ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮಧು (30 ವರ್ಷ) ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಚಿಂಡೇರಿ ಎಂಬ ಊರಿನ ಮಾನಸಿಕ ಅಸ್ವಸ್ಥ ಆದಿವಾಸಿ ಯುವಕ. ಈತ ಕುಟುಂಬದಿಂದ ದೂರವಿದ್ದು, ಕಾಡಿನ ಗುಹೆಯೊಂದರಲ್ಲಿ ವಾಸಿಸುತ್ತಿದ್ದರು.
2018ರ ಫೆಬ್ರವರಿ 22ರಂದು ಸ್ಥಳೀಯ ಅಂಗಡಿಯಿಂದ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ಕದ್ದಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ಸ್ಥಳೀಯರ ಗುಂಪೊಂದು ಕಾಡಿಗೆ ನುಗ್ಗಿ ಮಧು ಅವರನ್ನು ಹಿಡಿದುಕೊಂಡು ಬಂದಿತ್ತು.
ಅಪರಾಧಿಗಳು ಮಧು ಅವರ ಕೈಗಳನ್ನು ಕಟ್ಟಿಹಾಕಿ, ಅಮಾನವೀಯವಾಗಿ ಥಳಿಸಿದ್ದರು. ಈ ಕೃತ್ಯ ಎಸಗುವಾಗ ಕೆಲವರು ಮಧು ಜೊತೆ ಸೆಲ್ಫಿ ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು, ಇದು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸರು ಸ್ಥಳಕ್ಕೆ ಬಂದು ಮಧು ಅವರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಅವರು ತೀವ್ರ ಆಂತರಿಕ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದರು.
ಈ ಪ್ರಕರಣದಲ್ಲಿ ಮನ್ನಾರ್ಕ್ಕಾಡ್ನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್ಸಿ/ಎಸ್ಟಿ) ವಿಶೇಷ ನ್ಯಾಯಾಲಯವು ಒಟ್ಟು 16 ಆರೋಪಿಗಳ ಪೈಕಿ 14 ಜನರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು.
ಇದರಲ್ಲಿ 13 ಪ್ರಮುಖ ಆರೋಪಿಗಳಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಇಬ್ಬರನ್ನು (ಎ4 ಮತ್ತು ಎ11) ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು.
ಕೆಳ ನ್ಯಾಯಾಲಯ ನೀಡಿದ್ದ 7 ವರ್ಷಗಳ ಶಿಕ್ಷೆಯನ್ನು ಪ್ರಶ್ನಿಸಿ ಮತ್ತು ಕಠಿಣ ಶಿಕ್ಷೆಗೆ ಆಗ್ರಹಿಸಿ ಸಲ್ಲಿಕೆಯಾಗಿದ್ದ ಅಪೀಲುಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ಈ ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ತಪ್ಪಿತಸ್ಥರಾದ 12 ಅಪರಾಧಿಗಳ ಶಿಕ್ಷೆಯನ್ನು ಜೀವಾವಧಿ ಜೈಲು ಶಿಕ್ಷೆಗೆ ಹೆಚ್ಚಿಸಿದೆ ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ. ಮತ್ತು ನ್ಯಾಯಮೂರ್ತಿ ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ದೋಷಿಗಳ ವಾದವನ್ನು ಆಲಿಸಿ, ಈ ಕೆಳಗಿನ ಆದೇಶವನ್ನು ಹೊರಡಿಸಿದೆ..
"ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಡ್ಡಾಯ ನಿಬಂಧನೆಗಳ ಹಿನ್ನೆಲೆಯಲ್ಲಿ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 149 ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(v) ಗಳೊಂದಿಗೆ ಓದಲಾಗುವ ಸೆಕ್ಷನ್ 304 ಭಾಗ II ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಆರೋಪಿ ಸಂಖ್ಯೆ 2, 3, 5, 6, 7, 9, 10, 12, 13, 14 ಮತ್ತು 15 ಕ್ಕೆ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ; ಹಾಗೂ ದಂಡವನ್ನು ಪಾವತಿಸಲು ವಿಫಲವಾದರೆ 6 ತಿಂಗಳ ಸರಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ."
"ಇದರ ಜೊತೆಗೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 326 ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿನ ಅಪರಾಧಕ್ಕಾಗಿ ಅವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 50,000 ರೂಪಾಯಿ ದಂಡ ವಿಧಿಸಲಾಗಿದೆ; ದಂಡ ಕಟ್ಟದಿದ್ದರೆ 3 ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕು. ಹಾಗೆಯೇ, ಐಪಿಸಿ ಸೆಕ್ಷನ್ 367 ಮತ್ತು ಸೆಕ್ಷನ್ 149 ರೊಂದಿಗೆ ಓದಲಾಗುವ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(v) ಅಡಿಯಲ್ಲಿನ ಅಪರಾಧಕ್ಕಾಗಿ ಅವರಿಗೆ ಮತ್ತೊಂದು ಜೀವಾವಧಿ ಜೈಲು ಶಿಕ್ಷೆ ಮತ್ತು ತಲಾ 50,000 ರೂಪಾಯಿ ದಂಡ ವಿಧಿಸಲಾಗಿದೆ; ದಂಡ ಕಟ್ಟದಿದ್ದರೆ 2 ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕು."
ಸೆಷನ್ಸ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143, 147, 323, 324, 342 ರ ಅಡಿಯಲ್ಲಿ ನೀಡಿದ್ದ ಜೈಲು ಶಿಕ್ಷೆ ಮತ್ತು ದಂಡವನ್ನು ಕಾಯ್ದುಕೊಳ್ಳಲಾಗಿದೆ; ಆದರೆ ಇದನ್ನುಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(va) ಮತ್ತು IPC ಸೆಕ್ಷನ್ 149 ರ ಅಡಿಯಲ್ಲಿ ಓದಿಕೊಳ್ಳುವಂತೆ ಮಾರ್ಪಡಿಸಲಾಗಿದೆ. ಈ ಹಿಂದೆ ಸೆಷನ್ಸ್ ನ್ಯಾಯಾಲಯವು ಈ ಅಪರಾಧಗಳಿಗಾಗಿ 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು.
“16ನೇ ಆರೋಪಿ (ಎ16) ಮುನೀರ್ನಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯವು ನೀಡಿದ್ದ ಅಪರಾಧ ನಿರ್ಣಯ ಮತ್ತು ಶಿಕ್ಷೆಯ ಆದೇಶವನ್ನು ಮಾರ್ಪಡಿಸಲಾಗಿದೆ; ಆತನನ್ನು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(va) ರೊಂದಿಗೆ ಓದಲಾಗುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 ರ ಅಡಿಯಲ್ಲಿನ ಅಪರಾಧಕ್ಕಾಗಿ ದೋಷಿ ಎಂದು ಘೋಷಿಸಲಾಗಿದ್ದು, ಒಂದು ವರ್ಷದ ಸರಳ ಜೈಲು ಶಿಕ್ಷೆ ಮತ್ತು 1,000 ರೂಪಾಯಿ ದಂಡ ವಿಧಿಸಲಾಗಿದೆ; ಹಾಗೂ ದಂಡ ಪಾವತಿಸಲು ವಿಫಲವಾದರೆ 2 ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (ಒಟ್ಟಿಗೆ) ಜಾರಿಯಾಗಲಿದೆ ಮತ್ತು ಈಗಾಗಲೇ ಅನುಭವಿಸಿರುವ ಜೈಲು ಶಿಕ್ಷೆಯ ಅವಧಿಯನ್ನು ವಿಧಿಸಲಾದ ಒಟ್ಟು ಶಿಕ್ಷೆಯಿಂದ ಕಡಿತಗೊಳಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಪೆರೋಲ್ ಮೇಲೆ ಬಿಡುಗಡೆಯಾಗಿರುವ ಅಪರಾಧಿಗಳು ತಕ್ಷಣವೇ ಜೈಲಿಗೆ ಹಿಂತಿರುಗಿ ವರದಿ ಮಾಡಿಕೊಳ್ಳಬೇಕು ಮತ್ತು ಶಿಕ್ಷೆಯನ್ನು ಅನುಭವಿಸಬೇಕು ಎಂದು ಸೂಚಿಸಿದೆ. ಈಗಾಗಲೇ ಶಿಕ್ಷೆ ಪೂರ್ಣಗೊಳಿಸಿದ್ದ 16ನೇ ಆರೋಪಿ (ಎ16) ಮುನೀರ್ಗೆ ಶರಣಾಗುವಂತೆ ಮತ್ತು ಮಾರ್ಪಡಿಸಿದ (ಹೆಚ್ಚುವರಿ) ಶಿಕ್ಷೆಯನ್ನು ಅನುಭವಿಸುವಂತೆ ಕೋರ್ಟ್ ಆದೇಶಿಸಿದೆ.
ಅಪರಾಧಿಗಳಿಂದ ವಸೂಲಿಯಾಗುವ ದಂಡದ ಹಣದಲ್ಲಿ 30 ಲಕ್ಷ ರೂಪಾಯಿಗಳನ್ನು ಮೃತನ ತಾಯಿಗೆ ಪಾವತಿಸಬೇಕು ಮತ್ತು ಉಳಿದ ಹಣವೇನಾದರೂ ಇದ್ದರೆ ಅದನ್ನು ಮಧು ಅವರ ಇತರ ಕಾನೂನುಬದ್ಧ ವಾರಸುದಾರರಿಗೆ ನೀಡಬೇಕು. ಕಾನೂನುಬದ್ಧ ವಾರಸುದಾರರು ಯಾರೂ ಇಲ್ಲದಿದ್ದರೆ, ಆ ಉಳಿದ ಮೊತ್ತವನ್ನು ಸಹ ತಾಯಿಗೇ ಪಾವತಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಶಿಕ್ಷೆ ಪ್ರಕಟಿಸುವ ಮುನ್ನ, ನ್ಯಾಯಾಲಯವು ದೋಷಿಗಳಾದ ಮರಕ್ಕಾರ್ (A2), ಶಂಸುದ್ದೀನ್ (A3), ರಾಧಾಕೃಷ್ಣನ್ (A5), ಅಬೂಬಕ್ಕರ್ (A6), ಸಿದ್ದಿಕ್ (A7), ಉಬೈದ್ (A8), ನಜೀಬ್ (A9), ಜೈಜುಮನ್ (A10), ಸಜೀವ್ (A12), ಸತೀಶ್ (A13), ಹರೀಶ್ (A14), ಬಿಜು (A15) ಮತ್ತು ಮುನೀರ್ (A16) ಅವರ ವಾದವನ್ನು ಆಲಿಸಿತ್ತು. ಅವರು ತಮಗೆ ಗರಿಷ್ಠ ಮಟ್ಟದ ಕರುಣೆ (ಸಡಿಲಿಕೆ) ತೋರಬೇಕೆಂದು ಕೋರಿದ್ದರು. ಸಣ್ಣ ಮಕ್ಕಳು, ಪತ್ನಿಯರು ಹಾಗೂ ವಯಸ್ಸಾದ ಪೋಷಕರು ಸೇರಿದಂತೆ ತಮ್ಮನ್ನು ನಂಬಿಕೊಂಡಿರುವ ಅವಲಂಬಿತರ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರಲ್ಲಿ ಕೆಲವರು ತಾವು ಪ್ರಸ್ತುತ ಪೆರೋಲ್ ಮೇಲಿರುವುದಾಗಿಯೂ ನ್ಯಾಯಾಲಯಕ್ಕೆ ಹೇಳಿದ್ದರು.
ಇಂದು (2026 ಮೇ 25) ಬೆಳಿಗ್ಗೆ, ನ್ಯಾಯಪೀಠವು ಈ ಪ್ರಕರಣದ ಮೊದಲ ಆರೋಪಿಯಾದ ಹುಸೇನ್ನನ್ನು ಖುಲಾಸೆಗೊಳಿಸಿದೆ. ಉಳಿದ 12 ಜನರ ಅಪರಾಧ ನಿರ್ಣಯವನ್ನು ಎತ್ತಿಹಿಡಿದಿದೆ. ಈ 12 ಜನರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 ಭಾಗ II, 326, 367, 323, 324, 342, 143, 147, 149 ಮತ್ತು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(1)(d) ಅಡಿಯಲ್ಲಿನ ಅಪರಾಧಗಳ ಜೊತೆಗೆ, ಹೆಚ್ಚುವರಿಯಾಗಿ ಸೆಕ್ಷನ್ 3(2)(v) ಮತ್ತು 3(2)(va) ಅಡಿಯಲ್ಲಿಯೂ ತಪ್ಪಿತಸ್ಥರು ಎಂದು ಘೋಷಿಸಿದೆ.
ವಿಶೇಷ ನ್ಯಾಯಾಲಯವು ಅನೀಶ್ (A4) ಮತ್ತು ಅಬ್ದುಲ್ ಕರೀಮ್ (A11) ಅವರನ್ನು ಖುಲಾಸೆಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದಲ್ಲದೆ, ವಿಶೇಷ ನ್ಯಾಯಾಲಯದಿಂದ ಕೇವಲ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 352 ರ ಅಡಿಯಲ್ಲಿ ಮಾತ್ರ ದೋಷಿ ಎಂದು ನಿರ್ಣಯಿಸಲ್ಪಟ್ಟಿದ್ದ 16ನೇ ಆರೋಪಿ ಮುನೀರ್ನನ್ನು, ಈಗ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(va) ಮತ್ತು IPC ಸೆಕ್ಷನ್ 323 ರ ಅಡಿಯಲ್ಲಿಯೂ ತಪ್ಪಿತಸ್ಥ ಎಂದು ಘೋಷಿಸಿದೆ.
Courtesy : livlaw.in


