ಇಂಫಾಲ: ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಗಸಗಸೆ ಬೀಜಗಳ ಚೀಲಗಳನ್ನು(ಪಾಪಿ ಸೀಡ್ಸ್) ವಶಪಡಿಸಿಕೊಂಡ ನಂತರ ಭದ್ರತಾ ಪಡೆಗಳು ಅವರನ್ನು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಚುರಾಚಂದ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿ ಬಾಂಗ್ಲಾ ಎಂವಿಸಿಪಿ ಪ್ರದೇಶದಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.
ಅವರಿಂದ ಒಂದು ಮಾರ್ಪಡಿಸಿದ ಕಾರ್ಬೈನ್, ಒಂದು 9 ಎಂಎಂ ಪಿಸ್ತೂಲ್, 1,800 ಕೆಜಿ ಗಸಗಸೆ ಬೀಜಗಳನ್ನು ಹೊಂದಿರುವ 36 ಚೀಲಗಳು ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಭದ್ರತಾ ಪಡೆಗಳು ಚಾಂಡೆಲ್ ಜಿಲ್ಲೆಯ ಚಕ್ಪಿಕರೋಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ತೈಜಾಂಗ್ ಗ್ರಾಮದ ಅರಣ್ಯ ಪ್ರದೇಶದಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಂಗ್ರಹವನ್ನು ವಶಪಡಿಸಿಕೊಂಡಿವೆ.
ಕಾರ್ಯಾಚರಣೆಯ ಸಮಯದಲ್ಲಿ ಒಂದು ಎಕೆ -47 ರೈಫಲ್, ನಾಲ್ಕು ದೇಶೀಯ ಬಂದೂಕುಗಳು, ಮ್ಯಾಗಜೀನ್ಗಳು, ಏಳು ಮಾರ್ಟರ್ಗಳು, ಸುಮಾರು 4 ಕೆಜಿ ತೂಕದ ಐಇಡಿ ತಯಾರಿಸುವ ವಸ್ತುಗಳು ಮತ್ತು ಐದು ವಾಕಿ-ಟಾಕಿ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಮಣಿಪುರದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಮೇ 2023 ರಿಂದ ಮೈತೈ ಮತ್ತು ಕುಕಿ-ಝೋ ಗುಂಪುಗಳ ನಡುವಿನ ಜನಾಂಗೀಯ ಕಲಹದಲ್ಲಿ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.


