ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಕೋಮುದ್ವೇಷಪೂರಿತ ಪೋಸ್ಟ್ ಹಾಕಿದ ಆರೋಪದ ಮೇಲೆ ಏಪ್ರಿಲ್ 10ರಂದು ಹಾಸನ ಜಿಲ್ಲೆಯ ಬಿಕ್ಕೋಡಿನ ತೇಜಕುಮಾರ್ ಶೆಟ್ಟಿ ಎಂಬುವವರನ್ನು ಬಂಧಿಸಿದ್ದ ಪೊಲೀಸರ ವಿರುದ್ಧವೇ ತನಿಖೆ ನಡೆಯುವಂತ ಪರಿಸ್ಥಿತಿ ಎದುರಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮ ಹಾಗೂ ವ್ಯಕ್ತಿಯ ನಿಂದನೆಯಾಗಲಿ ಮಾಡಬಾರದು ಎಂದು ಈಗಾಗಲೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಆದೇಶ ಇದ್ದರೂ ಸಹ ಅದನ್ನು ಲೆಕ್ಕಿಸದೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರಿಂದ, ಕಲಂ 152ರ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ ಎಂದು ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲು ತಿಳಿಸಿದ್ದರು. ಬಂಧಿತ ವ್ಯಕ್ತಿಯೊಂದಿಗಿನ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೇ ಸಮುಯದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಸಹ ಎರಡು ಖಾಸಗಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿಯೂ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರ ವಿರುದ್ಧ ಸುಳ್ಳು ಸುದ್ದಿ ಹರಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖಡಕ್ ಎಚ್ಚರಿಕೆ ಸಹ ನೀಡಿದ್ದರು.
ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ
ಘಟನೆ ನಡೆದ ಎರಡು ದಿನಗಳ ನಂತರ ಪ್ರವಾಸೋಧ್ಯಮ ಸಚಿವ ಸಿ.ಟಿ ರವಿರವರು ಆರೋಪಿಯ ರಕ್ಷಣೆಗೆ ಮುಂದಾಗಿದ್ದರು. ಅವರು ಟ್ವಿಟ್ಟರ್ನಲ್ಲಿ “ಕೊರೊನ ಸಂಬಂಧ ತಬ್ಲೀಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ವಿನಂತಿಸಿದ್ದೇನೆ”. ಎಂದು ಬರೆದುಕೊಂಡಿದ್ದರು.
ಕೊರೊನ ಸಂಬಂಧ ತಬ್ಲೀಘಿಜಮಾತ್ ಬಗ್ಗೆ ಪೋಸ್ಟ್ ಶೇರ್ ಮಾಡಿದರೆ ತಪ್ಪೇನು? ಇದಕ್ಕಾಗಿ ಬೇಲೂರಿನ ನಮ್ಮ ಕಾರ್ಯಕರ್ತ ತೇಜ್ ಕುಮಾರ್ ಶೆಟ್ಟಿ ಅವರ ಮೇಲೆ ಕೇಸ್ ಹಾಕಿದ್ದಾರೆ. ಈ ವಿಷಯದಲ್ಲಿ ಅತಿರೇಕದ ವರ್ತನೆ ತೋರಿಸಿದ ಅರೇಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ನನ್ನ ಸಹೋದ್ಯೋಗಿಗಳಾದ @BSBommai ಅವರಲ್ಲಿ ವಿನಂತಿಸಿದ್ದೇನೆ
— C T Ravi ?? ಸಿ ಟಿ ರವಿ (@CTRavi_BJP) April 12, 2020
ಸಿ.ಟಿ ರವಿರವರು ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್ ಶ್ರೀನಿವಾಸಗೌಡರವರು ಆಕ್ಷೇಪಾರ್ಹ ಪೋಸ್ಟ್ ಹಾಕಿದ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ ಬೇಲೂರು ಸಿಪಿಐ ಸಿದ್ಧರಾಮೇಶ್ವರ್, ಅರೇಹಳ್ಳಿ ಪಿಎಸ್ಐ ಬಾಲು ಎಂಬ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅನ್ಯಧರ್ಮದ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಬಂಧಿಸಿರುವ ಪ್ರಕರಣದಲ್ಲಿ ಆರೋಪಿಯೊಂದಿಗಿನ ಫೋಟೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿರುವ ಅಗತ್ಯವಿರಲಿಲ್ಲ. ಈ ಕುರಿತು ಆ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡಸುತ್ತೇವೆ ಎಂದು ಶ್ರೀನಿವಾಸಗೌಡರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ತನಿಖೆ ಮತ್ತು ಸಚಿವ ಸಿ.ಟಿ ರವಿಯವರ ನಡೆಯ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಚಿಂತಕರಾದ ಶ್ರೀನಿವಾಸ ಕಾರ್ಕಳರವರು ” ಗೌರವಾನ್ವಿತ ಸಚಿವರಾದ ಸಿ ಟಿ ರವಿಯವರೇ, ನೀವು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಮಂತ್ರಿಯಲ್ಲ. ಇಡೀ ರಾಜ್ಯಕ್ಕೆ ಮಂತ್ರಿ. ಮಂತ್ರಿಯಾಗಿ ಸಂವಿಧಾನಕ್ಕೆ ಬದ್ಧರಾಗಿರಬೇಕಾದುದು, ಕಾನೂನು ಆಧರಿಸಿದ ಆಡಳಿತವನ್ನು ಬೆಂಬಲಿಸಬೇಕಾದುದು ತಮ್ಮ ಆದ್ಯ ಕರ್ತವ್ಯ. ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಹೀಗೆ ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ನಡೆಸುವುದು ತಪ್ಪಲ್ಲವೇ? ಇದು ತಪ್ಪು ಸಂದೇಶ ರವಾನಿಸುವುದಿಲ್ಲವೇ? ಇದು ಪೊಲೀಸರ ನೈತಿಕ ಬಲ ಕುಂದಿಸುವುದಿಲ್ಲವೇ? “ನಮ್ಮ ಕಾರ್ಯಕರ್ತರು” ಎಂಬ ನೆಲೆಯಲ್ಲಿ ನೀವು ಅಪರಾಧಿಗಳನ್ನು ರಕ್ಷಿಸಹೊರಟರೆ ಇನ್ನಷ್ಟು ಅಪರಾಧ ಎಸಗಲು ಅದು ನಿಮ್ಮ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡುವುದಿಲ್ಲವೇ? ನಿಮ್ಮ ಕಾರ್ಯಕರ್ತರಿಗೂ ಇತರ ಕಾರ್ಯಕರ್ತರಿಗೂ ರಾಜ್ಯದಲ್ಲಿ ಬೇರೆ ಬೇರೆ ಕಾನೂನುಗಳಿವೆಯೇ? ಇಂತಹ ಕೆಲಸ ಮಾಡುವ ಮೊದಲು ರಾಜ್ಯದ ಒಟ್ಟು ಹಿತಾಸಕ್ತಿ ಮತ್ತು ದೂರಗಾಮಿ ಪರಿಣಾಮಗಳ ಹಿನ್ನೆಲೆಯಲ್ಲಿ ತಾವು ಎರಡೆರಡು ಬಾರಿ ಯೋಚಿಸಬೇಕಾಗಿ ವಿನಂತಿ” ಎಂದು ಫೇಸ್ಬುಕ್ನಲ್ಲಿ ಮನವಿ ಮಾಡಿದ್ದಾರೆ.
ಇಂತಹ ಕಷ್ಟಕಾಲದಲ್ಲಿ ವೈಯಕ್ತಿಕ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ದುಡಿಯುತ್ತಿರುವವರು ಪೊಲೀಸರು. ಅವರ ಸ್ಥೈರ್ಯ ಕುಂದಿಸುವಂತಹ ಕೆಲಸವನ್ನು ಸರಕಾರದ ಮಂತ್ರಿಗಳೇ ಮಾಡುತ್ತಿದ್ದಾರೆ. ಈ ಟ್ವೀಟ್ ಮಾಡಿದ ಎರಡು ತಾಸಿನಲ್ಲೇ ಅಧಿಕಾರಿಗಳ ಮೇಲೆ ಕ್ರಮ ಆಗಿದೆ. ಒಂದು ಕೋಮಿನ ವಿರುದ್ಧ ಸುಳ್ಳು ಬರೆದು ಶಾಂತಿ ಕದಡುವವರಿಗೆ ಧೈರ್ಯ ತುಂಬುತ್ತಿದ್ದಾರೆ ಎಂದು ಪತ್ರಕರ್ತರಾದ ಜಿ.ಟಿ ಸತೀಶ್ರವರು ಆತಂಕ ವ್ಯಕ್ತಪಡಿಸಿದ್ದಾರೆ.


