ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರ ಅರ್ಜಿಗಳ ವಿಚಾರಣೆಗಾಗಿ ಕೋಲ್ಕತ್ತಾದಲ್ಲಿ ಸ್ಥಾಪಿಸಲಾದ ಮೇಲ್ಮನವಿ ನ್ಯಾಯಮಂಡಳಿಯು, ಮುಂಬರುವ ವಿಧಾನಸಭಾ ಚುನಾವಣೆಯ ಫರಕ್ಕಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರ ಹೆಸರನ್ನು ಭಾನುವಾರ (ಏ.5) ಮರುಸೇರ್ಪಡೆಗೊಳಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ನ್ಯಾಯಮಂಡಳಿಯು ನಿರ್ಧರಿಸಿದ ಮೊದಲ ಪ್ರಕರಣ ಶೇಖ್ ಅವರದ್ದಾಗಿದೆ. ಕಲ್ಕತ್ತಾ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರು ತಮ್ಮ ಆದೇಶದಲ್ಲಿ, ಶೇಖ್ ಅವರ ಹೆಸರು ಕೈಬಿಟ್ಟ ಕಾರಣಗಳನ್ನು ಚುನಾವಣಾ ಆಯೋಗ ಒದಗಿಸಿಲ್ಲ. ಇದಕ್ಕೆ ಅವರು ‘ತಾಂತ್ರಿಕ ಕಾರಣಗಳನ್ನು’ ಉಲ್ಲೇಖಿಸಿದ್ದಾರೆ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದೆ. ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮತದಾನ ನಡೆಯಲಿದ್ದು, ಫಲಿತಾಂಶವು ಮೇ 4ರಂದು ಪ್ರಕಟವಾಗಲಿದೆ.
ಚುನಾವಣೆ ಮುಂಚಿತವಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆದ ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು 9 ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಸೇರಿದೆ.
ಎಸ್ಐಆರ್ ಬಳಿಕ 2026ರ ಫೆಬ್ರವರಿ 28ರಂದು ಚುನಾವಣಾ ಆಯೋಗ ಮೊದಲ ಮತದಾರರ ಪಟ್ಟಿ ಪ್ರಕಟಿಸಿತ್ತು. ಇದರಲ್ಲಿ ಬರೋಬ್ಬರಿ 61 ಲಕ್ಷ ಹೆಸರುಗಳನ್ನು ಕೈಬಿಡಲಾಗಿತ್ತು. ಇದಕ್ಕೂ ಮೊದಲು 2025ರ ಡಿಸೆಂಬರ್ನಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಕರಡು ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದರ ವಿರುದ್ಧ ಸಲ್ಲಿಸಲಾದ ಆಕ್ಷೇಪಣೆಗಳ ಆಧಾರದ ಮೇಲೆ, ಸುಮಾರು 60 ಲಕ್ಷ “ಸಂದೇಹಾಸ್ಪದ ಮತ್ತು ಬಾಕಿ ಉಳಿದಿರುವ” ಪ್ರಕರಣಗಳ ನ್ಯಾಯ ನಿರ್ಣಯ ಪ್ರಕ್ರಿಯೆಯು ಮುಂದುವರಿದಿದೆ.
ಎಸ್ಐಆರ್ ಕಾರ್ಯ ಪೂರ್ಣಗೊಳಿಸಲು ಸಹಾಯ ಮಾಡುವ ಸಲುವಾಗಿ ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ 2026ರ ಫೆಬ್ರವರಿ 20ರಂದು ಚುನಾವಣಾ ಆಯೋಗಕ್ಕೆ ಆದೇಶಿಸಿದೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ವಿರುದ್ಧದ ಮೇಲ್ಮನವಿಗಳ ವಿಚಾರಣೆಗಾಗಿ, ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರನ್ನು ಒಳಗೊಂಡ ಮೇಲ್ಮನವಿ ನ್ಯಾಯಮಂಡಳಿಯನ್ನು (Appellate Tribunal) ರಚಿಸುವಂತೆ ಸುಪ್ರೀಂ ಕೋರ್ಟ್ ಮಾರ್ಚ್ 10ರಂದು ಆದೇಶಿಸಿದೆ.
ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅರ್ಜಿಯನ್ನು ನ್ಯಾಯಾಂಗ ಅಧಿಕಾರಿಯು ತಿರಸ್ಕರಿಸಿದಲ್ಲಿ, ಅಂತಹ ವ್ಯಕ್ತಿಯು ಈ ಮೇಲ್ಮನವಿ ನ್ಯಾಯಮಂಡಳಿಯ ಮೊರೆ ಹೋಗಬಹುದು.
ಮತದಾನ ದಿನಾಂಕ ಹತ್ತಿರ ಬರುತ್ತಿದ್ದರೂ, ತಾನು ರಚಿಸಿದ 19 ನ್ಯಾಯಮಂಡಳಿಗಳನ್ನು ಚುನಾವಣಾ ಆಯೋಗವು ಇನ್ನೂ ಭೌತಿಕವಾಗಿ ಸ್ಥಾಪಿಸಿಲ್ಲ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಶೇಖ್ ಅವರ ಪ್ರಕರಣದ ಆದೇಶವು “ನೈಜ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೇಗೆ ಅಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಅವರ ವಕೀಲರಾದ ಫಿರ್ದೌಸ್ ಶಮೀಮ್ ಹೇಳಿದ್ದಾರೆ.
ನ್ಯಾಯಮಂಡಳಿ ಹೇಳಿದ್ದೇನು?
ಭಾನುವಾರ (ಏ.5) ರಾತ್ರಿ 8 ಗಂಟೆಯೊಳಗೆ ಹೆಚ್ಚುವರಿ ಪಟ್ಟಿಯ ಮೂಲಕ ಶೇಖ್ ಅವರನ್ನು ಮುರ್ಷಿದಾಬಾದ್ನ ಮಾನ್ಯ ಮತದಾರರೆಂದು ಘೋಷಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಶಿವಜ್ಞಾನಂ ಅವರ ನಿರ್ದೇಶನ ನೀಡಿದ್ದಾರೆ.
ಶೇಖ್ ಸಲ್ಲಿಸಿದ ಪಾಸ್ಪೋರ್ಟ್ ಸರಿಯಾದ ಪುರಾವೆಯಾಗಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಅಲ್ಲದೆ, ಶೇಖ್ ತಂದೆಯ ಹೆಸರಿನಲ್ಲಿ ಯಾವುದೇ ವ್ಯತ್ಯಾಸವಿಲ್ಲದಿರುವುದನ್ನು ಎಲ್ಲಾ ದಾಖಲೆಗಳಲ್ಲಿಯೂ ಅವರು ಬೆಟ್ಟು ಮಾಡಿದ್ದಾರೆ.
“ಮೇಲ್ಮನವಿದಾರರು (ಮೊತಾಬ್ ಶೇಖ್) ತಮ್ಮ ವಂಶವೃಕ್ಷವನ್ನೂ (family tree) ನ್ಯಾಯಮಂಡಳಿಯ ಮುಂದೆ ಮಂಡಿಸಿದ್ದಾರೆ. ತಮ್ಮ ಆರು ಮಂದಿ ಒಡಹುಟ್ಟಿದವರು, ಅವರ ಸಂಗಾತಿಗಳು ಮತ್ತು ಮಕ್ಕಳು ಸೇರಿದಂತೆ ಕುಟುಂಬದ ಉಳಿದೆಲ್ಲಾ ಸದಸ್ಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ ಮತ್ತು ಅಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ” ಎಂದು ನ್ಯಾಯಮೂರ್ತಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.
ಶೇಖ್ ಅವರ ಹೆಸರನ್ನು ಕೈಬಿಡಲು ನ್ಯಾಯಾಂಗ ಅಧಿಕಾರಿಯು ನೀಡಿದ ಕಾರಣಗಳನ್ನು ಪರಿಶೀಲಿಸಲು ತನಗೆ ಸಾಧ್ಯವಾಗಿಲ್ಲ ಎಂದೂ ನ್ಯಾಯಮೂರ್ತಿ ತಿಳಿಸಿದ್ದಾರೆ.
ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಕೈಬಿಟ್ಟಿರುವುದರ ವಿರುದ್ಧ ನ್ಯಾಯಮಂಡಳಿಯನ್ನು ಸಂಪರ್ಕಿಸುವಂತೆ ಏಪ್ರಿಲ್ 2ರಂದು ಸುಪ್ರೀಂ ಕೋರ್ಟ್ ಶೇಖ್ ಅವರಿಗೆ ಸೂಚಿಸಿತ್ತು. ಇದಾಗಿ ಕೆಲ ದಿನಗಳಲ್ಲಿ ಈ ಬೆಳವಣಿಗೆ ನಡೆಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಶೇಖ್ ಅವರು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಮರುಸ್ಥಾಪಿಸಲು ಮತ್ತು ನಾಮಪತ್ರ ಸಲ್ಲಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇಲ್ಮನವಿ ನ್ಯಾಯಮಂಡಳಿಗಳನ್ನು ತಕ್ಷಣವೇ ಕಾರ್ಯರೂಪಕ್ಕೆ ತರಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದರು.
ತೀರ್ಪು ನೀಡಿದ ನಂತರ ಚುನಾವಣಾ ಆಯೋಗವು ಹಲವಾರು ಪೂರಕ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.ಶನಿವಾರದವರೆಗೆ 60 ಲಕ್ಷ ಪ್ರಕರಣಗಳ ಪೈಕಿ 57 ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಆದಾಗ್ಯೂ, ಈ ಪ್ರಕರಣಗಳ ಪೈಕಿ ಎಷ್ಟು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗವು ಸ್ಪಷ್ಟಪಡಿಸಿಲ್ಲ.
ನ್ಯಾಯಾಂಗ ಅಧಿಕಾರಿಗಳು ಸುಮಾರು 49 ಲಕ್ಷ ಪ್ರಕರಣಗಳ ಕುರಿತು ನಿರ್ಧಾರ ಕೈಗೊಂಡಾಗ, ಅದರಲ್ಲಿ ಸುಮಾರು 22 ಲಕ್ಷ ಅಂದರೆ ಶೇಕಡ 45 ರಷ್ಟು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತ್ತು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.


