Homeಮುಖಪುಟಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

- Advertisement -
- Advertisement -

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ ದೇಶಾದ್ಯಂತ ಸಹೋದರತ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂನ್ 5ರಿಂದ 21ರವರೆಗೂ ಕೇಂದ್ರ ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.2029ರ ನಂತರ ಮೋದಿ ಮತ್ತೆ ಅಧಿಕಾರಕ್ಕೆ ಬರುವ ಯಾವುದೇ ಖಾತರಿ ಇಲ್ಲದಿರುವುದರಿಂದ, ಪ್ರಸ್ತುತ ಅವರ ಕೊನೆಯ ಅವಧಿ ಎನ್ನಲಾಗುತ್ತಿರುವ ಈ ಸಮಯದಲ್ಲಿ, ದೇಶದ ಒಳಗೆ ಮತ್ತು ಹೊರಗೆ ಹೆಚ್ಚುತ್ತಿರುವ ಉದ್ವಿಗ್ನತೆಗಳು ಅವರ ಆಡಳಿತದ ದಾಖಲೆಯನ್ನು ಹತ್ತಿರದಿಂದ ಪರಿಶೀಲಿಸುವಂತೆ ಒತ್ತಾಯಿಸುತ್ತವೆ.

ಜೂನ್ 10, 2026 ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಹೊಸ ದಿನಗಳ ಲೆಕ್ಕದ ದಾಖಲೆಗೆ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸುವ ಮೂಲಕ, ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬರೆದಿದ್ದ (4,398 ದಿನಗಳ) ಸತತ ಸುದೀರ್ಘ ಆಡಳಿತದ ದಾಖಲೆಯನ್ನು ಮೋದಿ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಆದರೆ, ಪ್ರಜಾಪ್ರಭುತ್ವದಲ್ಲಿ ನಾಯಕನ ಯಶಸ್ಸನ್ನು (ದಾಖಲೆ ಎನ್ನುವುದಾದರೆ) ಕೇವಲ ಅಧಿಕಾರದಲ್ಲಿ ಕಳೆದ ದಿನಗಳ ಲೆಕ್ಕದಿಂದ ಅಳೆಯಬೇಕೇ ಅಥವಾ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ತಂದ ಬದಲಾವಣೆಯಿಂದ ಅಳೆಯಬೇಕೇ? ಪ್ರಧಾನಿ ಮೋದಿಯವರ ಈ 12 ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಬಡವರು, ದಲಿತರು, ಯುವಕರು ಮತ್ತು ಅಲ್ಪಸಂಖ್ಯಾತರು ನಿಜವಾಗಿಯೂ ಸಂತೋಷದಿಂದ ಇದ್ದಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ಕಹಿ ವಾಸ್ತವಗಳು ಮುನ್ನೆಲೆಗೆ ಬರುತ್ತವೆ. ಅವರ ನಾಯಕತ್ವವು ರಾಷ್ಟ್ರೀಯ ಭದ್ರತೆ, ಆರ್ಥಿಕ ಪ್ರಗತಿ, ಪ್ರಜಾಪ್ರಭುತ್ವದ ಕುಸಿತ, ಸಾಂಸ್ಥಿಕ ಅವನತಿ ಮತ್ತು ವಿದೇಶಾಂಗ ನೀತಿಯ ವೈಫಲ್ಯಗಳ ಕುರಿತು ಕಳವಳಗಳನ್ನೂ ಹುಟ್ಟುಹಾಕಿದೆ.

ಅತಿ ಹೆಚ್ಚು ದಿನ ಪ್ರಧಾನಿಯಾಗಿದ್ದ ನೆಹರೂ ಅವರ ದಾಖಲೆಯನ್ನು ಮೋದಿ ಮುರಿದಿರಬಹುದು. ಆದರೆ, ನೆಹರೂ ಕಾಲದಲ್ಲಿ ದೇಶ ಶೂನ್ಯದಿಂದ ಕಟ್ಟಿದ ಐಐಟಿ, ಇಸ್ರೋ, ಎಚ್‌ಎಎಲ್‌ನಂತಹ ಬೃಹತ್ ಸಂಸ್ಥೆಗಳು ಭವಿಷ್ಯದ ಭಾರತಕ್ಕೆ ಬುನಾದಿ ಹಾಕಿತ್ತು. ಇಂದು ದಿನಗಳ ಲೆಕ್ಕದಲ್ಲಿ ಮುನ್ನುಗ್ಗುತ್ತಿದ್ದರೂ, ದೇಶದ ಆರ್ಥಿಕತೆಯ ಬೆನ್ನೆಲುಬಾದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ನೋಟು ಅಮಾನ್ಯೀಕರಣ ಹಾಗೂ ತಪ್ಪು ನೀತಿಗಳಿಂದಾಗಿ ಸತ್ತಿವೆ. ಸಾವಿರಾರು ಉದ್ಯಮಗಳು ಮುಚ್ಚಿಹೋಗಿವೆ. 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುತ್ತೇನೆ ಎಂದಿದ್ದ ಭರವಸೆ ಏನಾಗಿದೆ ಎಂದು ಪ್ರಧಾನಿಯನ್ನೇ ಕೇಳಬೇಕು. ವಿದೇಶಿ ಹೂಡಿಕೆದಾರರು ದೇಶ ಬಿಟ್ಟು ಹೋಗುತ್ತಿದ್ದಾರೆ, ಸ್ವತಃ ಭಾರತೀಯ ಉದ್ಯಮಿಗಳೇ ವಿದೇಶಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇದು ಪ್ರಧಾನಿಯವರ 12 ವರ್ಷದ ಸಾಧನೆಯೇ? .

ಹತ್ತು ವರ್ಷಗಳ ಹಿಂದೆ ದೇಶದ ಮಹಿಳೆಯರಿಗೆ ಹೊಗೆ ಮುಕ್ತ ಮತ್ತು ಆರೋಗ್ಯಕರ ಜೀವನ ನೀಡುವುದಾಗಿ ‘ಉಜ್ವಲ ಯೋಜನೆ’ಯಡಿ ಉಚಿತ ಸಿಲಿಂಡರ್ ನೀಡಲಾಯಿತು. ಆದರೆ ಅದರ ವಾಸ್ತವವೇನು? ಸಬ್ಸಿಡಿ ಕಡಿತಗೊಳಿಸಲಾಗಿದೆ, ಅಡುಗೆ ಅನಿಲ ಮತ್ತು ಇಂಧನ ಬೆಲೆ ಗಗನಕ್ಕೇರಿದೆ. ಸಬ್ಸಿಡಿ ಕಡಿತದಿಂದಾಗಿ ಬಡ ಮಹಿಳೆಯರು ಮತ್ತೆ ಹಳೆಯ ಒಲೆಗಳ ಕಡೆಗೆ ಮುಖ ಮಾಡುವ ಪರಿಸ್ಥಿತಿ ಬಂದಿದೆ. ದೇಶದಲ್ಲಿ ಬಡತನ ನಿರ್ಮೂಲನೆಯಾಗಿದೆ ಎಂದು ಸರ್ಕಾರ ಹೆಡ್‌ಲೈನ್ಸ್‌ ಪ್ರಚಾರ ಮಾಡುತ್ತಿದ್ದರೂ, ಸಾಮಾನ್ಯ ಕುಟುಂಬಗಳು ದಿನಬಳಕೆಯ ವಸ್ತುಗಳಾದ ಹಾಲು, ಬೇಳೆಕಾಳು ಮತ್ತು ಇಂಧನದ ಹಣದುಬ್ಬರದಿಂದ ತತ್ತರಿಸಿಹೋಗಿವೆ ಇದು ಪ್ರಧಾನಿಯವರ 12 ವರ್ಷದ ಸಾಧನೆಯೇ?.

ದೇಶವನ್ನು ಜಾಗತಿಕ ಉದ್ಯೋಗ ಸೃಷ್ಟಿಯ ಕೇಂದ್ರವನ್ನಾಗಿ ಮಾಡುತ್ತೇವೆ ಎಂಬ ಘೋಷಣೆಗಳ ನಡುವೆಯೇ, ದೇಶದ ಯುವಜನತೆ ಇತಿಹಾಸದಲ್ಲೇ ಕಾಣದ ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿದ್ದಾರೆ. ವರದಿಯ ಪ್ರಕಾರ, ಪ್ರತಿ 10 ಪದವೀಧರರಲ್ಲಿ ನಾಲ್ವರು ನಿರುದ್ಯೋಗಿಗಳಾಗಿದ್ದಾರೆ. ಪದವಿ ಮುಗಿಸಿದ ಯುವಕರಿಗೆ ವರ್ಷದೊಳಗೆ ಒಂದು ಖಾಯಂ ಸಂಬಳದ ಕೆಲಸ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿನ ಈ ವೈಫಲ್ಯ ದೇಶದ ಮಾನವ ಸಂಪನ್ಮೂಲವನ್ನು ಶತಮಾನಗಳಷ್ಟು ಹಿಂದೆ ತಳ್ಳುತ್ತಿದೆ.

ಮೋದಿ ಸರ್ಕಾರದ ಅಡಿಯಲ್ಲಿ ದೇಶದ ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ. ಕಳೆದ ಕೆಲವು ವರ್ಷಗಳಲ್ಲಿ ಸಿಬಿಎಸ್‌ಇ ಸೇರಿದಂತೆ ದೇಶದ ಪ್ರಮುಖ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸರಣಿಯಾಗಿ ಸೋರಿಕೆಯಾಗುತ್ತಿವೆ (Paper Leaks). ತಾಂತ್ರಿಕ ದೋಷಗಳು ಮತ್ತು ಆಡಳಿತಾತ್ಮಕ ವೈಫಲ್ಯಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ ಬದಲು ಹಗರಣಗಳ ಕೂಪವಾಗಿಸಲಾಗಿದೆ. ದೇಶದ ವಿದ್ಯಾರ್ಥಿ-ಯವಜನರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಹಲವು ರಾಜ್ಯಗಳಲ್ಲಿನ ಅದರದೇ ಪಕ್ಷದ ಸರ್ಕಾರಗಳು ಹೆಚ್ಚುತ್ತಿರುವ ಬೆಲೆ ಏರಿಕೆ, ಬಡತನ, ನಿರುದ್ಯೋಗ, ಕಾನೂನು ಮತ್ತು ಸುವ್ಯವಸ್ಥೆ ಲೋಪ, ದಿನೇದಿನೇ ಹೆಚ್ಚುತ್ತಿರುವ ಭ್ರಷ್ಟಾಚಾರ, ದೈನಂದಿನ ಆಡಳಿತದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಅನಗತ್ಯ ಹಸ್ತಕ್ಷೇಪ, ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ನೈತಿಕತೆಯ ಕುಸಿತ ಮತ್ತು ಜೀವ ವಿರೋಧಿ ವರ್ತನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿವೆ. ಇದು ಪಕ್ಷದ ಸದಸ್ಯರು ಮತ್ತು ಪದಾಧಿಕಾರಿಗಳ ಮೇಲಿನ ಉನ್ನತ ನಾಯಕರ ನಿಯಂತ್ರಣ ಸಡಿಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.

ಸಾವಿರಾರು ರೈತರು ದಿವಾಳಿಯಾಗಿ ಮತ್ತು ನೈಸರ್ಗಿಕ ವಿಕೋಪಗಳಿಂದ ತತ್ತರಿಸುತ್ತಿರುವಾಗ, ಕೇಂದ್ರ ಸರ್ಕಾರವು ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ದೊಡ್ಡ ಸಾಲಗಳನ್ನು ಮನ್ನಾ ಮಾಡಿದೆ. ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ಇತರ ವಿಐಪಿಗಳು ಮತ್ತು ರಾಜಕಾರಣಿಗಳು ಭಾರತ ಸರ್ಕಾರ ಒದಗಿಸುವ Z+ ಭದ್ರತೆಯನ್ನು ಆನಂದಿಸುತ್ತಿದ್ದಾರೆ. ಸಾಮಾನ್ಯ ನಾಗರಿಕರು ಪಾವತಿಸುವ ತೆರಿಗೆ ಹಣದಿಂದ ಈ ಭದ್ರತೆಯ ವೆಚ್ಚವನ್ನು ಭರಿಸಲಾಗುತ್ತಿದೆ. ವಿಪರ್ಯಾಸವೆಂದರೆ, ಗಣ್ಯರು ಉನ್ನತ ಭದ್ರತೆಯನ್ನು ಅನುಭವಿಸುತ್ತಿದ್ದರೆ, ಸಾಮಾನ್ಯ ನಾಗರಿಕರು ಪೊಲೀಸ್ ಸಿಬ್ಬಂದಿಯ ಕೊರತೆ ಮತ್ತು ನಿಷ್ಪರಿಣಾಮಕಾರಿ ಕಾನೂನು ಜಾರಿ ವ್ಯವಸ್ಥೆಯಿಂದಾಗಿ ಹೆಚ್ಚಾಗಿ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ.

ಇದಲ್ಲದೆ, ಬಿಜೆಪಿ ಸರ್ಕಾರವು ತನ್ನ ಹಿತಾಸಕ್ತಿಗಾಗಿ ಸಿಬಿಐ (CBI), ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆಗಳ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ವಿವಿಧ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಬಿಜೆಪಿಯೇತರ ನಾಯಕರನ್ನು ಹೆದರಿಸುತ್ತಿದೆ. ಅಜಿತ್ ಪವಾರ್, ಛಗನ್ ಭುಜಬಲ್, ಅಶೋಕ್ ಚವಾಣ್, ಹಿಮಂತ ಬಿಸ್ವಾ ಶರ್ಮಾ, ಸುವೇಂದು ಅಧಿಕಾರಿ, ಪ್ರಫುಲ್ ಪಟೇಲ್ ಮತ್ತು ಇತರ ಅನೇಕರ ಪ್ರಕರಣಗಳಲ್ಲಿ ಇದನ್ನು ಕಾಣಬಹುದು. ಈ ಸಂಸ್ಥೆಗಳನ್ನು ಬಳಸಿಕೊಂಡು ಈ ರಾಜಕಾರಣಿಗಳು ಬಿಜೆಪಿಗೆ ಸೇರುವಂತೆ ಮತ್ತು ಅದರ ಹಿತಾಸಕ್ತಿಗಳನ್ನು ಬೆಂಬಲಿಸುವಂತೆ ಒತ್ತಡ ಹೇರಲಾಗುತ್ತಿದೆ. ಅತ್ಯಂತ ವಿಪರ್ಯಾಸದ ಸಂಗತಿಯೆಂದರೆ, ಈ ಕಳಂಕಿತ ರಾಜಕಾರಣಿಗಳು ಬಿಜೆಪಿಗೆ ಸೇರಿದ ತಕ್ಷಣ, ಅವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ ಅಥವಾ ಮಂಗಮಾಯವಾಗುತ್ತವೆ.

ರಾಜ್ಯದ ನಿಯಂತ್ರಣದಲ್ಲಿರುವ ಅಥವಾ ಸರ್ಕಾರದ ಪರವಾಗಿರುವ ಮಾಧ್ಯಮ ಸಂಸ್ಥೆಗಳು ಮೋದಿಯವರ ರಾಜಕೀಯದ ಮತ್ತೊಂದು ಕಳವಳಕಾರಿ ಅಂಶವಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂಬ ತತ್ವವನ್ನು ಉಲ್ಲಂಘಿಸುವ ಮೂಲಕ ಅವು ಪ್ರಜಾಪ್ರಭುತ್ವದ ಆಶಯವನ್ನೇ ಬುಡಮೇಲು ಮಾಡುತ್ತಿವೆ. ನೋಯ್ಡಾ ಮೂಲದ ಸುದ್ದಿ ವಾಹಿನಿಗಳನ್ನು ಹೆಚ್ಚಾಗಿ “ಗೋದಿ ಮೀಡಿಯಾ” ಎಂದು ಕರೆಯಲಾಗುತ್ತಿದ್ದು, ಅನೇಕರು ಅವುಗಳನ್ನು ಪಕ್ಷಪಾತದ ಮತ್ತು ಮಾರಾಟವಾದ ಮಾಧ್ಯಮಗಳು ಎಂದು ಪರಿಗಣಿಸುತ್ತಾರೆ. ದೇಶದ ಮುದ್ರಣ ಮಾಧ್ಯಮವೂ ಸಹ ಸರ್ಕಾರವನ್ನು ಪ್ರಶ್ನಿಸಲು ಅಥವಾ ಹೊಣೆಗಾರರನ್ನಾಗಿ ಮಾಡಲು ಧೈರ್ಯ ಮಾಡುತ್ತಿಲ್ಲ, ಇದು 1975ರ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವಂತಿದೆ.

ಮೋದಿ ಅವರ ಸಚಿವ ಸಂಪುಟ ಕೂಡ ಎರಡು ಮೂರು ಹೆಸರುಗಳನ್ನು ಹೊರತುಪಡಿಸಿದರೆ ಅನಾಮಿಕ. ಹಾಗಾಗಿ, ಈ 12 ವರ್ಷಗಳ ಎಲ್ಲ ಆಗುಹೋಗುಗಳಿಗೂ ಅವರೇ ಸಹಜ ಹೊಣೆಗಾರ. ಯಾಕೆಂದರೆ, ಅವರ ಅಬ್ಬರದ ಆರಂಭಿಕ ನೆರೇಟಿವ್ ಅವರ ಪೂರ್ವಸೂರಿಗಳನ್ನು ಸಂಪೂರ್ಣ ನಿರಾಕರಿಸಿತ್ತು. ಆದರೆ, ಅವರ ಪ್ರತಿಯೊಂದೂ ಸಾಧನೆ ಪೂರ್ವಸೂರಿಗಳು ರೂಪಿಸಿದ ಸಕಾರಣ ತಳಪಾಯದ ಮೇಲೇ ಎದ್ದದ್ದು. ಹಾಗಾಗಿ, ಕಡೆಗೂ, ದೇಶದ ಸಂದರ್ಭದಲ್ಲಿ, ಈ 12 ವರ್ಷಗಳ ಅವಧಿಯಲ್ಲಿ ಮೋದಿಯವರ ಸ್ವಂತದ್ದೆನ್ನುವ ಒಂದು ಸಾಧನೆ ಏನು? ಎಂಬ ಪ್ರಶ್ನೆ ಉಳಿದೇಬಿಡುತ್ತದೆ ಎನ್ನತ್ತಾರೆ ಹಿರಿಯ ಪತ್ರಕರ್ತರಾದ ರಾಜಾರಾಮ್ ತಲ್ಲೂರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...