Homeಚಳವಳಿ‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

‘ನಿಮ್ಮ ಬೆದರಿಕೆಗಳು ನಮ್ಮ ಬಾಯಿ ಮುಚ್ಚಿಸಲಾರವು’

- Advertisement -
- Advertisement -

ನನಗೆ ನಿರಂತರವಾಗಿ ಬರುತ್ತಿದ್ದ ಕೊಲೆ ಬೆದರಿಕೆಗಳು ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಆದ ಚಿಂತಕರ ಹತ್ಯೆಗಳಿಂದಾಗಿ ನನ್ನ ಮೇಲೆಯೂ ಯಾರಾದರೂ ಗುಂಡು ಹಾರಿಸಲಿದ್ದಾರೆ ಎಂದು ನನಗೆ ಅನಿಸತೊಡಗಿತ್ತು. ಧಾಬೋಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್- ಹೀಗೆ ಹತ್ಯೆಗೀಡಾದ ಚಿಂತಕರ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ನಾನು ಅದಕ್ಕೆ ಸಿದ್ಧನಾಗಿದ್ದೆ ಎಂದು ಹೇಳಲು ನನಗೆ ಸಾಧ್ಯವೇ? ಇಂತಹ ಅಂತಿಮ ಸಾಧ್ಯತೆಗೆ ತಾನು ಸಿದ್ಧ ಎಂದು ಹೇಳಲು ಯಾರಿಗಾದರೂ ಸಾಧ್ಯವೇ? ಇಲ್ಲ. ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಗೆ ಎರಡು ದಿನ ಮುಂಚೆ ಆದ ಈ ಘಟನೆಯಿಂದ ಇನ್ನೂ ಕೆಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅನ್ಯಾಯದ ವಿರುದ್ಧ ಮಾತನಾಡುವ ‘ಅಪರಾಧ’ ಕ್ಕೆ ದೇಶದ ನಾಗರಿಕರು ಜೀವದ ಬೆಲೆ ತೆರಬೇಕಾದರೆ ಈ ‘ಸ್ವಾತಂತ್ರ’ ಅಂದರೆ ಏನು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ವಿಪರ್ಯಾಸವೆಂದರೆ, ‘ಭಯದಿಂದ ಮುಕ್ತಿ’ (ಫ್ರೀಡಮ್ ಫ್ರಮ್ ಫಿಯರ್) ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕಾನ್ಸ್ಟಿಟೂಷನ್ ಕ್ಲಬ್ ಎದುರುಗಡೆಯೇ ಅಪರಿಚಿತ ಬಂದೂಕುಧಾರಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಕೊಲ್ಲಲೆತ್ನಿಸಿದ.
ನೆನಪಿಡಿ, ನನ್ನ ಮೇಲೆ ಹಲ್ಲೆಯಾಗಿದ್ದು ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ‘ಹೈ ಸೆಕ್ಯುರಿಟಿ’ ವಲಯದಲ್ಲಿ, ಅದೂ ಹಾಡುಹಗಲಿನಲ್ಲಿ. ಇಂತಹ ಕೃತ್ಯವನ್ನು ಎಸಗುವ ಧೈರ್ಯ ಆ ವ್ಯಕ್ತಿಗೆ ಇತ್ತೆಂದರೆ ಅವನಿಗೆ ತಾನೇನು ಮಾಡಿದರೂ ತನ್ನನ್ನು ಯಾರೂ ಮುಟ್ಟಲಾರರು ಎನ್ನುವ ಭಾವನೆ ಇರದೇ ಇದ್ದರೆ ಅವನು ಈ ಕೃತ್ಯ ಎಸಗುತ್ತಿರಲಿಲ್ಲ. ಈಗಿನ ಆಡಳಿತ ಇಂಥವರಿಗೆ ಅಂಥ ಸುರಕ್ಷತೆಯ ಭಾವನೆಯನ್ನು ನೀಡುತ್ತಿದೆ. ಆ ವ್ಯಕ್ತಿ ಯಾರು, ಅವನ ಹಿಂದೆ ಇನ್ಯಾರೆಲ್ಲ ಇದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ತನಿಖೆ ಮಾಡುವುದು ಪೊಲೀಸರ ಕರ್ತವ್ಯ. ಆದರೆ, ನಿನ್ನೆ ನನಗೇನಾದರೂ ಆಗಿದ್ದರೆ, ಅಥವಾ ನಾಳೆ ಮತ್ತೇನಾದರೂ ಆದಲ್ಲಿ ಆ ‘ಅಪರಿಚಿತ ಬಂದೂಕುಧಾರಿ’ಯನ್ನಷ್ಟೇ ದೂಷಿಸಬೇಡಿ. ನಿಜವಾದ ಅಪರಾಧಿಗಳು ಅಧಿಕಾರದ ಸ್ಥಾನದಲ್ಲಿ ಕುಳಿತು ಇಂತಹ ಕೊಲೆಗಡುಕರನ್ನು, ಗುಂಪುಗೂಡಿ ಹತ್ಯೆ ಮಾಡುತ್ತಿರುವವರನ್ನು ರಕ್ಷಿಸುತ್ತ್ತಿರುವವರು, ದೇಶದಾದ್ಯಂತ ದ್ವೇಷದ, ಹಿಂಸೆಯ ಮತ್ತು ಭಯದ ವಾತಾವರಣ ಉಂಟುಮಾಡುತ್ತಿರುವವರು. ನಿಜವಾದ ಅಪರಾಧಿಗಳು, ಆಡಳಿತ ಪಕ್ಷದ ವಕ್ತಾರರು ಮತ್ತು ಪ್ರೈಮ್ ಟೈಮ್‍ನ ನಿರೂಪಕರು ಹಾಗೂ ವಿನಾಕಾರಣ ನನ್ನ ವಿರುದ್ಧ ವಿಷ ಕಾರುತ್ತಾ, ಸುಳ್ಳುಗಳ ಕಂತೆ ಹೆಣೆದು ನನ್ನನ್ನು ಒಬ್ಬ ‘ರಾಷ್ಟ್ರ ದ್ರೋಹಿ’ ಎಂಬ ಹಣೆಪಟ್ಟಿ ಕಟ್ಟಿ ನನ್ನನ್ನು ಮುಗಿಸಲು ಪ್ರಚೋದಿಸಿದ ಟಿವಿ ಚಾನೆಲ್‍ಗಳು ನಿಜವಾದ ಅಪರಾಧಿಗಳು. ಇವರ ಇಂಥಾ ಹೇಯ ಕೃತ್ಯಗಳಿಂದಾಗಿ ನನ್ನ ಬದುಕು ಇಂಥ ದಾರುಣ ಸ್ಥಿತಿಗೆ ಬಂದುನಿಂತಿದೆ.
ಹಲ್ಲೆ ನಡೆದು ಒಂದು ದಿನವಾದ ನಂತರ, ಸೆಕ್ಷನ್ 307 ಮತ್ತು ಆಮ್ರ್ಸ್ ಅಕ್ಟ್ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡ ನಂತರವೂ ಮಧ್ಯಪ್ರದೇಶದ ಬಿಜೆಪಿ ಲೋಕಸಭೆಯ ಸದಸ್ಯೆ ಮೀನಾಕ್ಷಿ ಲೇಖಿ ಮತ್ತು ಜಾಲತಾಣದಲ್ಲಿರುವ ಇತರ ಕೇಸರಿ ಪಡೆಯವರು ನನ್ನ ಮೇಲೆ ಹಲ್ಲೆ ನಡೆದೇಯಿಲ್ಲವೆಂದು ಯಾಕೆ ವಾದಿಸುತ್ತಿದ್ದಾರೆ? ಇನ್ನೂ ಮುಂದೆ ಹೋಗಿ ನಾನೇ ಈ ಹಲ್ಲೆಯೆನ್ನು ಸಂಯೋಜಿಸಿದ್ದು ಎಂದು ಯಾಕೆ ಸೂಚಿಸುತ್ತಿದ್ದಾರೆ? ನನ್ನ ಮೇಲಿನ ಹಲ್ಲೆಗೆ ಕಾರಣರೆಂದು ನಾನು ಯಾರ ಮೇಲೆಯೂ ಬೆರಳು ಮಾಡಿ ತೋರಿಸಿಲ್ಲವಾದರೂ ಇವರ್ಯಾಕೆ ಈ ಘಟನೆಯ ನಿರೂಪಣೆಯನ್ನು ತಿರುಚಲು ಕಾತರರಾಗಿದ್ದಾರೆ, ಹತಾಶರಾಗಿದ್ದಾರೆ? ಇವರ ಈ ಹತಾಶೆಯನ್ನು ಏನೆಂದು ಅರ್ಥೈಸಿಕೊಳ್ಳಬೇಕು? ಕೊಲೆ ಯತ್ನವನ್ನು ಇವರೇ ಮಾಡಿದ್ದು ಎಂದೇ? ಈ ಘಟನೆಯನ್ನು ಗೌರಿ ಲಂಕೇಶ್ ಅವರ ಹತ್ಯೆಯ ಉದಾಹರಣೆಯೊಂದಿಗೆ ನೋಡಬೇಕು, ಆ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿರುವ ಆರೋಪಿಗಳನ್ನು ನೋಡಿದರೆ ಹಿಂದುತ್ವ ಹೆಸರಿನ ಭಯೋತ್ಪಾದನೆಯ ಗುಂಪುಗಳ ಕೈವಾಡ ಸ್ಪಷ್ಟವಾಗುತ್ತಿದೆ. ಹಾಗಾಗಿ, ಈ ‘ಅಪರಿಚಿತ ಬಂದೂಕುಧಾರಿ’ಯ ಹಿಂದೆ, ಈ ಭಯೋತ್ಪಾದನಾ ಕೃತ್ಯದ ಹಿಂದಿರುವ ನಿಜವಾದ ಕೈಗಳು ಯಾವುವು ಎಂದು ಗುರುತಿಸುವುದು ಬಹಳ ಮುಖ್ಯ.
ನನ್ನ ವಿರುದ್ಧದ ಈ ದ್ವೇಷಭರಿತ ಪ್ರಚಾರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದೆ. ಅಲ್ಲಿ ಯಾವುದೇ ಸಾಕ್ಷಿಗಳಿಲ್ಲ, ಬರೀ ಸುಳ್ಳುಗಳಿವೆ. ಅಲ್ಲಿ ಆರೋಪ ಪಟ್ಟಿಯಿಲ್ಲ (ಚಾರ್ಜ್‍ಶೀಟ್); ಬರೀ ಮೀಡಿಯಾ ಟ್ರಯಲ್ ಇದೆ. ಅಲ್ಲಿ ವಾದ ಮಾಡುವವರಿಲ್ಲ, ಬರೀ ಟ್ರಾಲ್ ಮಾಡುವವರಿದ್ದಾರೆ. ಅಲ್ಲಿ ಚರ್ಚೆಯಿಲ್ಲ, ಬರೀ ಬೆದರಿಕೆಗಳಿವೆ. ಇದೆಲ್ಲದರ ಅಂತಿಮ ಪರಿಣಾಮ ಇಂದು ಬಂದೂಕಿನ ದಾಳಿಯ ಹಂತಕ್ಕೆ ಬಂದಿದೆ. ‘ತುಕ್ಡೆ ತುಕ್ಡೆ’ (ತುಂಡು ತುಂಡು) ಎನ್ನುವ ಪದವನ್ನು ನನ್ನ ಹೆಸರಿನೊಂದಿಗೆ ಯಾಕೆ ಅಂಟಿಸಲಾಗಿದೆ? ಯಾವುದೋ ಒಂದು ಸಿನಿಮಾ ಬಿಡುಗಡೆಯಾದರೆ ದೇಶ ‘ತುಕ್ಡೆ ತುಕ್ಡೆ’ ಆಗುತ್ತದೆಂದು ಬೊಬ್ಬೆ ಹಾಕುವವರನ್ನು ಬಿಜೆಪಿ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ರಾಜಧಾನಿಯ ಹೃದಯಭಾಗದಲ್ಲೇ ಕೆಲವರು ಭಾರತದ ಸಂವಿಧಾನವನ್ನು ಹಾಡುಹಗಲು ಸುಟ್ಟುಹಾಕಿದಾಗ ಯಾವ ಆಕ್ರೋಶವೂ ಕಾಣುವುದಿಲ್ಲ. ಆದರೆ ನನ್ನನ್ನು ಆ್ಯಂಟಿ-ನ್ಯಾಷನಲ್ ಎಂದು ಕರೆದು ನಿರಂತರವಾಗಿ ಮೀಡಿಯಾ ಟ್ರಯಲ್ ಏಕೆ ನಡೆಸಲಾಗುತ್ತಿದೆ? ದೇಶದ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿ ದೇಶವನ್ನು ಧ್ರುವೀಕರಿಸುವವರನ್ನು, ಮಾಬ್ ಲಿಂಚಿಂಗ್ ಮಾಡುವವರನ್ನು ಗೌರವಿಸಿ, ಅವರಿಗೆ ಯಾಕೆ ಹೂಮಾಲೆ ಹಾಕಲಾಗುತ್ತಿದೆ? ಇಂಥಾ ದ್ವೇಷ ರಾಜಕಾರಣದ ವಿರುದ್ಧ ಮಾತನಾಡುವವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವುದೇಕೆ? ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವ, ದಲಿತರ ಮೇಲೆ ಹಲ್ಲೆ ಮಾಡುವವರನ್ನು ಸಮಾಜ ಒಡೆಯುತ್ತಿದ್ದಾರೆಂದು ಇವರು ಟೀಕಿಸುವುದಿಲ್ಲ ಯಾಕೆ? ಜಾತಿವಾದಿ ಸಂಭಾಜಿ ಭಿಡೆಯನ್ನು ಪ್ರಧಾನಿ ಮೋದಿ ಮಹಾಪುರುಷ ಎಂದೇಕೆ ಕರೆಯುತ್ತಾರೆ? ಬಡವರ ಬದುಕನ್ನು ಬಲಿಕೊಟ್ಟು ದೇಶವನ್ನು ತುಂಡು ತುಂಡಾಗಿ ಕಾರ್ಪೋರೇಟ್ ಶಕ್ತಿಗಳಿಗೆ ಮಾರುತ್ತಿರುವವರನ್ನು ದೇಶಭಕ್ತರೆಂದು ಯಾಕೆ ಕರೆಯಲಾಗುತ್ತಿದೆ? ಇವರ ಈ ಕೃತ್ಯಗಳನ್ನು ಪ್ರಶ್ನಿಸುವವರನ್ನು ‘ರಾಷ್ಟ್ರ ದ್ರೋಹಿ’ ಎಂದು ಯಾಕೆ ಬಿಂಬಿಸಲಾಗುತ್ತಿದೆ. ಇವು ಇಂದು ನಾವು ಕೇಳಲೇಬೇಕಾದ ಪ್ರಶ್ನೆಗಳು.
ಇಂತಹ ಹಲ್ಲೆಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅವರು ತಿಳಿದುಕೊಂಡಿದ್ದರೆ ಅದು ಅವರ ದೊಡ್ಡ ತಪ್ಪು ಕಲ್ಪನೆಯಷ್ಟೆ. ಗೌರಿ ಲಂಕೇಶ್ ಅವರ ಪರಿಕಲ್ಪನೆಗಳು, ರೋಹಿತ್ ವೆಮುಲಾನ ಐಡಿಯಾಗಳು ಅವರಿಲ್ಲದಿದ್ದರೂ ಜೀವಂತವಾಗಿವೆ, ಜೀವಂತವಾಗಿರುತ್ತವೆ. ಅವರು ನಮ್ಮನ್ನು ಜೈಲಿನ ಭಯ ತೋರಿಸಿ ಅಥವಾ ಗುಂಡಿನ ಭಯ ತೋರಿಸಿ ಸುಮ್ಮನಿರಿಸಲಾಗುವುದಿಲ್ಲ. ಅದನ್ನು ನಾವು ನಿನ್ನೆಯೂ ಸಾಬೀತುಪಡಿಸಿದ್ದೇವೆ. ‘ಭಯದಿಂದ ಮುಕ್ತಿ’ ಎನ್ನುವ ಕಾರ್ಯಕ್ರಮ ನನ್ನ ಮೇಲೆಯ ಹಲ್ಲೆಯ ಹೊರತಾಗಿಯೂ ಕಾನ್ಸ್ಟಿಟೂಷನ್ ಕ್ಲಬ್‍ನಲ್ಲಿ ಯಶಸ್ವಿಯಾಗಿ ನಡೆಯಿತು. ಪ್ರಶಾಂತ್ ಭೂಷಣ್, ಪ್ರೊ. ಅಪೂರ್ವಾನಂದ, ಎಸ್.ಆರ್.ದಾರಾಪುರಿ, ಮನೋಜ್ ಝಾ ಇವರೊಂದಿಗೆ ನಜೀಬ್‍ನ ತಾಯಿ ಫಾತಿಮ ನಫಿಸ್, ಅಲಿಮುದ್ದೀನ್ (ಕೇಂದ್ರ ಸಚಿವ ಜಯಂತ್ ಸಿನ್ಹ ಇತ್ತೀಚಿಗೆ ಅಲಿಮುದ್ದೀನ್ ಹಂತಕರನ್ನು ಸನ್ಮಾನಿಸಿದ್ದರು) ಅವರ ಹೆಂಡತಿ ಮರಿಯಮ್, ಜುನೈದ್ (ಕಳೆದ ವರ್ಷ ಟ್ರೇನಿನಲ್ಲಿ ಕೊಲ್ಲಲ್ಪಟ್ಟ 16 ವರ್ಷದ ಹುಡುಗ) ನ ತಾಯಿ ಫಾತಿಮ, ರಕ್ಬರ್ ಖಾನ್‍ನ ಸಹೋದರ ಅಕ್ಬರ್, ಡಾ. ಕಫೀಲ್ ಖಾನ್ ಮತ್ತಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲರೂ ಕೇಸರಿ ಭಯೋತ್ಪಾದನೆಯಿಂದ ಆಗುತ್ತಿರುವ ಭಯ, ಗುಂಪುಹತ್ಯೆ ಮತ್ತು ದ್ವೇಷದ ವಿರುದ್ಧ ಧ್ವನಿಯೆತ್ತಿದರು. ಇದು ನಮ್ಮ ಪ್ರತಿರೋಧದ ಚೈತನ್ಯ.
ನನಗೆ ಜೀವ ಬೆದರಿಕೆ ಮುಂದುವರೆದಿರುವುದರಿಂದ ದೆಹಲಿ ಪೊಲೀಸರು ನನಗೆ ಸೂಕ್ತ ಸುರಕ್ಷತೆ ಒದಗಿಸಬೇಕೆಂದು ಇಲ್ಲಿ ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಕಳೆದೆರಡು ವರ್ಷಗಳಲ್ಲಿ ಎರಡು ಬಾರಿ ರಕ್ಷಣೆಗಾಗಿ ಪೊಲೀಸರನ್ನು ಕೇಳಿಕೊಂಡಿದ್ದರೂ ಪೊಲೀಸರು ಸ್ಪಂದಿಸಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ ಸಂದೇಶಗಳು ನಿರಂತರವಾಗಿ ಬರುತ್ತಲೇ ಇವೆ. ನಿನ್ನೆಯ ಘಟನೆಯ ಬಳಿಕ, ದೆಹಲಿ ಪೋಲೀಸರು ಇನ್ನೂ ಯಾತಕ್ಕಾಗಿ ಕಾಯುತ್ತಿದ್ದಾರೋ? ಸೂಕ್ತ ಭದ್ರತೆಯಿಲ್ಲದೆ ನಾನು ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ನನಗೆ ಭದ್ರತೆ ಒದಗಿಸುವಂತೆ ದೇಶದ ಎಲ್ಲ ಪ್ರಜಾತಾಂತ್ರಿಕ ಶಕ್ತಿಗಳು ಒತ್ತಡ ತರಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ.
ಈ ಹೇಡಿತನದ ಕೃತ್ಯದ ವಿರುದ್ಧ ಧ್ವನಿಯೆತ್ತಿ, ನ್ಯಾಯದ ಈ ಹೋರಾಟದಲ್ಲಿ ನನ್ನೊಂದಿಗೆ ನಿಂತ ಎಲ್ಲ ಅಸಂಖ್ಯಾತ ಸಂಗಾತಿಗಳಿಗೆ ಅನಂತ ಧನ್ಯವಾದಗಳು. ಪ್ರಜಾಪ್ರಭುತ್ವಕ್ಕಾಗಿ ನಡೆಯುತ್ತಿರುವ ನಮ್ಮೆಲ್ಲರ ಈ ಸಾಮೂಹಿಕ ಹೋರಾಟದಲ್ಲಿ ನಾವು ಸಾವರ್ಕರ್ ಮತ್ತು ಗೋಡ್ಸೆಯ ಹಿಂಬಾಲಕರನ್ನು ಖಂಡಿತವಾಗಿಯೂ ಸೋಲಿಸುತ್ತೇವೆ. ದಾಲ್ಮಿಯ ಕಂಪನಿಯ ಕೆಂಪು ಕೋಟೆಯಿಂದ ನಾಳೆ ಇನ್ನಷ್ಟು ಸುಳ್ಳುಗಳು, ಸಿಹಿಲೇಪಿತ ಜುಮ್ಲಾಗಳ ಸುರಿಮಳೆಯಾಗಲಿದೆ; ಹಾಗೆಯೆ, ನೈಜ ಸ್ವಾತಂತ್ರ ಮತ್ತು ಘನತೆಗಾಗಿ ಭಗತ್ ಸಿಂಗ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸನ್ನು ನನಸಾಗಿಸಲು ನಡೆಯುತ್ತಿರುವ ಹೋರಾಟ ಕೂಡ ಇನ್ನಷ್ಟು ಹುರುಪಿನಿಂದ ಮುಂದೆ ಸಾಗಲಿದೆ.
ಜೈ ಭೀಮ್, ಲಾಲ್ ಸಲಾಮ್

– ಉಮರ್ ಖಾಲಿದ್
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...