Homeಚಳವಳಿ‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

- Advertisement -
- Advertisement -

ನನಗೆ ನಿರಂತರವಾಗಿ ಬರುತ್ತಿದ್ದ ಕೊಲೆ ಬೆದರಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಆದ ಚಿಂತಕರ ಹತ್ಯೆಗಳಿಂದಾಗಿ ನನ್ನ ಮೇಲೆಯೂ ಯಾರಾದರೂ ಗುಂಡು ಹಾರಿಸಲಿದ್ದಾರೆ ಎಂದು ನನಗೆ ಅನಿಸತೊಡಗಿತ್ತು. ಧಾಬೋಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್- ಹೀಗೆ ಹತ್ಯೆಗೀಡಾದ ಚಿಂತಕರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ ಎಂದು ಹೇಳಲು ನನಗೆ ಸಾಧ್ಯವೇ? ಇಂತಹ ಅಂತಿಮ ಸಾಧ್ಯತೆಗೆ ತಾನು ಸಿದ್ಧ ಎಂದು ಹೇಳಲು ಯಾರಿಗಾದರೂ ಸಾಧ್ಯವೇ? ಇಲ್ಲ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ಎರಡು ದಿನ ಮುಂಚೆ ಆದ ಈ ಘಟನೆಯಿಂದ ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅನ್ಯಾಯದ ವಿರುದ್ಧ ಮಾತನಾಡುವ ‘ಅಪರಾಧ’ ಕ್ಕೆ ದೇಶದ ನಾಗರಿಕರು ಜೀವದ ಬೆಲೆ ತೆರಬೇಕಾದರೆ ಈ ‘ಸ್ವಾತಂತ್ರ’ ಅಂದರೆ ಏನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ವಿಪರ್ಯಾಸವೆಂದರೆ, ‘ಭಯದಿಂದ ಮುಕ್ತಿ’ (ಫ್ರೀಡಮ್ ಫ್ರಮ್ ಫಿಯರ್) ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾನ್ಸ್ಟಿಟೂಷನ್ ಕ್ಲಬ್ ಎದುರುಗಡೆಯೇ ಅಪರಿಚಿತ ಬಂದೂಕುಧಾರಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೊಲ್ಲಲೆತ್ನಿಸಿದ.
ನೆನಪಿಡಿ, ನನ್ನ ಮೇಲೆ ಹಲ್ಲೆಯಾಗಿದ್ದು ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ‘ಹೈ ಸೆಕ್ಯುರಿಟಿ’ ವಲಯದಲ್ಲಿ, ಅದೂ ಹಾಡುಹಗಲಿನಲ್ಲಿ. ಇಂತಹ ಕೃತ್ಯವನ್ನು ಎಸಗುವ ಧೈರ್ಯ ಆ ವ್ಯಕ್ತಿಗೆ ಇತ್ತೆಂದರೆ ಅವನಿಗೆ ತಾನೇನು ಮಾಡಿದರೂ ತನ್ನನ್ನು ಯಾರೂ ಮುಟ್ಟಲಾರರು ಎನ್ನುವ ಭಾವನೆ ಇರದೇ ಇದ್ದರೆ ಅವನು ಈ ಕೃತ್ಯ ಎಸಗುತ್ತಿರಲಿಲ್ಲ. ಈಗಿನ ಆಡಳಿತ ಇಂಥವರಿಗೆ ಅಂಥ ಸುರಕ್ಷತೆಯ ಭಾವನೆಯನ್ನು ನೀಡುತ್ತಿದೆ. ಆ ವ್ಯಕ್ತಿ ಯಾರು, ಅವನ ಹಿಂದೆ ಇನ್ಯಾರೆಲ್ಲ ಇದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ಆದರೆ, ನಿನ್ನೆ ನನಗೇನಾದರೂ ಆಗಿದ್ದರೆ, ಅಥವಾ ನಾಳೆ ಮತ್ತೇನಾದರೂ ಆದಲ್ಲಿ ಆ ‘ಅಪರಿಚಿತ ಬಂದೂಕುಧಾರಿ’ಯನ್ನಷ್ಟೇ ದೂಷಿಸಬೇಡಿ. ನಿಜವಾದ ಅಪರಾಧಿಗಳು ಅಧಿಕಾರದ ಸ್ಥಾನದಲ್ಲಿ ಕುಳಿತು ಇಂತಹ ಕೊಲೆಗಡುಕರನ್ನು, ಗುಂಪುಗೂಡಿ ಹತ್ಯೆ ಮಾಡುತ್ತಿರುವವರನ್ನು ರಕ್ಷಿಸುತ್ತ್ತಿರುವವರು, ದೇಶದಾದ್ಯಂತ ದ್ವೇಷದ, ಹಿಂಸೆಯ ಮತ್ತು ಭಯದ ವಾತಾವರಣ ಉಂಟುಮಾಡುತ್ತಿರುವವರು. ನಿಜವಾದ ಅಪರಾಧಿಗಳು, ಆಡಳಿತ ಪಕ್ಷದ ವಕ್ತಾರರು ಮತ್ತು ಪ್ರೈಮ್ ಟೈಮ್‍ನ ನಿರೂಪಕರು ಹಾಗೂ ವಿನಾಕಾರಣ ನನ್ನ ವಿರುದ್ಧ ವಿಷ ಕಾರುತ್ತಾ, ಸುಳ್ಳುಗಳ ಕಂತೆ ಹೆಣೆದು ನನ್ನನ್ನು ಒಬ್ಬ ‘ರಾಷ್ಟ್ರ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಮುಗಿಸಲು ಪ್ರಚೋದಿಸಿದ ಟಿವಿ ಚಾನೆಲ್‍ಗಳು ನಿಜವಾದ ಅಪರಾಧಿಗಳು. ಇವರ ಇಂಥಾ ಹೇಯ ಕೃತ್ಯಗಳಿಂದಾಗಿ ನನ್ನ ಬದುಕು ಇಂಥ ದಾರುಣ ಸ್ಥಿತಿಗೆ ಬಂದುನಿಂತಿದೆ.
ಹಲ್ಲೆ ನಡೆದು ಒಂದು ದಿನವಾದ ನಂತರ, ಸೆಕ್ಷನ್ 307 ಮತ್ತು ಆಮ್ರ್ಸ್ ಅಕ್ಟ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡ ನಂತರವೂ ಮಧ್ಯಪ್ರದೇಶದ ಬಿಜೆಪಿ ಲೋಕಸಭೆಯ ಸದಸ್ಯೆ ಮೀನಾಕ್ಷಿ ಲೇಖಿ ಮತ್ತು ಜಾಲತಾಣದಲ್ಲಿರುವ ಇತರ ಕೇಸರಿ ಪಡೆಯವರು ನನ್ನ ಮೇಲೆ ಹಲ್ಲೆ ನಡೆದೇಯಿಲ್ಲವೆಂದು ಯಾಕೆ ವಾದಿಸುತ್ತಿದ್ದಾರೆ? ಇನ್ನೂ ಮುಂದೆ ಹೋಗಿ ನಾನೇ ಈ ಹಲ್ಲೆಯೆನ್ನು ಸಂಯೋಜಿಸಿದ್ದು ಎಂದು ಯಾಕೆ ಸೂಚಿಸುತ್ತಿದ್ದಾರೆ? ನನ್ನ ಮೇಲಿನ ಹಲ್ಲೆಗೆ ಕಾರಣರೆಂದು ನಾನು ಯಾರ ಮೇಲೆಯೂ ಬೆರಳು ಮಾಡಿ ತೋರಿಸಿಲ್ಲವಾದರೂ ಇವರ್ಯಾಕೆ ಈ ಘಟನೆಯ ನಿರೂಪಣೆಯನ್ನು ತಿರುಚಲು ಕಾತರರಾಗಿದ್ದಾರೆ, ಹತಾಶರಾಗಿದ್ದಾರೆ? ಇವರ ಈ ಹತಾಶೆಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಕೊಲೆ ಯತ್ನವನ್ನು ಇವರೇ ಮಾಡಿದ್ದು ಎಂದೇ? ಈ ಘಟನೆಯನ್ನು ಗೌರಿ ಲಂಕೇಶ್ ಅವರ ಹತ್ಯೆಯ ಉದಾಹರಣೆಯೊಂದಿಗೆ ನೋಡಬೇಕು, ಆ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿರುವ ಆರೋಪಿಗಳನ್ನು ನೋಡಿದರೆ ಹಿಂದುತ್ವ ಹೆಸರಿನ ಭಯೋತ್ಪಾದನೆಯ ಗುಂಪುಗಳ ಕೈವಾಡ ಸ್ಪಷ್ಟವಾಗುತ್ತಿದೆ. ಹಾಗಾಗಿ, ಈ ‘ಅಪರಿಚಿತ ಬಂದೂಕುಧಾರಿ’ಯ ಹಿಂದೆ, ಈ ಭಯೋತ್ಪಾದನಾ ಕೃತ್ಯದ ಹಿಂದಿರುವ ನಿಜವಾದ ಕೈಗಳು ಯಾವುವು ಎಂದು ಗುರುತಿಸುವುದು ಬಹಳ ಮುಖ್ಯ.
ನನ್ನ ವಿರುದ್ಧದ ಈ ದ್ವೇಷಭರಿತ ಪ್ರಚಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಅಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಬರೀ ಸುಳ್ಳುಗಳಿವೆ. ಅಲ್ಲಿ ಆರೋಪ ಪಟ್ಟಿಯಿಲ್ಲ (ಚಾರ್ಜ್‍ಶೀಟ್); ಬರೀ ಮೀಡಿಯಾ ಟ್ರಯಲ್ ಇದೆ. ಅಲ್ಲಿ ವಾದ ಮಾಡುವವರಿಲ್ಲ, ಬರೀ ಟ್ರಾಲ್ ಮಾಡುವವರಿದ್ದಾರೆ. ಅಲ್ಲಿ ಚರ್ಚೆಯಿಲ್ಲ, ಬರೀ ಬೆದರಿಕೆಗಳಿವೆ. ಇದೆಲ್ಲದರ ಅಂತಿಮ ಪರಿಣಾಮ ಇಂದು ಬಂದೂಕಿನ ದಾಳಿಯ ಹಂತಕ್ಕೆ ಬಂದಿದೆ. ‘ತುಕ್ಡೆ ತುಕ್ಡೆ’ (ತುಂಡು ತುಂಡು) ಎನ್ನುವ ಪದವನ್ನು ನನ್ನ ಹೆಸರಿನೊಂದಿಗೆ ಯಾಕೆ ಅಂಟಿಸಲಾಗಿದೆ? ಯಾವುದೋ ಒಂದು ಸಿನಿಮಾ ಬಿಡುಗಡೆಯಾದರೆ ದೇಶ ‘ತುಕ್ಡೆ ತುಕ್ಡೆ’ ಆಗುತ್ತದೆಂದು ಬೊಬ್ಬೆ ಹಾಕುವವರನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ರಾಜಧಾನಿಯ ಹೃದಯಭಾಗದಲ್ಲೇ ಕೆಲವರು ಭಾರತದ ಸಂವಿಧಾನವನ್ನು ಹಾಡುಹಗಲು ಸುಟ್ಟುಹಾಕಿದಾಗ ಯಾವ ಆಕ್ರೋಶವೂ ಕಾಣುವುದಿಲ್ಲ. ಆದರೆ ನನ್ನನ್ನು ಆ್ಯಂಟಿ-ನ್ಯಾಷನಲ್ ಎಂದು ಕರೆದು ನಿರಂತರವಾಗಿ ಮೀಡಿಯಾ ಟ್ರಯಲ್ ಏಕೆ ನಡೆಸಲಾಗುತ್ತಿದೆ? ದೇಶದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿ ದೇಶವನ್ನು ಧ್ರುವೀಕರಿಸುವವರನ್ನು, ಮಾಬ್ ಲಿಂಚಿಂಗ್ ಮಾಡುವವರನ್ನು ಗೌರವಿಸಿ, ಅವರಿಗೆ ಯಾಕೆ ಹೂಮಾಲೆ ಹಾಕಲಾಗುತ್ತಿದೆ? ಇಂಥಾ ದ್ವೇಷ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದೇಕೆ? ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ, ದಲಿತರ ಮೇಲೆ ಹಲ್ಲೆ ಮಾಡುವವರನ್ನು ಸಮಾಜ ಒಡೆಯುತ್ತಿದ್ದಾರೆಂದು ಇವರು ಟೀಕಿಸುವುದಿಲ್ಲ ಯಾಕೆ? ಜಾತಿವಾದಿ ಸಂಭಾಜಿ ಭಿಡೆಯನ್ನು ಪ್ರಧಾನಿ ಮೋದಿ ಮಹಾಪುರುಷ ಎಂದೇಕೆ ಕರೆಯುತ್ತಾರೆ? ಬಡವರ ಬದುಕನ್ನು ಬಲಿಕೊಟ್ಟು ದೇಶವನ್ನು ತುಂಡು ತುಂಡಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಮಾರುತ್ತಿರುವವರನ್ನು ದೇಶಭಕ್ತರೆಂದು ಯಾಕೆ ಕರೆಯಲಾಗುತ್ತಿದೆ? ಇವರ ಈ ಕೃತ್ಯಗಳನ್ನು ಪ್ರಶ್ನಿಸುವವರನ್ನು ‘ರಾಷ್ಟ್ರ ದ್ರೋಹಿ’ ಎಂದು ಯಾಕೆ ಬಿಂಬಿಸಲಾಗುತ್ತಿದೆ. ಇವು ಇಂದು ನಾವು ಕೇಳಲೇಬೇಕಾದ ಪ್ರಶ್ನೆಗಳು.
ಇಂತಹ ಹಲ್ಲೆಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ದೊಡ್ಡ ತಪ್ಪು ಕಲ್ಪನೆಯಷ್ಟೆ. ಗೌರಿ ಲಂಕೇಶ್ ಅವರ ಪರಿಕಲ್ಪನೆಗಳು, ರೋಹಿತ್ ವೆಮುಲಾನ ಐಡಿಯಾಗಳು ಅವರಿಲ್ಲದಿದ್ದರೂ ಜೀವಂತವಾಗಿವೆ, ಜೀವಂತವಾಗಿರುತ್ತವೆ. ಅವರು ನಮ್ಮನ್ನು ಜೈಲಿನ ಭಯ ತೋರಿಸಿ ಅಥವಾ ಗುಂಡಿನ ಭಯ ತೋರಿಸಿ ಸುಮ್ಮನಿರಿಸಲಾಗುವುದಿಲ್ಲ. ಅದನ್ನು ನಾವು ನಿನ್ನೆಯೂ ಸಾಬೀತುಪಡಿಸಿದ್ದೇವೆ. ‘ಭಯದಿಂದ ಮುಕ್ತಿ’ ಎನ್ನುವ ಕಾರ್ಯಕ್ರಮ ನನ್ನ ಮೇಲೆಯ ಹಲ್ಲೆಯ ಹೊರತಾಗಿಯೂ ಕಾನ್ಸ್ಟಿಟೂಷನ್ ಕ್ಲಬ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಶಾಂತ್ ಭೂಷಣ್, ಪ್ರೊ. ಅಪೂರ್ವಾನಂದ, ಎಸ್.ಆರ್.ದಾರಾಪುರಿ, ಮನೋಜ್ ಝಾ ಇವರೊಂದಿಗೆ ನಜೀಬ್‍ನ ತಾಯಿ ಫಾತಿಮ ನಫಿಸ್, ಅಲಿಮುದ್ದೀನ್ (ಕೇಂದ್ರ ಸಚಿವ ಜಯಂತ್ ಸಿನ್ಹ ಇತ್ತೀಚಿಗೆ ಅಲಿಮುದ್ದೀನ್ ಹಂತಕರನ್ನು ಸನ್ಮಾನಿಸಿದ್ದರು) ಅವರ ಹೆಂಡತಿ ಮರಿಯಮ್, ಜುನೈದ್ (ಕಳೆದ ವರ್ಷ ಟ್ರೇನಿನಲ್ಲಿ ಕೊಲ್ಲಲ್ಪಟ್ಟ 16 ವರ್ಷದ ಹುಡುಗ) ನ ತಾಯಿ ಫಾತಿಮ, ರಕ್ಬರ್ ಖಾನ್‍ನ ಸಹೋದರ ಅಕ್ಬರ್, ಡಾ. ಕಫೀಲ್ ಖಾನ್ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಕೇಸರಿ ಭಯೋತ್ಪಾದನೆಯಿಂದ ಆಗುತ್ತಿರುವ ಭಯ, ಗುಂಪುಹತ್ಯೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿದರು. ಇದು ನಮ್ಮ ಪ್ರತಿರೋಧದ ಚೈತನ್ಯ.
ನನಗೆ ಜೀವ ಬೆದರಿಕೆ ಮುಂದುವರೆದಿರುವುದರಿಂದ ದೆಹಲಿ ಪೊಲೀಸರು ನನಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಇಲ್ಲಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ರಕ್ಷಣೆಗಾಗಿ ಪೊಲೀಸರನ್ನು ಕೇಳಿಕೊಂಡಿದ್ದರೂ ಪೊಲೀಸರು ಸ್ಪಂದಿಸಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ನಿನ್ನೆಯ ಘಟನೆಯ ಬಳಿಕ, ದೆಹಲಿ ಪೋಲೀಸರು ಇನ್ನೂ ಯಾತಕ್ಕಾಗಿ ಕಾಯುತ್ತಿದ್ದಾರೋ? ಸೂಕ್ತ ಭದ್ರತೆಯಿಲ್ಲದೆ ನಾನು ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನನಗೆ ಭದ್ರತೆ ಒದಗಿಸುವಂತೆ ದೇಶದ ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಒತ್ತಡ ತರಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಈ ಹೇಡಿತನದ ಕೃತ್ಯದ ವಿರುದ್ಧ ಧ್ವನಿಯೆತ್ತಿ, ನ್ಯಾಯದ ಈ ಹೋರಾಟದಲ್ಲಿ ನನ್ನೊಂದಿಗೆ ನಿಂತ ಎಲ್ಲ ಅಸಂಖ್ಯಾತ ಸಂಗಾತಿಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ನಮ್ಮೆಲ್ಲರ ಈ ಸಾಮೂಹಿಕ ಹೋರಾಟದಲ್ಲಿ ನಾವು ಸಾವರ್ಕರ್ ಮತ್ತು ಗೋಡ್ಸೆಯ ಹಿಂಬಾಲಕರನ್ನು ಖಂಡಿತವಾಗಿಯೂ ಸೋಲಿಸುತ್ತೇವೆ. ದಾಲ್ಮಿಯ ಕಂಪನಿಯ ಕೆಂಪು ಕೋಟೆಯಿಂದ ನಾಳೆ ಇನ್ನಷ್ಟು ಸುಳ್ಳುಗಳು, ಸಿಹಿಲೇಪಿತ ಜುಮ್ಲಾಗಳ ಸುರಿಮಳೆಯಾಗಲಿದೆ; ಹಾಗೆಯೆ, ನೈಜ ಸ್ವಾತಂತ್ರ ಮತ್ತು ಘನತೆಗಾಗಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ನಡೆಯುತ್ತಿರುವ ಹೋರಾಟ ಕೂಡ ಇನ್ನಷ್ಟು ಹುರುಪಿನಿಂದ ಮುಂದೆ ಸಾಗಲಿದೆ.
ಜೈ ಭೀಮ್, ಲಾಲ್ ಸಲಾಮ್

– ಉಮರ್ ಖಾಲಿದ್
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...