Homeಮುಖಪುಟಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

- Advertisement -
- Advertisement -

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

‘ಜುಂಜುನು ಎಕ್ಸ್‌ಪ್ರೆಸ್’ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ನವೀನ್ ಚೌಧರಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಪೇಜ್‌ ಅನ್ನು ಚೌಧರಿ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಡಿಯೋ ಹಂಚಿಕೊಳ್ಳಲು ಬಳಸುತ್ತಿದ್ದಾರೆ. ಚೌಧರಿ ಹಂಚಿಕೊಂಡ ವಿಡಿಯೋದಲ್ಲಿ, ಜುಂಜುನು ಜಿಲ್ಲೆಯ ಮೈದಾನವೊಂದರ ಒಂದು ಬದಿಯಲ್ಲಿ ಕೆಲ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮತ್ತು ಮತ್ತೊಂದು ಬದಿಯಲ್ಲಿ ಇನ್ನೊಂದು ಗುಂಪಿನ ಮಕ್ಕಳು ಆರ್‌ಎಸ್ಎಸ್ ತರಬೇತಿಯಲ್ಲಿ ತೊಡಗಿದ್ದ ದೃಶ್ಯವಿತ್ತು.

ವಿಡಿಯೋದಲ್ಲಿ, “ನೋಡಿ ನಾನು ಇಂದು ನಿಮಗೆ ಏನು ತೋರಿಸಲಿದ್ದೇನೆ ಎಂದರೆ… ನೀವು ಈ ಎರಡು ಮಕ್ಕಳ ಗುಂಪುಗಳನ್ನು ನೋಡಬಹುದು. ಇವರಿಬ್ಬರ ಭವಿಷ್ಯವೂ ಒಂದು ಖಾಲಿ ಪುಟದ ತರಹ ಇದೆ. ಆದರೆ ಇವರ ನಡುವೆ ಇರುವ ವ್ಯತ್ಯಾಸವೇನು ಗೊತ್ತಾ? ಈ ಎರಡು ಗುಂಪುಗಳಲ್ಲಿ ಒಂದು ಗುಂಪಿಗೆ ಮೈದಾನದಲ್ಲಿ ಬೆವರು ಹರಿಸಲು, ದೇಶಕ್ಕಾಗಿ ಪದಕಗಳನ್ನು ತರಲು ಮತ್ತು ನಮ್ಮ ತ್ರಿವರ್ಣ ಧ್ವಜವು ಹೆಮ್ಮೆ ಪಡುವಂತೆ ಮಾಡಲು ಕಲಿಸಲಾಗುತ್ತಿದೆ” ಎಂದು ಚೌಧರಿ ಹಿಂದಿಯಲ್ಲಿ ಹೇಳಿದ್ದರು.

ಮುಂದುವರಿದು, “ಮತ್ತೊಂದು ಬದಿಯಲ್ಲಿ, ಅದೇ ಸಮಯದಲ್ಲಿ ಮುಗ್ಧ ಮಕ್ಕಳಲ್ಲಿ ಧರ್ಮ ಮತ್ತು ದ್ವೇಷದ ಬೀಜವನ್ನು ಬಿತ್ತಲಾಗುತ್ತಿದೆ. ಅವರಿಗೆ ತಮ್ಮ ತಮ್ಮಲ್ಲೇ ಹೋರಾಡುವುದನ್ನು ಕಲಿಸಲಾಗುತ್ತಿದೆ. ಈಗ ನೀವೇ ಯೋಚಿಸಿ, ಮೈದಾನದಲ್ಲಿ ಬೆವರು ಹರಿಸುತ್ತಿರುವ ಮಗು ದೇಶವನ್ನು ಮುನ್ನಡೆಸುತ್ತದೆ. ಆದರೆ ಯಾರಲ್ಲಿ ದ್ವೇಷದ ಬೀಜ ಬಿತ್ತಲಾಗುತ್ತಿದೆಯೋ, ಆ ಮಗು ಭವಿಷ್ಯದಲ್ಲಿ ದೇಶಕ್ಕಾಗಿ ಏನು ಮಾಡುತ್ತದೆ?” ಎಂದಿದ್ದರು.

“ಅವರು ನನ್ನನ್ನು ಯಾರೋ ಭಯೋತ್ಪಾದಕನಂತೆ ಕಾರಿನೊಳಗೆ ಎಳೆದುಕೊಂಡು ಹೋಗಿ, ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು”

ಚೌಧರಿ ಜೂನ್ 20ರ ಸಂಜೆ ವಿಡಿಯೋ ಪೋಸ್ಟ್ ಮಾಡಿದ್ದರು. ಮರುದಿನ, ಅಂದರೆ ಜೂನ್ 21ರ ಮುಂಜಾನೆ ಅವರ ಮನೆಗೆ ಬಂದ ರಾಜಸ್ಥಾನ ಪೊಲೀಸರು, ಅವರನ್ನು ಜುಂಜುನು ಕೊತ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

“ಭಾನುವಾರ (ಜೂ 21) ಮುಂಜಾನೆ ವಿಡಿಯೋ ಡಿಲೀಟ್ ಮಾಡುವಂತೆ ಆರ್‌ಎಸ್ಎಸ್ ಮತ್ತು ಪೊಲೀಸರಿಗೆ ಸಂಬಂಧಿಸಿದ ಜನರಿಂದ ನನಗೆ ಬೆದರಿಕೆ ಕರೆಗಳು ಬರಲು ಪ್ರಾರಂಭವಾದವು. ನಂತರ, ಪೊಲೀಸರು ನಾಲ್ಕರಿಂದ ಐದು ಕಾರುಗಳೊಂದಿಗೆ ನನ್ನ ಮನೆಗೆ ಬಂದರು. ಅವರು ನನ್ನನ್ನು ಯಾರೋ ಭಯೋತ್ಪಾದಕನಂತೆ ಕಾರಿನೊಳಗೆ ಎಳೆದುಕೊಂಡು ಹೋಗಿ, ಕೊತ್ವಾಲಿ ಪೊಲೀಸ್ ಠಾಣೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ನಿಜ ಹೇಳಬೇಕೆಂದರೆ ಪೊಲೀಸರು ನನ್ನನ್ನು ಅಪಹರಿಸಿದ್ದರು” ಎಂದು ಚೌಧರಿ ಜೂನ್ 22ರಂದು ಹೇಳಿರುವುದಾಗಿ ‘ದಿ ವೈರ್’ ವರದಿ ಮಾಡಿದೆ.

“ಠಾಣೆಯಲ್ಲಿ ನನಗೆ ಗುರುತಿಸಲು ಸಾಧ್ಯವಾಗದ ಪೊಲೀಸ್ ಅಧಿಕಾರಿಯೊಬ್ಬರು ಹೀಗೆ ಹೇಳಿದರು, ‘ನೀನು ಯಾವ ಭ್ರಮೆಯಲ್ಲಿದ್ದೀಯಾ? ನಿಮ್ಮಂತಹ ಸೊಳ್ಳೆ-ನೊಣಗಳು ಹೀಗೆ ಮಾಡುತ್ತಲೇ ಇರುತ್ತವೆ, ನಾವು ಒಂದು ದಿನ ಈ ದೇಶದಲ್ಲಿ ಕೇಸರಿ ಧ್ವಜವನ್ನು ಹಾರಿಸಿಯೇ ತೀರುತ್ತೇವೆ” ಎಂದು ಚೌಧರಿ ಆರೋಪಿಸಿದ್ದಾರೆ.

“ನನ್ನನ್ನು ಒಂದು ಸಣ್ಣ ಕೋಣೆಯಲ್ಲಿ ಇಡಲಾಗಿತ್ತು, ಫೋನ್ ವಶಪಡಿಸಿಕೊಳ್ಳಲಾಗಿತ್ತು ಮತ್ತು ಸಂಜೆಯವರೆಗೆ ಯಾರೊಂದಿಗೂ ಮಾತನಾಡಲು ಅಥವಾ ಸಹಾಯ ಕೇಳಲು ಅವಕಾಶ ನೀಡಲಿಲ್ಲ ಎಂದು ಚೌಧರಿ ಹೇಳಿದ್ದಾಗಿ ‘ದಿ ವೈರ್’ ವರದಿ ವಿವರಿಸಿದೆ.

“ಸಂಜೆಯ ವೇಳೆಗೆ ನಾನು ಹೇಗೋ ಒಂದು ಫೋನ್ ಪಡೆದು ಸಹಾಯಕ್ಕಾಗಿ ಕರೆ ಮಾಡುವಲ್ಲಿ ಯಶಸ್ವಿಯಾದೆ. ನನಗೆ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಸಮಸ್ಯೆ ಇರುವುದರಿಂದ ಅನಾರೋಗ್ಯದ ಭಾವನೆ ಉಂಟಾಗಿತ್ತು. ನನ್ನನ್ನು ಬಂಧಿಸಲು ಅವರಿಗೆ ಯಾವುದೇ ಕಾರಣ ಸಿಗದಿದ್ದಾಗ ಸಂಜೆಯ ವೇಳೆಗೆ ಮುಂಜಾಗ್ರತಾ ಕಸ್ಟಡಿಗೆ ತೆಗೆದುಕೊಂಡರು. ಅವರು ನನ್ನಿಂದ ದಾಖಲೆಗಳಿಗೆ ಸಹಿ ಹಾಕಿಸಿಕೊಂಡರು ಮತ್ತು ನಾನು ಆ ರಾತ್ರಿಯನ್ನು ಪೊಲೀಸ್ ಠಾಣೆಯಲ್ಲೇ ಕಳೆಯಬೇಕಾಯಿತು. ಇಂದು ನನಗೆ ಜಾಮೀನು ಸಿಕ್ಕಿದೆ” ಎಂದು ಚೌಧರಿ ಹೇಳಿದ್ದಾಗಿ ಎಂದು ವರದಿ ಉಲ್ಲೇಖಿಸಿದೆ.

‘ಒಬ್ಬ ವ್ಯಕ್ತಿ ಇಂತಹ ವಿಷಯವನ್ನು ಪೋಸ್ಟ್ ಮಾಡಿದರೆ ಸಮಾಜದಲ್ಲಿ ದ್ವೇಷ ಹರಡುತ್ತದೆ’

ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಜುಂಜುನು ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಶ್ರವಣ್ ಕುಮಾರ್ ಮೀಲ್ ಅವರನ್ನು ನಾವು ಸಂಪರ್ಕಿಸಿದ್ದೆವು. ಈ ವೇಳೆ ಚೌಧರಿ ಮೇಲೆ ಹಲ್ಲೆ ನಡೆಸಿರುವುದನ್ನು ಅವರು ನಿರಾಕರಿಸಿದ್ದಾರೆ ಎಂದು ದಿ ವೈರ್ ವರದಿ ಉಲ್ಲೇಖಿಸಿದೆ.

ಶಾಂತಿ ಕದಡಿದ ಆರೋಪದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 170 ರ ಅಡಿಯಲ್ಲಿ ಚೌಧರಿ ಅವರನ್ನು ಮುಂಜಾಗ್ರತಾ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಎಚ್‌ಒ ಮೀಲ್ ತಿಳಿಸಿದ್ದಾರೆ. ಪೋಸ್ಟ್ ಯಾರ ವಿರುದ್ಧವಾಗಿದೆ ಎಂಬುದಕ್ಕಿಂತ ಸಮಾಜದಲ್ಲಿ ಹಗೆತನ ತಡೆಯುವುದು ತಮ್ಮ ಆದ್ಯತೆಯಾಗಿದ್ದು, ಹಲ್ಲೆ ಆರೋಪಗಳು ಸುಳ್ಳು ಎಂದು ಅವರು ಹೇಳಿದ್ದಾರೆ.

ಚೌಧರಿ ಅವರ ಪೋಸ್ಟ್‌ ವಿರುದ್ಧ ದೂರು ನೀಡಿದ ಜನರಿಂದ ಪೊಲೀಸರಿಗೆ ಹಲವಾರು ಫೋನ್ ಕರೆಗಳು ಬಂದಿದ್ದವು. ಚೌಧರಿ ಅವರನ್ನು ಇಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮೀಲ್ ಸೋಮವಾರ ತಿಳಿಸಿದ್ದಾಗಿ ದಿ ವೈರ್ ಉಲ್ಲೇಖಿಸಿದೆ.

ಬೆಂಬಲಕ್ಕೆ ನಿಂತ ಕಾಂಗ್ರೆಸ್

ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

“ಆರ್‌ಎಸ್‌ಎಸ್‌ನ ನಿಜವಾದ ಮುಖವನ್ನು ಬಯಲು ಮಾಡುವ ಈ ವಿಡಿಯೋ ಪೋಸ್ಟ್ ಮಾಡುವುದು ಅಪರಾಧವಾಗಿದ್ದರೆ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಈ ಅಪರಾಧವನ್ನು ಪದೇ ಪದೇ ಮಾಡುತ್ತಾನೆ. ದ್ವೇಷ ಮತ್ತು ವಿಭಜನೆಯ ನಡುವೆ ಕ್ರೀಡೆ ಹಾಗೂ ರಾಷ್ಟ್ರ ನಿರ್ಮಾಣದ ಬಗ್ಗೆ ಮಾತನಾಡುವುದು ಅಪರಾಧವಾಗಿದ್ದರೆ, ನಾವು ಈ ಅಪರಾಧವನ್ನು ಪದೇ ಪದೇ ಮಾಡುತ್ತೇವೆ” ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು ಜೂನ್ 21ರಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಚೌಧರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಿಂದ ಪೋಸ್ಟ್ ಮಾಡಿದ್ದ ವಿಡಿಯೋವನ್ನು ಸಹ ಹಂಚಿಕೊಂಡಿದ್ದರು.

ಜೂನ್ 22ರಂದು ಚೌಧರಿ ಬಿಡುಗಡೆಯಾದ ಬಳಿಕ ಅವರನ್ನು ಭೇಟಿಯಾದ ದೋತಾಸ್ರಾ, “ನವೀನ್ ಅವರ ಧೈರ್ಯ, ಭಯ ಮತ್ತು ದೌರ್ಜನ್ಯದ ನಡುವೆಯೂ ಸತ್ಯವನ್ನು ಮಾತನಾಡುವ ಧೈರ್ಯ ಹೊಂದಿರುವ ಎಲ್ಲಾ ಯುವಕರಿಗೆ ಒಂದು ಸ್ಫೂರ್ತಿಯಾಗಿದೆ. ಎಷ್ಟು ದಮನ ಮಾಡುತ್ತಾರೋ ಆರ್‌ಎಸ್‌ಎಸ್ ಮತ್ತು ಅದರ ದ್ವೇಷದ ನಿಜವಾದ ವಾಸ್ತವಕ್ಕೆ ಅಷ್ಟೇ ಬಲವಾದ ಪ್ರತಿಕ್ರಿಯೆ ಸಿಗುತ್ತದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ಬೆದರಿಕೆಗಳ ಹೊರತಾಗಿಯೂ, ನಾನು ನನ್ನ ಪೇಜ್ ಮೂಲಕ ಸಾರ್ವಜನಿಕ ಹಿತಾಸಕ್ತಿಯ ಸ್ಥಳೀಯ ಸಮಸ್ಯೆಗಳನ್ನು ಎತ್ತುತ್ತಲೇ ಇರುತ್ತೇನೆ” ಎಂದು ಚೌಧರಿ ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವದ ಕೊಲೆ. ಯಾರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಪ್ರಶ್ನಿಸುತ್ತಾರೋ, ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಯಾರಾದರೂ ತಮ್ಮನ್ನು ಪ್ರಶ್ನಿಸಿದರೆ ಅವರ ಗತಿಯೂ ನನ್ನಂತೆಯೇ ಆಗುತ್ತದೆ ಎಂಬ ಸಂದೇಶವನ್ನು ಅವರು ನೀಡಲು ಬಯಸುತ್ತಿದ್ದಾರೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶದ ಕೋಮು ಸೌಹಾರ್ದತೆಯನ್ನು ಹಾಳುಮಾಡಲು ಬಯಸುತ್ತಿವೆ ಮತ್ತು ಅದಕ್ಕಾಗಿಯೇ ನಾನು ಆ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ” ಎಂದು ಚೌಧರಿ ಹೇಳಿರುವುದಾಗಿ ‘ದಿ ವೈರ್’ ವರದಿ ತಿಳಿಸಿದೆ.

Courtesy : thewire.in



















ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TMC ಅಧ್ಯಕ್ಷ ಸ್ಥಾನದಿಂದ ಮಮತಾ ಬ್ಯಾನರ್ಜಿಯನ್ನು ಉಚ್ಚಾಟಿಸಿದ ತೃಣಮೂಲ ಬಂಡಾಯ ಶಾಸಕರು

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಕಾಣದ ಅತ್ಯಂತ ದೊಡ್ಡ ಬಂಡಾಯಕ್ಕೆ ಸಾಕ್ಷಿಯಾಗಿದೆ. ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಋತಬ್ರತಾ ಬ್ಯಾನರ್ಜಿ ಸೋಮವಾರ ಮಮತಾ ಬ್ಯಾನರ್ಜಿ...

ಯುಪಿ: ಮೊಹರಂ ಮೆರವಣಿಗೆಯಲ್ಲಿ ಪಿತೂರಿ: ಪಾಕ್ ಪರ ಘೋಷಣೆಯ ಸುಳ್ಳು ವಿಡಿಯೋ ಹರಿಬಿಟ್ಟ ಇಬ್ಬರು ಹಿಂದುತ್ವವಾದಿಗಳ ಬಂಧನ 

ಬರೇಲಿ (ಉತ್ತರ ಪ್ರದೇಶ): ಮೊಹರಂ ಮೆರವಣಿಗೆಯೊಂದರಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಎಂದು ದೇಶವಿರೋಧಿ ಘೋಷಣೆ ಕೂಗಲಾಗಿದೆ ಎಂಬ ನಕಲಿ ವೀಡಿಯೋ ಸೃಷ್ಟಿಸಿ, ಮುಸ್ಲಿಂ ಸಮುದಾಯದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಇಬ್ಬರು ಹಿಂದುತ್ವವಾದಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...