ಲಡಾಖ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಿರುವುದನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾ.23) ವಿಲೇವಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ಮಾರ್ಚ್ 14ರಂದು ಕೇಂದ್ರ ಸರ್ಕಾರ ವಾಂಗ್ಚುಕ್ ಅವರ ಬಂಧನವನ್ನು ರದ್ದುಗೊಳಿಸಿದ್ದರಿಂದ ಅರ್ಜಿಯು ನಿಷ್ಪ್ರಯೋಜಕವಾಗಿದೆ ಎಂದು ಹೇಳಿದೆ. ಈ ವಿಷಯದಲ್ಲಿ ತೀರ್ಮಾನಿಸಲು ಇನ್ನೇನೂ ಉಳಿದಿಲ್ಲ ಎಂದು ತಿಳಿಸಿದೆ.
ವಾಂಗ್ಚುಕ್ ಅವರು ಎನ್ಎಸ್ಎ ಅಡಿ ಗರಿಷ್ಠ ಸಮಯ ಪ್ರಿವೆಂಟಿವ್ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ ಕೇಂದ್ರ ಸರ್ಕಾರ, ಮಾರ್ಚ್ 14ರಂದು ಅವರ ಬಂಧನವನ್ನು ರದ್ದುಗೊಳಿಸಿತ್ತು.
ಆಂಗ್ಮೋ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ವಾಂಗ್ಚುಕ್ ಬಂಧನಕ್ಕೆ ಆಧಾರವಾಗಿರುವ ಎಲ್ಲಾ ಸಂಬಂಧಿತ ಸಾಮಗ್ರಿಗಳನ್ನು ಅವರಿಗೆ ಒದಗಿಸಲಾಗಿಲ್ಲ ಎಂಬ ಕಾರಣಕ್ಕೆ ಬಂಧನವನ್ನು ಪ್ರಶ್ನಿಸಿದ್ದರು. ಆಡಳಿತವು ಪ್ರಚೋದನಕಾರಿ ಎಂದು ಹೇಳಿಕೊಂಡಿದ್ದ ಭಾಷಣಗಳ ವಿಡಿಯೋಗಳನ್ನು ವಾಂಗ್ಚುಕ್ಗೆ ನೀಡಲಾಗಿದೆಯೇ ಎಂಬ ಬಗ್ಗೆ ವಿವಾದವಿತ್ತು. ಆಡಳಿತವು ವಿಡಿಯೋಗಳನ್ನು ಹೊಂದಿರುವ ಪೆನ್ಡ್ರೈವ್ ಅನ್ನು ವಾಂಗ್ಚುಕ್ಗೆ ನೀಡಿರುವುದಾಗಿ ಹೇಳಿಕೊಂಡರೂ, ನ್ಯಾಯಾಲಯವು ಅವುಗಳನ್ನು ವೀಕ್ಷಿಸಲು ಅವರಿಗೆ ನಿಜವಾಗಿಯೂ ಅವಕಾಶವಿದೆಯೇ ಎಂದು ಕೇಳಿತ್ತು.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, ಆಡಳಿತ ವಾಂಗ್ಚುಕ್ ಅವರ ಭಾಷಣಗಳನ್ನು ‘ಅತಿಯಾಗಿ ವಿಶ್ಲೇಷಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಭಾಷಣಗಳ ಅನುವಾದದಲ್ಲಿನ ಕೆಲವು ವ್ಯತ್ಯಾಸಗಳನ್ನು ಪೀಠವು ಎತ್ತಿ ತೋರಿಸಿದ ನಂತರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಲು ಬಯಸಿದ್ದರು. ಆದರೆ, ಅಂದಿನಿಂದ ಕೇಂದ್ರ ಸರ್ಕಾರವು ಬಂಧನದ ಆದೇಶವನ್ನು ಹಿಂಪಡೆಯುವವರೆಗೆ ಈ ವಿಷಯದ ವಿಚಾರಣೆಯನ್ನು ಕಾಲಕಾಲಕ್ಕೆ ಮುಂದೂಡಲಾಗಿತ್ತು.


