ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್ಜಿ ಕರ್ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ ಚಿತ್ರಗಳನ್ನು ಒಳಗೊಂಡ ಕೊಲಾಜ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಅದೇ ಪ್ರಕರಣದ ಆರೋಪಿಯ ಪರವಾಗಿ ವಾದ ಮಂಡಿಸಿದ ವಕೀಲೆ ಮೇನಕಾ ಗುರುಸ್ವಾಮಿ ಅವರಿಗೆ ಟಿಎಂಸಿ ರಾಜ್ಯಸಭಾ ಸದಸ್ಯತ್ವ ನೀಡಿದೆ ಎಂದು ಈ ಪೋಸ್ಟ್ನಲ್ಲಿ ಪ್ರತಿಪಾದಿಸಲಾಗಿದೆ.
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತಜಿಂದರ್ ಬಗ್ಗಾ ಸೇರಿದಂತೆ ಬಿಜೆಪಿಯ ಹಲವಾರು ನಾಯಕರು ಮತ್ತು ಬಿಜೆಪಿ ಬೆಂಬಲಿತ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ಗಳು ಈ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ವೈರಲ್ ಆಗಿರುವ ಈ ಸುಳ್ಳು ಸುದ್ದಿಯನ್ನು ಹರಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಖಾತೆಯಲ್ಲಿ ಫಾಲೋ ಮಾಡುತ್ತಿರುವ ಅರ್ಪಿತಾ ಚಟರ್ಜಿ ಎಂಬ ಬಿಜೆಪಿ ಬೆಂಬಲಿಗರು ಮತ್ತು ಇನ್ಫ್ಲುಯೆನ್ಸರ್ ಕೂಡ ಈ ಚಿತ್ರವನ್ನು ಹಂಚಿಕೊಂಡಿದ್ದು, “ಇದು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ರಾಜಕಾರಣದ ಬಗ್ಗೆ ಎಲ್ಲವನ್ನೂ ತಿಳಿಸುತ್ತದೆ” ಎಂಬ ಒಕ್ಕಣೆಯೊಂದಿಗೆ ಈ ತಪ್ಪು ಮಾಹಿತಿಯನ್ನು ಹರಡಲು ಸಹಾಯ ಮಾಡಿದ್ದಾರೆ.
ಬಿಜೆಪಿ ಬೆಂಬಲಿತ ಇನ್ನೂ ಅನೇಕ ನಾಯಕರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿಗಳು ಈ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅದನ್ನು ಮತ್ತಷ್ಟು ಪಸರಿಸಿದ್ದಾರೆ. ಈ ಪೋಸ್ಟ್ಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅವುಗಳನ್ನು ಇಲ್ಲಿ ನೋಡಬಹುದು 1, 2, 3
ಫ್ಯಾಕ್ಟ್ಚೆಕ್ : ಮೇನಕಾ ಗುರುಸ್ವಾಮಿ ಅವರು ಸುಪ್ರೀಂ ಕೋರ್ಟ್ ಮುಂದೆ ಪಶ್ಚಿಮ ಬಂಗಾಳ ಸರ್ಕಾರದ ವಕೀಲರಾಗಿ ಹಾಜರಾಗಿದ್ದರು, ಆರೋಪಿಯ ಪರವಾಗಿ ಅಲ್ಲ ಎಂದು ಖ್ಯಾತ ಫ್ಯಾಕ್ಟ್ಚೆಕ್ ಸುದ್ದಿ ಸಂಸ್ಥೆ ಆಲ್ಟ್ ನ್ಯೂಸ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಅಬ್ಸರ್ವರ್ (Supreme Court Observer) ವರದಿ ಮಾಡಿರುವಂತೆ, ಅರ್ಜಿ ಕರ್ ಪ್ರಕರಣದಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲೆ ಮೇನಕಾ ಗುರುಸ್ವಾಮಿ ಸೇರಿದಂತೆ ಇತರರು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅವರ ತಂಡವು ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಪ್ರತಿನಿಧಿಸಿತ್ತು.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಸಂತ್ರಸ್ತೆಗೆ ನ್ಯಾಯ ಒದಗಿಸುವ ಬದಲು ತನ್ನನ್ನು ಸಮರ್ಥಿಸಿಕೊಳ್ಳಲು ಪಶ್ಚಿಮ ಬಂಗಾಳ ಸರ್ಕಾರವು ಅತಿಯಾದ ಕಾನೂನು ಯಂತ್ರವನ್ನು ಬಳಸುತ್ತಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮೇನಕಾ ಗುರುಸ್ವಾಮಿ ಅವರು ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮತ್ತೊಂದೆಡೆ, ಆರೋಪಿ ಸಂಜಯ್ ರಾಯ್ನ ವಿಚಾರಣೆ ನಡೆದ ಸೀಲ್ದಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ, ಸೌರವ್ ಬಂಡೋಪಾಧ್ಯಾಯ, ಸುಬ್ರತಾ ಕುಮಾರ್ ಗಿರಿ, ಕವಿತಾ ಸರ್ಕಾರ್ ಮತ್ತು ಸಂಜುತಿ ಚಕ್ರವರ್ತಿ ಸೇರಿದಂತೆ ಕಾನೂನು ನೆರವು ರಕ್ಷಣಾ ಮಂಡಳಿಯ (ಎಲ್ಎಡಿಸಿ) ವಕೀಲರ ತಂಡವು ಆತನನ್ನು ಪ್ರತಿನಿಧಿಸಿತ್ತು. ಆರೋಪಿಯು ಯಾವುದೇ ವಕೀಲರನ್ನು ಹೊಂದಿಲ್ಲದ ಸಂದರ್ಭದಲ್ಲಿ ಎಲ್ಎಡಿಸಿ ಕಾರ್ಯರೂಪಕ್ಕೆ ಬರುತ್ತದೆ. ಸಂವಿಧಾನದ 39ಎ ವಿಧಿಯ ಅಡಿಯಲ್ಲಿ ಸೀಲ್ದಾ ನ್ಯಾಯಾಲಯವು ಈ ಎಲ್ಎಡಿಸಿ ವಕೀಲರನ್ನು ನೇಮಿಸಿತ್ತು. ಈ ವಿಧಿಯು ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕ ಶಕ್ತಿಯಿಲ್ಲದವರಿಗೆ ಅಥವಾ ವಕೀಲರು ಸ್ವಯಂಪ್ರೇರಿತರಾಗಿ ಯಾರ ಪರ ವಾದಿಸಲು ಸಿದ್ಧರಿಲ್ಲದ ಅಂತಹ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ನೀಡುವುದನ್ನು ಖಾತರಿಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸುಪ್ರೀಂ ಕೋರ್ಟ್ ವಕೀಲೆ ಮತ್ತು ಈಗ ತೃಣಮೂಲ ಕಾಂಗ್ರೆಸ್ ಸಂಸದೆಯಾಗಿರುವ ಮೇನಕಾ ಗುರುಸ್ವಾಮಿ ಅವರು ಆರ್ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯ ಪರವಾಗಿ ವಾದ ಮಂಡಿಸಿಲ್ಲ. ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪರ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. 21 ವಕೀಲರ ತಂಡದಲ್ಲಿ ಈಕೆ ಕೂಡ ಒಬ್ಬರಾಗಿದ್ದರು.


