Homeಸಾಮಾಜಿಕಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

ಮೀನು ಮಾರುವ ಹುಡುಗಿಯೂ ವಿಕೃತ ಟ್ರೋಲಿಗರೂ!!

- Advertisement -
- Advertisement -

ಸಾಮಾಜಿಕ ಜಾಲತಾಣವೆಂಬುದು ಸ್ಯಾಡಿಸ್ಟ್‍ಗಳ ಆಡಂಬೋಲದಂತೆ ಆಗಿಹೋಗಿದೆ! ಇದು ಮಾಹಿತಿ ತಂತ್ರಜ್ಞಾನದ ಘೋರ ದುರಂತವೇ ಸರಿ. ಪರರ ಪಡಿಪಾಟಲು, ಆಸಹಾಯಕತೆ, ನೋವು, ನಷ್ಟ ಅಪಹಾಸ್ಯ ಮಾಡಿ ಟ್ರೋಲಿಸುವ ವಿಕೃತ ಸಂತಾನವೇ ಭಾರತದಲ್ಲಿ ಬೆಳೆದುನಿಂತಿದೆ. ಮಹಾ ಮಾನವತಾವಾದಿ ಧೀಮಂತ ಪತ್ರಕರ್ತೆಯೂ ಆಗಿದ್ದ ಗೌರಿಲಂಕೇಶ್‍ರ ಹತ್ಯೆ ಸಂಭ್ರಮಿಸಿದ್ದ ಕುಹಾಕಿಗಳನ್ನು ಈ ದೇಶದ ಪ್ರಧಾನಿ ಮೋದಿ ಮಹಾತ್ಮನೇ ಜಾಲತಾಣದಲ್ಲಿ ಫಾಲೋ ಮಾಡುತ್ತಾರೆ! ಸಿದ್ದು ಸಿಎಂ ಆಗಿದ್ದಾಗ ಮಗನನ್ನು ಕಳಕೊಂಡ ನೋವಿನಲ್ಲಿದ್ದ ಸಂದರ್ಭವನ್ನು ಸಾಮಾಜಿಕ ಜಾಲತಾಣದಲ್ಲಿ ಕುಳಿತು ಖುಷಿಯಿಂದ ಅನುಭವಿಸಿದವರೂ ಇದ್ದಾರೆ. ಇಂಥ ಗಲೀಜು ಸಂಸ್ಕøತಿಯ ಟ್ರೋಲಿಗರ ಕುಚೋದ್ಯದಿಂದ ಈಚೆಗೆ ಕೇರಳದಲ್ಲಿ ತಲ್ಲಣವೇ ಆಗಿಹೋಗಿದೆ. ವಿನಾಕಾರಣ ಬಡ-ಮುಗ್ಧ ಹುಡುಗಿಯೊಬ್ಬಳು ಘಾಸಿಗೊಂಡಿದ್ದಾಳೆ!
ಆಕೆಯ ಹೆಸರು ಹನಾನ್ ಹಮೀದ್. ಕೇರಳದ ತ್ರಿಶೂರ್‍ನ ಇಪ್ಪತ್ತೊಂದರ ಬಾಲಕಿ. ಬದುಕು ಕಟ್ಟಿಕೊಳ್ಳಲು ಹಗಲಿರುಳೂ ಕಷ್ಟಪಟ್ಟು ದುಡಿಯುತ್ತಲೇ ಕಾಲೇಜಿಗೂ ಹೋಗುತ್ತಿದ್ದಾಳೆ; ಕಾಲೇಜು ಮುಗಿಸಿ ಮೀನು ಮಾರುಕಟ್ಟೆಯಲ್ಲಿ ಕುಳಿತು ಮೀನೂ ಮಾರುತ್ತಾಳೆ. ಆಕೆ ಅವಸರದಲ್ಲೊಮ್ಮೆ ಕಾಲೇಜಿನ ಯೂನಿಫಾರ್ಮ್ ತೊಟ್ಟುಕೊಂಡೇ ಮೀನು ಮಾರಾಟಕ್ಕೆ ಕುಳಿತಿದ್ದಳು. ಇದು ಅದ್ಯಾವುದೋ ಕೀಳು ಅಭಿರುಚಿಯ ಟ್ರೋಲಿಗನ ಕಣ್ಣಿಗೆ ಬಿದ್ದಿದೆ. ಆ ಎವಡಾಸ ಅದ್ಭುತ ಸಂಶೋಧನೆ ಮಾಡಿದವನಂತೆ ಯೂನಿಫಾರ್ಮ್‍ನಲ್ಲಿ ಮೀನು ಮಾರುತ್ತಿದ್ದ ಪಾಪದ ಹುಡುಗಿಯ ಫೋಟೋ, ವೀಡಿಯೋ ಜಾಲತಾಣಕ್ಕೆ ಏರಿಸಿ ಬೀಗಿದ್ದಾನೆ.
ಆತನಂಥದೇ ಗುಣ-ಧರ್ಮದ ಜಾಲತಾಣಿಗರು ಆ ವೀಡಿಯೋ ಅಪಹಾಸ್ಯದಿಂದ ವೈರಲ್ ಮಾಡಿ ತೀಟೆ ತೀರಿಸಿಕೊಂಡಿದ್ದಾರೆ. ಆಕೆ ಮರ್ಯಾದೆಯಿಂದ ಜೀವನೋಪಾಯಕ್ಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ಕೇಕೆ ಹಾಕಿದ್ದಾರೆ. “…… ಕಾಲೇಜು ಓದೋದು ಬಿಟ್ಟು ಇದೆಂಥ ಕೆಲ್ಸಾ…….?!” ಎಂದು ಗೇಲಿ ಮಾಡಿದ್ದಾರೆ. ಅಸಹಾಯಕ ಹುಡುಗಿಯೊಬ್ಬಳ ಕಾರ್ಪಣ್ಯದ ಜೀವನಕ್ರಮವನ್ನು ಅಣಕಿಸುತ್ತ ಟ್ರೋಲ್‍ಮಾಡಿ ಮಜಾ ತೆಗೆದುಕೊಳ್ಳುವ ಸಂಗತಿಯಾ? ಮನುಷ್ಯರೂಪದ ಮೃಗಗಳಿಗಿದು ನಾಲ್ಕಾರು ದಿನ ಟೈಮ್‍ಪಾಸ್ ಹಾಸ್ಯವಾಗಿರಬಹುದು. ಆದರೆ ಈ ಅಪಮಾನ-ಅಪನಿಂದನೆಯಿಂದ ಸುದ್ದಿಯಾದ ಪಾಪದ ಹುಡುಗಿಯ ಹಿಂದೊಂದು ಕರುಣಾಜನಕ ಕತೆಯೇ ಇದೆ! ವಯಸ್ಸಿಗೆ ಮೀರಿದ ಸಾಂಸಾರಿಕ ಹೊಣೆ ನಿಭಾಯಿಸುತ್ತ ಊಟ-ನಿದ್ದೆ ಬಿಟ್ಟು ರಾತ್ರಿಹಗಲೆನ್ನದೆ ಬದುಕಲು ಆಕೆ ಸೆಣಸಾಡುತ್ತಿದ್ದಾಳೆ.
ಹನಾನ್ ತ್ರಿಶೂರ್‍ನ ಶ್ರೀಮಂತ ಕುಟುಂಬದ ಕೂಸು. ತಂದೆ ಹಮೀದ್, ತಾಯಿ ಜುಹ್ರಾಬಿ. ಒಬ್ಬ ತಮ್ಮನಿದ್ದಾನೆ. ಚಿಕ್ಕವಳಿದ್ದಾಗ ಆಕೆ ಖುಷಿಖುಷಿಯಾಗೇ ಇದ್ದಳು. ಆಕೆ ಪ್ರೈಮರಿಗೆ ಹೋಗುವಾಗ ಅಪ್ಪ ಇದ್ದಕ್ಕಿದ್ದಂತೆ ವಿಪರೀತ ಹೆಂಡ ಕುಡಿಯಲು ಶುರು ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲ, ದಿನವೂ ಕುಡಿದುಬಂದು ಅಮ್ಮನಿಗೆ ಬಡಿಯುತ್ತಿದ್ದ. ಮನೆಯೆಂಬುದು ರೌರವ ನರಕದಂತಾಗಿಹೋಯಿತು. ಹನಾನ್ ಹೈಸ್ಕೂಲಿಗೆ ಹೋಗುವ ಹೊತ್ತಿಗೆ ಆಕೆಯ ತಂದೆ-ತಾಯಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ತಂದೆಯೊಂದಿಗಿದ್ದರೆ, ಹನಾನ್ ತಾಯಿ ಜತೆ ಉಳಿದಳು. ತನ್ನ ಮತ್ತು ತಾಯಿಯ ತುತ್ತಿನ ಚೀಲ ತುಂಬಿಸುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು.
ಆ ನತದೃಷ್ಟ ಹುಡುಗಿ ಧೃತಿಗೆಡಲಿಲ್ಲ ದುಡಿಮೆಯ ದಾರಿ ಹುಡುಕಿದಳು ತಾನು ಶಾಲೆಗೆ ಹೋಗುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಶನ್ ಕೊಡಲಾರಂಭಿಸಿದಳು; ಕರಕುಶಲ ವಸ್ತು, ಕಿವಿಯೋಲೆ ತಯಾರಿಸಿ ಬಂದ ಹಣದಲ್ಲಿ ಜೀವನ ಸಾಗಿಸಹತ್ತಿದಳು. ಕೆಲದಿನದ ಬಳಿಕ ಖಾಸಗಿ ಕಂಪನಿಯೊಂದಕ್ಕೆ ಕಾರ್ಮಿಕಳಾಗಿ ಸೇರಿಕೊಂಡಳು. ಹನಾನ್ ಕಷ್ಟಕ್ಕೆ ಹೆದರಲಿಲ್ಲ. ನೈಟ್‍ಶಿಫ್ಟ್, ಮಾರ್ನಿಂಗ್‍ಶಿಫ್ಟ್ ಅಂತಾ ಹಠದಿಂದ ದುಡಿದಳು. ಆಕೆ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಯಂತ್ರಗಳ ವಿಪರೀತ ಶಬ್ದ ಇರುತ್ತಿತ್ತು. ಹೀಗಾಗಿ ಹನಾನ್‍ಗೆ ಶ್ರವಣದೋಷ ಬಾಧಿಸಹತ್ತಿತು. ಹಾಗಾಗಿ ಆ ಕೆಲಸ ಆಕೆ ಅನಿವಾರ್ಯವಾಗಿ ಬಿಡಬೇಕಾಗಿಬಂತು. ಬಿಎಸ್ಸಿ ಓದುತ್ತಿದ್ದ ಹನಾನ್‍ಗೆ ಹೇಗಾದರೂ ಮಾಡಿ ಡಾಕ್ಟರ್ ಆಗಬೇಕೆಂಬ ಹಠ. ಕಂಪನಿ ಕೆಲಸ ಅರಸುತ್ತಲೇ ಇದ್ದಳು.
ಕೆಲವು ದಿನಗಳ ನಂತರ ಬೇರೆ ಕಂಪನಿಯಲ್ಲಿ ಉದ್ಯೋಗ ಸಿಕ್ಕಿತು. ಇದು ತಾಯಿ-ಮಗಳ ಬದುಕು ಸಾಗಿಸಲು ಸಾಕಾಗುತ್ತಿರಲಿಲ್ಲ. ಮೀನು ಮಾರಾಟ ಮಾಡಿದರೆ ಒಂದಿಷ್ಟು ಹೆಚ್ಚುವರಿ ಕಾಸು ಸಂಪಾದಿಸಬಹುದೆಂದು ಆಕೆಗೆ ಹೊಳೆಯಿತು. ಕಾಲೇಜು ಕ್ಲಾಸ್ ಮುಗಿಯುತ್ತಿದ್ದಂತೆಯೇ ಮೀನು ಮಾರ್ಕೆಟ್ಟಿಗೆ ಹೋಗಿ ಮೀನು ಮಾರಾಟ ಮಾಡಲು ಆರಂಭಿಸಿದಳು. ಒಮ್ಮೊಮ್ಮೆ ಬೆಳಗಿನ ಜಾವ 3.30ಕ್ಕೆ ಮೀನು ಮಾರುಕಟ್ಟೆಗೆ ಹೋಗಿ ಮೀನು ಖರೀದಿಸಿ ಮಾರಾಟ ಮಾಡುತ್ತಿದ್ದಳು. ನಂತರ ಕಾಲೇಜಿನ ಸಮಯಕ್ಕೆ ಸರಿಯಾಗಿ ಅಲ್ಲಿರುತ್ತಿದ್ದಳು. ಇಂಥದೇ ಒಂದು ದಿನ ಆಕೆ ಮೀನು ಮಾರಲು ಹೋಗಿದ್ದಳು. ಗಡಿಬಿಡಿಯಲ್ಲಿ ಯೂನಿಫಾರ್ಮ್ ತೆಗೆಯಲು ಆಕೆಗೆ ಸಾಧ್ಯವಾಗಿರಲಿಲ್ಲ.
ಆಕೆಯ ಚಿತ್ರ ತೆಗೆದ ಅಧಮ ಮಾನÀವನೊಬ್ಬ ಸಾಮಾಜಿಕ ಮಾಧ್ಯಮಕ್ಕೆ ಟ್ರೋಲ್ ಮಾಡುತ್ತಿದ್ದಂತೆಯೇ ಕೇರಳದಲ್ಲಿ ಅಲ್ಲೋಲಕಲ್ಲೋಲವೇ ಆಯ್ತು. ಈ ಚಿತ್ರ ಶೇರ್ ಮಾಡಿ ಕುಣಿದು ಕುಪ್ಪಳಿಸಿದವರಿಗೆ ಜನ ಉಗಿದರು. ಪರ-ವಿರುದ್ಧ ಅಂತರ್ಜಾಲ ಯುದ್ಧ ನಡೆಯಿತು. ಒಪ್ಪತ್ತು ಗಂಜಿಗಾಗಿ ಹೆಣಗಾಡುತ್ತಿದ್ದ ಹನಾನ್ ದೌರ್ಭಾಗ್ಯವನ್ನು ಜೋಕ್ ಮಾಡಿ ನಕ್ಕ ಟ್ರೋಲಿಗರನ್ನು ಕೇರಳದ ಪಿಣರಾಯಿವಿಜಯನ್ ಸರ್ಕಾರ ಛೀಮಾರಿ ಹಾಕಿತು. ಇಷ್ಟಾದರೂ ನೈತಿಕ ಸ್ಥೈರ್ಯದ ಹನಾನ್ ಅಂಜಲಿಲ್ಲ, ಅಳುಕಲಿಲ್ಲ ತನ್ನ ಪಾಡಿಗೆ ತಾನು ಕಾಲೇಜು, ಮೀನು ಮಾರಾಟ, ಕಂಪನಿ ಚಾಕರಿ, ತಾಯಿಯ ದೇಖರೇಖೆಯ ಜೀವನ ಸಂಗ್ರಾಮದಲ್ಲಿ ತೊಡಗಿಕೊಂಡಿದ್ದಳು. ಇದು ಧೂರ್ತರಿಗೆ ನೋಡಲಾಗಲಿಲ್ಲ ಇದು ಹನಾನ್‍ನ ಪ್ರಚಾರದ ತಂತ್ರಗಾರಿ ಎಂದು ಆಲಾಪಿಸಿದರು.
ಇದು ಕೇರಳದಲ್ಲಿ ದೊಡ್ಡ ಸುದ್ದಿ ಸದ್ದು ಮಾಡಿತು. ಸೆಲಿಬ್ರಿಟಿಗಳು ಹನಾನ್ ಪರ ನಿಂತರು. ಸಾಮಾಜಿಕ ಕಾರ್ಯಕರ್ತರು ಸಹಾಯಕ್ಕೆ ಬಂದರು. ಆಕೆಗೆ ಚಲನಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಅರಸಿ ಬಂದಿದೆ. ಮೊನ್ನೆ ಹನಾನ್ ತಿರುವನಂತಪುರಂನ ಓಣಮ್, ಬಕ್ರೀದ್ ಖಾದಿ ಎಕ್ಸ್‍ಪೋನಲ್ಲಿ ‘ನಡಿಗೆ’ ಹಾಕಿದ್ದಾಳೆ. ತನ್ಮೂಲಕ ಕುಹಕದ ಕೊಳಕು ಟ್ರೋಲಿಗರಿಗೆ ಕೇರ್ ಮಾಡುವ ಪೈಕಿ ತಾನಲ್ಲವೆಂದು ತೋರಿಸಿಕೊಂಡಿದ್ದಾಳೆ. ಈ ಇಡೀ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಕುಳಿತು ಅಮಾಯಕರ ಬದುಕಲ್ಲಿ ಆಟ ಆಡೋರಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆಯ ಎಚ್ಚರಿಕೆ ಕೊಟ್ಟಿದೆ!

-ವರದಿಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...