ರಾಜ್ಯದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಹೆಸರೇ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ.
ವರ್ಷಗಳಿಂದ ಮತದಾನ ಮಾಡುತ್ತಾ ಬಂದಿರುವ ಪ್ರಮುಖ ವ್ಯಕ್ತಿಯೊಬ್ಬರ ಹೆಸರೇ ಪಟ್ಟಿಯಿಂದ ನಾಪತ್ತೆ ಆಗಿರುವುದು SIR ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಲೋಪದೋಷಗಳು ಎಷ್ಟರ ಮಟ್ಟಿಗೆ ಗಂಭೀರವಾಗಿವೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದ ಯಡವಟ್ಟು ಹಾಗೂ ಅರ್ಹ ಮತದಾರರಿಗೆ ಆಗುತ್ತಿರುವ ಕಿರುಕುಳವನ್ನು ಪ್ರಶ್ನಿಸಿ ನಾಳೆ (ಆಗಸ್ಟ್ 14, ಶುಕ್ರವಾರ) ಸಂಜೆ 4 ಗಂಟೆಗೆ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಟ ಪ್ರಕಾಶ್ ರಾಜ್ ಹಾಗೂ ನಾಗರಿಕ ಸಂಘಟನೆಗಳು ಜಂಟಿ ಪತ್ರಿಕಾಗೋಷ್ಠಿ ಕರೆದಿವೆ.
ಈಗಾಗಲೇ ವೋಟರ್ ಐಡಿ ಹೊಂದಿದ್ದು, ಪ್ರತಿ ಚುನಾವಣೆಯಲ್ಲೂ ಹಕ್ಕು ಚಲಾಯಿಸುತ್ತಿರುವ ಅರ್ಹ ನಾಗರಿಕರ ಹೆಸರುಗಳನ್ನು ‘ಸ್ಥಳಾಂತರಗೊಂಡವರು’ ಅಥವಾ ‘ಪತ್ತೆಯಾಗದವರು’ ಎಂಬ ನೆಪವೊಡ್ಡಿ ‘ASDDO’ ಪಟ್ಟಿಗೆ ತಳ್ಳಲಾಗುತ್ತಿದೆ. “ಈಗಾಗಲೇ ಮತದಾರರಾಗಿರುವವರು ಮತ್ತೆ ಹೊಸದಾಗಿ ‘ಫಾರಂ-6’ (Form 6) ಅನ್ನು ಯಾಕೆ ಭರ್ತಿ ಮಾಡಬೇಕು?” ಎನ್ನುವುದು ನಾಳಿನ ಸುದ್ದಿಗೋಷ್ಠಿಯ ಪ್ರಮುಖ ಪ್ರಶ್ನೆಯಾಗಿದೆ.
ಪ್ರಕಾಶ್ ರಾಜ್ ವಿಡಿಯೋ ವೈರಲ್:
ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್, ಚುನಾವಣಾ ಆಯೋಗದ ದ್ವಂದ್ವ ನಿಲುವನ್ನು ಕಟುವಾಗಿ ವಿಮರ್ಶಿಸಿದ್ದಾರೆ.
ನನ್ನ ವೋಟರ್ ಐಡಿ ಪರ್ಮನಂಟ್ಲಿ ಶಿಫ್ಟೆಡ್ ಆಗಿದೆ, ಹೊಸದಾಗಿ ‘ಫಾರಂ-6’ (Form 6) ತುಂಬಿ ಎಂದು ಆಯೋಗದ ವೆಬ್ಸೈಟ್ನಲ್ಲೇ ತೋರಿಸಲಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರಿಗೆ ತಲುಪುತ್ತಿದ್ದಂತೆಯೇ, ಆಯೋಗದ ಅಧಿಕಾರಿಗಳು ನನಗ ಕರೆ ಮಾಡಿ ‘ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವಂತೆಯೂ ವಿನಂತಿಸಿದರು. ಇದರ ಕಾಲ್ ರೆಕಾರ್ಡ್ಸ್ ನನ್ನ ಬಳಿಯಿದೆ. ಆದರೆ, ಸಂಜೆ ಸುದ್ದಿಗೋಷ್ಠಿ ನಡೆಸಿದ ಅಧಿಕಾರಿಗಳು ‘ಅವರ ಹೆಸರು ಡಿಲೀಟ್ ಆಗಿಲ್ಲ, ಕೇವಲ ಸ್ಥಳಾಂತರಗೊಂಡಿದೆ, ಮಹಜರು ಮಾಡಿದ್ದೇವೆ’ ಎಂದು ಸುಳ್ಳು ಹೇಳಿದ್ದಾರೆ.”
ರಾತ್ರಿ 8:30ರ ವೇಳೆಗೆ ಹಳೆಯ ವಿಳಾಸದ ಮನೆ ಮುಂದೆ ಕ್ಯಾಮೆರಾ ಹಿಡಿದು, ನೆರೆಹೊರೆಯವರನ್ನು ಕರೆದು ಬಿಎಲ್ಒ ಮೂಲಕ ಮಹಜರು ನಾಟಕ ಮಾಡಿಸಲಾಯಿತು. ಮಾಧ್ಯಮಗಳು ಹಾಗೂ ಬಿಜೆಪಿ ಹ್ಯಾಂಡಲ್ಗಳು ಪ್ರಕಾಶ್ ರಾಜ್ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಚಾರ ಮಾಡಲು ಈ ಡ್ರಾಮಾ ಸೃಷ್ಟಿಸಲಾಯಿತೇ? ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನೊಬ್ಬ ನಟನಾಗಿ ಪ್ರಸಿದ್ಧನಿರಬಹುದು, ಆದರೆ ಪ್ರಜೆಯಾಗಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕಿದೆ. 5 ವರ್ಷಗಳಿಗೊಮ್ಮೆ ಬಂದು ವೋಟಿಗಾಗಿ ಭಿಕ್ಷೆ ಬೇಡುವ ರಾಜಕಾರಣಿಗಳು, ಈಗ ತಮ್ಮ ಹಕ್ಕನ್ನು ಉಳಿಸಿಕೊಳ್ಳಲು ಅರ್ಹ ನಾಗರಿಕರನ್ನೇ ಕ್ಯೂನಲ್ಲಿ ನಿಂತು ಭಿಕ್ಷೆ ಬೇಡುವಂತೆ ಮಾಡುತ್ತಿದ್ದಾರೆ. ಇದು ಯಾವ ರೀತಿಯ ರಾಜಕೀಯ? ಇದರ ಹಿಂದಿರುವ ಅಜೆಂಡಾ ಏನು? ಎಂದು ಅವರು ಆಯೋಗ ಹಾಗೂ ರಾಜಕೀಯ ಪಕ್ಷಗಳನ್ನು ಪ್ರಶ್ನಿಸಿದ್ದಾರೆ.


