ಒಳಮೀಸಲಾತಿ ಇಲ್ಲದೇ 56 ಸಾವಿರ ಉದ್ಯೋಗ ಭರ್ತಿಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಒಳಮೀಸಲಾತಿ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ಇದೇ ತಿಂಗಳ 12 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಈ ಕುರಿತು ಮಾತನಾಡಿದ ‘ಒಳಮೀಸಲಾತಿ ಹೋರಾಟ ಸಮಿತಿ’ ಮುಖಂಡರು, “ಒಳಮೀಸಲಾತಿ ವಿಧೇಯಕವು ರಾಜ್ಯಪಾಲರ ಸಹಿ ಪಡೆದು ಅನುಮೋದನೆಗೊಂಡಿದೆ ಎಂದು ಸಂತೋಷ ಪಡುವ ಸಂದರ್ಭದಲ್ಲಿ ಒಳಮೀಸಲಾತಿ ಅನ್ವಯವಾಗದಂತೆ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂಬ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಘೋರ ಅನ್ಯಾಯವಾಗಿದೆ. ಆ ಮೂಲಕ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹ ಎಸಗಲಾಗಿದೆ. ಸರ್ಕಾರದ ಈ ತೀರ್ಮಾನವನ್ನು ಒಳ ಮೀಸಲಾತಿ ಹೋರಾಟಗಾರರು, ಸಾಮಾಜಿಕ ನ್ಯಾಯದ ಪರವಿರುವ ಪ್ರಜ್ಞಾವಂತರೆಲ್ಲರೂ ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸುತ್ತೇವೆ” ಎಂದರು.
“ಚುನಾವಣೆ ಪೂರ್ವದಲ್ಲಿ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿಯೇ ಒಳಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತದೆ ಎಂದು ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಅದೇ ಭರವಸೆ ನೀಡಲಾಗಿತ್ತು. ಸರ್ಕಾರ ಬಂದು 3 ವರ್ಷ ಮುಗಿಯುತ್ತಿದ್ದರೂ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ಹೋರಾಟದ ಒತ್ತಡಕ್ಕೆ ಮಣಿದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿಗೆ ತರುತ್ತೇವೆಂದು ತಾತ್ವಿಕವಾಗಿ ಒಪ್ಪಿಕೊಂಡು 25, ಆಗಸ್ಟ್ 2025 ರಂದು ಆದೇಶ ಹೊರಡಿಸಿದಿರಿ. 2025 ರ ಚಳಿಗಾಲದ ಅಧಿವೇಶನದಲ್ಲಿ ಶಾಸನ ಬದ್ದ ಕಾಯ್ದೆ ಮಾಡಿಕೊಂಡು ರಾಜ್ಯಪಾಲರಿಂದ ಅಂತಿಮ ಅಂಗೀಕಾರ ಪಡೆಯಲಾಗಿದೆ. ಇಷ್ಟೆಲ್ಲ ಇದ್ದರೂ ಒಳಮೀಸಲಾತಿ ಇಲ್ಲದೇ ನೇಮಕಾತಿಗಳನ್ನು ಭರ್ತಿ ಮಾಡುವಂತೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲ ಎಂಬುದನ್ನು ಸಾರುತ್ತದೆ” ಎಂದು ಹೇಳಿದ್ದಾರೆ.
“ಭಾರತದ ಹಲವಾರು ರಾಜ್ಯದಲ್ಲಿ ಪ.ಜಾತಿ/ಪ.ಪಂಗಡ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮಿಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನ ಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ದಿನಾಂಕ 28.12.2022 ರಿಂದ ಜಾರಿಗೆ ಬಂದ ಪ.ಜಾ 17% ಮತ್ತು ಪ.ಪಂ 7% ಮಿಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ, ಪರಿಶಿಷ್ಟ ಜಾತಿಗೆ 2% ಕಡಿತ ಎಂದರೆ 1129 ಮತ್ತು ಪರಿಶಿಷ್ಟ ಪಂಗಡಕ್ಕೆ 4% ಕಡಿತ ಎಂದರೆ 2,258 ಒಟ್ಟು ಪ.ಜಾ-ಪ.ಪದಲಿತ ಸಮುದಾಯಕ್ಕೆ ಸಿಗಬೇಕಾದ 3387 ಕ್ಕೂ ಹೆಚ್ಚಿನ ಹುದ್ದೆಗಳನ್ನು ತಪ್ಪಿಸಿ 56,439ಹುದ್ದೆಗಳ ಭರ್ತಿಗೆ ಮುಂದಾದ ಪರಿಶಿಷ್ಟ ಜಾತಿಗಳ ವಿರೋಧಿ ನೀತಿಯ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತೇವೆ” ಎಂದರು.
“ಪರಿಶಿಷ್ಟರ ಮೀಸಲಾತಿ ಹೆಚ್ಚಳದಿಂದ ಶೇ.56 ಮೀಸಲಾತಿಯನ್ನು ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಆದರೆ ಅರ್ಜಿದಾರರ ಪರ ವಕೀಲರು ಅದಕ್ಕೆ ತಡೆ ನೀಡುವಂತೆ ವಾದ ಮಂಡಿಸಿರುವುದಿಲ್ಲ ಮತ್ತು ನ್ಯಾಯಾಲಯವು ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ಶೇ.56 ರಂತೆ ನೇರ ನೇಮಕಾತಿ ಮಾಡಿಕೊಳ್ಳಲು ನ್ಯಾಯಾಲವು ತಡೆಯಾಜ್ಞೆ ನೀಡಿದೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದೆ. ಆದರೂ ಸರ್ಕಾರ ದಿಕ್ಕು ತಪ್ಪಿಸುತ್ತಿರುವುದು ಮಹಾ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸದಾ ಸಂವಿದಾನ, ಬಾಬಾ ಸಾಹೇಬರೆಂದು ಬಾಯಿ ಬಡಿದುಕೊಳ್ಳುವ ಈ ಸರ್ಕಾರ ನೀತಿಯಲ್ಲಿ ಮಾತ್ರ ಸಾಮಾಜಿಕ ನ್ಯಾಯಕ್ಕೆ ವಿರೋಧವಾಗಿ ನಡೆದುಕೊಂಡಿದೆ. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರೇ ಒಳಮೀಸಲಾತಿಗೆ ಅಡ್ಡಲಾಗಿ ನಿಂತಿದ್ದಾರೆ. ಎಲ್ಲಾ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸುವ ಬದಲು ಸದಾ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಾ ಬಂದಿದ್ದಾರೆ. ಹಾಗಾಗಿ ಇಡೀ ಅಧಿಕಾರಿ ವರ್ಗ ಒಳಮೀಸಲಾತಿ ವಿಫಲಗೊಳಿಸಲು ಕೆಲಸ ಮಾಡುತ್ತಿದೆ. ಈ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪ್ರಜ್ಞಾವಂತರು ಮತ್ತು ಸಮುದಾಯ ಮಾಡು ಇಲ್ಲವೇ ಮಡಿ ಎಂಬ ಅಂತಿಮ ಹೋರಾಟಕ್ಕೆ ಕರೆ ನೀಡುತ್ತಿದೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬುದ್ಧಿ ಕಲಿಸಲು ಮುಂದಾಗಿದ್ದೇವೆ. ನಮ್ಮ ಅಳಿವು-ಉಳಿವಿನ ಈ ನಿರ್ಣಾಯಕ ಹೋರಾಟದಲ್ಲಿ ತಾವೆಲ್ಲರೂ ತಪ್ಪದೇ ಜೊತೆಗೂಡಬೇಕೆಂದು ಆಗ್ರಹಿಸುತ್ತೇವೆ” ಎಂದು ಮನವಿ ಮಾಡಿದರು.
ಹಕ್ಕೊತ್ತಾಯಗಳು
- ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ ಸಿಆ ಸುಇ-1ಸೇಹಿಮ 2026, ದಿನಾಂಕ 27.02.2026 ಅನ್ನು ತಕ್ಷಣವೆ ಹಿಂಪಡೆಯಬೇಕು ಮತ್ತು ನೇಮಕಾತಿಯಲ್ಲಿ ಒಳಮೀಸಲಾತಿ ಕಡ್ಡಾಯಗೊಳಿಸಿ ಜಾರಿಗೆ ತರಬೇಕು.
- ರಾಜ್ಯದಲ್ಲಿ ದಲಿತರ ಜನಸಂಖ್ಯೆ 18%ನಷ್ಟಿದೆ. ಹಾಗಾಗಿಯೇ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ದಾಸ್ರವರು 17%ಗೆ ಪರಿಶಿಷ್ಟ ಜಾತಿಗಳ ಮೀಸಲಾತಿ ಹೆಚ್ಚಿಸಲು ಶಿಫಾರಸ್ಸು ಮಾಡಿರುತ್ತಾರೆ ಮತ್ತು ಅದು ಜಾರಿಯಲ್ಲಿದೆ. ಈ ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು ರಾಜ್ಯದ 56% ಮೀಸಲಾತಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಸರ್ವ ಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ, ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
- ನೇರ ನೇಮಕಾತಿ, ಬಡ್ತಿ ನೇಮಕಾತಿ ಮತ್ತು ಮುಂಬಡ್ತಿ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಯಲ್ಲಿ 2001ರ ಹಿಂದಿನ ಬ್ಯಾಕ್ಲಾಗ್ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತಿದೆ. ಈ ನಿಯಮವನ್ನು 2001ರ ನಂತರದ ಬ್ಯಾಕ್ಲಾಗ್ ಹುದ್ದೆಗಳಿಗೂ ಮುಂದುವರೆಸಬೇಕು ಹಾಗೂ ಒಳ ಮೀಸಲಾತಿ ಜಾರಿಯಾಗಬೇಕು. ಎಸ್ಇಪಿ-ಟಿಎಸ್ಪಿ ಅನುದಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಒಳಮೀಸಲಾತಿ ಸಂಪೂರ್ಣವಾಗಿ ಜಾರಿಯಾಗಬೇಕು.
- ನೇಮಕಾತಿಗಳಲ್ಲಿ ವಿಶ್ವವಿದ್ಯಾಲಯಗಳು ಒಂದು ಘಟಕ ಎಂದು ಪರಿಗಣಿಸಬೇಕೆನ್ನುವ ಪ್ರಸ್ತಾವನೆಯನ್ನು ಕೈಬಿಡಬೇಕು.
- ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿ ನೀಡಲೇಬೇಕು.
- ಸಮಾಜ ಕಲ್ಯಾಣವನ್ನು ಸಮರ್ಪಕವಾಗಿ ನಿರ್ವಹಿಸದೇ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವ ಸಚಿವರನ್ನು ಕೂಡಲೇ ಬದಲಾಯಿಸಬೇಕು.
‘ಪಿಟಿಸಿಎಲ್ ಕಾಯ್ದೆ’ ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ


