರಿಗೆ ಬೆಂಬಲ ಮತ್ತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಜನಪ್ರಿಯ ಹಿನ್ನೆಲೆ ಗಾಯಕಿ ಚಿನ್ಮಯಿ ಪತ್ರಿಕಾಗೋಷ್ಠಿಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಗೌರಿ ‘ಅದ್ಭುತ ಕೆಲಸ’ ಮಾಡಿದ್ದಾರೆ ಎಂದು ಹೇಳಿದ್ದಾರೆ.

“ನೀವು ಅಗೌರವಯುತ ಮತ್ತು ಅನಗತ್ಯ ಪ್ರಶ್ನೆಯನ್ನು ಖಂಡಿಸಿದ ಕ್ಷಣ, ಒಂದು ಗುಂಪು ಗಟ್ಟಿಯಾಗಿ ಕೂಗಿ ತಡೆಯುತ್ತದೆ. ಆದರೆ, ಇಷ್ಟು ಚಿಕ್ಕವಯಸ್ಸಿನಲ್ಲಿ ನೀವು ಧೈರ್ಯದಿಂದ ನಿಂತು ಅವರನ್ನು ಎದುರಿಸಿದ್ದು ನನಗೆ ತುಂಬಾ ಹೆಮ್ಮೆ ತಂದಿದೆ. ಯಾವುದೇ ಪುರುಷ ನಟನಿಗೆ ಅವನ ತೂಕ ಎಷ್ಟು ಎಂದು ಕೇಳುವುದಿಲ್ಲ. ಮಹಿಳಾ ನಟಿಗೆ ಮಾತ್ರ ಇಂತಹ ಪ್ರಶ್ನೆಗಳು ಏಕೆ ಕೇಳಲಾಗುತ್ತದೆ ಎಂದು ಗೊತ್ತಾಗುತ್ತಿಲ್ಲ” ಎಂದು ಚಿನ್ಮಯಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗೌರಿಯ ಪರ ನಿಲ್ಲದೆ ಮೌನವಾಗಿದ್ದ ನಟ ಆದಿತ್ಯ ಮಾಧವನ್, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ಕೊಟ್ಟು ಗೌರಿಯ ಪರವಾಗಿ ನಿಲ್ಲದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

“ನನ್ನ ಮೌನವು ಯಾರ ಬಾಡಿ ಶೇಮಿಂಗ್ ಅನ್ನು ಬೆಂಬಲಿಸುತ್ತದೆ ಎಂದರ್ಥವಲ್ಲ. ಅದು ನನ್ನ ಮೊದಲ ಚಿತ್ರವಾದ್ದರಿಂದ, ಆ ಪ್ರಶ್ನೆ ಆಕಸ್ಮಿಕವಾಗಿ ಬಂದು ನನ್ನನ್ನು ಸ್ತಂಭನಗೊಳಿಸಿತು. ನಾನು ಆದಷ್ಟು ಬೇಗ ಮಧ್ಯಪ್ರವೇಶಿಸಬೇಕಿತ್ತು ಎಂದು ಬಯಸುತ್ತೇನೆ. ಗೌರಿ ಬಾಡಿ ಶೇಮಿಂಗ್‌ಗೆ ಒಳಗಾಗಬೇಕಾದವರಲ್ಲ, ಯಾರೂ ಒಳಗಾಗಬೇಕಾದವರಲ್ಲ. ನಾವು ಯಾರೇ ಆಗಿರಲಿ, ಎಲ್ಲರಿಗೂ ಗೌರವ ಸಲ್ಲಬೇಕು. ಮತ್ತೊಮ್ಮೆ ಕ್ಷಮೆಯಾಚಿಸುತ್ತೇನೆ” ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.

“ಪತ್ರಿಕೋದ್ಯಮ ತನ್ನ ನೆಲೆಯನ್ನು ಕಳೆದುಕೊಂಡಿದೆ. ಪತ್ರಕರ್ತರು ಎಂದು ಕರೆಯಲ್ಪಡುವವರು ಪತ್ರಿಕೋದ್ಯಮವನ್ನು ಗಟಾರಕ್ಕೆ ಕೊಂಡೊಯ್ಯುತ್ತಿದ್ದಾರೆ. ಮಹಿಳೆ ಎಷ್ಟು ತೂಕವಿದ್ದಾಳೆ ಎಂದು ಆಳೆಯುವುದು ಅವರ ಕೆಲಸವಲ್ಲ. ಅದರಲ್ಲೂ ಆ ಬಗ್ಗೆ ನಾಯಕ ನಟನಲ್ಲಿ ಕೇಳುವುದು?? ಎಂತಹ ನಾಚಿಕೆಗೇಡಿನ ಸಂಗತಿ!” ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ.

ಗೌರಿ ತನ್ನ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಕ್ಕಾಗಿ ಅಭಿನಂದಿಸಿದ ಖುಷ್ಬೂ, “ನಾವು ಮಹಿಳೆಯರು, ನಟರು, ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಅದೇ ಪ್ರಶ್ನೆಯನ್ನು ಕೇಳಿದರೆ, ಅದೂ ಪುರುಷರು ಕೇಳಿದರೆ ಸರಿಯೇ? ಗೌರವ ಎಂದಿಗೂ ಏಕಮುಖವಲ್ಲ. ನೀವು ಗೌರವಿಸಲ್ಪಡಬೇಕೆಂದು ನಿರೀಕ್ಷಿಸಿದರೆ ಗೌರವ ನೀಡಲು ಕಲಿಯಿರಿ” ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಪಾ ರಂಜಿತ್ ಕೂಡ ಗೌರಿಗೆ ಬೆಂಬಲ ವ್ಯಕ್ತಪಡಿಸಿದ್ದು, ‘ಮೋರ್ ಪವರ್ ಟೂ ಯು’. ವರದಿಗಾರನ ಕೃತ್ಯಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವು ಸ್ವೀಕಾರಾರ್ಹವಲ್ಲ ಮತ್ತು ನಾಚಿಕೆಗೇಡಿನ ಸಂಗತಿ. ಮಹಿಳಾ ನಟಿಯರು ಇನ್ನೂ ಈ ಅಸಭ್ಯ ಪ್ರಶ್ನೆಗಳನ್ನು ಎದುರಿಸಬೇಕಾಗಿರುವುದು ತಮಿಳು ಸಿನಿಮಾ ಇನ್ನೂ ಕ್ರಮಿಸಬೇಕಾದ ದೂರವನ್ನು ತೋರಿಸುತ್ತದೆ” ಎಂದಿದ್ದಾರೆ.

ನಟ ಕವಿನ್ ಕೂಡ ಗೌರಿಗೆ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದ್ದು, “ಒಳಗೆ ಮತ್ತು ಹೊರಗೆ, ನೀವು ಸುಂದರ ಮತ್ತು ಸ್ಪೂರ್ತಿದಾಯಕ ಗೌರಿ, ಯಾವಾಗಲೂ ಒಂದೇ ಆಗಿರಿ” ಎಂದು ಬರೆದುಕೊಂಡಿದ್ದಾರೆ.

ಫ್ರಂಟ್‌ಲೈನ್‌ನ ಹಿರಿಯ ಸಹಾಯಕ ಸಂಪಾದಕ ಆರ್‌.ಕೆ ರಾಧಾಕೃಷ್ಣನ್ ಕೂಡ ವರದಿಗಾರನ ಪತ್ರಕರ್ತನ ಕೃತ್ಯವನ್ನು ಖಂಡಿಸಿದ್ದಾರೆ.

“ಸಿನಿಮಾದ ಹೀರೋ ಬಳಿ ಗೌರಿ ಅವರ ತೂಕ ಕೇಳುವ ಯಾವುದೇ ಅಧಿಕಾರ ಪತ್ರಕರ್ತನಿಗೆ ಇಲ್ಲ. ಅಸಂಬಂದ್ಧ ಪ್ರಶ್ನೆ ಕೇಳಿದವನ ಜೊತೆಗೂಡಿ ಹೆಚ್ಚಿನ ಪತ್ರಕರ್ತರೂ ಗೌರಿ ಧ್ವನಿ ಅಡಗಿಸಲು ಪ್ರಯತ್ನಿಸಿದರು. ಆದರೂ, ಗೌರಿ ಧೈರ್ಯದಿಂದ ಅವರನ್ನು ಎದುರಿಸಿದರು. ತಮಿಳು ಸಿನಿಮಾದಲ್ಲಿ ನಾನು ನೋಡಿದ ಅತ್ಯುತ್ತಮ ಧೈರ್ಯದ ಎದುರಾಟಗಳಲ್ಲಿ ಇದು ಒಂದೂ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...