ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿಯಲ್ಲಿ ಸಂಪ್ರದಾಯದಂತೆ ಉರೂಸ್ ನಡೆಸುವ ಕಾನೂನಾತ್ಮಕ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದ್ದು, ಜಿಲ್ಲಾಡಳಿತದ ದ್ವಿಮುಖ ನೀತಿ ವಿರುದ್ದ ಗುರುವಾರ (ಮಾ.5) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಉರೂಸ್ ಸಂದರ್ಭದಲ್ಲಿ ಬಾಬಾ ಬುಡನ್ಗಿರಿಯ ಸೂಫಿ ಸಂತರ ಸಮಾಧಿ ಮೇಲೆ ಹಸಿರು ಬಟ್ಟೆ ಹೊದಿಸುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಉರೂಸಿನ ಪ್ರಮುಖ ಭಾಗವೂ ಹೌದು. ಆದರೆ, ಜಿಲ್ಲಾಡಳಿತ ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಗೌಸ್ ಮುಈನುದ್ದೀನ್ ಆರೋಪಿಸಿದ್ದಾರೆ.
ಸಮಾಧಿ ಮೇಲೆ ಹಸಿರು ಬಟ್ಟೆ ಹೊದಿಸಲು ಅವಕಾಶ ನೀಡುವ ಕುರಿತು ಮಾಧುಸ್ವಾಮಿ ವರದಿಯಲ್ಲೂ ಉಲ್ಲೇಖಿಸಲಾಗಿದೆ. ವರದಿಯನ್ನು ಸರ್ಕಾರ ಒಪ್ಪಿಕೊಂಡಿರುವ ಕಾರಣ, ಇದು ಕಾನೂನಾತ್ಮಕ ಅವಕಾಶವಾಗಿದೆ. ಆದರೆ, ಜಿಲ್ಲಾಡಳಿತ ಉರೂಸ್ ಸಂದರ್ಭದಲ್ಲಿ ಹಸಿರು ಬಟ್ಟೆ ಹೊದಿಸಲು ಬಿಟ್ಟಿಲ್ಲ. ಅಧಿಕಾರಿಗಳು ಅವರಿಗೆ ಇಷ್ಟ ಬಂದಂತೆ ಉರೂಸ್ ನಡೆಸಿದ್ದಾರೆ. ಹಸಿರು ಬಟ್ಟೆ ಹೊದಿಸಲು ಅವಕಾಶ ನೀಡದ ಹಿನ್ನೆಲೆ, ಮುಜಾವರ್ ಉರೂಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದು ಮುಈನುದ್ದೀನ್ ವಿವರಿಸಿದ್ದಾರೆ.
ದತ್ತ ಜಯಂತಿ ಸಂದರ್ಭದಲ್ಲಿ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುತ್ತದೆ. ಯಾವ ರೀತಿ ಬೇಕೋ ಆ ರೀತಿ ಜಯಂತಿ ಆಚರಿಸಲು ಅವಕಾಶ ನೀಡುತ್ತದೆ. ಉರೂಸ್ ಸಂದರ್ಭದಲ್ಲಿ ಮಾತ್ರ ಕನಿಷ್ಠ ಹಸಿರು ಬಟ್ಟೆ ಹೊದಿಸಲೂ ಅವಕಾಶ ನೀಡುತ್ತಿಲ್ಲ. ಇದು ಜಿಲ್ಲಾಡಳಿತದ ದ್ವಿಮುಖ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ರೀತಿ ಜಾತ್ಯಾತೀತ ಅವಕಾಶಗಳನ್ನು ನಿರಾಕರಿಸುತ್ತಿರುವುದು ಬೇಸರದ ಸಂಗತಿ ಎಂದು ಮುಈನುದ್ದೀನ್ ಹೇಳಿದ್ದಾರೆ.
ನಮಗೆ ಇಲ್ಲಿ ಉರೂಸ್ ಅಥವಾ ದತ್ತ ಜಯಂತಿ ಮುಖ್ಯವಲ್ಲ. ಜಿಲ್ಲಾಡಳಿತದ ದ್ವಿಮುಖ ಮತ್ತು ಏಕಪಕ್ಷೀಯ ಧೋರಣೆಯನ್ನು ನಾವು ಖಂಡಿಸುತ್ತೇವೆ. ಒಂದು ಸಮುದಾಯದವರ ಧಾರ್ಮಿಕ ಆಚರಣೆಗಳಿಗೆ ಸಂಪೂರ್ಣ ವ್ಯವಸ್ಥೆಗಳನ್ನು ಮಾಡಿಕೊಡುವ ಆಡಳಿತ, ಇನ್ನೊಂದು ಸಮುದಾಯದ ಕನಿಷ್ಠ ಆಚರಣೆಗಳಿಗೆ ಅವಕಾಶ ನೀಡುತ್ತಿಲ್ಲ. ಇದು ಸಂವಿಧಾನದ ತತ್ವಗಳು ಮತ್ತು ಸರ್ಕಾರವೇ ಒಪ್ಪಿಕೊಂಡ ಮಾಧುಸ್ವಾಮಿ ವರದಿಯ ಶಿಫಾರಸುಗಳಿಗೆ ವಿರುದ್ದವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ದ್ವಿಮುಖ ನೀತಿ ಖಂಡಿಸಿ ಗುರುವಾರ ಚಿಕ್ಕಮಗಳೂರಿನ ಆಝಾದ್ ವೃತ್ತ ಮತ್ತು ಬಾಬಾ ಬುಡನ್ಗಿರಿಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಗೌಸ್ ಮುಈನುದ್ದೀನ್ ತಿಳಿಸಿದ್ದಾರೆ.


