Homeಅಂಕಣಗಳುದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

ದುಸ್ಥಿತಿಯಲ್ಲಿ ಬದುಕುತ್ತಿರುವ ಗುಬ್ಬಿ ವೀರಣ್ಣನ ಸೊಸೆ ರಂಗ ಕಲಾವಿದೆ ಶಾಂತಮ್ಮ

- Advertisement -
- Advertisement -
ಎಲೆಮರೆ-22

ರಾಮನಗರದ ಜಾನಪದ ಲೋಕ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಹೋಗಿದ್ದೆ. ಭಾಷಣ ಮುಗಿಸಿಕೊಂಡು ಊರಿಗೆ ಮರಳುವಾಗ, ರಾಮನಗರದ ಪ್ರಜಾವಾಣಿ ಪತ್ರಕರ್ತ ರುದ್ರೇಶ್ ನಿಮಗೆ ಒಬ್ಬರನ್ನು ಪರಿಚಯಿಸುತ್ತೇನೆ ಬನ್ನಿ ಎಂದರು. ಯಾರು ಏನು ಎಂದು ಕೇಳದೆ ಸರಿ ಆಗಲಿ ಎಂದು ಆತನ ಬೈಕ್ ಏರಿ ಹೊರಟೆ. ಸಂದಿಗೊಂದಿ ಸುತ್ತಿಕೊಂಡು ಒಂದು ಪುಟ್ಟ ಮನೆಗೆ ಕರೆತಂದರು. ಇಳಿವಯಸ್ಸಿನ ಅಜ್ಜಿಯೊಬ್ಬರು ಬಂದು ಗೇಟ್ ತೆಗೆದು ಒಳ ಕರೆದರು. ಅದೊಂದು ಪುಟ್ಟ ಮನೆ. `ಬಾ ಮಗನೆ ಕೂತುಕೋ..’ ಎಂದು ಕುಡಿಯಲು ನೀರು ಕೊಟ್ಟರು. ಆಗ ರುದ್ರೇಶ ಇವರು ಶಾಂತಮ್ಮ ಅಂತ. ಗುಬ್ಬಿ ವೀರಣ್ಣನ ಮಗ ನಟ ಜಿ.ವಿ.ಚನ್ನಬಸಪ್ಪ ಅವರ ಮಡದಿ, ಇಂದು ಯಾರ ಆಸರೆಯೂ ಇಲ್ಲದಂತೆ ಬದುಕುತ್ತಿದ್ದಾರೆ ಎಂದು ಹೇಳಿದರು. ಶಾಂತಮ್ಮ ತಮ್ಮ ವೃತ್ತಿಜೀವನದ ಫೋಟೋಗಳ ಆಲ್ಬಮ್ ಮುಂದಿಟ್ಟರು. ನಾನು ಈ ಫೋಟೋಗಳನ್ನು ನೋಡುತ್ತಾಹೋದಂತೆ ಅಲ್ಲಲ್ಲಿ ತಡೆದು ಶಾಂತಮ್ಮ ಒಂದೊಂದು ಫೋಟೋದ ಸಂದರ್ಭವನ್ನು ವಿವರಿಸತೊಡಗಿದರು. ಮುಖದಲ್ಲಿ ಒಮ್ಮೊಮ್ಮೆ ಮಿಂಚು, ಮತ್ತೊಮ್ಮೆ ಕಡುದುಃಖ. ಹಳೆಯ ನೆನಪುಗಳು ಉತ್ಸಾಹ ಹೆಚ್ಚಿಸಿ ಒಮ್ಮೆ ಜೋರು ಮಾತಾಡಿದರೆ, ಮತ್ತೊಮ್ಮೆ ಪಿಸುದನಿಯಲ್ಲಿ ಅದನ್ನೆಲ್ಲಾ ಹೇಳಬಾರದು ಮರಿ ಎಂದು ಕಣ್ಣಲ್ಲಿ ನೀರು ತರುತ್ತಿದ್ದರು. ಒಂದು ಗಂಟೆಯ ಮಾತುಕತೆ ನನ್ನನ್ನು ಎಪ್ಪತ್ತು ಎಂಬತ್ತರ ದಶಕದ ರಂಗಭೂಮಿಯ ವಾತಾವರಣವನ್ನು ಕಣ್ಮುಂದೆ ಸೃಷ್ಟಿಸಿತು. ಸಾವಿರಾರು ನಾಟಕಗಳಲ್ಲಿ ಅಭಿನಯಿಸಿ ದುಸ್ಥಿತಿಯಲ್ಲಿ ಬದುಕುತ್ತಿರುವ ಶಾಂತಮ್ಮನ ಬಗೆಗೆ ದುಃಖವೂ ಆಯಿತು.

ಒಮ್ಮೆ ಪ್ರಜಾಮತ ಎನ್ನುವ ಪತ್ರಿಕೆಯಲ್ಲಿ ವಾದಿರಾಜ, ಜಯಂತಿ, ರಾಧಾ-ರುಕ್ಮಿಣಿ (ನಟಿ ಶೃತಿ ಅವರ ತಾಯಿ) ಯವರ ಫೋಟೋ ಪ್ರಕಟವಾಗಿರುತ್ತದೆ. ಪುಟ್ಟ ಹುಡುಗಿ ಪೇಪರ್ ನೋಡುತ್ತಾ ಈ ನಟನಟಿಯರ ಚಿತ್ರ ನೋಡುತ್ತಾಳೆ. ನಾನು ಇವರ ಹಾಗೆ ನಟಿಯಾಗಬೇಕೆಂದು ಕನಸು ಕಾಣುತ್ತಾಳೆ. ಈ ಕನಸಿನ ದಾರಿ ಹಿಡಿದು 1964 ರಲ್ಲಿ 13ನೇ ವಯಸ್ಸಿನಲ್ಲಿ ಲವ-ಕುಶ ನಾಟಕದಲ್ಲಿ ಬಾಲನಟಿಯಾಗಿ ಆ ಹುಡುಗಿ ನಟಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಈ ಹುಡುಗಿಯೇ ಮುಂದೆ ಗುಬ್ಬಿ ವೀರಣ್ಣ ನಾಟಕ ಕಂಪನಿ ಸೇರಿ 40 ವರ್ಷಗಳ ಕಾಲ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಾಳೆ. ಆ ಪುಟ್ಟ ಹುಡುಗಿಯೇ ಇಂದು ರಾಮನಗರದಲ್ಲಿ ಒಂಟಿಜೀವನ ನಡೆಸುತ್ತಿರುವ ರಂಗನಟಿ ಶಾಂತಮ್ಮ.

ರಾಮನಗರದ ಬಳಿ ಇರುವ ಪುಟ್ಟ ಊರು ಅರ್ಚಕರಳ್ಳಿಯಲ್ಲಿ ನಿಂಗಯ್ಯ ಮತ್ತು ಪುಟ್ಟಮ್ಮನ ಮಗಳಾಗಿ ಶಾಂತಮ್ಮ 1951 ರಲ್ಲಿ ಜನಿಸಿದರು. `ಮೊದಲ ನಾಟಕ ಲವ-ಕುಶದಲ್ಲಿ ಬಾಲ ನೃತ್ಯಕಲಾವಿದೆಯಾಗಿ ಅಭಿನಯಿಸಿದಾಗ ಮೊದಲು ನನಗೆ ಬಣ್ಣ ಹಚ್ಚಿದ್ದು ರಾಧಮ್ಮ. ನನ್ನ ಮೊದಲ ಸಂಬಳ ಹದಿನೈದು ರೂಪಾಯಿ. ಅಂದು ಆರಂಭವಾದ ಕಲಾ ಬದುಕು ಸುದೀರ್ಘ ನಲವತ್ತೆರಡು ವರ್ಷ ನಾಟಕ ಕಂಪನಿ ಬಿಟ್ಟರೆ ಬೇರೆ ಲೋಕವೆ ಗೊತ್ತಿರಲಿಲ್ಲ’ ಎನ್ನುತ್ತಾರೆ. ಮೈಸೂರು ಮಹಾರಾಜರ ಸಮ್ಮುಖದಲ್ಲಿ `ಸಾಹುಕಾರ’ ನಾಟಕದಲ್ಲಿ ಬಾಲಕಲಾವಿದೆಯಾಗಿ ನರ್ತನ ಮಾಡಿದ್ದು ಹಾಗೂ ವರನಟ ಡಾ. ರಾಜಕುಮಾರ್ ಅವರಿಂದ ನೆನಪಿನ ಕಾಣಿಕೆ ಸ್ವೀಕರಿಸಿದ್ದು ನನ್ನ ಜೀವನದ ಮರೆಯಲಾರದ ಕ್ಷಣಗಳು’ ಎನ್ನುತ್ತಾರೆ.

ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ನಾಟಕದಲ್ಲಿ ಪಾರ್ವತಿಯಾಗಿ, ಸಂಸಾರನೌಕೆಯಲ್ಲಿ ಗಿರಿಜೆಯಾಗಿ, ಆರ್. ನಾಗರತ್ನಮ್ಮ ಅವರ ಶ್ರೀಕೃಷ್ಣ ಗಾರುಡಿಯಲ್ಲಿ ಸಹದೇವನ ಪಾತ್ರ, ಮುದುಕನ ಮದುವೆಯಲ್ಲಿ ಕಾವೇರಿ, ಕಲ್ಯಾಣಿ, ಗೋಮುಖ ವ್ಯಾಘ್ರದಲ್ಲಿ ತುಳಸಿ, ಚನ್ನಪ್ಪ ಚನ್ನೇಗೌಡ ಪಾತ್ರದಲ್ಲಿ ಪಾರ್ವತಿ, ಶ್ರೀಕೃಷ್ಣ ಲೀಲೆಯ ಲಲಿತ, ಸುಂದರಿ, ಶರಣ ಬಸವೇಶ್ವರ ನಾಟಕದ ಗಂಗಾಂಬಿಕೆ, ಸಾಹುಕಾರ ನಾಟಕದ ಇಂದುಮತಿ, ಅಣ್ಣ ತಮ್ಮ ನಾಟಕದಲ್ಲಿ ಹಾಸ್ಯ ಕಲಾವಿದೆಯಾಗಿ ಲಕ್ಷ್ಮಿ, ಶೋಭಾ ಪಾತ್ರ, ಲವ-ಕುಶ ನಾಟಕದಲ್ಲಿ ಸೀತೆಯಾಗಿ, ಹೀಗೆ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ ಎಲ್ಲಾ ಬಗೆಯ ನಾಟಕಗಳಲ್ಲಿ ಎಲ್ಲಾ ಬಗೆಯ ಪಾತ್ರಗಳಿಗೆ ಶಾಂತಮ್ಮ ಜೀವ ತುಂಬಿ ನಟಿಸಿದರು.

`ರಾಜ್ಯದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದೇನೆ. ಒಮ್ಮೊಮ್ಮೆ ದಿನಕ್ಕೆ ಮೂರು ಬಾರಿ ಪ್ರದರ್ಶನ ನೀಡಿರುವೆ. ಗುಬ್ಬಿ ವೀರಣ್ಣ ಅವರ ಹಿರಿಯ ಪುತ್ರಿ ಜಿ.ವಿ. ಸುವರ್ಣಮ್ಮ ಅವರೊಂದಿಗೆ `ಪಾದುಕ ಪಟ್ಟಾಭಿಷೇಕ’ದಲ್ಲಿ ಅವರು ಮಂಥರೆಯಾಗಿ ನಾನು ಸೀತೆ, ಕೈಕೆಯಾಗಿ ನಟಿಸಿದ್ದೆ. ಯೋಗಾನರಸಿಂಹಮೂರ್ತಿ ಅವರ ಕಂಪನಿಯಲ್ಲಿ `ಬೀದಿ ಕಾಮಣ್ಣ’ ನಾಟಕದಲ್ಲಿ ಎಂ.ಎಸ್.ಸತ್ಯ ಅವರ ಜೋಡಿಯಾಗಿ, ಸದಾರಮೆ ನಾಟಕದಲ್ಲಿ ನರಸಿಂಹರಾಜು, ಶಾಂತಕುಮಾರ ರಾಯರು, ಜಿ.ವಿ.ಚನ್ನಬಸಪ್ಪ, ಜಿ.ವಿ.ರಾಜಣ್ಣ (ಗುಬ್ಬಿ ವೀರಣ್ಣ ಅವರ ಪುತ್ರರು), ನಟ ರಾಮಕೃಷ್ಣ, ಚೋಮನದುಡಿ ವಾಸುದೇವ, ಧೀರೇಂದ್ರ ಗೋಪಾಲ್, ಸುಂದರ ಕೃಷ್ಣ ಅರಸ್, ಸುಧೀರ್, ರಾಜಾನಂದ್, ಗಾಜಿನ ಮನೆ ನಾಟಕದಲ್ಲಿ ಚಿಂದೋಡಿ ಲೀಲಾ, ಉಮಾಶ್ರೀ, ರಾಧಾ-ರುಕ್ಮಿಣಿ, ಶ್ರೀಲಲಿತಾ ಸೇರಿದಂತೆ ಹಲವರೊಂದಿಗೆ ಅಭಿನಯಿಸಿದ್ದೇನೆ’ ಎಂದು ಶಾಂತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಸಾಮಾಜಿಕ ನಾಟಕಗಳಾದ `ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ರತ್ನನ ಪಾತ್ರ, `ಚನ್ನಪ್ಪ ಚನ್ನಗೌಡ’ ನಾಟಕದಲ್ಲಿ ಪಾರ್ವತಿ ಪಾತ್ರದಲ್ಲಿ ಶಾಂತಮ್ಮ ತುಂಬಾ ಜನಪ್ರಿಯರಾಗಿದ್ದರು. `ಮೂರು ಬಾರಿ ಅಣ್ಣಾವ್ರನ್ನ ನೋಡಿ ಮಾತಾಡಿಸಿದ್ದೆ. ಫಾರಿನ್‍ಗೆ ಹೋಗಬೇಕಾದ್ರೆ ದಾವಣಗೆರೆ ಕ್ಯಾಂಪಿಗೆ ಬಂದಿದ್ರು, ದೇವತಾ ಮನುಷ್ಯ ಶೂಟಿಂಗ್‍ನಲ್ಲಿ ಹೇಳಿಕಳಿಸಿದ್ರು ಆಗ ನಮ್ಮ ಯಜಮಾನರು ಮತ್ತು ನಾನು ತುಂಬಾ ಹೊತ್ತು ಮಾತಾಡಿದ್ವಿ’ ಎಂದು ಡಾ. ರಾಜಕುಮಾರ್ ಅವರ ಭೇಟಿಯ ನೆನಪುಗಳನ್ನು ಹೇಳುತ್ತಾರೆ. ಯಾವುದೇ ನಾಟಕದಲ್ಲಿ ಇಂತ ಪಾತ್ರ ಮಾಡೋರಿಲ್ಲ ಅಂದ್ರೆ ಸಾಕು ಯಾವುದೇ ಪಾತ್ರವಿರಲಿ ಅದನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡಿದಿನಿ, ಅಷ್ಟರಮಟ್ಟಿಗೆ ರಂಗಭೂಮಿಯಲ್ಲಿ ನಾನು ಪಳಗಿದ್ದೆ, ಈಗಲೂ ಕೃಷ್ಣ ಲೀಲೆ ನಾಟಕದ ರಾಧೆ ಪಾತ್ರದ ಲಂಗವನ್ನು, ಮಂತ್ರಿಣಿ ಪಾತ್ರದ ಡ್ರೆಸ್ಸುಗಳನ್ನು, ಆಗಿನ ವಿಗ್ಗುಗಳನ್ನು ನೆನಪಿಗಾಗಿ ಕಾಪಾಡಿರುವೆ’ ಎನ್ನುತ್ತಾರೆ.

ನಾಟಕಗಳ ಅಭಿನಯದಲ್ಲಿ ಪರಸ್ಪರರು ಆಕರ್ಷಣೆಯಾಗಿ 1971 ರಲ್ಲಿ ಗುಬ್ಬಿ ವೀರಣ್ಣನ ಮಗ ಜಿ.ವಿ.ಚನ್ನಬಸಪ್ಪ ಅವರನ್ನು ಮದುವೆಯಾದರು. ಇದು ಎರಡನೆ ಮದುವೆಯಾದ ಕಾರಣ ಶಾಂತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಆಗಲಿಲ್ಲ. ಎಲ್ಲರೂ ನನಗೆ ಮೋಸ ಮಾಡಿದರು ಎಂದು ಶಾಂತಮ್ಮ ದುಃಖಿಸುತ್ತಾರೆ. ಈಗಲೂ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎನ್ನುವ ಸ್ವಾಭಿಮಾನಿ ಶಾಂತಮ್ಮ ನಿಜಕ್ಕೂ ಕಡುಕಷ್ಟದಲ್ಲಿ ಬದುಕುತ್ತಿದ್ದಾರೆ. ಪ್ರಜಾವಾಣಿ ಪತ್ರಕರ್ತ ರುದ್ರೇಶ್ ಶಾಂತಮ್ಮಗೆ ಒಂದಷ್ಟು ಆಸರೆಯಾಗಿದ್ದಾರೆ. ತಾಂತ್ರಿಕ ಕಾರಣದಿಂದ ಕಳೆದ ಮೂರು ತಿಂಗಳಿಂದ ಕಲಾವಿದರ ಮಾಸಾಶನವೂ ಬರುತ್ತಿಲ್ಲ. ಈ ವಿಷಯವನ್ನು ಕವಿ ನಾಗೇಂದ್ರ ಪ್ರಸಾದ್ ಅವರ ಗಮನಕ್ಕೆ ತಂದಾಗ ಶಿವಾರ್ಜುನ ಸಿನೆಮಾದ ನಿರ್ಮಾಪಕ ಶಿವಾರ್ಜುನ ಅವರಿಂದ ಒಂದಷ್ಟು ನೆರವು ಕೊಡಿಸಿದ್ದಾರೆ. ಇಂತಹ ರಂಗಕಲಾವಿದೆಗೆ ನೆರವಾಗುವ ಮನಸ್ಸಿದ್ದವರು ಖಂಡಿತಾ ಸಹಾಯ ಮಾಡಬಹುದು. ಎಲೆಮರೆಕಾಲಂನಲ್ಲಿ ಈ ತೆರನಾಗಿ ಸಹಾಯವನ್ನು ಯಾರಿಗೂ ಕೋರಿಲ್ಲ, ಆದರೆ ಶಾಂತಮ್ಮನ ದುಸ್ಥಿತಿಗೆ `ನ್ಯಾಯಪಥ’ವೂ ನೆರವಿಗೆ ಬರಬೇಕೆನ್ನುವ ಕಾರಣಕ್ಕೆ ಶಾಂತಮ್ಮನ ಬ್ಯಾಂಕ್ ವಿವರ ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಕೊಡುತ್ತಿದ್ದೇವೆ. ಈ ಇಳಿಗಾಲದಲ್ಲಿ ಮನಸ್ಸಿದ್ದವರು ಶಾಂತಮ್ಮನಿಗೆ ನೆರವಾಗಿ.

ಬ್ಯಾಂಕ್ ಖಾತೆ ವಿವರ:
Name: N.Shanthamma
A/C: 0593101026583
IFSC: CNRB0000593
Bank: CANARA BANK
Mobil: 9845643106

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....