ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ ಇಎಸ್ಐ ಆಸ್ಪತ್ರೆಯಿಂದ ಮೃತದೇಹವನ್ನು ಬಿಡುಗಡೆ ಮಾಡಲು ಕಾಗದಪತ್ರಗಳಿಗೆ ಸಹಿ ಹಾಕಿದರು. ನಂತರ ಮೃತದೇಹವನ್ನು ತಮ್ಮ ಸ್ವಂತ ಊರಾದ ಸೇಲಂಗೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಿದರು ಎಂದು ಅವರು ತಿಳಿಸಿದ್ದಾರೆ.
thenewsminute.com ವರದಿಯ ಪ್ರಕಾರ, “ನನ್ನ ಅನುಮತಿ ಇಲ್ಲದೆಯೇ ನನ್ನ ಮಗುವನ್ನು ಸುಡಲಾಗಿದೆ. ನಾನು ಆಸ್ಪತ್ರೆಯಲ್ಲಿ ಕಾಯುತ್ತಿದ್ದೆ, ಆದರೆ ಅವರು ಮಗುವನ್ನು ಹಿಂಬಾಗಿಲಿನಿಂದ ಕರೆದುಕೊಂಡು ಹೋದರು” ಎಂದು ತಾಯಿ ಅಲವತ್ತುಕೊಂಡಿದ್ದಾರೆ.
“ನ್ಯಾಯ ಸಿಗುವವರೆಗೂ ಮೃತದೇಹವನ್ನು ಸ್ವೀಕರಿಸಬಾರದು ಎಂದು ನಾನು ನಿರ್ಧರಿಸಿದ್ದೆ. ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಆಸ್ಪತ್ರೆಯ ಒಳಗೆ ಬಿಡಲಿಲ್ಲ. ನನ್ನ ಪತಿ ಮತ್ತು ಅವರ ಕುಟುಂಬದವರನ್ನು ಮಾತ್ರ ಒಳಗೆ ಬಿಟ್ಟರು. ಮೃತದೇಹವನ್ನು ಅಲ್ಲಿಂದ ತೆಗೆದುಕೊಂಡು ಹೋಗುತ್ತಿರುವುದು ನಮಗೆ ತಿಳಿಯಲೇ ಇಲ್ಲ” ಎಂದು ತಾಯಿ ನೋವು ತೋಡಿಕೊಂಡಿದ್ದಾರೆ.
“ನಾನು ಕಾಗದಪತ್ರಗಳಿಗೆ ಸಹಿ ಹಾಕಲು ನಿರಾಕರಿಸಿದ ಕಾರಣಕ್ಕಾಗಿಯೇ ನನ್ನ ಮಗುವಿನ ಮೃತದೇಹವನ್ನು ನೋಡದಂತೆ ನನ್ನನ್ನು ವಂಚಿಸಲಾಯಿತು” ಎಂದು ತಾಯಿ ಆರೋಪಿಸಿದ್ದಾರೆ. ಅವರು ತಮ್ಮ ಪತಿ ಮತ್ತು ಅವರ ಕುಟುಂಬದ ವಿರುದ್ಧ ತನಿಖೆಗೆ ಒತ್ತಾಯಿಸಿದ್ದಾರೆ.
“ಮೃತದೇಹವನ್ನು ತೆಗೆದುಕೊಂಡು ಹೋಗಿರುವುದು ನಮಗೆ ತಿಳಿಯುತ್ತಿದ್ದಂತೆ, ನಾನು ಕಾರಿನಲ್ಲಿ ನನ್ನ ಪತಿಯ ಊರಿಗೆ ಧಾವಿಸಿದೆ. ಆದರೆ ಅವರು ನನಗಾಗಿ ಕಾಯದೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು” ಎಂದು ತಿಳಿಸಿದ್ದಾರೆ.
ಮಗುವನ್ನು ಅಪಹರಿಸಿದಾಗ ತಾನು ಮದ್ಯದ ಅಮಲಿನಲ್ಲಿದ್ದೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಬಾಲಕಿಯು ಮೇ 21ರ ಸಂಜೆ ಸುಳೂರು ಬಳಿಯ ಪಲ್ಲಪಾಳ್ಯಂನ ಭಾರತಿಪುರಂನಿಂದ ನಾಪತ್ತೆಯಾಗಿದ್ದಳು. ಪೊಲೀಸರ ಪ್ರಕಾರ, ಆಕೆಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ, ಕೊಲೆ ಮಾಡಲಾಗಿದೆ. ನಂತರ ಆಕೆಯ ಮೃತದೇಹವು ಕಣ್ಣಂಪಾಳ್ಯಂ ಬಳಿಯ ತೆಂಗಿನ ತೋಟದಲ್ಲಿ ಪತ್ತೆಯಾಗಿತ್ತು.
ತಮಿಳುನಾಡು ಪೊಲೀಸರು ಮೇ 23ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ ಕೆ. ಕಾರ್ತಿ (33) ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (ಪೋಕ್ಸೊ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಇನ್ನು ಎರಡನೇ ಆರೋಪಿ ಮೋಹನ್ನನ್ನು ಅಪರಾಧಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ತನಿಖೆಯ ಭಾಗವಾಗಿ ಪೊಲೀಸರು ನೂರಾರು ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ಪಶ್ಚಿಮ ವಲಯ ಐಜಿಪಿ ರಮ್ಯಾ ಭಾರತಿ ತಿಳಿಸಿದ್ದಾರೆ. ಬಾಲಕಿಯ ಕುಟುಂಬಕ್ಕೆ ಪರಿಚಿತನಾಗಿದ್ದ ಕಾರ್ತಿ, ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದಾನೆ ಎಂದು ಐಜಿಪಿ ಹೇಳಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಜಿಗಿದ ಪರಿಣಾಮ ಆತನ ಕೈ ಮತ್ತು ಕಾಲಿನ ಮೂಳೆ ಮುರಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯು ಕೊಯಮತ್ತೂರಿನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಶೀಘ್ರ ಕ್ರಮಕ್ಕೆ ಆಗ್ರಹಿಸಿ ಬಾಲಕಿಯ ಸಂಬಂಧಿಕರು ಮತ್ತು ಸ್ಥಳೀಯ ನಿವಾಸಿಗಳು ಸುಳೂರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮೇ 24ರ ಭಾನುವಾರದಂದು ಬಾಲಕಿಯ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಾರಿಗೆ ಸಚಿವ ಎ. ವಿಜಯ್ ತಮಿಳನ್ ಪಾರ್ಥಿಬನ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ವಿ. ಸಂಪತ್ ಕುಮಾರ್ ಅವರು ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಿ, ಪೋಕ್ಸೊ ಕಾಯ್ದೆಯ ನಿಬಂಧನೆಗಳಿಗೆ ಒಳಪಟ್ಟು 7 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಿದ್ದಾರೆ.
ಈ ಘಟನೆಯು ಕೇವಲ ಒಂದು ಕುಟುಂಬದ ನಷ್ಟವಲ್ಲ, ಬದಲಿಗೆ ಇಡೀ ರಾಜ್ಯಕ್ಕೆ ಸಂಭವಿಸಿದ ದುರಂತವಾಗಿದೆ ಎಂದು ಪಾರ್ಥಿಬನ್ ಹೇಳಿದ್ದಾರೆ. ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗುವುದನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವು ತಮಿಳುನಾಡಿನಾದ್ಯಂತ ರಾಜಕೀಯ ವಲಯದಲ್ಲೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿ ಮಾಡಿ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ, ಘಟನೆಯ ಕುರಿತ ಪತ್ರಿಕಾಗೋಷ್ಠಿ ಆರಂಭವಾಗುವ ಮುನ್ನ ಐಜಿಪಿ ರಮ್ಯಾ ಭಾರತಿ ಮತ್ತು ಇತರ ಇಬ್ಬರು ಪೊಲೀಸ್ ಅಧಿಕಾರಿಗಳು ನಕ್ಕಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


