ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿದೆ.
ಮುಖ್ಯಮಂತ್ರಿ ಹುದ್ದೆಯ ಕುರಿತು 2023ರಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಾಗಲೇ ಗೊಂದಲ ಹಾಗೂ ಪೈಪೋಟಿ ಶುರುವಾಗಿತ್ತು. ಅಂದೇ ಕಾಂಗ್ರೆಸ್ ಹೈಕಮಾಂಡ್ ಅಂದು ಉದ್ಬವಿಸಿದ್ದ ಗೊಂದಲಕ್ಕೆ ಪರಿಹಾರವೊಂದನ್ನು ಕಂಡುಕೊಂಡಿತ್ತು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ತಮ್ಮ ತಮ್ಮ ಆಪ್ತ ವಲಯದಲ್ಲಿ “ಒಪ್ಪಂದ”ವೆಂದು ಮಾಹಿತಿ ರವಾನಿಸಿದ್ದರು. ಕಳೆದ 3 ವರ್ಷಗಳಲ್ಲಿ ನಿರಂತರವಾಗಿ ಮುಖ್ಯಮಂತ್ರಿ ಬದಲಾವಣೆಯ ಸುತ್ತ ಹಲವು ಪರ-ವಿರೋಧ ಹೇಳಿಕೆಗಳು ಕೇಳಿಬರುತ್ತಿದ್ದವು.
ಈಗ ಎಲ್ಲವೂ ಬಹಿರಂಗಗೊಂಡಿದೆ; ಹಿಂದೆ ಆದ ಒಪ್ಪಂದದಂತೆ ಮುಖ್ಯಮಂತ್ರಿ ಬದಲಾವಣೆಯೂ ನಡೆಯುತ್ತಿದೆ. ಇದೇ ಸಮಯದಲ್ಲಿ ಬಹುಕಾಲದಿಂದ ಕೇಳಿಬರುತ್ತಿದ್ದ ದಲಿತ ಮುಖ್ಯಮಂತ್ರಿ ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. “ದಲಿತ ಮುಖ್ಯಮಂತ್ರಿ” ಈ ಸಮಯದಲ್ಲಿ ಸಾದ್ಯವಿಲ್ಲ ಎಂದೂ ಆ ರೀತಿಯ ಒತ್ತಾಯ ಮಾಡುತ್ತಿರುವವರಿಗೂ ತಿಳಿದಿದೆ.
ಕಳೆದ ಒಂದು ದಶಕದ ಹಿಂದೆ ಇದ್ದಂತೆ ದಲಿತ ಮುಖ್ಯಮಂತ್ರಿ ಕೂಗಿಗೆ ಅಷ್ಟು ಗಟ್ಟಿತನವಿಲ್ಲ ಎಂದು ಎಲ್ಲರಿಗೂ, ಅಷ್ಟೆ ಏಕೆ ಸ್ವತಃ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿರುವ ಪರಿಶಿಷ್ಟ ಜಾತಿಗಳ ರಾಜಕಾರಣಿಗಳಿಗೂ ತಿಳಿದಿದೆ. ಇದಕ್ಕೆ ಕಾರಣ ‘ದಲಿತ’ ಎಂದು ಹೇಳಿಕೊಳ್ಳುವ ಅದೇ ರಾಜಕಾರಣಗಳೇ ಆಗಿದ್ದಾರೆ.
ದಲಿತ ಎಂಬ ‘ಪ್ಯೂರ್’ ಸಮಾನತೆ ಸಾರುವ ಪದವನ್ನು ಇಂದು ಎಷ್ಟೆಲ್ಲಾ ನಗೆಪಾಟಲು ಮಾಡಿದ್ದಾರೆಂದರೆ, ಯಾರೊಬ್ಬರಿಗೂ ದಲಿತ ಮುಖ್ಯಮಂತ್ರಿ ಮಾಡಿ ಎಂದು ಬಹಿರಂಗವಾಗಿ ಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬುದು ಪ್ರಸ್ತುತ ನಡೆಯುತ್ತಿರುವ ಸನ್ನಿವೇಶವನ್ನು ಗಮನಿಸಿದರೆ ತಿಳಿಯುತ್ತದೆ.
ಬಿಜೆಪಿಯ ಕೋಮು ರಾಜಕಾರಣಕ್ಕೆ, ವೈದಿಕ ಪ್ರತಿಪಾದಿತ ಮನುಶಾಸ್ತ್ರಕ್ಕೆ ಟಕ್ಕರ್ ಕೊಟ್ಟಂತ ದಲಿತ ರಾಜಕಾರಣ ಇಂದು ಮುಸುಕಾಗುತ್ತಿದೆ. ಅಷ್ಟೆ ಅಲ್ಲ, ದಲಿತ ಎಂಬ ಪದವನ್ನು ಹೀನಾಮಾನವಾಗಿ ತಮಗೆ ಬೇಕಾದಂತೆ ಬಳಸಿಕೊಳ್ಳುವ ಮೂಲಕ ಅದಕ್ಕೆ ಇದ್ದ ಸಾರ್ವತ್ರಿಕ ಮಾನ್ಯತೆ, ಗೌರವವನ್ನು ಹಾಳುಗೆಡವಿದ್ದಾರೆ.
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆದ ಪರಿಶಿಷ್ಟರ ಒಳಮೀಸಲಾತಿ ವಿಷಯದಲ್ಲಿ ಹೊಲೆಯ-ಮಾದಿಗ ರಾಜಕಾರಣಿಗಳು ನಡೆದುಕೊಂಡ ರೀತಿ ನಿಜಕ್ಕೂ ಬಾಬಾ ಸಾಹೇಬರ ಆಶಯಗಳಿಗೆ ಕೊಳ್ಳಿ ಇಟ್ಟಂತೆಯೇ ಆಗಿದೆ.
ಒಳಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು, ಬೆದರಿಕೆಗಳನ್ನು ಹಾಕುವ ಮೂಲಕ ಏನೆಲ್ಲಾ ಪ್ರಯತ್ನ ಮಾಡಲಾಯಿತು ಎಂಬುದು ಗುಪ್ತವಾಗಿಯೇನೂ ಉಳಿದುಕೊಂಡಿಲ್ಲ. ಇದರ ನಡುವೆ ಅಲೆಮಾರಿ ಸಮುದಾಯಗಳ ದನಿ ಮಾತ್ರ ಯಾರಿಗೂ ಕೇಳಿಸಲೇ ಇಲ್ಲ.
ಇನ್ನೊಂದೆಡೆ ಕೋಮು ರಾಜಕಾರಣಕ್ಕೆ, ಭಾರತದ ಜಾತಿಗ್ರಸ್ತ ಸಮಾಜಕ್ಕೆ ಸರಿಯಾದ ಹೊಡೆತ ಕೊಟ್ಟದ್ದು ಮಾತ್ರ ದಲಿತ ಸಮಗ್ರ ರಾಜಕಾರಣ. ಇದನ್ನು ಸಹಿಸದ ಕೋಮುವಾದಿ ಶಕ್ತಿಗಳು ನಿರಂತರವಾಗಿ ಈ “ದಲಿತ” ಎಂಬ ಬಹುದೊಡ್ಡ ಅಸ್ಮಿತೆಯನ್ನೇ ಒಡೆಯಲು ಹಿಂಬಾಗಿಲಿನಿಂದ ಏನೆಲ್ಲಾ ಪ್ರಯತ್ನ ಮಾಡಲು ಸಾಧ್ಯವೋ ಅದನ್ನೆಲ್ಲಾ ಇಂದು ಮಾಡಿಯಾಗಿದೆ.
ಇದಕ್ಕೆ ಪುಷ್ಟಿ ಕೊಡುವಂತೆ ದಲಿತ ಎಂಬ ಹೆಸರಿನಲ್ಲಿ ಇಷ್ಟು ದಿನಗಳ ಕಾಲ ಜನರನ್ನು ಸಂಘಟಿಸಿದ್ದ ‘ದೊಡ್ಡ ದೊಡ್ಡ’ ನೇತಾರರು ಒಳಮೀಸಲಾತಿಯಂತಹ ಬಹಳ ಸಂದಿಗ್ದ ಪರಿಸ್ಥಿತಿಯಲ್ಲಿ ಸಾಪೇಕ್ಷ ತಟಸ್ಥರಾಗಿ ಉಳಿದುಕೊಂಡಿದ್ದರಿಂದ ಹಲವು ಪ್ರಶ್ನೆಗಳಿಗೆ ಆಸ್ಪದ ನೀಡಿದರು.
ದಲಿತ ಎಂಬ ಪದವನ್ನು ಸಾಮಾಜಿಕ, ಸಾಂಸ್ಕೃತಿಕ ರಾಜಕಾರಣದಲ್ಲಿ ಎಷ್ಟು ಗಟ್ಟಿಗೊಳಿಸುತ್ತೇವೆಯೋ ಅಷ್ಟು ಚುನಾವಣಾ ರಾಜಕಾರಣದಲ್ಲಿ ದಲಿತ ಎಂಬ ಪದಕ್ಕೆ, ಅದರ ಕೂಗಿಗೆ ಗಟ್ಟಿತನ ಬರುತ್ತದೆ. ಆದರೆ ಈಗ ಪ್ರಸ್ತುತ ಸನ್ನಿವೇಶದಲ್ಲಿ ಇರುವ ಪರಿಶಿಷ್ಟ ಜಾತಿಗಳ ರಾಜಕಾರಣಿಗಳು ತಮ್ಮ ಉಪಜಾತಿಗಳ ಹೆಸರಿನಲ್ಲೋ ಅಥವಾ ತಾನೆಷ್ಟು ಕಾಂಗ್ರೆಸ್ಸಿಗ ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯನ್ನೋ, ಉಪಮುಖ್ಯಮಂತ್ರಿ ಹುದ್ದೆಯನ್ನೋ ಪಡೆಯಬಹುದು. ಈಗ ಪ್ರಸ್ತುತ ಇರುವ ರಾಜಕಾರಣಿಗಳಲ್ಲಿ ದಲಿತ ಎಂದು ಕ್ಲೇಮ್ ಮಾಡಿಕೊಳ್ಳುವಷ್ಟು, ದಲಿತ ಎಂಬ ಪದಕ್ಕೆ ನಿಜಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ ಯಾರೊಬ್ಬರೂ ಇಲ್ಲ. ಮುಂದೊಂದು ದಿನ ದಲಿತತ್ವವನ್ನು ನಿಜಕ್ಕೂ ಮೈಗೂಡಿಸಿಕೊಂಡಿರುವವರು, ನಿಜವಾದ ಸಾಮಾಜಿಕ ನ್ಯಾಯದ ಪ್ರತಿಪಾದಕರು ಬಂದಾಗ ದಲಿತ ಮುಖ್ಯಮಂತ್ರಿ ಮುಂತಾದವು ಸಾಧ್ಯವಾಗಬಹುದೇನೋ…
ಒಟ್ಟಾರೆ ದಲಿತ ಮುಖ್ಯಮಂತ್ರಿ ಎಂಬ ದಶಕಗಳ ಬಹುದೊಡ್ಡ ಕೂಗನ್ನು ದಲಿತ ರಾಜಕಾರಣಿಗಳು, ದಲಿತ ಮುಖಂಡರೇ ಹಾಳುಗೆಡವಿದ್ದಾರೆ ಎಂದರೆ ತಪ್ಪಾಗಲಾರದು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


