ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಲಾದ ವ್ಯಕ್ತಿಯೊಬ್ಬನ ಬಂಧನವನ್ನು ಎತ್ತಿಹಿಡಿದ ನ್ಯಾಯಾಲಯ, ಆತನನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ದೇಬಾಂಶು ಬಸಾಕ್ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಗುಪ್ತಾ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಬಂಧಿತ ವ್ಯಕ್ತಿಯು ತನ್ನ ಸೋದರಸೊಸೆ/ಸೋದರಳಿಯ ಎಂದು ಪ್ರತಿಪಾದಿಸಿ, ಆತನನ್ನು ಜೂನ್ 18, 2026 ರಿಂದ ಅಕ್ರಮವಾಗಿ ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಿ ಮಾವ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. “ಅರ್ಜಿದಾರರಾಗಲಿ ಅಥವಾ ಬಂಧಿತ ವ್ಯಕ್ತಿಯಾಗಲಿ ತಾವು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಇಮಿಗ್ರೇಷನ್ ಮತ್ತು ಫಾರಿನರ್ಸ್ ಆಕ್ಟ್, 2025 ರ ಅಡಿಯಲ್ಲಿ ಕಡ್ಡಾಯವಾಗಿರುವ ಪೌರತ್ವದ ಸಾಕ್ಷ್ಯಾಧಾರಗಳ ಜವಾಬ್ದಾರಿಯನ್ನು ಪೂರೈಸಲು ಅವರಿಗೆ ಸಾಧ್ಯವಾಗಿಲ್ಲ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ವಾದದ ಪ್ರಕಾರ, 2026ರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (SIR) ಸಮಯದಲ್ಲಿ ಬಂಧಿತ ವ್ಯಕ್ತಿಯ ಹೆಸರನ್ನು ಆರಂಭದಲ್ಲಿ “ನ್ಯಾಯ ನಿರ್ಣಯದ ಹಂತದಲ್ಲಿದೆ” ಎಂದು ಗುರುತಿಸಲಾಗಿತ್ತು. ನಂತರ ಆ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಹೆಸರು ತೆಗೆದುಹಾಕಿದ್ದರ ವಿರುದ್ಧ ಮೇಲ್ಮನವಿ ಬಾಕಿಯಿದ್ದು, ಯಾವುದೇ ವಿಚಾರಣೆ ನಡೆಸದೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ತನ್ನ ವಾದಕ್ಕೆ ಬೆಂಬಲವಾಗಿ ಜಮೀನಿನ ದಾಖಲೆಗಳು, ಮತದಾರರ ಗುರುತಿನ ಚೀಟಿ ಮತ್ತು ಬ್ಯಾಂಕ್ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಆದರೆ, ಬಂಧಿತ ವ್ಯಕ್ತಿಯ ಜನ್ಮಸ್ಥಳ ಅಥವಾ ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳನ್ನು ಸಲ್ಲಿಕೆ ಮಾಡದ ಕಾರಣ, ಜನನದ ಆಧಾರದ ಮೇಲಿನ ಪೌರತ್ವವು ಸಾಬೀತಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೊತೆಗೆ, ಆತನ ಹೆತ್ತವರ ಹೆಸರು ಮತ್ತು ವಂಶಾವಳಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ ಎಂದು ಪೀಠ ಬೆಟ್ಟುಮಾಡಿದೆ. “ವಿವಿಧ ದಾಖಲೆಗಳಲ್ಲಿ ಬಂಧಿತ ವ್ಯಕ್ತಿಯ ತಂದೆಯ ಹೆಸರು ಬೇರೆ ಬೇರೆಯಾಗಿದೆ. ದಾಖಲೆಗಳ ಪ್ರಕಾರ ಬಂಧಿತ ವ್ಯಕ್ತಿ ಮತ್ತು ಆತನ ದೊಡ್ಡಮ್ಮ/ಚಿಕ್ಕಮ್ಮನ ನಡುವಿನ ಸಂಬಂಧವನ್ನು ಜೋಡಿಸಲು ಸಾಧ್ಯವಾಗುತ್ತಿಲ್ಲ. ವಂಶಾವಳಿಯ ಮೂಲಕ ಪೌರತ್ವವನ್ನು ಸಾಬೀತುಪಡಿಸಲು ಆತ ಉಲ್ಲೇಖಿಸುತ್ತಿರುವ ವ್ಯಕ್ತಿಗಳ ಭಾರತೀಯ ಪೌರತ್ವವೇ ಸ್ಪಷ್ಟವಾಗಿಲ್ಲ. ಹೀಗಾಗಿ ವಂಶಾವಳಿಯ ಆಧಾರದ ಮೇಲೆಯೂ ಪೌರತ್ವ ಸಾಬೀತಾಗಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಚಾರಣೆ ವೇಳೆ, ಬಂಧಿತ ವ್ಯಕ್ತಿಯ ಪೋಷಕರ ಪೌರತ್ವ ಮತ್ತು ಸಂಬಂಧವನ್ನು ಸಾಬೀತುಪಡಿಸಲು ಅವರ ಅವಶೇಷಗಳ ಡಿಎನ್ಎ (DNA) ಪರೀಕ್ಷೆ ನೆರವಾಗಬಹುದು ಎಂದು ನ್ಯಾಯಾಲಯ ಹೇಳಿತ್ತು. ಆದರೆ ಅರ್ಜಿದಾರರಾಗಲಿ ಅಥವಾ ಬಂಧಿತ ವ್ಯಕ್ತಿಯಾಗಲಿ ಹೆತ್ತವರ ಸಮಾಧಿಗಳನ್ನು ಗುರುತಿಸಲು ನಿರಾಕರಿಸಿದರು. ಈ ನಿರಾಕರಣೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಬಂಧಿತ ವ್ಯಕ್ತಿ ಮತ್ತು ಅರ್ಜಿದಾರರು ಪೋಷಕರ ಸಮಾಧಿ ಇರುವ ಸ್ಥಳಗಳನ್ನು ತೋರಿಸಲು ನಿರಾಕರಿಸಿದ್ದರಿಂದ, ಅವರ ಪೋಷಕರು ಭಾರತೀಯ ಪ್ರಜೆಗಳಾಗಿದ್ದರು ಎಂಬುದರ ವಿರುದ್ಧವಾಗಿಯೇ ನಾವು ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಖಾರವಾಗಿ ಹೇಳಿದೆ.



BJP membership is main document for citizenship