ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಗಾಗಿ ಜಾತಿ ಪರಿಶೀಲನೆ ಮತ್ತು ಪ್ರಮಾಣೀಕರಣ ಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಮಹಾರಾಷ್ಟ್ರ ಸರ್ಕಾರ ಮಂಗಳವಾರ (ಫೆ.17) ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಇದು ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ತಕ್ಷಣದ ಬದಲಾವಣೆಯನ್ನು ತರದಿದ್ದರೂ, ರಾಜ್ಯದ ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶಿಕ್ಷಣದಲ್ಲಿ ಮುಸ್ಲಿಂ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಹಿಂಪಡೆದಂತಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಕಾನೂನು ಅಡೆತಡೆಗಳಿಂದಾಗಿ ಈ ಮೀಸಲಾತಿಯು ಜಾರಿಯಾಗಿರಲಿಲ್ಲ, ಅಲ್ಲದೆ ಮೀಸಲಾತಿ ನೀಡುವ ಸುಗ್ರೀವಾಜ್ಞೆಯು 2014ರಲ್ಲೇ ಅವಧಿ ಮುಕ್ತಾಯಗೊಂಡಿತ್ತು (ಲ್ಯಾಪ್ಸ್ ಆಗಿತ್ತು). ಮಂಗಳವಾರ ಹೊರಡಿಸಲಾದ ಸರ್ಕಾರದ ಆದೇಶವನ್ನು ಪ್ರಸ್ತುತ ಸ್ಥಿತಿಯನ್ನು ಅಧಿಕೃತವಾಗಿ ಘೋಷಿಸುವ ಒಂದು ತಾಂತ್ರಿಕ ಕ್ರಮವೆಂದು ಪರಿಗಣಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
2014ರಲ್ಲಿ ಅಂದಿನ ಕಾಂಗ್ರೆಸ್-ಎನ್ಸಿಪಿ ಸರ್ಕಾರವು ಮುಸ್ಲಿಮರಿಗೆ ಮತ್ತು ಮರಾಠರಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಅಡಿಯಲ್ಲಿ ಮೀಸಲಾತಿಯನ್ನು ಘೋಷಿಸಿತ್ತು. 2014ರ ವಿಧಾನಸಭಾ ಚುನಾವಣೆಗೆ ಮುನ್ನ ಅಂದಿನ ಸಚಿವ ಮತ್ತು ಕಾಂಗ್ರೆಸ್ ನಾಯಕ ಅರಿಫ್ ನಸೀಮ್ ಖಾನ್ ಈ ಘೋಷಣೆಯನ್ನು ಮಾಡಿದ್ದರು.
ಇದರ ಅಡಿಯಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಮರಾಠ ಮತ್ತು ಮುಸ್ಲಿಂ ವಿಭಾಗಗಳಿಗೆ ಕ್ರಮವಾಗಿ ಶೇಕಡ 16 ಮತ್ತು ಶೇಕಡ 5ರಷ್ಟು ಮೀಸಲಾತಿಯನ್ನು ನೀಡಬೇಕಾಗಿತ್ತು. ಮರಾಠ ಮೀಸಲಾತಿಗೆ ಸಂಬಂಧಿಸಿದಂತೆ, ನಾರಾಯಣ ರಾಣೆ ಸಮಿತಿಯ ವರದಿಯು ಆಧಾರವಾಗಿತ್ತು. ಮುಸ್ಲಿಂ ಮೀಸಲಾತಿಯ ಬೇಡಿಕೆಯೂ ದೀರ್ಘಕಾಲದದಾಗಿದ್ದು, ಈ ಹಿಂದೆ ಸಾಚಾರ್ ಸಮಿತಿಯು ಕೂಡ ಇದಕ್ಕೆ ಶಿಫಾರಸು ಮಾಡಿತ್ತು.
2014ರಲ್ಲಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ (ಎಸ್ಇಬಿಸಿ) ಅಡಿಯಲ್ಲಿ (ವಿಶೇಷ ಹಿಂದುಳಿದ ವರ್ಗ-ಎ ಅಥವಾ ಎಸ್ಬಿಸಿ-ಎ ಮೂಲಕ) ಮುಸ್ಲಿಮರಿಗೆ ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡ 5ರಷ್ಟು ಮೀಸಲಾತಿಯನ್ನು ನೀಡುವ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿತ್ತು. ಆದರೆ ಚುನಾವಣೆಯ ನಂತರ, ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಸರ್ಕಾರ ಬದಲಾಯಿತು. ನಿಗದಿತ ಆರು ತಿಂಗಳ ಕಾಲಮಿತಿಯೊಳಗೆ ಅದರ ಬಗ್ಗೆ ಕಾನೂನನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾದ ಕಾರಣ, 2014ರ ಡಿಸೆಂಬರ್ 23 ರಂದು ಆ ಸುಗ್ರೀವಾಜ್ಞೆಯ ಅವಧಿಯು ಮುಕ್ತಾಯಗೊಂಡಿತ್ತು.
2014ರಲ್ಲಿ ಸಂಜಿತ್ ಶುಕ್ಲಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ಮೂಲಕ ಈ ವಿಷಯವನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಉದ್ಯೋಗಗಳಲ್ಲಿನ ಶೇಕಡಾ 5 ರಷ್ಟು ಮೀಸಲಾತಿಯ ಅನುಷ್ಠಾನವನ್ನು ರದ್ದುಗೊಳಿಸಿತ್ತು, ಆದರೆ ಶಿಕ್ಷಣದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಹಸಿರು ನಿಶಾನೆ ತೋರಿಸಿತ್ತು. ಆದರೆ ಸುಗ್ರೀವಾಜ್ಞೆಯ ಅವಧಿಯು ಮುಕ್ತಾಯಗೊಂಡಿದ್ದರಿಂದ ಶಿಕ್ಷಣದಲ್ಲಿನ ಮೀಸಲಾತಿಯೂ ಜಾರಿಗೆ ಬರಲಿಲ್ಲ. ಆದಾಗ್ಯೂ, ಸರ್ಕಾರವು 2014 ಮತ್ತು 2015ರಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ವಿವಿಧ ಆದೇಶಗಳನ್ನು ಹೊರಡಿಸಿತ್ತು. ಜಾತಿ ಪ್ರಮಾಣಪತ್ರಗಳ ವಿತರಣೆ ಮತ್ತು ಸಿಂಧುತ್ವ ಪ್ರಕ್ರಿಯೆಯೂ ಅವುಗಳಲ್ಲಿ ಒಂದಾಗಿತ್ತು.
ಪ್ರಸ್ತುತ ಸರ್ಕಾರ ಈಗ 2014 ಮತ್ತು 2015ರಲ್ಲಿ ಈ ಸಂಬಂಧ ಹೊರಡಿಸಲಾಗಿದ್ದ ಎಲ್ಲಾ ಆದೇಶಗಳನ್ನು ಅಧಿಕೃತವಾಗಿ ರದ್ದುಗೊಳಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಎಸ್ಇಬಿಸಿ ಮುಸ್ಲಿಮರಿಗೆ ನೀಡಲಾಗಿದ್ದ ಶೇಕಡ 5ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವು, ಬಿಜೆಪಿಗೆ ತನ್ನ ಪಕ್ಷದ ಅಥವಾ ತನ್ನ ಮಿತ್ರಪಕ್ಷಗಳ ಮುಸ್ಲಿಂ ನಾಯಕರ ಬಗ್ಗೆ ಯಾವುದೇ ಗೌರವವಿಲ್ಲ ಎಂಬುವುದನ್ನು ಸಾಬೀತುಪಡಿಸುತ್ತದೆ. ಅಲ್ಲದೆ, ಈ ಮುಸ್ಲಿಂ ನಾಯಕರು ಬಿಜೆಪಿಯಿಂದ ನ್ಯಾಯ ಕೊಡಿಸಲು ಅಸಮರ್ಥರಾಗಿದ್ದಾರೆ ಎಂಬುವುದನ್ನು ಇದು ತೋರಿಸುತ್ತದೆ” ಎಂದು ಎನ್ಸಿಪಿ-ಎಸ್ಪಿ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಕಿಡಿಕಾರಿದ್ದಾರೆ.
ಶಿವಸೇನಾ ನಾಯಕ ಕೃಷ್ಣ ಹೆಗ್ಡೆ ಈ ಬಗ್ಗೆ ಪ್ರತಿಕ್ರಿಯಿಸಿ, “ಕಾಂಗ್ರೆಸ್-ಎನ್ಸಿಪಿ ಸರ್ಕಾರವು ಈ ವಿಷಯದಲ್ಲಿ ಕಾನೂನು ರೂಪಿಸುವಲ್ಲಿ ವಿಫಲವಾಗಿತ್ತು ಮತ್ತು ಕೇವಲ ತಾತ್ಕಾಲಿಕ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಹಿಂದುಳಿದ ಸಮುದಾಯಗಳಿಂದ ಮೀಸಲಾತಿಯನ್ನು ಕಸಿದುಕೊಂಡಿತ್ತು. ಈಗ ಮಹಾಯುತಿ ಸರ್ಕಾರವು ಹಿಂದುಳಿದ ಸಮುದಾಯಗಳ ಸಂಪೂರ್ಣ ಮೀಸಲಾತಿಯನ್ನು ಮರುಸ್ಥಾಪಿಸಿದೆ” ಎಂದು ಹೇಳಿದ್ದಾರೆ.


