ಒಡಿಶಾದ ಕೇಂದ್ರಪಾರ ಸಂಸದ ಬೈಜಯಂತ್ ಪಾಂಡಾ ಅವರು ಭಾನುವಾರ ರಾಜನಗರ ಬ್ಲಾಕ್ನ ನುಗಾಂವ್ಗೆ ಭೇಟಿ ನೀಡಿ ಸ್ಥಳೀಯ ಅಂಗನವಾಡಿ ಕೇಂದ್ರದ ದಲಿತ ಮಹಿಳೆ ತಯಾರಿಸಿದ ಊಟವನ್ನು ಸೇವಿಸಿದರು. ಜಾತಿ ಕಾರಣಕ್ಕೆ ಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೆ ಬಹಿಷ್ಕರಿಸಿದ್ದರು.
ಸರ್ಮಿಸ್ತಾ ಸೇಥಿ (23) ಅವರನ್ನು ಅಡುಗೆ ಮತ್ತು ಅಂಗನವಾಡಿ ಸಹಾಯಕಿಯಾಗಿ ನೇಮಿಸಿದ ನಂತರ ಗ್ರಾಮಸ್ಥರು ನವೆಂಬರ್ನಿಂದ ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರನ್ನು ಕಳುಹಿಸುವುದನ್ನು ನಿಲ್ಲಿಸಿದ್ದರು.
ಮೂರು ತಿಂಗಳಿಂದ ಗ್ರಾಮಸ್ಥರನ್ನು ಕಾಡುತ್ತಿದ್ದ ಬಿಕ್ಕಟ್ಟು ಪರಿಹರಿಸಿದ್ದಕ್ಕಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಮಹಿಳಾ ಆಯೋಗದ ಬಗ್ಗೆ ಪಾಂಡಾ ಸಂತೋಷಪಟ್ಟಿದ್ದಾರೆ. ಗ್ರಾಮಸ್ಥರು ಸೋಮವಾರದಿಂದ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಶಿಕ್ಷಣ, ಪೋಷಣೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಜಾತಿ-ಲಿಂಗ ತಾರತಮ್ಯವು ದಲಿತ ಮಹಿಳೆಯರು ಮತ್ತು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಒಡಿಶಾ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಕಲ್ಪನಾ ಮಲ್ಲಿಕ್ ಗಮನಿಸಿದರು.
ಸಾಂವಿಧಾನಿಕ ನಿಬಂಧನೆಗಳು ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತವೆ. ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸುತ್ತವೆ. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡುತ್ತವೆ ಎಂದು ಅವರು ಹೇಳಿದರು. ಕಳೆದ ವರ್ಷ ನವೆಂಬರ್ 24 ರಂದು ಅಂಗನವಾಡಿ ಕೇಂದ್ರದಲ್ಲಿ ಅಡುಗೆಯವರಾಗಿ ಸೇಥಿ ನೇಮಕಗೊಂಡಿದ್ದರು.
“ಗ್ರಾಮಸ್ಥರು ಸಹಕಾರ ನೀಡುವ ಜೊತೆಗೆ ಅಂಗನವಾಡಿ ಕೇಂದ್ರ ಸುಗಮವಾಗಿ ನಡೆಯಲು ಸಹಾಯ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ನನಗೆ ಈಗ ಸಂತೋಷವಾಗಿದೆ” ಎಂದು ಹೇಳಿದರು. ಕೇಂದ್ರಪಾರ ಉಪ-ಸಂಗ್ರಾಹಕ ಅರುಣ್ ಕುಮಾರ್ ನಾಯಕ್, ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಸೋಮವಾರದಿಂದ ಎಲ್ಲಾ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಜರಾಗುವುದನ್ನು ಪುನರಾರಂಭಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.


