ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗಕ್ಕೆ ನೀಡಿದ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂಗೀಕರಿಸಿದ್ದಾರೆ, ಜೊತೆಗೆ ಅಲ್ಪಸಂಖ್ಯಾತ ಘಟಕ ಸಮಿತಿಯನ್ನೂ ವಿಸರ್ಜಿಸಿದ್ದಾರೆ ಎಂದು ವರದಿಯಾಗಿದೆ.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ಶನಿವಾರ (ಏ.11) ದಿಢೀರ್ ರಾಜೀನಾಮೆ ನೀಡಿದ್ದರು. ಭಾನುವಾರ (ಏ.12) ಡಿ.ಕೆ ಶಿವಕುಮಾರ್ ಅವರು ರಾಜೀನಾಮೆ ಅಂಗೀಕರಿಸಿ ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಎಂದು ವರದಿ ಹೇಳಿದೆ.
“ಶೀಘ್ರ ನೂತನ ಸಮಿತಿ ರಚನೆಗೆ ಕ್ರಮ ವಹಿಸಲಾಗಿದೆ” ಎಂದು ಶಿವಕುಮಾರ್ ಅವರು ಹೇಳಿದ್ದಾರೆ. ಅಬ್ದುಲ್ ಜಬ್ಬಾರ್ ಅವರು ಕೇವಲ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರ ವಿಧಾನಪರಿಷತ್ ಸ್ಥಾನ ಮುಂದುವರೆಯಲಿದೆ ಎಂದು ವರದಿ ತಿಳಿಸಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಇತ್ತು. ಆದರೆ, ಅದನ್ನು ಕಡೆಗಣಿಸಿ ಹೈಕಮಾಂಡ್ ಈ ಕ್ಷೇತ್ರದ ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಮಗ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಿದೆ.
ಹೈಕಮಾಂಡ್ನ ಈ ನಿರ್ಧಾರದ ಪಕ್ಷದ ಅಲ್ಪಸಂಖ್ಯಾತ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೂ, ಅಲ್ಪಸಂಖ್ಯಾತ ನಾಯಕರಲ್ಲಿ ಹೈಕಮಾಂಡ್ ನಿರ್ಧಾರದ ಬಗ್ಗೆ ಪರ-ವಿರುದ್ದ ನಿಲುವಿತ್ತು. ಸಚಿವ ರಹೀಂ ಖಾನ್, ಸಲೀಂ ಅಹ್ಮದ್, ರಿಝ್ವಾನ್ ಅರ್ಶದ್, ಯಾಸಿರ್ ಪಠಾಟ್, ತನ್ವೀರ್ ಸೇಠ್ ಹೈಕಮಾಂಡ್ ನಿರ್ಧಾರರ ಪರ ಇದ್ದರೆ, ಎಂಎಲ್ಸಿ ಅಬ್ದುಲ್ ಜಬ್ಬಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವ ಝಮೀರ್ ಅಹ್ಮದ್ ವಿರುದ್ದ ಇದ್ದರು ಎನ್ನಲಾಗಿದೆ.
ಆದರೆ, ಆರಂಭದಲ್ಲಿ ಸಮರ್ಥ್ ಪರ ಪ್ರಚಾರದಿಂದ ದೂರ ಇದ್ದ ಝಮೀರ್ ಅಹ್ಮದ್, ಕೊನೆ ಕ್ಷಣದಲ್ಲಿ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಮನೆಗೆ ಭೇಟಿ ನೀಡುವ ಮೂಲಕ ಎಲ್ಲವೂ ಸರಿ ಇದೆ ಎಂದು ತೋರ್ಪಡಿಸುವ ಪ್ರಯತ್ನ ಮಾಡಿದರು. ಆದರೆ, ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ದೂರವೇ ಉಳಿದಿದ್ದರು.
ಈ ನಡುವೆ ಸಿಎಂ, ಡಿಸಿಎಂ ಸೇರಿದಂತೆ ಪಕ್ಷದ ನಾಯಕರು ಬಂಡಾಯವೆದ್ದ ಸಾದಿಕ್ ಪೈಲ್ವಾನ್ನಂತಹ ಸ್ಥಳೀಯ ನಾಯಕರ ಮನವೊಲಿಸುವ ಕಾರ್ಯ ಕೂಡ ಮಾಡಿದ್ದರು.


