2003ರ ಕೊಲೆ ಪ್ರಕರಣದಲ್ಲಿ ಛತ್ತೀಸ್ಗಢ ಹೈಕೋರ್ಟ್ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ದಿ ಹಿಂದೂ ಸೋಮವಾರ (ಏ.6) ವರದಿ ಮಾಡಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್ಸಿಪಿ) ಪಕ್ಷದ ಖಜಾಂಚಿ ರಾಮವತಾರ್ ಜಗ್ಗಿ ಅವರನ್ನು ಕೊಲ್ಲಲು ಸಂಚು ರೂಪಿಸಿದ ಪ್ರಕರಣದಲ್ಲಿ ಅಮಿತ್ ಜೋಗಿ ಅವರನ್ನು ದೋಷಿ ಎಂದು ಗುರುವಾರ (ಏ.2) ನ್ಯಾಯಾಲಯ ಘೋಷಿಸಿತ್ತು. ಅಜಿತ್ ಜೋಗಿ ಮುಖ್ಯಮಂತ್ರಿಯಾಗಿದ್ದಾಗ ಜೂನ್ 4, 2003ರಂದು ರಾಯ್ಪುರದಲ್ಲಿ ಎನ್ಸಿಪಿ ನಾಯಕನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಸವಾಲೊಡ್ಡುತ್ತಿದ್ದ ಎನ್ಸಿಪಿ ಬೃಹತ್ ರ್ಯಾಲಿಗೆ ಮುನ್ನ ಜಗ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಗುರುವಾರ, ಹೈಕೋರ್ಟ್ ಅಮಿತ್ ಜೋಗಿ ಅವರಿಗೆ ಮೂರು ವಾರಗಳಲ್ಲಿ ಶರಣಾಗುವಂತೆ ಸೂಚಿಸಿತ್ತು.
ಸೋಮವಾರ ಅವರು ತಮ್ಮ ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 20ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಮೇ 31, 2007ರಂದು, ವಿಚಾರಣಾ ನ್ಯಾಯಾಲಯವು ಕೊಲೆಗೆ ಸಂಬಂಧಿಸಿದಂತೆ 28 ಜನರನ್ನು ದೋಷಿಗಳು ಎಂದು ಘೋಷಿಸಿತ್ತು. ಅಮಿತ್ ಜೋಗಿ ಅವರನ್ನು ಖುಲಾಸೆಗೊಳಿಸಿತ್ತು.
ಕೇಂದ್ರ ತನಿಖಾ ದಳವು (ಸಿಬಿಐ) 2011ರಲ್ಲಿ ಖುಲಾಸೆಯನ್ನು ಪ್ರಶ್ನಿಸಿತ್ತು. ಆದಾಗ್ಯೂ, ವಿಳಂಬದ ಆಧಾರದ ಮೇಲೆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಛತ್ತೀಸ್ಗಢ ಸರ್ಕಾರ ಮತ್ತು ರಾಮಾವತಾರ್ ಜಗ್ಗಿ ಅವರ ಮಗ ಸತೀಶ್ ಜಗ್ಗಿ ಅವರ ಮೇಲ್ಮನವಿಗಳನ್ನೂ ಕೂಡ ಹೈಕೋರ್ಟ್ ತಿರಸ್ಕರಿಸಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. 2025ರ ನವೆಂಬರ್ನಲ್ಲಿ, ಸುಪ್ರೀಂ ಕೋರ್ಟ್ ಪ್ರಕರಣವನ್ನು ಮತ್ತೆ ಹೈಕೋರ್ಟ್ಗೆ ವರ್ಗಾಯಿಸಿ, ಸಿಬಿಐ ಅರ್ಜಿಯನ್ನು ಹೊಸದಾಗಿ ಪರಿಗಣಿಸುವಂತೆ ನಿರ್ದೇಶಿಸಿತ್ತು. ಸಿಬಿಐ ಗಣನೀಯ ವಿಳಂಬದ ನಂತರ ಅರ್ಜಿಯನ್ನು ಸಲ್ಲಿಸಿದ್ದರೂ, ಅಮಿತ್ ಜೋಗಿ ವಿರುದ್ಧದ ಆರೋಪಗಳು ತುಂಬಾ ಗಂಭೀರವಾದವು, ಇದು ಪ್ರತಿಸ್ಪರ್ಧಿ ರಾಜಕೀಯ ಪಕ್ಷದ ಸದಸ್ಯರನ್ನು ಕೊಲ್ಲಲು ಸಂಚು ರೂಪಿಸಿರುವುದನ್ನು ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಗುರುವಾರದ ತೀರ್ಪಿನಲ್ಲಿ, ಹೈಕೋರ್ಟ್, ಅಮಿತ್ ಜೋಗಿ ಅವರನ್ನು ಖುಲಾಸೆಗೊಳಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು “ಸ್ಪಷ್ಟವಾಗಿ ಕಾನೂನುಬಾಹಿರ, ತಪ್ಪು, ದಾಖಲೆಯಲ್ಲಿ ಲಭ್ಯವಿರುವ ಪುರಾವೆಗಳಿಗೆ ವಿರುದ್ಧವಾಗಿದೆ ಮತ್ತು ಯಾವುದೇ ನಿರ್ದಿಷ್ಟ ಆಧಾರವಿಲ್ಲ” ಎಂದು ಬಣ್ಣಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅನಗತ್ಯವಾಗಿ ಆರೋಪಿ ಅಮಿತ್ ಜೋಗಿಯ ಪಾತ್ರವನ್ನು ಇತರ ಸಹ-ಆರೋಪಿಗಳು/ಶಿಕ್ಷಿತರ ಪಾತ್ರದಿಂದ ಪ್ರತ್ಯೇಕಿಸಲು ಪ್ರಯತ್ನಿಸಿದ್ದಾರೆ ಎಂದು ಹೈಕೋರ್ಟ್ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.
ಸಹ ಆರೋಪಿಯು ಅಮಿತ್ ಜೋಗಿ ಅವರನ್ನು ಮೆಚ್ಚಿಸಲು ಅವರಿಗೆ ಅರಿವಿಲ್ಲದಂತೆ ಮತ್ತು ಅವರು ಯೋಚಿಸದ ರೀತಿಯಲ್ಲಿ ಸ್ವತಂತ್ರವಾಗಿ ವರ್ತಿಸಿದ್ದಾರೆ ಎಂಬ ತೀರ್ಮಾನವು ಸಮರ್ಥನೀಯವಲ್ಲ ಹೈಕೋರ್ಟ್ ತಿಳಿಸಿದೆ.


