Homeಅಂತರಾಷ್ಟ್ರೀಯದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು 'ಟ್ರಂಪ್ ಗೋಲ್ಡ್ ಕಾರ್ಡ್'

ದುಡ್ಡು ಕೊಟ್ಟವರಿಗೆ ರಾಜಾತಿಥ್ಯ, ಪೌರತ್ವಕ್ಕೆ ರಹದಾರಿ : ಏನಿದು ‘ಟ್ರಂಪ್ ಗೋಲ್ಡ್ ಕಾರ್ಡ್’

- Advertisement -
- Advertisement -

ಟ್ರಂಪ್ ಆಡಳಿತವು ಬುಧವಾರ (ಡಿಸೆಂಬರ್ 10) ಔಪಚಾರಿಕವಾಗಿ ‘ಟ್ರಂಪ್ ಗೋಲ್ಡ್ ಕಾರ್ಡ್’ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದನ್ನು ಅಮೆರಿಕ ಸರ್ಕಾರ ಕನಿಷ್ಠ 1 ಮಿಲಿಯನ್ ಡಾಲರ್ ಪಾವತಿಸುವ ಜನರಿಗೆ ನೀಡಲು ಯೋಜಿಸಿದೆ.

‘ಟ್ರಂಪ್ ಗೋಲ್ಡ್ ಕಾರ್ಡ್’ ಅನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ EB-5 ವೀಸಾ ಕಾರ್ಯಕ್ರಮಕ್ಕೆ ಬದಲಾಗಿ ಪರಿಚಯಿಸಲಾಗಿದೆ. ಕಳೆದ ವರ್ಷ 14,000 EB-5 ವೀಸಾಗಳನ್ನು ನೀಡಲಾಗಿದೆ ಎಂದು EB-5ನ ವ್ಯಾಪಾರ ಸಂಘವಾದ ಇನ್‌ವೆಸ್ಟ್ ಇನ್‌ ದಿ ಯುಎಸ್‌ಎ ತಿಳಿಸಿದೆ.

ಈ ವರ್ಷದ ಜೂನ್‌ನಲ್ಲಿ ಯುಎಸ್‌ ವಾಣಿಜ್ಯ ಇಲಾಖೆಯು trumpcard.gov ವೆಬ್‌ಸೈಟ್ ಪ್ರಾರಂಭಿಸಿತ್ತು. ಈ ಮೂಲಕ ಅರ್ಜಿದಾರರು ತಮ್ಮ ಹೆಸರು, ಪ್ರದೇಶ ಮತ್ತು ಇಮೇಲ್ ವಿಳಾಸವನ್ನು ಸಲ್ಲಿಸಲು ಅವಕಾಶ ನೀಡಿತ್ತು. ವೆಬ್‌ಸೈಟ್‌ ಅಧಿಕೃತವಾಗಿ ನೋಂದಣಿಗೆ ತೆರೆದಾಗ ತಿಳಿಸುವುದಾಗಿ ಹೇಳಿತ್ತು. ಈ ವಾರ ವೆಬ್‌ಸೈಟ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಈಗ ಕೇವಲ ನೋಂದಣಿ ಮಾಡಿಕೊಳ್ಳುವುದು ಮಾತ್ರವಲ್ಲ, ನೇರವಾಗಿ ಪೂರ್ತಿ ಅರ್ಜಿ ಸಲ್ಲಿಸುವ ಸೌಲಭ್ಯವೂ ತೆರೆಯಲಾಗಿದೆ.

ವೆಬ್‌ಸೈಟ್‌ನಲ್ಲಿ ಗೋಲ್ಡ್ ಕಾರ್ಡ್ ಪೋಟೋ ಚಿನ್ನದ ಬಣ್ಣದಲ್ಲಿದೆ. ಅದರದಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ ಎಂದು ಬರೆಯಲಾಗಿದೆ. ಟ್ರಂಪ್ ಫೋಟೋ, ಸಹಿ, ಸ್ಟಾಚ್ಯೂ ಆಫ್ ಲಿಬರ್ಟಿ, ಅಮೆರಿಕದ ರಾಷ್ಟ್ರ ಧ್ವಜ ಮತ್ತು ಹದ್ದಿನ ಚಿತ್ರವಿದೆ.

ಟ್ರಂಪ್ ಈ ವರ್ಷದ ಫೆಬ್ರವರಿಯಲ್ಲಿ ಈ ಯೋಜನೆಯನ್ನು ಮೊದಲು ಘೋಷಿಸಿದ್ದರು. ನಂತರ ಏಪ್ರಿಲ್‌ನಲ್ಲಿ, ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರಿಗೆ ತಮ್ಮ ಫೋಟೋ ಇರುವ ಚಿನ್ನದ ಬಣ್ಣದ ಕಾರ್ಡ್‌ನ ಮಾದರಿಯನ್ನು ತೋರಿಸಿದ್ದರು.

ಏನಿದು EB-5 ವೀಸಾ?

ಉದ್ಯೋಗ ಆಧಾರಿತ ವೀಸಾ ವ್ಯವಸ್ಥೆಯ ಭಾಗವಾಗಿರುವ EB-5 ಕಾರ್ಯಕ್ರಮವನ್ನು 1990ರಲ್ಲಿ ಅಮೆರಿಕ ಕಾಂಗ್ರೆಸ್ ರಚಿಸಿತು. ಇದನ್ನು ಯುಎಸ್‌ ಪೌರತ್ವ ಮತ್ತು ವಲಸೆ ಸೇವೆಗಳು (USCIS) ನಿರ್ವಹಿಸುತ್ತದೆ.

ಇದು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ವಿದೇಶಿಯರಿಗೆ ಶಾಶ್ವತ ನಿವಾಸ (ಗ್ರೀನ್ ಕಾರ್ಡ್) ನೀಡುತ್ತದೆ. ಹೂಡಿಕೆದಾರರು ಕನಿಷ್ಠ 1.05 ಮಿಲಿಯನ್ ಡಾಲರ್ (ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ 800,000 ಡಾಲರ್) ಹೂಡಿಕೆ ಮಾಡಬೇಕು ಮತ್ತು ಅಮೆರಿಕನ್ನರಿಗೆ ಕನಿಷ್ಠ 10 ಉದ್ಯೋಗಗಳನ್ನು ಸೃಷ್ಟಿಸಬೇಕು.

ಈ ಕಾರ್ಯಕ್ರಮದಡಿಯಲ್ಲಿ, ಹೂಡಿಕೆದಾರರು (ಮತ್ತು ಅವರ ಸಂಗಾತಿಗಳು ಮತ್ತು 21 ವರ್ಷದೊಳಗಿನ ಅವಿವಾಹಿತ ಮಕ್ಕಳು) ಅಮೆರಿಕದಲ್ಲಿ ವಾಣಿಜ್ಯ ಉದ್ಯಮದಲ್ಲಿ ಅಗತ್ಯವಾದ ಹೂಡಿಕೆ ಮಾಡಿದರೆ ಅಥವಾ ಅರ್ಹ ಅಮೆರಿಕನ್ನರಿಗೆ 10 ಶಾಶ್ವತ ಪೂರ್ಣ ಸಮಯದ ಉದ್ಯೋಗ ನೀಡುವುದಾದರೆ ಕಾನೂನುಬದ್ಧ ಶಾಶ್ವತ ನಿವಾಸಕ್ಕೆ (ಗ್ರೀನ್ ಕಾರ್ಡ್ ಹೊಂದಿರುವವರಾಗಲು) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಟ್ರಂಪ್ ಗೋಲ್ಡ್ ಕಾರ್ಡ್ ಎಂದರೇನು?

ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ಕಾರ್ಯಕ್ರಮವು ವಿದೇಶಿಯರಿಗೆ ಅಮೆರಿಕದಲ್ಲಿ ನಿವಾಸ ಮತ್ತು ಕೆಲಸದ ಹಕ್ಕುಗಳನ್ನು ನೀಡುತ್ತದೆ. ಅಲ್ಲದೆ, ಆಡಳಿತದ ತೊಂದರೆಗಳನ್ನು ಎದುರಿಸದೆ ಪೌರತ್ವವನ್ನು ಪಡೆಯುವ ಮಾರ್ಗವನ್ನು ಒದಗಿಸುತ್ತದೆ.

ವೆಬ್‌ಸೈಟ್ ಪ್ರಕಾರ, ಅನುಮೋದಿತ ಅರ್ಜಿದಾರರು EB-1 ಅಥವಾ EB-2 ವೀಸಾ ಹೊಂದಿರುವವರಾಗಿ ಕಾನೂನು ಸ್ಥಾನಮಾನವನ್ನು ಪಡೆಯುತ್ತಾರೆ. ಈ ವಿಭಾಗಗಳು ಆದ್ಯತೆಯ ಉನ್ನತ ಶ್ರೇಣಿಯ ವರ್ಗಗಳಾಗಿದ್ದು, ಅಸಾಧಾರಣ ಸಾಮರ್ಥ್ಯ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುತ್ತವೆ.

ಗೋಲ್ಡ್ ಕಾರ್ಡ್‌ಗೆ ಯಾರು ಅರ್ಹರು?

ಟ್ರಂಪ್ ಗೋಲ್ಡ್ ಕಾರ್ಡ್ ತೆಗೆದುಕೊಳ್ಳಲು 3 ಮುಖ್ಯ ಷರತ್ತುಗಳನ್ನು ಪೂರೈಸಬೇಕು.

  1. ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಅರ್ಹರಾಗಿರಬೇಕು (ಅಂದರೆ ಕ್ರಿಮಿನಲ್ ರೆಕಾರ್ಡ್, ಭಯೋತ್ಪಾದನೆ ಸಂಬಂಧ ಇರಬಾರದು)
  2. ದೇಶದ ಒಳಗೆ ಬಿಡಲು ಅಮೆರಿಕ ಸರ್ಕಾರದ ಒಪ್ಪಿಗೆ ಇರಬೇಕು (ಯಾವುದೇ ದೊಡ್ಡ ತಪ್ಪು ಮಾಡಿರಬಾರದು, ಗಂಭೀರ ರೋಗಗಳಿರಬಾರದು)
  3. ಅರ್ಜಿ ಸಲ್ಲಿಸುವಾಗ ಅರ್ಜಿದಾರರ ದೇಶದವರಿಗೆ ವೀಸಾ ಖಾಲಿ ಇರಬೇಕು

ಕೆಲವು ದೇಶದ (ಉದಾಹರಣೆಗೆ : ಭಾರತ, ಚೀನಾ, ಮೆಕ್ಸಿಕೋ) ಬಹಳ ಜನರು ಈಗಾಗಲೇ ಅರ್ಜಿ ಹಾಕಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು 10 ಲಕ್ಷ ಡಾಲರ್ ಕೊಟ್ಟರೂ ಕೂಡ ಗೋಲ್ಡ್ ಕಾರ್ಡ್ ಪಡೆಯಲು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ.

ಟ್ರಂಪ್ ಗೋಲ್ಡ್ ಕಾರ್ಡ್ ಅಡಿ ಬರುವ ವಿವಿಧ ವೀಸಾಗಳು ಯಾವುವು?

1.ಟ್ರಂಪ್ ಗೋಲ್ಡ್ ಕಾರ್ಡ್

ಟ್ರಂಪ್ ಗೋಲ್ಡ್ ಕಾರ್ಡ್ ಬೇಕಾದರೆ ಮೊದಲು ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆಗೆ (ಡಿಹೆಚ್ಎಸ್‌) 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಪ್ರಾಸೆಸಿಂಗ್ ಶುಲ್ಕ ಕಟ್ಟಬೇಕು. ಈ ಹಣ ಮರುಪಾವತಿ ಆಗುವುದಿಲ್ಲ. ಏಕೆಂದರೆ, ಇದನ್ನು ಬ್ಯಾಕ್‌ಗ್ರೌಂಡ್ ಚೆಕ್ ಮತ್ತು ಆರಂಭದ ಪರಿಶೀಲನೆಗೆ ಬಳಸುತ್ತಾರೆ. ಈ ಶುಲ್ಕ ಕಟ್ಟಿದ ಕೂಡಲೇ ಅರ್ಜಿ ಅನುಮೋದನೆ ಮತ್ತು ವೀಸಾ ನೀಡುವ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಆದರೆ, ಅರ್ಜಿ ಹಾಕಿದವರು ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ಇತರ ಶುಲ್ಕಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿರಬೇಕು.

ಗೋಲ್ಡ್ ಕಾರ್ಡ್‌ ಪಡೆಯಲು ಅರ್ಜಿ ಹಾಕಿದವರು ಕೊಡುವ 1 ಮಿಲಿಯನ್ ಡಾಲರ್ (8.5 ಕೋಟಿ ರೂ.) ಹಣವನ್ನು ‘ಗಿಫ್ಟ್’ ಅಥವಾ ನೀವು ಅಮೆರಿಕಕ್ಕೆ ದೊಡ್ಡ ಪ್ರಯೋಜನ ಕೊಡುತ್ತೀರಿ ಎಂಬ ಸಾಕ್ಷ್ಯ ಎಂದು ಪರಿಗಣಿಸುವುದಾಗಿ ವೆಬ್‌ಸೈಟ್‌ ಹೇಳುತ್ತದೆ. ಅಂದರೆ, ಅರ್ಜಿದಾರರು ಕೊಡುವ ಹಣ ನಿಜವಾಗಿಯೂ ‘ಹೂಡಿಕೆ’ ಅಲ್ಲ, ಬದಲಿಗೆ ಅದು ಸರ್ಕಾರಕ್ಕೆ ನೇರ ದಾನ ಕೊಟ್ಟಂತೆ.

ಇವಿಷ್ಟೇ ಅಲ್ಲದೆ, ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ಗೆ ಹೆಚ್ಚುವರಿ ಶುಲ್ಕವನ್ನೂ ಕಟ್ಟಬೇಕಾಗಬಹುದು (ಉದಾ: ಮೆಡಿಕಲ್ ಚೆಕ್‌ಅಪ್, ಇಂಟರ್ವ್ಯೂ ಫೀಗಳು). ಇದು ಅರ್ಜಿದಾರರ ದೇಶ ಮತ್ತು ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ.

2. ಟ್ರಂಪ್ ಕಾರ್ಪೊರೇಟ್ ಗೋಲ್ಡ್ ಕಾರ್ಡ್

ಈ ಕಾರ್ಪೊರೇಟ್ ಗೋಲ್ಡ್ ಕಾರ್ಡ್ ಕಂಪನಿ (ಸ್ಪಾನ್ಸರ್) ತನ್ನ ಒಬ್ಬ ಅಥವಾ ಹೆಚ್ಚು ಉದ್ಯೋಗಿಗಳಿಗೆ ನೀಡಬಹುದು. ಆದರೆ, ಕಂಪನಿ ಯುಎಸ್‌ ಹೋಮ್‌ಲ್ಯಾಂಡ್ ಸೆಕ್ಯೂರಿಟಿ (ಡಿಹೆಚ್‌ಎಸ್‌)ಗೆ 15,000 ಡಾಲರ್ (ಸುಮಾರು 12.5 ಲಕ್ಷ ರೂ.) ಕಟ್ಟಬೇಕು. ಇದು ಮರುಪಾವತಿ ಆಗದು. ಇದನ್ನು ಉದ್ಯೋಗಿಯ ಬ್ಯಾಕ್‌ಗ್ರೌಂಡ್ ಚೆಕ್‌ಗೆ ಬಳಸುತ್ತಾರೆ.

ಕಂಪನಿ 2 ಮಿಲಿಯನ್ ಡಾಲರ್ (ಸುಮಾರು 17 ಕೋಟಿ ರೂ.) ‘ಗಿಫ್ಟ್’ ಹಣವನ್ನು ಕೊಡಬೇಕು. ಇದು ಅಮೆರಿಕ ಸರ್ಕಾರಕ್ಕೆ ನೇರವಾಗಿ ಹೋಗುತ್ತದೆ, ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯಲು ಸಹಾಯ ಮಾಡುತ್ತದೆ.

ಕಂಪನಿ ಒಬ್ಬ ಉದ್ಯೋಗಿಯ ಸ್ಪಾನ್ಸರ್‌ಷಿಪ್ ನಿಲ್ಲಿಸಿ, ಅವರಿಗೆ ಕೊಟ್ಟ 2 ಮಿಲಿಯನ್ ಡಾಲರ್ ಗಿಫ್ಟ್ ಅನ್ನು ಹೊಸ ಉದ್ಯೋಗಿಯನ್ನು ಸ್ಪಾನ್ಸರ್ ಮಾಡಲು ಬಳಸಬಹುದು.

ವಾರ್ಷಿಕವಾಗಿ 2 ಮಿಲಿಯನ್‌ನ 1 ಶೇಕಡ (ಸುಮಾರು 17 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು. ಇದು ಕಾರ್ಡ್ ಚಾಲೂಕರಣೆಯನ್ನು ಕಾಪಾಡಲು. ಉದ್ಯೋಗಿ ಬದಲಾಯಿಸಿದರೆ ಅಥವಾ ಹೊಸ ಬ್ಯಾಕ್‌ಗ್ರೌಂಡ್ ಮಾಡಿದರೆ 2 ಮಿಲಿಯನ್‌ನ ಶೇಕಡ 5ರಷ್ಟು (ಸುಮಾರು 85 ಲಕ್ಷ ರೂ.) ಸರ್ಕಾರಕ್ಕೆ ಕಟ್ಟಬೇಕು.

3.ಟ್ರಂಪ್ ಪ್ಲಾಟಿನಂ ಕಾರ್ಡ್‌

ಈ ಕಾರ್ಡ್ ವಿದೇಶಿ ಆದಾಯದ ಮೇಲೆ ತೆರಿಗೆ ವಿಧಿಸದೆ ವ್ಯಕ್ತಿಗಳು ವರ್ಷಕ್ಕೆ 270 ದಿನಗಳವರೆಗೆ ಅಮೆರಿಕದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ. ಇದು ಪ್ರಯಾಣ ವೀಸಾಗಳ ಅಗತ್ಯವನ್ನು ನಿವಾರಿಸುತ್ತದೆ.

ಈ ಪ್ಲಾಟಿನಂ ಕಾರ್ಯಕ್ರಮಕ್ಕೆ ಸರ್ಕಾರ ಈಗಾಗಲೇ ವೇಟ್‌ಲಿಸ್ಟ್ (ಕಾಯುವ ಪಟ್ಟಿ) ತಯಾರಿಸಿದೆ. ಇದು ಇನ್ನೂ ಆರಂಭವಾಗಿಲ್ಲ, ಹಾಗಾಗಿ ಆಸಕ್ತರನ್ನು ನೋಂದಾಯಿಸಿಕೊಳ್ಳುವುದಕ್ಕಾಗಿ ಈ ಪಟ್ಟಿ ಇದೆ.

ಪ್ಲಾಟಿನಂ ಕಾರ್ಡ್‌ಗೆ 5 ಮಿಲಿಯನ್ ಡಾಲರ್ (ಸುಮಾರು 42 ಕೋಟಿ ರೂ.) ಕೊಡುಗೆ ನೀಡಬೇಕು. ಇದು ಇನ್ನೂ ಈ ಮಟ್ಟದಲ್ಲೇ ಇರುತ್ತದೆ ಎಂಬ ಖಚಿತತೆ ಇಲ್ಲ. ಹಾಗಾಗಿ, ಈಗಲೇ ವೇಟ್‌ಲಿಸ್ಟ್‌ಗೆ ಸೇರಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ. ಅಂದರೆ, ಹಣದ ಮೊತ್ತ ಬದಲಾಗಬಹುದು (ಹೆಚ್ಚಾಗಬಹುದು).

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದೊಂದಿಗಿನ ಯುದ್ಧಕ್ಕೆ ಇರಾನ್ 40 ವರ್ಷಗಳಿಂದ ಸಿದ್ಧವಾಗಿತ್ತು: ನಿವೃತ್ತ ಲೆಫ್ಟಿನೆಂಟ್ ಜನರಲ್ ಧಿಲ್ಲೋನ್

"ತನ್ನ ಅತ್ಯುನ್ನತ ನಾಯಕತ್ವವನ್ನು ಕಳೆದುಕೊಳ್ಳುವಂತಹ ತುರ್ತು ಪರಿಸ್ಥಿತಿಗಳು ಸೇರಿದಂತೆ, ಅಮೆರಿಕದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿ ಇರಾನ್ ನಾಲ್ಕು ದಶಕಗಳಿಂದ ಸಿದ್ಧತೆ ನಡೆಸಿದೆ. ಹೀಗಾಗಿ ಎದುರಾಳಿಗಳಿಗೆ ಆ ದೇಶವನ್ನು ಸಂಪೂರ್ಣವಾಗಿ ನಾಶಪಡಿಸುವುದು ಕಷ್ಟಕರವಾಗಿದೆ" ಎಂದು ಭಾರತೀಯ...

ಸಚಿವ ಬಿ. ನಾಗೇಂದ್ರ ವಜಾಗೆ ಆಗ್ರಹಿಸಿ ಆಗಸ್ಟ್ 24ರಂದು ವಿಧಾನಸೌಧ ಮುತ್ತಿಗೆಗೆ ಕರೆ ನೀಡಿದ ಬಿಜೆಪಿ: ಉಲ್ಬಣಗೊಂಡ ರಾಜಕೀಯ ಸಂಘರ್ಷ

ಕರ್ನಾಟಕದ ರಾಜಕೀಯ ವಲಯದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವು ಭಾರಿ ಸಂಚಲನ ಮೂಡಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಮರ...

ಕೇರಳ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ; ದಲಿತ ಪಿಎಚ್‌ಡಿ ಸಂಶೋಧಕಿಯಿಂದ ಆರೋಪ

ತುಂಚತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದ (ಟಿಇಎಂಯು) ದಲಿತ ಸಂಶೋಧಕಿಯೊಬ್ಬರು, "ಸಹಾಯಕ ಪ್ರಾಧ್ಯಾಪಕರೊಬ್ಬರು ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ, ಕಿರುಕುಳ ಮತ್ತು ಪಿಎಚ್‌ಡಿ ಸಂಶೋಧನೆಗೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಆಗಸ್ಟ್ 15 ರಿಂದ ತಿರೂರಿನ...

ಉತ್ತರ ಪ್ರದೇಶ| ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ತನ್ನದೇ ಅಂಗಡಿಯ ಸಿಹಿತಿಂಡಿ ತಿನ್ನಲು ನಿರಾಕರಿಸಿದ ಮಾಲೀಕ

ಆಹಾರ ಸುರಕ್ಷತಾ ದಾಳಿಯ ವೇಳೆ ಸಿಹಿ ತಿಂಡಿ ಅಂಗಡಿಯ ಮಾಲೀಕನೊಬ್ಬ ತನ್ನದೇ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಸಿಹಿತಿಂಡಿಯನ್ನು ತಿನ್ನಲು ನಿರಾಕರಿಸಿ ಸುದ್ದಿಯಾಗಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕಲಬೆರಕೆ ಹಾಗೂ ನಕಲಿ ಸಿಹಿತಿಂಡಿಗಳನ್ನು ಮಾರಾಟ...

ದೇಶದ ಅಭಿವೃದ್ಧಿಗೆ ಕೌಶಲ್ಯದ ಕೊರತೆ ಸವಾಲು: 8.7 ಕೋಟಿ ಯುವಜನರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದ ನೀತಿ ಆಯೋಗ

ಭಾರತದ ಆರ್ಥಿಕ ಪ್ರಗತಿ ಹಾಗೂ ಭವಿಷ್ಯದ ಅಭಿವೃದ್ಧಿಯ ಹಾದಿಯಲ್ಲಿ ದೇಶದ ಯುವಶಕ್ತಿಯನ್ನು ಬಳಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಕೋಟ್ಯಂತರ ಯುವಜನರು ಯಾವುದೇ ರೀತಿಯ ಶಿಕ್ಷಣ, ಉದ್ಯೋಗ ಅಥವಾ ಕೌಶಲ್ಯ ತರಬೇತಿಯಲ್ಲಿ...

ಮೀಸಲಾತಿ ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

"ಯಾರದ್ದೋ ಬೇಡಿಕೆಗೆ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಇದು ತಲೆಮಾರುಗಳಿಂದ ಸಾಮಾಜಿಕ ತಾರತಮ್ಯವನ್ನು ಎದುರಿಸಿದ ಸಮುದಾಯಗಳನ್ನು ಬೆಂಬಲಿಸಲು ಇರುವ ಸಾಂವಿಧಾನಿಕ ಹಕ್ಕು" ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶುಕ್ರವಾರ ಹೇಳಿದ್ದಾರೆ. ದೆಹಲಿಗೆ ತೆರಳುವ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಶೇ.80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ; ಹಿಂಸಾಚಾರವು ಅವರ ಪ್ರಗತಿಗೆ ಅಡ್ಡಿಯಾಗಿದೆ: ರಾಹುಲ್ ಗಾಂಧಿ

ದೇಶದ ಅತಿದೊಡ್ಡ ಆಸ್ತಿಯಾಗಿರುವ ಮಹಿಳೆಯರು ಪ್ರಗತಿ ಸಾಧಿಸುವುದನ್ನು ತಡೆಯಲು ಸಮಾಜದಲ್ಲಿ ಹಿಂಸಾಚಾರವನ್ನು ಬಳಸಲಾಗುತ್ತಿದೆ. ಶೇಕಡಾ 80 ರಷ್ಟು ಜನರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ...

‘ಅಕ್ರಮ ವಲಸಿಗರ ಪರಿಶೀಲನೆ’ ನೆಪದಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ಬೆಂಗಳೂರು ಪೊಲೀಸರಿಂದ ದೌರ್ಜನ್ಯ: ಜಂಟಿ ಸತ್ಯಶೋಧನಾ ವರದಿ

ಬೆಂಗಳೂರು ನಗರದಲ್ಲಿ ನಡೆದ "ಅಕ್ರಮ ವಲಸಿಗರ ಪರಿಶೀಲನೆ" ಕಾರ್ಯಾಚರಣೆಯ ಹೆಸರಿನಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಭಾಷೆ ಮತ್ತು ವರ್ಗದ ಆಧಾರದ ಮೇಲೆ ಪ್ರೊಫೈಲಿಂಗ್ ಮಾಡಿ, ಅವರ ಮೇಲೆ ಅನಿಯಂತ್ರಿತ ಬಂಧನ, ಹಲ್ಲೆ...