ಕೊರೊನ ವೈರಸ್ ಭೀತಿಯಿಂದ ಸಂಸತ್ ಅಧಿವೇಶನವನ್ನು ಮೂಂದೂಡಬೇಕೆಂದು ಅನೇಕ ವಿರೋಧ ಪಕ್ಷದ ಸದಸ್ಯರ ಸೂಚನೆಯ ಹೊರತಾಗಿಯು ಮೇಲೆಯು ಸಂಸತ್ತು ಮುಂದುವರೆದಿದೆ. ಈ ಬಗ್ಗೆ ಬಿಜೆಪಿ ತೇಜಸ್ವಿ ಸೂರ್ಯ, “ಸಂಸದರು ಕೂಡಾ ವೈದ್ಯರು ಮತ್ತು ಸೈನಿಕರಂತೆ ಈ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕು” ಎಂದು ಹೇಳಿದ್ದಕ್ಕೆ ಸಂಸದ ಕಾರ್ತಿ ಚಿದಂಬರಂ ’ತೇಜಸ್ವಿ ಹೇಳಿಕೆ ಹಾಸ್ಯಾಸ್ಪದ’ ಎಂದು ಟ್ವಿಟ್ಟರಿನಲ್ಲಿ ಕಾಲೆಳೆದಿದ್ದಾರೆ.
ಕಾರ್ತಿ ಪಿ ಚಿದಂಬರಂ “ಈ ಹೋಲಿಕೆ ಹಾಸ್ಯಾಸ್ಪದವಾಗಿದೆ, ವೈದ್ಯರ ಬದ್ಧತೆ ಹಾಗೂ ಸಮರ್ಪಣೆಗಾಗಿ ವಂದಿಸುತ್ತೇನೆ. ಆದರೆ ಸಂಸತ್ತು ಈ ರೀತಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿಲ್ಲ ಮತ್ತು ಸಮರ್ಥನೆ ಮಾಡುವ ಅಗತ್ಯವಿಲ್ಲ. ಎಲ್ಲಾ ಸಭೆ-ಸಮಾರಂಭಗಳನ್ನು ಕಡಿತಗೊಳಿಸಲಾಗಿದೆ ಆದರೆ ಸಂಸತ್ತು ಅದರಿಂದ ಹೊರುಳಿದ್ದು ಯಾಕೆ?” ಎಂದು ಟ್ವೀಟಿಸಿದ್ದಾರೆ.
To equate MPs with emergency health workers is outright ridiculous. I salute the health workers for their commitment/dedication. But there is no justification for parliament to function and congregate. If every other congregation is downsized why is parliament an exception?
— Karti P Chidambaram (@KartiPC) March 19, 2020
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು “ಇತರರಿಗೆ ಸಾಮಾಜಿಕವಾಗಿ ದೂರ-ದೂರದಲ್ಲಿರಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸೂಚಿಸುತ್ತಿರುವ ಸಂಸತ್ ಸದಸ್ಯರು ಸಹ ಸಂಸತ್ತಿನಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕಾಗಿದೆ” ಎಂದು ಪ್ರತಿಕ್ರಿಯಿಸುವುದರೊಂದಿಗೆ ಈ ವಿವಾದ ಪ್ರಾರಂಭವಾಯಿತು.
“COVID19 ವಿರುದ್ಧ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಂಸತ್ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಬಿಟ್ಟು ಸಂಸತ್ತಿನಲ್ಲಿ ಸಭೆ ನಡೆಸುವುದನ್ನು ಮುಂದುವರೆಸುವುದು ವಿಪರ್ಯಾಸ. ಅಲ್ಲಿ ಜನರು ಸಭೆ ಸೇರಬೇಡಿ ಅನ್ನುತ್ತೇವೆ, ಇಲ್ಲಿ ನಾವೇ ಕಿರಿದಾದ ಬೆಂಚುಗಳ ಮೇಲೆ ಕೆನ್ನೆಗೆ ಕೈಒತ್ತಿ ಕುಳಿತುಕೊಳ್ಳುತ್ತೇವೆ. ಅಂದರೆ ಸಂಸದರ ಸಂದೇಶ ಇದು: “ನಾನು ಹೇಳಿದಂತೆ ಮಾಡು, ನಾನು ಮಾಡಿದಂತೆ ಅಲ್ಲ” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಬಿಜೆಪಿಯ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ “ಸರ್, ಸಂಸದರು ವಿಶೇಷರಲ್ಲ. ನಮ್ಮ ವೈದ್ಯರು, ಆರೋಗ್ಯ ಕಾರ್ಯಕರ್ತರು, ಗಡಿಗಳಲ್ಲಿನ ಸೈನಿಕರು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗಳು ಎಲ್ಲಾ ಧೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದರೆ, ನಾವು ನಮ್ಮ ಕರ್ತವ್ಯಗಳನ್ನು ಸಹ ಮಾಡಬೇಕಲ್ಲವೇ? ಮುನ್ನೆಚ್ಚರಿಕೆ ಮುಖ್ಯ ಆದರೆ ಭೀತಿಯಲ್ಲ. ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಭಾರತ # COVID19 ಅನ್ನು ನಿರ್ವಹಿಸುವಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸುತ್ತಿದೆ” ಎಂದು ಟ್ವೀಟ್ ಮಾಡಿದ್ದರು.