Homeಮುಖಪುಟಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

- Advertisement -
- Advertisement -

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 86 ಲಕ್ಷದಷ್ಟು ಭಾರಿ ಇಳಿಕೆ ಕಂಡಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳಲ್ಲಿ ಬರೋಬ್ಬರಿ 88 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ಯುಡೈಸ್ ಪ್ಲಸ್ (UDISE+) 2025–26ರ ವರದಿ ಬಹಿರಂಗಪಡಿಸಿದೆ.

ಕೇವಲ ವಿದ್ಯಾರ್ಥಿಗಳ ಸಂಖ್ಯೆಯಷ್ಟೇ ಅಲ್ಲದೆ, ದೇಶದಲ್ಲಿನ ಸರ್ಕಾರಿ ಶಾಲೆಗಳ ಸಂಖ್ಯೆಯೂ ಸಹ 48,844 ರಿಂದ 48,527 ಕ್ಕೆ ಇಳಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಸಂಖ್ಯೆ 246 ರಷ್ಟು ಹೆಚ್ಚಳವಾಗುವ ಮೂಲಕ ಒಟ್ಟು 19,351 ಕ್ಕೆ ತಲುಪಿದೆ. ದೇಶದಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದು ಮತ್ತು ಪೋಷಕರು ನಿರಂತರವಾಗಿ ಖಾಸಗಿ ಶಿಕ್ಷಣದತ್ತ ಒಲವು ತೋರುತ್ತಿರುವುದೇ ಸರ್ಕಾರಿ ಶಾಲೆಗಳಲ್ಲಿನ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವರದಿಯ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟಾರೆ ಶಾಲಾ ಶಿಕ್ಷಣ ವ್ಯವಸ್ಥೆಯು ಸದ್ಯ 14.67 ಲಕ್ಷ ಶಾಲೆಗಳು, 1.02 ಕೋಟಿ ಶಿಕ್ಷಕರು ಹಾಗೂ ಮೂಲಭೂತ ಹಂತದಿಂದ ಮಾಧ್ಯಮಿಕ ಹಂತದವರೆಗೆ ಒಟ್ಟು 24.72 ಕೋಟಿ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ದೇಶದಲ್ಲಿ ಇಂದಿಗೂ ಬಹುಪಾಲು ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳೇ ಆಸರೆಯಾಗಿದ್ದು, ಒಟ್ಟು 12.67 ಕೋಟಿಗೂ ಹೆಚ್ಚು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಇನ್ನು ಖಾಸಗಿ ಶಾಲೆಗಳಲ್ಲಿ 8.44 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರನ್ನು ಹೊರತುಪಡಿಸಿ, ಸರ್ಕಾರಿ ಅನುದಾನಿತ ಶಾಲೆಗಳು 2.25 ಕೋಟಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಉಳಿದ ವಿದ್ಯಾರ್ಥಿಗಳು ಇತರ ಆಡಳಿತ ಮಂಡಳಿಗಳ ಅಡಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶೈಕ್ಷಣಿಕ ರಂಗದಲ್ಲಿ ಲಿಂಗ ಪ್ರಾತಿನಿಧ್ಯದ ಸುಧಾರಣೆಯನ್ನು ಈ ವರದಿ ಪ್ರಮುಖವಾಗಿ ಶ್ಲಾಘಿಸಿದೆ. ಪ್ರಸ್ತುತ ದೇಶದ ಒಟ್ಟು ಶಿಕ್ಷಕರ ಕಾರ್ಯಪಡೆಯಲ್ಲಿ ಮಹಿಳೆಯರ ಪಾಲು ಶೇಕಡಾ 54.9 ರಷ್ಟಿದೆ. ಹಾಗೆಯೇ, ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣವು 2025-26 ರಲ್ಲಿ ಶೇಕಡಾ 48.4 ಕ್ಕೆ ಅಲ್ಪ ಏರಿಕೆ ಕಂಡಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ತೀವ್ರವಾಗಿ ಕುಸಿದಿದ್ದರೂ ಸಹ, ಶಿಕ್ಷಣದ ಲಭ್ಯತೆ, ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಉಳಿಸಿಕೊಳ್ಳುವಿಕೆ (Retention) ಮತ್ತು ಶಾಲಾ ಮೂಲಸೌಕರ್ಯಗಳ ವೃದ್ಧಿಯಲ್ಲಿ ಆಶಾದಾಯಕ ಪ್ರಗತಿ ಕಂಡುಬಂದಿದೆ ಎಂದು ವರದಿ ಹೇಳಿದೆ.

ದಾಖಲಾತಿ ಇಳಿಕೆಯ ನಡುವೆಯೂ ಶಾಲೆ ಬಿಡುವ ಮಕ್ಕಳ ಪ್ರಮಾಣ ತಗ್ಗಿರುವುದು ಸಮಾಧಾನಕರ ಸಂಗತಿಯಾಗಿದೆ. ಪೂರ್ವಸಿದ್ಧತಾ (Preparatory) ಹಂತದಲ್ಲಿ ಶಾಲೆ ಬಿಡುವವರ ಪ್ರಮಾಣವು 2024-25 ರಲ್ಲಿ ಶೇ 2.3 ರಷ್ಟಿದ್ದುದು 2025-26 ರಲ್ಲಿ ಶೇ 1.8 ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಮಾಧ್ಯಮಿಕ ಹಂತದ ಡ್ರಾಪ್‌ಔಟ್ ಪ್ರಮಾಣ ಶೇ 8.2 ರಿಂದ ಶೇ 7 ಕ್ಕೆ ತಗ್ಗಿದೆ. ಇನ್ನು ಮಧ್ಯಮ (Middle) ಹಂತದಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಲ್ಲೇ ಉಳಿಸಿಕೊಳ್ಳುವ ಪ್ರಮಾಣವು ಶೇಕಡಾ 82.8 ರಿಂದ ಶೇಕಡಾ 83.7 ಕ್ಕೆ ಸುಧಾರಿಸಿದ್ದರೆ, ಮಾಧ್ಯಮಿಕ ಹಂತದಲ್ಲಿ ಇದು ಶೇಕಡಾ 47.2 ರಿಂದ ಶೇಕಡಾ 51.9 ಕ್ಕೆ ಗಮನಾರ್ಹವಾಗಿ ಏರಿಕೆಯಾಗಿದೆ.

ಅಂತೆಯೇ, ಮಾಧ್ಯಮಿಕ ಹಂತದಲ್ಲಿ ಒಟ್ಟು ದಾಖಲಾತಿ ಅನುಪಾತ (GER) ಶೇಕಡಾ 68.5 ರಿಂದ ಶೇಕಡಾ 71.7 ಕ್ಕೆ ಹೆಚ್ಚಾಗಿದೆ. ಮೂಲಭೂತ, ಪೂರ್ವಸಿದ್ಧತಾ, ಮಧ್ಯಮ ಮತ್ತು ಮಾಧ್ಯಮಿಕ ಹಂತಗಳ ನಡುವೆ ವಿದ್ಯಾರ್ಥಿಗಳ ಮುಂದಿನ ತರಗತಿಗಳ ಪ್ರವೇಶದ ದರ (Transition Rate) ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಕೈಬಿಡದೆ ಮುಂದುವರಿಸುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಶಾಲೆಗಳಲ್ಲಿ ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯಗಳ ವಿಸ್ತರಣೆಯೂ ಇದಕ್ಕೆ ಪೂರಕವಾಗಿದೆ. ಪ್ರಸ್ತುತ ಕಂಪ್ಯೂಟರ್ ಸೌಲಭ್ಯ ಹೊಂದಿರುವ ಶಾಲೆಗಳ ಪ್ರಮಾಣ ಶೇ 69.9 ಕ್ಕೆ ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವ ಶಾಲೆಗಳ ಸಂಖ್ಯೆ ಶೇ 67.4 ಕ್ಕೆ ಏರಿದೆ. ಶಾಲೆಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಕೈ ತೊಳೆಯುವ ಸೌಲಭ್ಯ ಹಾಗೂ ಗ್ರಂಥಾಲಯಗಳ ಲಭ್ಯತೆ ಉತ್ತಮಗೊಂಡಿದೆ.

ವಿಶೇಷವಾಗಿ, ಶೇಕಡಾ 58.2 ರಷ್ಟು ಶಾಲೆಗಳು ಈಗ ರ‍್ಯಾಂಪ್‌ಗಳು ಮತ್ತು ಹ್ಯಾಂಡ್‌ರೈಲ್‌ಗಳನ್ನು ಹೊಂದುವ ಮೂಲಕ ಅಂಗವಿಕಲ ವಿದ್ಯಾರ್ಥಿ ಸ್ನೇಹಿಯಾಗಿವೆ. ದೇಶದ ಒಟ್ಟು ಶಾಲಾ ಶಿಕ್ಷಕರ ಸಂಖ್ಯೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 1.02 ಕೋಟಿ ದಾಟಿದ್ದು, ಇದು 2022-23 ಕ್ಕೆ ಹೋಲಿಸಿದರೆ ಶೇಕಡಾ 8.3 ರಷ್ಟು ಹೆಚ್ಚಳವಾಗಿದೆ. ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲೂ ವಿದ್ಯಾರ್ಥಿ-ಶಿಕ್ಷಕರ ಅನುಪಾತ (PTR) ಸುಧಾರಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಶಿಫಾರಸು ಮಾಡಿರುವ 30:1 ಅನುಪಾತಕ್ಕಿಂತ ಅತ್ಯುತ್ತಮ ಸ್ಥಿತಿಯಲ್ಲಿದೆ. 

ಪ್ರಸ್ತುತ ಈ ಅನುಪಾತವು ಮೂಲಭೂತ ಮಟ್ಟದಲ್ಲಿ 10:1, ಪೂರ್ವಸಿದ್ಧತಾ ಮಟ್ಟದಲ್ಲಿ 12:1, ಮಧ್ಯಮ ಮಟ್ಟದಲ್ಲಿ 17:1 ಮತ್ತು ಮಾಧ್ಯಮಿಕ ಹಂತದಲ್ಲಿ 21:1 ರಷ್ಟಿದೆ. ಏಕ-ಶಿಕ್ಷಕರಿರುವ ಶಾಲೆಗಳ ಸಂಖ್ಯೆ 1,00,843 ಕ್ಕೆ ಇಳಿಕೆಯಾಗಿದ್ದರೆ, ಶೂನ್ಯ ದಾಖಲಾತಿ ಹೊಂದಿದ್ದ ಶಾಲೆಗಳ ಸಂಖ್ಯೆ 2023-24 ರಲ್ಲಿದ್ದ 12,954 ರಿಂದ 2025-26 ರಲ್ಲಿ 5,663 ಕ್ಕೆ ಇಳಿದಿದೆ. ಶಿಕ್ಷಕರ ಸಂಖ್ಯೆಯಲ್ಲಿನ ಈ ವೃದ್ಧಿಯು ಪ್ರಾದೇಶಿಕ ಅಸಮಾನತೆ ನಿವಾರಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.

ಆದರೆ, ಯುಡೈಸ್ ಪ್ಲಸ್ ವರದಿಯ ರಾಜ್ಯಮಟ್ಟದ ದತ್ತಾಂಶಗಳು ದೇಶಾದ್ಯಂತ ಶೈಕ್ಷಣಿಕ ಫಲಿತಾಂಶ ಹಾಗೂ ಮೂಲಸೌಕರ್ಯಗಳಲ್ಲಿರುವ ಭಾರಿ ಅಸಮಾನತೆಯನ್ನು ಬಿಚ್ಚಿಟ್ಟಿವೆ.

ವಿದ್ಯಾರ್ಥಿಗಳ ಭಾಗವಹಿಸುವಿಕೆ, ಶಾಲೆಯಲ್ಲಿ ಉಳಿಸಿಕೊಳ್ಳುವಿಕೆ, ಪ್ರಗತಿ, ಶಿಕ್ಷಕರ ಲಭ್ಯತೆ ಮತ್ತು ಮೂಲಸೌಕರ್ಯದಂತಹ ಪ್ರಮುಖ ಮಾನದಂಡಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಉತ್ತಮ ಸಾಧನೆ ಮಾಡುವ ಮೂಲಕ ತಮಿಳುನಾಡು ದೇಶದಲ್ಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಗುಣಮಟ್ಟದ ಶಿಕ್ಷಣದ ಸಾರ್ವತ್ರೀಕರಣ ಮತ್ತು ನಿರಂತರ ಹೂಡಿಕೆಗೆ ಸಿಕ್ಕ ಫಲ ಇದಾಗಿದೆ ಎಂದು ತಮಿಳುನಾಡು ಶಾಲಾ ಶಿಕ್ಷಣ ಇಲಾಖೆ ಹೆೇಳಿದೆ. ಡಿಜಿಟಲ್ ಮತ್ತು ಭೌತಿಕ ಮೂಲಸೌಕರ್ಯದಲ್ಲಿ ಕೇರಳ ರಾಜ್ಯವು ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದೆ. ಆದರೆ, ವಿಶೇಷ ಅಗತ್ಯವಿರುವ ಮಕ್ಕಳ (CWSN) ಪ್ರವೇಶಾತಿಯಲ್ಲಿ ಕೇರಳದಲ್ಲೂ ಕೊರತೆಗಳಿದ್ದು, ಶಾಲೆಗಳನ್ನು ಮತ್ತಷ್ಟು ಒಳಗೊಳ್ಳುವಿಕೆಯ (Inclusive) ದೃಷ್ಟಿಯಿಂದ ಸುಧಾರಿಸಬೇಕಿದೆ ಎಂದು ವರದಿ ಬೆರಳು ಮಾಡಿದೆ.

ಶಾಲಾ ಮೂಲಸೌಕರ್ಯ ಸೂಚ್ಯಂಕದಲ್ಲಿ ತಮಿಳುನಾಡು 94.4 ಸಂಯೋಜಿತ ಅಂಕಗಳೊಂದಿಗೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಅಲ್ಲಿನ ಶೇ 94.4 ರಷ್ಟು ಶಾಲೆಗಳಲ್ಲಿ ಕಂಪ್ಯೂಟರ್, ಶೇ 99 ರಷ್ಟು ಶಾಲೆಗಳಲ್ಲಿ ಇಂಟರ್ನೆಟ್ ಮತ್ತು ಶೇ 100 ರಷ್ಟು ಶಾಲೆಗಳಲ್ಲಿ ವಿದ್ಯುತ್ ಸೌಲಭ್ಯವಿದೆ.

ಡಿಜಿಟಲ್ ಸಂಪರ್ಕದಲ್ಲಿ ಮುಂಚೂಣಿಯಲ್ಲಿರುವ ಒಡಿಶಾ, ಪಂಜಾಬ್, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ಮೊದಲ ಐದು ಸ್ಥಾನಗಳಲ್ಲಿವೆ.

ಇದಕ್ಕೆ ತದ್ವಿರುದ್ಧವಾಗಿ ಮೇಘಾಲಯ ರಾಜ್ಯವು ಅತ್ಯಂತ ಕಳಪೆ ಮೂಲಸೌಕರ್ಯವನ್ನು ಹೊಂದಿದ್ದು, ಅಲ್ಲಿ ಕೇವಲ ಶೇ 19.5 ರಷ್ಟು ಶಾಲೆಗಳಲ್ಲಿ ಕಂಪ್ಯೂಟರ್, ಶೇ 36.4 ರಷ್ಟು ಶಾಲೆಗಳಲ್ಲಿ ಇಂಟರ್ನೆಟ್ ಹಾಗೂ ಕೇವಲ ಶೇ 6.3 ರಷ್ಟು ಶಾಲೆಗಳಲ್ಲಿ ಮಾತ್ರ ವಿಶೇಷ ಅಗತ್ಯವಿರುವ ಮಕ್ಕಳಿಗಾಗಿ ಶೌಚಾಲಯಗಳಿವೆ. 

ಅರುಣಾಚಲ ಪ್ರದೇಶ, ಮಣಿಪುರ, ಪಶ್ಚಿಮ ಬಂಗಾಳ, ತ್ರಿಪುರ, ನಾಗಾಲ್ಯಾಂಡ್, ಬಿಹಾರ, ಮಿಜೋರಾಂ, ರಾಜಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳು ಸಹ ಮೂಲಸೌಕರ್ಯ ಸೂಚ್ಯಂಕದಲ್ಲಿ ತಳಮಟ್ಟದಲ್ಲಿದ್ದು, ಪ್ರಾದೇಶಿಕ ಅಸಮಾನತೆ ಮುಂದುವರಿದಿರುವುದನ್ನು ಸಾಬೀತುಪಡಿಸಿವೆ. ಕೆಲವು ರಾಜ್ಯಗಳು ಡಿಜಿಟಲ್ ಮೂಲಸೌಕರ್ಯದಲ್ಲಿ ಮುಂದುವರಿದಿದ್ದರೂ, ದಿವ್ಯಾಂಗ ಸ್ನೇಹಿ ರ‍್ಯಾಂಪ್, ಹ್ಯಾಂಡ್‌ರೈಲ್ ಹಾಗೂ ಶೌಚಾಲಯಗಳ ನಿರ್ಮಾಣದಲ್ಲಿ ಹಿಂದುಳಿದಿರುವುದು ಕಂಡುಬಂದಿದೆ.

UDISE+ ವರದಿಯನ್ನಿಟ್ಟುಕೊಂಡು ವಿವಿಧ ರಾಜ್ಯಗಳಲ್ಲಿ ರಾಜಕೀಯ ವಾಗ್ದಾಳಿಗಳು ಆರಂಭವಾಗಿವೆ. ಉತ್ತರ ಪ್ರದೇಶದ ಸರ್ಕಾರಿ ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ “ಕುಸಿದಿದೆ” ಎಂದು ಅಲ್ಲಿನ ಕಾಂಗ್ರೆಸ್ ಘಟಕ ಆರೋಪಿಸಿದೆ. ಈ ದತ್ತಾಂಶಗಳು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿರುವುದಕ್ಕೆ ಸಾಕ್ಷಿ ಎಂದಿರುವ ಕಾಂಗ್ರೆಸ್, ಕೇವಲ ಒಂದೇ ವರ್ಷದಲ್ಲಿ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಿಂದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ ಅಥವಾ ಅವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ದೂರಿದೆ. 

ಇದೇ ಅವಧಿಯಲ್ಲಿ 3,397 ಖಾಸಗಿ ಶಾಲೆಗಳು ತಲೆ ಎತ್ತಿವೆ. ಖಾಸಗಿ ಶಾಲಾ ಮಾಫಿಯಾದ ಜೇಬು ತುಂಬಿಸಲು ಸರ್ಕಾರ ಉದ್ದೇಶಪೂರ್ವಕವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆಯೇ ಮತ್ತು ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಬಡ ಕುಟುಂಬಗಳು ಭರಿಸಲು ಹೇಗೆ ಸಾಧ್ಯ ಎಂದು ಪಕ್ಷ ಪ್ರಶ್ನಿಸಿದೆ.

ಮತ್ತೊಂದೆಡೆ, ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ “ನಾಶಪಡಿಸಿದೆ” ಎಂದು ಅಲ್ಲಿನ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ದೇಶಾದ್ಯಂತ ಒಂದೇ ವರ್ಷದಲ್ಲಿ ಮುಚ್ಚಲಾದ ಒಟ್ಟು 4,791 ಶಾಲೆಗಳ ಪೈಕಿ 2,426 ಶಾಲೆಗಳು ಕೇವಲ ಮಧ್ಯಪ್ರದೇಶ ಒಂದರಲ್ಲೇ ಮುಚ್ಚಲ್ಪಟ್ಟಿವೆ ಎಂದು ಅವರು ಅಂಕಿಅಂಶ ನೀಡಿದ್ದಾರೆ. ಅಂದರೆ ದೇಶದಲ್ಲಿ ಮುಚ್ಚಲಾಗುತ್ತಿರುವ ಪ್ರತಿ ಎರಡು ಶಾಲೆಗಳಲ್ಲಿ ಒಂದು ಮಧ್ಯಪ್ರದೇಶದ್ದಾಗಿದೆ. ದಿನಕ್ಕೆ ಸರಾಸರಿ 13 ಶಾಲೆಗಳು ದೇಶದಲ್ಲಿ ಮುಚ್ಚುತ್ತಿದ್ದರೆ, ಅದರಲ್ಲಿ 6 ರಿಂದ 7 ಶಾಲೆಗಳು ಮಧ್ಯಪ್ರದೇಶದ್ದಾಗಿವೆ. 

ಮುಖ್ಯಮಂತ್ರಿ ಮೋಹನ್ ಯಾದವ್ ಅವರ “ಶಿಕ್ಷಣ ಮಾದರಿ”ಯು ಶಾಲೆಗಳ ಮುಚ್ಚುವಿಕೆಗೆ ಮತ್ತು ಶಿಕ್ಷಕರ ಕೊರತೆಗೆ ಕಾರಣವಾಗಿದ್ದು, ಲಕ್ಷಾಂತರ ಗ್ರಾಮೀಣ ಹಾಗೂ ಬುಡಕಟ್ಟು ಮಕ್ಕಳ ಭವಿಷ್ಯದ ಮೇಲೆ ನಡೆದ ಉದ್ದೇಶಪೂರ್ವಕ ದಾಳಿ ಇದಾಗಿದೆ ಎಂದು ಸಿಂಘರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಸ್ಥಾನದಲ್ಲೂ ಸಹ ಬಿಜೆಪಿ ಸರ್ಕಾರದ “ಕಳಪೆ ಆಡಳಿತ”ವನ್ನು ಈ ವರದಿ ಬಹಿರಂಗಪಡಿಸಿದೆ ಎಂದು ಅಲ್ಲಿನ ಕಾಂಗ್ರೆಸ್ ನಾಯಕ ಜಿತೇಂದ್ರ ಸಿಂಗ್ ಅಲ್ವಾರ್ ಆರೋಪಿಸಿದ್ದಾರೆ. ರಾಜಸ್ಥಾನದ ಸುಮಾರು 7,200 ಸರ್ಕಾರಿ ಶಾಲೆಗಳು ಕೇವಲ ಏಕೈಕ ಶಿಕ್ಷಕನಿಂದ ನಡೆಯುತ್ತಿವೆ. ಆದರೆ ಮತ್ತೊಂದೆಡೆ, 189 ಶಿಕ್ಷಕರನ್ನು ನಿಯೋಜಿಸಲಾಗಿದ್ದರೂ 140 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇಲ್ಲದ ವಿಲಕ್ಷಣ ಸ್ಥಿತಿ ಇದೆ ಎಂದು ಅವರು ಹೇಳಿದ್ದಾರೆ. 

ರಾಜ್ಯದ ಪ್ರತಿ 10 ಸರ್ಕಾರಿ ಶಾಲೆಗಳಲ್ಲಿ ಒಂದಕ್ಕೆ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ. ಮೂಲಭೂತ ಸೌಕರ್ಯಗಳೇ ಇಲ್ಲದ ಮೇಲೆ ಡಿಜಿಟಲ್ ಶಿಕ್ಷಣದ ಮಾತುಗಳು ಅರ್ಥಹೀನ ಎಂದಿರುವ ಅವರು, ರಾಜಸ್ಥಾನದಲ್ಲಿ ಪ್ರಾಥಮಿಕ ಹಂತದಲ್ಲಿ ಶೇ 3.6, ಉನ್ನತ ಪ್ರಾಥಮಿಕದಲ್ಲಿ ಶೇ 4.4 ಮತ್ತು ಮಾಧ್ಯಮಿಕ ಹಂತದಲ್ಲಿ ಶೇ 7.5 ರಷ್ಟಿರುವ ಡ್ರಾಪ್‌ಔಟ್ ಪ್ರಮಾಣವು ಬಡತನ ಮತ್ತು ದುರ್ಬಲ ಶಿಕ್ಷಣ ವ್ಯವಸ್ಥೆಯಿಂದಾಗಿ ಮಕ್ಕಳ ಕನಸುಗಳು ಭಗ್ನಗೊಂಡಿರುವುದರ ಸಂಕೇತವಾಗಿದೆ ಎಂದಿದ್ದಾರೆ. ಕೇವಲ ಘೋಷಣೆಗಳನ್ನು ಬದಿಗಿಟ್ಟು ಖಾಲಿ ಹುದ್ದೆ ಭರ್ತಿ ಮಾಡಲು ಹಾಗೂ ಮೂಲಸೌಕರ್ಯ ವೃದ್ಧಿಸಲು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದೇಶಾದ್ಯಂತ ಉಂಟಾಗುತ್ತಿರುವ ಈ ಖಾಸಗೀಕರಣದ ಸ್ಥಿತ್ಯಂತರವು ಶಿಕ್ಷಣದ ಕೈಗೆಟುಕುವಿಕೆಯ (Affordability) ಕುರಿತು ದೊಡ್ಡ ಆತಂಕವನ್ನು ಸೃಷ್ಟಿಸಿದೆ. 

ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) ಪ್ರಕಾರ, ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶದ ಕುಟುಂಬಗಳು ಶಿಕ್ಷಣಕ್ಕಾಗಿ ಗಣನೀಯವಾಗಿ ಹೆಚ್ಚಿನ ಹಣ ವ್ಯಯಿಸುತ್ತಿವೆ. ಖಾಸಗಿ ಶಾಲೆಗಳ ಶುಲ್ಕ ಹಾಗೂ ಕೋಚಿಂಗ್ ವೆಚ್ಚಗಳು ಕಡಿಮೆ ಆದಾಯದ ಕುಟುಂಬಗಳ ಮೇಲೆ ಭಾರಿ ಆರ್ಥಿಕ ಹೊರೆಯನ್ನು ಹೇರುತ್ತಿವೆ. 

ಅಸಂಘಟಿತ ವಲಯದ ಕಾರ್ಮಿಕರು ಮತ್ತು ದಿನಗೂಲಿ ನೌಕರರು ವಾರ್ಷಿಕವಾಗಿ ₹20,000 ದಿಂದ ₹1.5 ಲಕ್ಷದವರೆಗೆ ಇರುವ ಶಾಲಾ ಶುಲ್ಕವನ್ನು ಭರಿಸಲು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು, ಗುಣಮಟ್ಟದ ಶಿಕ್ಷಣ ಎಂಬುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಲಭ್ಯತೆಗಿಂತ ಹೆಚ್ಚಾಗಿ, ಕೇವಲ ಆಯಾ ಕುಟುಂಬಗಳ ಆರ್ಥಿಕ ಆದಾಯದ ಮೇಲೆ ನಿರ್ಧಾರವಾಗುವಂತಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಮೂಡಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...