Homeಕಥೆಜಂಬದ ಹೆಬ್ಬಾವು : ರಸ್ಕಿನ್ ಬಾಂಡ್‌ರವರ ಕಥೆ

ಜಂಬದ ಹೆಬ್ಬಾವು : ರಸ್ಕಿನ್ ಬಾಂಡ್‌ರವರ ಕಥೆ

- Advertisement -
- Advertisement -

ತಾತ ತನ್ನ ಬಳಿ ಹೆಚ್ಚುಕಾಲ ಇರಿಸಿಕೊಳ್ಳಲಾಗದೇ ಹೋದ ಒಂದು ಸಾಕು ಪ್ರಾಣಿಯಿತ್ತು. ಅಜ್ಜಿಯು ಹಕ್ಕಿ ಮತ್ತು ಪ್ರಾಣಿಗಳನ್ನೆಲ್ಲಾ ಸಹಿಸುತ್ತಿದ್ದಳು, ಆದರೆ ಸರೀಸೃಪಗಳನ್ನು ಮಾತ್ರ ಆಕೆ ಸಹಿಸುತ್ತಿರಲಿಲ್ಲ. ಶಾಂತ ರೀತಿಯಿಂದ ಇರುತ್ತಿದ್ದ ಹೆನ್ರಿ ಎಂಬ ಊಸರವಳ್ಳಿ (ಇವನ ವಿಷಯಕ್ಕೆ ಆಮೇಲೆ ಬರೋಣ) ಕಂಡರೇನೇ ಅಜ್ಜಿ ಬಿಳಿಚಿಕೊಳ್ಳುತ್ತಿದ್ದರು. ಅಂಥದ್ದರಲ್ಲಿ ಹೆಬ್ಬಾವನ್ನು ಮನೆಯಲ್ಲಿರಿಸಿಕೊಳ್ಳುವ ಅವಕಾಶ ಇರಲಾರದು ಎಂಬುದು ತಾತನಿಗೆ ತಿಳಿದಿರಬೇಕಿತ್ತು.

ಚಿತ್ರವಿಚಿತ್ರದ ಪ್ರಾಣಿಗಳನ್ನು ಕೊಂಡು ತರಬಾರದು ಎಂದು ಕೊಂಡರೂ ತಾತನ ಮನಸ್ಸು ಆ ವಿಷಯದಲ್ಲಿ ಅಂಕೆ ಮೀರಿ ವರ್ತಿಸುತ್ತಿತ್ತು. ನಮ್ಮ ಮನೆಯಲ್ಲಿ ಅದಾಗಲೇ ಟೋಟೋ (ಕೋತಿ) ಇತ್ತು, ಆದರೂ ಪೇಟೆಯಲ್ಲಿ ಹಾವಾಡಿಗನಿಗೆ ನಾಲ್ಕು ರೂಪಾಯಿಗಳನ್ನು ಕೊಟ್ಟು, ನಾಲ್ಕು ಅಡಿ ಉದ್ದದ ಮರಿ ಹೆಬ್ಬಾವನ್ನು ಕೊಂಡರು. ಕೌತುಕದ ಕಣ್ಣುಗಳಿಂದ ನೋಡುತ್ತಿದ್ದ ಮಕ್ಕಳು ಮತ್ತು ಜನಸಂದಣಿ ಮೆಚ್ಚುಗೆಯಿಂದ ನೋಡುವಂತೆ ತನ್ನ ಭುಜದ ಮೇಲೆ ಹೆಬ್ಬಾವನ್ನು ಬಿಟ್ಟುಕೊಂಡು ತಾತ ಮನೆಗೆ ಬಂದರು.

ಅವರು ಬರುವುದನ್ನು ಮೊದಲು ನೋಡಿದ್ದು ಟೋಟೋ. ಹಲಸಿನ ಮರದ ರೆಂಬೆಯಲ್ಲಿ ನೇತಾಡುತ್ತಿದ್ದ ಟೋಟೋ ತನ್ನ ಕುಲದ್ವೇಷಿಯನ್ನು ಕಂಡೊಡನೆಯೇ ಮನೆಯೊಳಕ್ಕೆ ಓಡಿತು. ಯುದ್ಧೋನ್ಮಾದದಲ್ಲಿ ಕಿರುಚತೊಡಗಿತು. ಇದರ ಶಬ್ದವನ್ನು ಕೇಳಿ ಅಜ್ಜಿ ವರಾಂಡಕ್ಕೆ ಬಂದರು. ತಾತನ ಕುತ್ತಿಗೆಗೆ ಸುತ್ತಿಕೊಂಡಿದ್ದ ಹೆಬ್ಬಾವನ್ನು ನೋಡುತ್ತಿದ್ದಂತೆಯೇ ಅಜ್ಜಿಗೆ ಮೂರ್ಛೆ ಬಂದಂತಾಯಿತು.

“ಅದು ನಿಮ್ಮನ್ನು ಉಸಿರು ಕಟ್ಟಿ ಸಾಯಿಸುತ್ತೆ, ಮೊದಲು ಅದನ್ನು ಬಿಸಾಡಿ!” ಎಂದು ಅಜ್ಜಿ ಕಿರಿಚಿದರು.

“ಎಂಥದ್ದೂ ಇಲ್ಲ! ಇದು ಇನ್ನೂ ಎಳೇದು, ಕ್ರಮೇಣ ಹೊಂದಿಕೊಳ್ಳುತ್ತೆ ಬಿಡು” ಎಂದರು ತಾತ.

“ಅದು ಹೊಂದಿಕೊಳ್ಳಬಹುದು, ನನಗೇನೂ ಹೊಂದಿಕೊಳ್ಳುವ ಕರ್ಮ ಇಲ್ಲ. ನಿಮ್ಮ ಸಂಬಂಧಿ ಮಾಬೆಲ್ ನಮ್ಮೊಂದಿಗೆ ಸ್ವಲ್ಪ ದಿನ ಇರಲೆಂದು ನಾಳೆ ಬರುತ್ತಿರುವುದು ನಿಮಗೆ ಗೊತ್ತು. ಮನೆಯಲ್ಲಿ ಹಾವು ಇದೆ ಎಂದು ಗೊತ್ತಾದರೆ ಅವಳು ಒಂದು ನಿಮಿಷ ಕೂಡ ಇರುವುದಿಲ್ಲ ಅಷ್ಟೆ” ಎಂದರು ಅಜ್ಜಿ.

“ಹೌದಾ, ಹಾಗಾದ್ರೆ ಅವಳು ಮನೆಗೆ ಬರುತ್ತಿದ್ದಂತೆಯೇ ಇದನ್ನು ತೋರಿಸಬೇಕು” ಎಂದರು ತಾತ. ಮನೆಗೆ ನೆಂಟರು ಬರುವುದು ಅವರಿಗೂ, ನನಗೂ ಇಬ್ಬರಿಗೂ ಇಷ್ಟವಾಗುತ್ತಿರಲಿಲ್ಲ.

“ಭಾರಿ ಕಿರಿಕಿರಿ ಮನುಷ್ಯ ಕಣ್ರೀ ನೀವು!” ಎಂದು ಗೊಣಗುತ್ತಾ ಅಜ್ಜಿ, “ಮೊದಲು ಈ ಪೀಡೆಯನ್ನು ಬಚ್ಚಲು ಮನೆಯಲ್ಲಿ ಕೂಡಿ ಹಾಕಿ. ನಂತರ ಹೋಗಿ ಯಾರತ್ರ ಕೊಂಡು ತಂದಿರೋ ಅವನನ್ನು ಕರೆದುಕೊಂಡು ಬಂದು ವಾಪಸ್ ಕೊಟ್ಟು ಕಳಿಸಿ” ಎಂದು ಹೇಳಿದರು.

ಗಾಬರಿಗೊಂಡ ನನ್ನ ಮುಖವನ್ನು ನೋಡುತ್ತಾ ತಾತ ಹೆಬ್ಬಾವನ್ನು ಬಚ್ಚಲಿಗೆ ತೆಗೆದುಕೊಂಡು ಹೋಗಿ ಅಲ್ಲಿ ಟಬ್ ನಲ್ಲಿ ಬಿಟ್ಟರು. ಅದರ ಬಾಗಿಲನ್ನು ಮುಚ್ಚಿ ನನ್ನೆಡೆಗೆ ತಾತ ಬೇಸರದಿಂದ ನೋಡಿದರು.

“ಬಹುಶಃ ಅಜ್ಜಿ ಹೇಳುತ್ತಿರುವುದು ಸರಿ ಅನ್ಸುತ್ತೆ. ಹಸಿವಾದಾಗ ಅದು ಟೋಟೋವನ್ನು ಹಿಡಿದು ನುಂಗಿ ಬಿಟ್ಟರೆ ಕಷ್ಟ ಅಲ್ವಾ” ಎಂದರು.

ಪೇಟೆಯ ಕಡೆಗೆ ಹಾವಾಡಿಗನನ್ನು ಹುಡುಕಿಕೊಂಡು ಅವಸರದಿಂದ ಹೊರಟರು. ಸುಮಾರು ಎರಡು ಗಂಟೆಗಳ ಕಾಲ ತಾತ ಬರಲೇ ಇಲ್ಲ. ಅದುವರೆಗೂ ಅಜ್ಜಿ ವೆರಾಂಡದಲ್ಲಿ ಅತ್ತಿಂದಿತ್ತ ಶತಪತ ಹಾಕುತ್ತಿದ್ದರು. ತಾತ ಜೋಲು ಮೋರೆ ಹಾಕಿ ಕೊಂಡು ಹಿಂದಿರುಗಿದರು. ಅವರನ್ನು ನೋಡಿದೊಡನೆಯೇ ಹಾವಾಡಿಗ ಸಿಕ್ಕಿಲ್ಲ ಎಂಬುದು ತಿಳಿಯುತ್ತಿತ್ತು.

“ದಯವಿಟ್ಟು, ಅದನ್ನು ನೀವೇ ತಗೊಂಡು ಹೋಗಿ, ಕಾಡಿನ ಹತ್ತಿರ ನದಿಯಂಚಿನಲ್ಲಿ ಬಿಟ್ಟು ಬನ್ನಿ” ಎಂದರು ಅಜ್ಜಿ.

“ಸರಿ ಸರಿ, ಮೊದಲು ಅದಕ್ಕೆ ಊಟ ಹಾಕಬೇಕು” ಎನ್ನುತ್ತಾ ತಾತ, ತಾನು ತಂದಿದ್ದ ಪುಕ್ಕಗಳನ್ನು ಕಿತ್ತಿದ್ದ ಕೋಳಿಯನ್ನು (ಆ ಕಾಲದಲ್ಲಿ ಒಂದು ರೂಪಾಯಿಗಿಂತ ಕಡಿಮೆಗೇ ಈ ರೀತಿಯ ಕೋಳಿ ದೊರಕುತ್ತಿತ್ತು) ತಗೊಂಡು ಬಚ್ಚಲಿನ ಕಡೆ ಹೋದರು. ಹಿಂದೆಯೇ ನಾನು, ಅಜ್ಜಿ, ಅಡುಗೆಯವ ಮತ್ತು ತೋಟದ ಮಾಲಿ ಸಾಲಾಗಿ ಹಿಂಬಾಲಿಸಿದೆವು. ತಾತ ಬಾಗಿಲನ್ನು ತೆರೆದು ಒಳಗೆ ಪ್ರವೇಶಿಸಿದರು. ತಾತನ ಕಾಲುಗಳ ಪಕ್ಕದಲ್ಲಿ ನಾನು ನುಸುಳಿ ಇಣುಕಿದೆ. ಉಳಿದವರೆಲ್ಲ ಹಿಂದೆಯೇ ಇದ್ದರು. ಹೆಬ್ಬಾವು ಕಾಣಲಿಲ್ಲ.

“ಅದು ಹೊರಟುಹೋಗಿದೆ” ಎಂದು ತಾತ ಘೋಷಿಸಿದರು.

“ದೂರ ಹೋಗಿರಲು ಸಾಧ್ಯವಿಲ್ಲ, ಟಬ್ ಕೆಳಗೆ, ಸುತ್ತ ಮುತ್ತ ಸರಿಯಾಗಿ ನೋಡಿ” ಎಂದರು ಅಜ್ಜಿ.

ಟಬ್ ಕೆಳಗೆ ಹುಡುಕಿದೆವು. ಸುತ್ತ ಮುತ್ತೆಲ್ಲ ನೋಡಿದೆವು. ತಾತ ಕಿಟಕಿಯ ಬಳಿ ಹೋಗಿ ನೋಡಿದರು. “ನಾವು ಕಿಟಕಿ ತೆರೆದು ತಪ್ಪು ಮಾಡಿದೆವು. ಅದು ಕಿಟಕಿಯಿಂದ ಹೊರಹೋಗಿದೆ” ಎಂದರು.

ಎಲ್ಲರೂ ಸೇರಿ ಸೂಕ್ಷ್ಮವಾಗಿ ಹುಡುಕಾಡಿದೆವು. ಮನೆಯ ವಿವಿಧ ಕೋಣೆಗಳು, ಅಡುಗೆ ಮನೆ, ಅಂಗಳದ ಉದ್ಯಾನ, ಗ್ವಾದಲಿ, ಕೋಳಿ ಗೂಡು ಎಲ್ಲೆಡೆ ಹುಡುಕಿದರೂ ಹೆಬ್ಬಾವು ಕಾಣಿಸಲಿಲ್ಲ.

“ಉದ್ಯಾನದ ಗೋಡೆ ದಾಟಿ ಹೊರ ಹೋಗಿರಬೇಕು. ಇಷ್ಟೊತ್ತಿಗೆ ತುಂಬಾ ದೂರ ಹೋಗಿರುತ್ತೆ ಬಿಡಿ” ಎಂದರು ತಾತ.

“ನಾನೂ ಹಾಗೇ ಅಂದ್ಕೋತೀನಿ” ಎಂದು ನಿಟ್ಟುಸಿರಾದರು ಅಜ್ಜಿ.

ಮಾಬೆಲ್ ಆಂಟಿ ಮೂರು ವಾರ ನಮ್ಮೊಂದಿಗೆ ಇರಲೆಂದು ಮರುದಿನವೇ ಆಗಮಿಸಿದರು. ಅಕಸ್ಮಾತ್ ಹೆಬ್ಬಾವು ಕಾಣಿಸಿಕೊಂಡರೆ ಏನು ಕಥೆ ಎಂದು ತಾತ ಮತ್ತು ನಾನು ಚಿಂತಿತರಾಗಿದ್ದೆವು. ಮೂರು ದಿನಗಳಾದರೂ ಅದರ ಸುಳಿವಿರದುದರಿಂದ ಅದು ಹೋಗಿದ್ದು ಒಳ್ಳೇದಾಯ್ತು ಎಂದು ನಾವು ಸಮಾಧಾನಪಟ್ಟುಕೊಂಡೆವು.

ಸಂಜೆ, ಉದ್ಯಾನದಿಂದ ಜೋರು ಕೂಗು ಕೇಳಿಬಂದಿದ್ದರಿಂದ ಎಲ್ಲರೂ ಗಾಬರಿಬಿದ್ದೆವು. ಮಾಬೆಲ್ ಆಂಟಿ ಪಿಶಾಚಿಯನ್ನು ಕಂಡವಳಂತೆ ಕಿರುಚಿಕೊಂಡು ಓಡೋಡಿ ವೆರಂಡದವರೆಗೂ ಬಂದರು.

ಏದುಸಿರು ಬಿಡುತ್ತಾ, “ಸೀಬೆ ಮರ!” ಎಂದು ಉಸಿರೆಳೆದುಕೊಳ್ಳುತ್ತಾ ಆಂಟಿ, “ಹಣ್ಣು ಕೀಳಲು ಹೋದೆ, ಅದು ನನ್ನನ್ನೇ ನೋಡುತ್ತಿತ್ತು. ಅದರ ಕಣ್ಣುಗಳು! ನನ್ನನ್ನು ಸಜೀವವಾಗಿ ತಿನ್ನುವಂತೆ ನೋಡುತ್ತಿತ್ತು…” ಎಂದರು.

“ಸಮಾಧಾನ ಮಾಡ್ಕೋ” ಎನ್ನುತ್ತಾ ಅಜ್ಜಿ ಸುಗಂಧ ಬೆರೆಸಿದ ನೀರನ್ನು ಆಂಟಿಯ ಮೇಲೆ ಚಿಮುಕಿಸಿ, “ಏನಾಯ್ತು, ಏನು ನೋಡಿದೆ?” ಎಂದು ವಿಚಾರಿಸಿದರು.

“ಹಾವು!” ಎನ್ನುತ್ತಾ ಮಾಬೆಲ್ ಆಂಟಿ ಬಿಕ್ಕಿದರು. “ದೊಡ್ಡ ಗಾತ್ರದ ಹಾವು. ಇಪ್ಪತ್ತು ಅಡಿ ಉದ್ದವಿತ್ತು! ಸೀಬೆ ಮರದಲ್ಲಿತ್ತು. ಅದರ ಕಣ್ಣುಗಳು ಭಯಂಕರ. ನನ್ನನ್ನು ಅದು ಹೇಗೆ ನೋಡಿತು ಗೊತ್ತಾ…”

ತಾತ ಮತ್ತು ಅಜ್ಜಿ ಪರಸ್ಪರ ದೃಷ್ಟಿ ಹಾಯಿಸಿಕೊಂಡರು. ಒಡನೆಯೇ , “ನಾನು ಅದನ್ನು ಕೊಂದು ಬರುತ್ತೀನಿ ತಡಿ” ಎನ್ನುತ್ತಾ ತಾತ ಕೊಡೆಯನ್ನು ಹಿಡಿದು ಅತ್ತ ಕಡೆ ಹೊರಟರು. ಆದರೆ ಸೀಬೆ ಮರದ ಬಳಿ ತಾತ ಹೋಗುವಷ್ಟರಲ್ಲಿ ಹೆಬ್ಬಾವು ಹೊರಟುಹೋಗಿತ್ತು.

“ಬಹುಶಃ ಮಾಬೆಲ್ ಆಂಟಿ ಅದನ್ನು ಬೆದರಿಸಿಬಿಟ್ಟಿರಬೇಕು” ಎಂದೆ ನಾನು.

“ಶ್! ಆಂಟಿಯ ಬಗ್ಗೆ ಹಾಗೆಲ್ಲಾ ಮಾತಾಡಬಾರದು” ಎಂದರು ತಾತ. ಆದರೆ, ತಾತನ ಕಣ್ಣುಗಳಲ್ಲಿ ತುಂಟ ನಗು ಹೊರಹೊಮ್ಮಿದ್ದನ್ನು ನಾನು ಗಮನಿಸಿದೆ.

ಈ ಘಟನೆಯ ನಂತರ ಹೆಬ್ಬಾವು ಹಲವು ಬಾರಿ ಅನಿರೀಕ್ಷಿತ ಸ್ಥಳಗಳಲ್ಲಿ ದರ್ಶನ ಕೊಟ್ಟಿತು. ಸೋಫಾ ಮೆತ್ತೆಯ ಕೆಳಗಿನಿಂದ ಅದೊಮ್ಮೆ ಹೊರಬಂದಾಗ ಮಾಬೆಲ್ ಆಂಟಿ ಬೆಚ್ಚಿ ಬಿದ್ದು, ತಮ್ಮ ಬ್ಯಾಗ್ ತಗೊಂಡು ಮನೆಯಿಂದ ಹೊರಟುಬಿಟ್ಟರು.

ಅದರ ಹುಡುಕಾಟ ಮುಂದುವರೆಯಿತು.

ಒಂದು ಬೆಳಗ್ಗೆ ಸುರುಳಿಸುತ್ತಿಕೊಂಡಿದ್ದ ಹೆಬ್ಬಾವನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ಕಂಡೆ. ಅದು ತನ್ನ ಪ್ರತಿಬಿಂಬವನ್ನೇ ತದೇಕಚಿತ್ತದಿಂದ ನೋಡುತ್ತಿತ್ತು. ನಾನು ತಾತನ ಬಳಿ ಹೋಗಿ ತಿಳಿಸಿ, ಅವರು ಬರುವಷ್ಟರಲ್ಲಿ ಅದು ಹೊರಟುಹೋಗಿತ್ತು. ಉದ್ಯಾನದಲ್ಲೊಮ್ಮೆ ಅದು ಕಾಣಿಸಿತು. ಅಡುಗೆಯವನಿಗೆ ಮಹಡಿಯ ಏಣಿಯ ಮೇಲೆ ತೆವಳುತ್ತಿದ್ದ ಅದು ಕಂಡುಬಂತು. ಎರಡನೇ ಬಾರಿ ಅದನ್ನು ಡ್ರೆಸ್ಸಿಂಗ್ ಟೇಬಲಿನ ಮೇಲೆ ನೋಡಿದೆವು. ತನ್ನನ್ನೇ ತಾನು ಮೆಚ್ಚುಗೆಯಿಂದ ನೋಡಿಕೊಳ್ಳುತ್ತಿತ್ತು. ತನ್ನ ಪ್ರತಿಬಿಂಬಕ್ಕೆ ಅದು ಆಕರ್ಷಿತಗೊಂಡಂತಿತ್ತು.

“ಇದಕ್ಕೆ ನಾವೆಲ್ಲರೂ ಹೆಚ್ಚೆಚ್ಚು ಗಮನ ಕೊಡುತ್ತಿರುವುದರಿಂದ ಇದಕ್ಕೆ ಜಂಬ ಬಂದಿದೆ: ಎಂದರು ತಾತ.

“ಮಾಬೆಲ್ ಆಂಟಿಯನ್ನು ಮೆಚ್ಚಿಸಲು ಚೆನ್ನಾಗಿ ಕಾಣಲೆಂದು ಕನ್ನಡಿ ನೋಡಿಕೊಳ್ಳುತ್ತಿರ ಬಹುದು” ಎಂದು ನಾನು ಹೇಳಿದೆ.

(ಹೀಗನ್ನಬಾರದಿತ್ತು ಅಂತ ಆಮೇಲೆ ಅನ್ನಿಸಿತು. ಏಕೆಂದರೆ, ನನ್ನ ಈ ಮಾತನ್ನು ಕೇಳಿಸಿಕೊಂಡ ಅಜ್ಜಿ ಮುಂದಿನ ವಾರ ಪೂರಾ ಖರ್ಚಿಗೆ ಕಾಸು ಕೊಡಲಿಲ್ಲ)

“ಏನಾದರಾಗಲಿ ನಮಗೆ ಈಗ ಅದರ ದೌರ್ಬಲ್ಯ ತಿಳಿಯಿತು” ಎಂದರು ತಾತ.

“ನೀವೂ ತಮಾಷೆ ಮಾಡಲು ಶುರು ಮಾಡಿದ್ರಾ?” ಎಂದರು ಕೋಪದಿಂದ ಅಜ್ಜಿ.

“ಏ, ನಾನು ಮಾಬೆಲ್ ಬಗ್ಗೆ ಮಾತಾಡಲಿಲ್ಲ, ಹೆಬ್ಬಾವನ್ನು ಹಿಡಿಯಲು ಅದರ ಕನ್ನಡಿ ವೀಕ್ಷಣೆಯ ಹವ್ಯಾಸ ಸಹಾಯವಾಗಬಹುದು ಎಂಬರ್ಥದಲ್ಲಿ ಹೇಳಿದೆ” ಎಂದು ತಾತ ವಿವರಣೆ ಕೊಟ್ಟರು.

ತಾತ ಹೆಬ್ಬಾವನ್ನು ಹಿಡಿಯಲು ಒಂದು ದೊಡ್ಡ ಪಂಜರನ್ನು ತಯಾರಿಸಿದರು. ಅದರ ಒಂದು ಕೊನೆಯಲ್ಲಿ ಕನ್ನಡಿಯನ್ನು ಅಳವಡಿಸಿದರು. ಒಳಗೆ ಕೋಳಿಯ ಮಾಂಸ ಮತ್ತಿತರ ರುಚಿರುಚಿ ತಿನಿಸುಗಳನ್ನಿಟ್ಟರು. ಅದರ ಪ್ರವೇಶದ್ವಾರವನ್ನು ಸುಲಭವಾಗಿ ಮುಚ್ಚಲು ವ್ಯವಸ್ಥೆ ಮಾಡಿದರು.

ನಾವು ಈ ಪಂಜರವನ್ನು ಮಾಡುವ ಹೊತ್ತಿಗಾಗಲೇ ಮಾಬೆಲ್ ಆಂಟಿ ಮನೆ ಬಿಟ್ಟು ಹೋಗಿಯಾಗಿತ್ತು. ಆದರೂ, ನಾವು ಈ ಹಾವು ಹಿಡಿಯುವ ಯೋಜನೆ ಮಾಡಲೇಬೇಕಿತ್ತು. ಏಕೆಂದರೆ, ಮನೆಯಲ್ಲಿ ಎಲ್ಲೆಂದರಲ್ಲಿ ಅಚಾನಕ್ಕಾಗಿ ಬಂದುಬಿಡುತ್ತಿದ್ದ ಈ ಹೆಬ್ಬಾವನ್ನು ಇರಿಸಿಕೊಳ್ಳುವಂತಿರಲಿಲ್ಲ. ಹೆಬ್ಬಾವು ವಿಷಜಂತುವೇನಲ್ಲ, ಆದರೆ ಅದು ಕೋತಿಯನ್ನು ಸರಾಗವಾಗಿ ನುಂಗಿಬಿಡಬಹುದು ಮತ್ತು ಚಿಕ್ಕ ಬಾಲಕನಾದ ನಾನು ಮನೆಯಲ್ಲಿದ್ದಾಗ ಹಿರಿಯರು ಅದನ್ನು ಇರಿಸಿಕೊಳ್ಳುವುದು ಅಪಾಯ ಎಂದು ಭಾವಿಸಿದ್ದರು.

ಸ್ವಲ್ಪ ದಿನ ಏನೂ ವಿಶೇಷ ಸಂಭವಿಸಲಿಲ್ಲ. ಒಂದು ಬೆಳಗ್ಗೆ ನಾನು ಶಾಲೆಗೆ ಹೊರಟಿದ್ದೆ, ಆಗ ಹೆಬ್ಬಾವನ್ನು ಪಂಜರದಲ್ಲಿ ಕಂಡೆ. ಅದಕ್ಕಾಗಿ ಇರಿಸಿದ್ದ ತಿನಿಸುಗಳನ್ನೆಲ್ಲಾ ಮುಗಿಸಿತ್ತು. ಸುರುಳಿಸುತ್ತಿಕೊಂಡು ಕನ್ನಡಿಯನ್ನು ನೋಡಿಕೊಂಡು ಮಲಗಿತ್ತು. ಅದರ ಮೊಗದಲ್ಲಿ ಹಸನ್ಮುಖವಿತ್ತು ? ನೀವು ಬೇಕಿದ್ದರೆ ಹೆಬ್ಬಾವಿನ ಮುಗುಳ್ನಗೆಯನ್ನು ಊಹಿಸಿಕೊಳ್ಳಬಹುದು.

ಮೆಲ್ಲಗೆ ಪಂಜರದ ಬಾಗಿಲನ್ನು ಮುಚ್ಚಿದೆ. ಆದರೆ, ಹೆಬ್ಬಾವು ನನ್ನನ್ನು ಗಮನಿಸಲಿಲ್ಲ. ತಾತ ಮತ್ತು ತೋಟದ ಮಾಲಿ ಪಂಜರವನ್ನು ಟಾಂಗಾದಲ್ಲಿ ಇರಿಸಿಕೊಂಡು ನದಿಯ ಅಂಚಿಗೆ ಒಯ್ದರು. ಪಂಜರದ ಬಾಗಿಲನ್ನು ತೆರೆದಿಟ್ಟು ವಾಪಸ್ ಬಂದರು. ಅವರು ಬಾಗಿಲನ್ನು ತೆರೆದು ಸ್ವಲ್ಪ ದೂರ ಬಂದರೂ ಹೆಬ್ಬಾವು ಹೊರಕ್ಕೇ ಬರಲಿಲ್ಲವಂತೆ.

ಅಲ್ಲಿಂದ ಬಂದ ನಂತರ ತಾತ, “ಆ ಕನ್ನಡಿಯನ್ನು ವಾಪಸ್ ತೆಗೆದುಕೊಂಡು ಬರಲು ಮನಸ್ಸಾಗಲಿಲ್ಲ. ಇದೇ ಮೊದಲ ಬಾರಿ ಪ್ರೀತಿಯಲ್ಲಿ ಮುಳುಗಿರುವ ಹಾವನ್ನು ನಾನು ಕಂಡದ್ದು” ಎಂದರು.

ಮೂಲ: ರಸ್ಕಿನ್ ಬಾಂಡ್
ಕನ್ನಡಕ್ಕೆ: ಡಿ ಜಿ ಮಲ್ಲಿಕಾರ್ಜುನ್
ಶಿಡ್ಲಘಟ್ಟದವರು. ಮೆಡಿಕಲ್ ಶಾಪ್ ನಡೆಸುವ ಮಲ್ಲಿಕಾರ್ಜುನ್ ಅವರ ಆಸಕ್ತಿಗಳು ಮತ್ತು ಪ್ರವೃತ್ತಿಗಳು ಹಲವು. ಫೋಟೋಗ್ರಾಫರ್ ಆಗಿ ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ಪ್ರವಾಸದ ಹುಚ್ಚು ಕೂಡ. ಅವರ ಅನುವಾದದ `ರಸ್ಕಿನ್ ಬಾಂಡ್ ಕಥೆಗಳು’ ಪುಸ್ತಕ ಕನ್ನಡ ಓದುಗ ವಲಯದಲ್ಲಿ ಬಹಳ ಗಮನ ಸೆಳೆಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...