ರಾಜ್ಯ ಚುನಾವಣಾ ಆಯೋಗವು ಎಸ್ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ ಜೂನ್ 18 ರವರೆಗೆ ರಾಜ್ಯಾದ್ಯಂತ ಬೃಹತ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ರೈತ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಹಾಗೂ ಎದ್ದೇಳು ಕರ್ನಾಟಕದ ಪದಾಧಿಕಾರಿ ಕೆ.ಎಲ್. ಅಶೋಕ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಇದು ಕರ್ನಾಟಕ, ಇಲ್ಲಿ ನಡೆಯದು ಯಾವುದೇ ದುಷ್ಟ ಆಟ” ಎಂಬ ಆಕರ್ಷಕ ಘೋಷಾವಾಕ್ಯದೊಂದಿಗೆ ಈ ಬೃಹತ್ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನು ತಲುಪುವ ಉದ್ದೇಶದಿಂದ ಈ ಜನಜಾಗೃತಿ ಅಭಿಯಾನವನ್ನು ಒಟ್ಟು ಐದು ಮಾರ್ಗಗಳಾಗಿ ವಿಭಜಿಸಲಾಗಿದೆ:
ಮಾರ್ಗ-1 (ಕಲ್ಯಾಣ ಕರ್ನಾಟಕ ಬಾಗ): ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ.
ಮಾರ್ಗ-2 (ಕಿತ್ತೂರು ಕರ್ನಾಟಕ ಭಾಗ): ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ್, ಹಾವೇರಿ.
ಮಾರ್ಗ-3 (ಮಲೆನಾಡು ಮತ್ತು ಮಧ್ಯ ಕರ್ನಾಟಕ): ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ.
ಮಾರ್ಗ-4 (ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳು): ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ.
ಮಾರ್ಗ-5 (ಕರಾವಳಿ ಮತ್ತು ಹಳೆ ಮೈಸೂರು ಭಾಗ): ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ.
ಚುನಾವಣಾ ಆಯೋಗ ಸರ್ಕಾರದ ಏಜೆಂಟನಂತೆ ವರ್ತಿಸುತ್ತಿದೆ
“ಇಂದಿನ ಚುನಾವಣಾ ಆಯೋಗವು ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಗಾಳಿಗೆ ತೂರಿ ಬಿಜೆಪಿ ಸರ್ಕಾರದ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ” ಎಂದು ಹೋರಾಟಗಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಮತದಾನದ ಹಕ್ಕನ್ನು ನೀಡಿದೆ. ಅದನ್ನು ಕಾಪಾಡುವುದು ಆಯೋಗದ ಆದ್ಯ ಕರ್ತವ್ಯ. ಮತದಾನದ ಹಕ್ಕು ಎಂಬುದು ಕೇವಲ ಆಡಳಿತಾತ್ಮಕ ವಿಷಯವಲ್ಲ, ಅದು ನಾಗರಿಕ ಸಮಾನತೆಯ ಪ್ರತೀಕ. ಆದರೆ ಆಯೋಗ ಇದನ್ನು ಮರೆತಿರುವುದು ದುರಂತ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.
‘ಡಿಲಿಸ್ಟಿಂಗ್’ ಹೆಸರಲ್ಲಿ ಎರಡನೇ ದರ್ಜೆಯ ನಾಗರಿಕರ ಸೃಷ್ಟಿ?
ಎಸ್ಐಆರ್ ಜಾರಿಯಾದ ಇತರ ರಾಜ್ಯಗಳಲ್ಲಿ ಭೀಕರ ಅಕ್ರಮ ನಡೆದಿದ್ದು, ಸುಮಾರು 20 ಲಕ್ಷದಿಂದ ಹಿಡಿದು 3 ಕೋಟಿಯವರೆಗೆ ಅರ್ಹ ಮತದಾರರನ್ನು ಮತಪಟ್ಟಿಯಿಂದ ವ್ಯವಸ್ಥಿತವಾಗಿ ಹೊರಗಿಡಲಾಗಿದೆ. ಎಸ್ಐಆರ್ ಮೂಲಕ ಯಾವುದೇ ನುಸುಳುಕೋರರನ್ನು ಪತ್ತೆ ಹಚ್ಚುತ್ತಿಲ್ಲ, ಬದಲಿಗೆ ದೇಶದಲ್ಲೇ ಇರುವ ಒಂದು ನಿರ್ದಿಷ್ಟ ವರ್ಗದ ಮತದಾನದ ಹಕ್ಕನ್ನು ಕಸಿದುಕೊಂಡು, ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಹುನ್ನಾರ ಇದರಲ್ಲಿದೆ. ಆದರೆ ಶರಣರು, ಸೂಫಿಗಳು ಮತ್ತು ಸಂತರ ಈ ಪುಣ್ಯ ನಾಡಿನಲ್ಲಿ ಇಂತಹ ಯಾವುದೇ ದುಷ್ಟ ನೀತಿಗಳು ನಡೆಯಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಜಾಥಾದ ಪ್ರಮುಖ ಹಕ್ಕೊತ್ತಾಯಗಳು:
1. ಬೇರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿ ಎಸ್ಐಆರ್ ಜಾರಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
2. ಮತದಾರರ ಪಟ್ಟಿಯಿಂದ ಹೆಸರು ಕಟ್ ಮಾಡಲು ‘ಲಾಜಿಕಲ್ ಡಿಸ್ಕ್ರಿಪೆನ್ಸಿ ಸಾಫ್ಟ್ವೇರ್’ ಅನ್ನು ಬಳಸಬಾರದು.
3. ಪ್ರತಿಯೊಂದು ಹಳ್ಳಿಯಲ್ಲಿ ಗ್ರಾಮ ಸಭೆಗಳನ್ನು ಕರೆದು, ಸಾರ್ವಜನಿಕ ಪರಿಶೀಲನೆ ನಡೆಸಿಯೇ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಬೇಕು.
4. ಮತದಾರರ ಪಟ್ಟಿಯನ್ನು ‘ಮಷಿನ್ ರೀಡಬಲ್ ಫಾರ್ಮ್ಯಾಟ್’ ಮೂಲಕ ಪ್ರಕಟಿಸಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು.
5. ಮನವಿ ಮತ್ತು ಆಕ್ಷೇಪಣೆ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಒದಗಿಸಲು ಸಾರ್ವಜನಿಕರಿಗೆ ಕನಿಷ್ಠ ಆರು ತಿಂಗಳ ಸುದೀರ್ಘ ಕಾಲಾವಕಾಶ ನೀಡಬೇಕು.
ಜೂನ್ 20 ಕ್ಕೆ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ
ಮತದಾನದ ಹಕ್ಕನ್ನು ದುರ್ಬಲಗೊಳಿಸುವ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿಯುವ ಯಾವುದೇ ಪ್ರಯತ್ನಗಳನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಸಹಿಸುವುದಿಲ್ಲ. ರಾಜ್ಯ ಚುನಾವಣಾ ಆಯೋಗವು ನಾಗರಿಕ ಸಮಾಜಕ್ಕೆ ಉತ್ತರದಾಯಿಯಾಗಬೇಕು ಮತ್ತು ನಮ್ಮೆಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜೂನ್ 20 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿರೋಧ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


