ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ದೌರ್ಜನ್ಯವನ್ನು ತಡೆಯುವ ಸಲುವಾಗಿ ತುರ್ತಾಗಿ ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೊಳಿಸಬೇಕು ಎಂದು ‘ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ’ ತಂಡ ರಾಜ್ಯ ಸರ್ಕಾರವನ್ನು ಆಗ್ರಹಿಸಿತು.
ಮಂಗಳವಾರ (ಫೆ.17) ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ತಂಡದ ಪ್ರಮುಖರು, “ಕಾಂಗ್ರೆಸ್ ಪಕ್ಷವು 2023ರ ಚುನಾವಣಾ ಪ್ರಣಾಳಿಕೆಯಲ್ಲಿ ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೊಳಿಸುವ ಭರವಸೆ ನೀಡಿತ್ತು. ಏಪ್ರಿಲ್ 2025ರಲ್ಲಿ ರಾಹುಲ್ ಗಾಂಧಿಯವರ ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೆ ತರುವುದಾಗಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಈ ಭರವಸೆಯು ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ತಾರತಮ್ಯವನ್ನು ಎದುರಿಸುತ್ತಿರುವ ಲಕ್ಷಾಂತರ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಗಳಲ್ಲಿ ಸಮಾನ ಬದುಕಿನ ಹೊಸ ಭರವಸೆಯನ್ನು ಮೂಡಿಸಿತ್ತು ಎಂದರು.
ಮುಂದುವರಿದು, ಜನಾಂದೋಲನ ತಂಡವು ರಾಜ್ಯದಾದ್ಯಂತ ಎಸ್ಸಿ/ಎಸ್ಟಿ ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಕರು ಮತ್ತು ಕಾನೂನು ತಜ್ಞರೊಂದಿಗೆ ಎರಡು ವರ್ಷ ಕಾಲ ಸಮಾಲೋಚನೆ ನಡೆಸಿದ ನಂತರ, ಏಪ್ರಿಲ್ 2025ರಲ್ಲಿ ಮಾದರಿ ವಿಧೇಯಕದ ಕರಡನ್ನು ಸಿದ್ಧಪಡಿಸಿತು. ಡಿಸೆಂಬರ್ 2025ರಲ್ಲಿ ಅದನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಿಸಿತು. ಅದೇ ತಿಂಗಳಲ್ಲೇ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರೊಂದಿಗೆ ಸಮಾಲೋಚನೆ ನಡೆಸಿತ್ತು. ಸರ್ಕಾರ ಸಣ್ಣಪುಟ್ಟ ತಿದ್ದುಪಡಿಗಳೊಂದಿಗೆ ಮಾದರಿ ವಿಧೇಯಕವನ್ನು ಒಪ್ಪಿಕೊಂಡಿರುವುದಾಗಿ ಆಂದೋಲನದ ಸದಸ್ಯರಿಗೆ ತಿಳಿಸಿತ್ತು. ಅದನ್ನು ನಾವು ಸ್ವಾಗತಿಸಿದ್ದೆವು ಎಂದು ವಿವರಿಸಿದರು.

ರಾಜ್ಯ ಸರ್ಕಾರ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ರಾಹುಲ್ ಗಾಂಧಿಯವರು 2026ರ ಜನವರಿ 17ರಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ, ಇದುವರೆಗೆ ವಿಧೇಯಕದ ಕರಡನ್ನು ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಿಲ್ಲ, ಅಥವಾ ಕಾಯ್ದೆಯನ್ನು ಜಾರಿಮಾಡಲು ಸ್ಪಷ್ಟ ವೇಳಾಪಟ್ಟಿಯನ್ನೂ ಘೋಷಿಸಿಲ್ಲ. ಈ ವಿಳಂಬವು ರಾಜ್ಯದಾದ್ಯಂತ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ ಎಂದು ಹೇಳಿದರು.
ಉನ್ನತ ಶಿಕ್ಷಣದಲ್ಲಿನ ರಚನಾತ್ಮಕ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು 2026ರ ಯುಜಿಸಿ ಸಮಾನತೆ ನಿಯಮಗಳು ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಂತ್ರಣ ಕ್ರಮಗಳು ಸಾಕಾಗುವುದಿಲ್ಲ ಎಂದು ಆಂದೋಲನವು ಪುನರುಚ್ಚರಿಸುತ್ತದೆ. ಪ್ರತ್ಯೇಕ ‘ರೋಹಿತ್ ವೇಮುಲ ಕಾಯ್ದೆ’ ತುರ್ತಾಗಿ ಜಾರಿಯಾಗಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿ, ಕೊಟ್ಟ ಮಾತಿನಂತೆ ಕಾಯ್ದೆಯನ್ನು ಜಾರಿಗೊಳಿಸುವಂತೆ ಸೂಚಿಸಬೇಕು, ಬಜೆಟ್ ಅಧಿವೇಶನದಲ್ಲಿ ಅದನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಂದೋಲನದ ಪ್ರಮುಖರಾದ ಬಸವರಾಜ್ ಕೌತಾಳ್, ಮಾವಳ್ಳಿ ಶಂಕರ್, ಹುಲಿಕುಂಟೆ ಮೂರ್ತಿ, ರಾಹುಲ್, ಲೇಖಾ ಮತ್ತು ಆಶ್ನಾ ಇದ್ದರು.


