Homeಮುಖಪುಟಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ... - ಎ.ನಾರಾಯಣ

ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ… – ಎ.ನಾರಾಯಣ

ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

- Advertisement -
- Advertisement -

ಯಾವ ಕಾಲವೂ ಇಷ್ಟೊಂದು ಉತ್ತಮವಾಗಿರಲಿಲ್ಲ, ಯಾವ ಕಾಲವೂ ಇದಕ್ಕಿಂತ ಕೆಟ್ಟದಾಗಿರಲಿಲ್ಲ…(It was the best of times, it was the worst of times…)

ಇಂಗ್ಲಿಷ್ ಲೇಖಕ ಚಾಲ್ರ್ಸ್ ಡಿಕೆನ್‍ಸನ್ ಫ್ರೆಂಚ್ ಕ್ರಾಂತಿಯ ಸುತ್ತಲ ವಿದ್ಯಮಾನಗಳನ್ನು ಆದರಿಸಿ ಬರೆದ ಎ ಟೇಲ್ ಆಫ್ ಟು ಸಿಟೀಸ್ ಕಾದಂಬರಿಯ ಆರಂಭದ ವಾಕ್ಯ ಇದು. ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದು ಪೂರೈಸಿದ ಒಂದು ವರ್ಷವನ್ನು ಮೆಲುಕು ಹಾಕುವಾಗ ಈ ಸಾಲುಗಳು ನೆನಪಾಗುತ್ತವೆ.

ಹೌದು, ಕೆಲವರ ದೃಷ್ಟಿಯಲ್ಲಿ ಸಂದ ವರ್ಷಕ್ಕಿಂತ ಉತ್ತಮ ಕಾಲವೇ ಇರಲಿಲ್ಲ. ಯಾರ ದೃಷ್ಟಿಯಲ್ಲಿ ಹಾಗೆ?

ದೆಹಲಿಯ ಇಂಗ್ಲಿಷ್ ಲೇಖಕರೊಬ್ಬರು ಬರೆದರು. ಯಾವುದರದ್ದೇ ಆಗಿರಲಿ ಎರಡನೆಯ ಇನ್ನಿಂಗ್ಸ್ ನಲ್ಲಿ ವಿಶೇಷ ಸತ್ವ ಉಳಿದಿರುವುದಿಲ್ಲ ಅಂತ. ಸಚಿನ್ ತೆಂಡೂಲ್ಕರ್ ಅವರ ಎರಡನೆಯ ಇನ್ನಿಂಗ್ಸ್ ಆಟದಿಂದ ಹಿಡಿದು, ಹಲವು ಕಾದಂಬರಿಗಳ, ಸಿನೆಮಾಗಳ ಎರಡನೆಯ ಭಾಗದವರೆಗೆ ನೋಡಿದರೆ, ನಂತರದ್ದು ಮೊದಲಿನಷ್ಟು ಗಮನ ಸೆಳೆಯುವುದಿಲ್ಲ ಎನ್ನುತ್ತಾ ಇದಕ್ಕೆ ತದ್ವಿರುದ್ಧವಾಗಿ ಕಂಡದ್ದು ನರೇಂದ್ರ ಮೋದಿಯವರ ಸರಕಾರದ ಎರಡನೆಯ ಆವೃತ್ತಿ ಎನ್ನುತ್ತಾರೆ ಆ ಲೇಖಕ. ಯಾಕೆ?

ಯಾಕೆಂದರೆ ಗಮನ ಸೆಳೆಯುವುದೊಂದೇ ಸರಕಾರವೊಂದರ ಸಾಧನೆ ಎನ್ನುವುದಾದರೆ ಎರಡನೆಯ ಆವೃತ್ತಿಯಲ್ಲಿ ನರೇಂದ್ರ ಮೋದಿಯವರ ಸರಕಾರ ಮಾಡಿದ್ದೇನು ಕಡಿಮೆಯಲ್ಲ. ಯಾರ ಗಮನ, ಯಾತಕ್ಕಾಗಿ ಗಮನ, ಎಲ್ಲಿಗೆ ಗಮನ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ಮಾತ್ರ ಈ ಸಾಧನೆಗಳ ಹಲವು ಬಗೆಯ ಜ್ಞಾತ, ಅಜ್ಞಾತ ಮುಖಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುವುದು.

ಭಾರತೀಯ ಜನತಾ ಪಕ್ಷದವರು ಮತ್ತು ಅವರ ಸೈದ್ಧಾಂತಿಕ ಮಾರ್ಗದರ್ಶಕರು ದಶಕಗಳಿಂದ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮಾದರಿಯನ್ನು ಒಪ್ಪಿಕೊಂಡು, ಅದರ ಅಮಲನ್ನು ನಖಶಿಖಾಂತವಾಗಿ ಏರಿಸಿಕೊಂಡವರಿಗೆ ಎರಡನೆಯ ಬಾರಿಗೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ಸಂದ ಒಂದು ವರುಷ ಅಂತಿಂತಹಾ ಸಮಯವಲ್ಲ. ಅವರ ಪಾಲಿಗೆ ಇಂತಹ ಸುಸಮಯವೇ ಇರಲಿಲ್ಲ. ಹೇಳಿ ಕೇಳಿ ಅವರದ್ದೇ ಏಕಚಕ್ರಾಧಿಪತ್ಯ. ಹನ್ನೆರಡು ತಿಂಗಳುಗಳ ಈ ಅವಧಿಯಲ್ಲಿ ಎಷ್ಟೋ ಕಾಲ ಬಿಜೆಪಿಯ ‘ರಾಷ್ಟ್ರೀಯ’ ಅಜೆಂಡಾದಲ್ಲೇ ಬಾಕಿ ಉಳಿದಿದ್ದ ಎಷ್ಟೊಂದು ಯೋಜನೆಗಳೆಲ್ಲಾ ಸಾಕಾರವಾಗಿ ಬಿಟ್ಟವು? ಸಂವಿಧಾನದ 370ನೆಯ ವಿಧಿಯ ಅಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಮುಸ್ಲಿಂ ಧರ್ಮದ ಕೆಲ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಕ್ ಮೂಲಕ ವಿಚ್ಛೇದನ ನೀಡುವ ಸಂಪ್ರದಾಯವನ್ನು ರದ್ದು ಪಡಿಸಲಾಯಿತು.

ಭಯೋತ್ಪಾದನಾ ವಿರೋಧಿ ಕಾನೂನುಗಳಿಗೆ ಮತ್ತಷ್ಟೂ ಹಲ್ಲುಗಳನ್ನು ಸೇರಿಸಿ ಯಾರಿಗಾದರೂ ಭಯೋತ್ಪಾದಕರ ಪಟ್ಟ ಕಟ್ಟುವ ಅಧಿಕಾರವನ್ನು ಆಂತರಿಕ ಭದ್ರತಾ ಪಡೆಯವರಿಗೆ ನೀಡಲಾಯಿತು. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಜನ್ಮಭೂಮಿ ವಿವಾದವನ್ನು ಸುಪ್ರೀಂಕೋರ್ಟ್ ಹಿಂದೂಗಳ ಪರವಾಗಿ ಇತ್ಯರ್ಥಗೊಳಿಸುವ ಮೂಲಕ ಬಿಜೆಪಿಯ ಬಹುದಿನದ ಭರವಸೆಯಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು. ಹಿಂದೂ ವಲಸಿಗರಿಗೆ ನೆರವಾಗಲು ಸಿಎಎ, ಮುಸ್ಲಿಂ ನುಸುಳುಕೋರರನ್ನು ಹೊಡೆದೋಡಿಸಲು ಎನ್‍ಆರ್‍ಸಿ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಅನನ್ಯ ಬಾಂಧವ್ಯ… ಹೀಗೆ ಹಿಂದೂ ರಾಷ್ಟ್ರವಾದಿಗಳ ಬಹುದಿನದ ಕನಸುಗಳೆಲ್ಲಾ ನನಸಾದ ವರ್ಷ ಇದು. ದಿ ಬೆಸ್ಟ್ ಆಫ್ ದಿ ಟೈಮ್ಸ್.

ಮೇಲ್ನೋಟಕ್ಕೆ ‘ರಾಷ್ಟ್ರನಿರ್ಮಾಣ’ದ ದೊಡ್ಡ ದೊಡ್ಡ ಆಧಾರ ಸ್ಥಂಭಗಳಂತೆ ಕಾಣಿಸುವ ಈ ಸಾಧನೆಗಳನ್ನು ಸಾವಿರ ಪಾಲು ಹಿಗ್ಗಿಸಿ, ವಿಜೃಂಭಿಸಿ ಜನರ ಮುಂದಿಡುವ ಮೂಲಕ ಇನ್ನೇನು ರಾಮರಾಜ್ಯ ಸ್ಥಾಪನೆ ಆಗಿಯೇಬಿಟ್ಟಿತು ಎನ್ನುವ ಜನಾಭಿಪ್ರಾಯ ರೂಪಿಸುವ ಪ್ರಯತ್ನ ಎಂದಿನಂತೆ ನಡೆಯಿತು. ಅದೇ ವೇಳೆ ಇನ್ನೊಂದೆಡೆ ಮೊದಲೇ ಹಲ್ಲುಕಿತ್ತ ಹಾವಿನಂತಾಗಿದ್ದ ವಿರೋಧ ಪಕ್ಷಗಳ ಚರ್ಮ ಸುಲಿದು, ಬಾಲ ತುಂಡರಿಸಿ ಮಲಗಿಸುವ ಮೂಲಕ, ಮಾಧ್ಯಮಗಳನ್ನು ದಾನ, ಬೇಧ, ದಂಡ ಎಲ್ಲವನ್ನೂ ವಿಧಿವತ್ತಾಗಿ ಪ್ರಯೋಗಿಸಿ ಮಕ್ಕಾಡೆ ಮಲಗಿಸುವ ಮೂಲಕ ಯಾವುದೇ ಪ್ರತಿಮತ ಇಲ್ಲದಂತೆ, ಎರಡನೆಯ ಅಭಿಪ್ರಾಯಕ್ಕೆ ಅನುವೇ ಇಲ್ಲದಂತೆ, ಪ್ರಶ್ನೆಗಳಿಗೆ ಅವಕಾಶವೇ ಇಲ್ಲದಂತೆ ಮಾಡಿ ಸಾಧನೆಗಳ ಸೊಗಸನ್ನು ಜನರಿಗೆ ಯಾವುದೇ ಅಡೆತಡೆ ಇಲ್ಲದೆ ಉಣಬಡಿಸಲಾಯಿತು.

ಇನ್ನು ನ್ಯಾಯಾಂಗ. ಅದು ತಾನಾಗಿಯೇ ರಾಜಕೀಯ ಅಧಿಕಾರದ ಅಬ್ಬರಕ್ಕೆ ಒಲಿಯಿತೋ, ಅಥವಾ ಅದನ್ನು ಒಲಿಸಿಕೊಳ್ಳಲಾಯಿತೋ? ಈ ಪ್ರಶ್ನೆಗೆ ಚರಿತ್ರೆ ಮುಂದೊಂದು ದಿನ ಉತ್ತರ ನೀಡಿತು. ಸದ್ಯಕ್ಕಂತೂ ಸರಕಾರವೊಂದು ನ್ಯಾಯಾಂಗದಿಂದ ಎದುರಿಸಬಹುದಾದ ಯಾವ ಅಡೆತಡೆಗಳು ಇಲ್ಲ. ಎಲ್ಲವೂ ಸುಗಮ. ಎಲ್ಲವೂ ಸಲೀಸು. ಆನೆ ನಡೆದದ್ದೇ ದಾರಿ. ಕಾಶ್ಮೀರ ಭಾರತದಲ್ಲಿ ಈಗ ಸಂಪೂರ್ಣ ವಿಲೀನ ಆಗಿದೆ ಎನ್ನುವ ವಾದ ಸರಿಯೇ? ಒಂದು ರಾಜ್ಯ ಭಾರತೀಯ ಒಕ್ಕೂಟದೊಂದಿದೆ ವಿಲೀನವಾಗುವುದು ಎಂದರೆ ಅದು ಜನರ ಮನಸ್ಸುಗಳನ್ನು ಬೆಸೆಯುವುದೇ ಅಥವಾ ಭೂಬಾಗವನ್ನು ಭೂಪಟದಲ್ಲಿ ಜೋಡಿಸುವುದೇ? ಈ ಪಶ್ನೆ ಕೇಳುವವರಿರಲಿಲ್ಲ. ಹೌದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಅಲ್ಲಿನ ಪರಿಸರ ಪರಿಸ್ಥಿತಿ ಹಾಗಿತ್ತು ಮತ್ತು ಹಾಗಿದೆ ಎನ್ನುವ ಸತ್ಯ ಬದಲಾಗಿದೆಯೇ? ಈ ಪ್ರಶ್ನೆ ಕೇಳುವವರಿಲ್ಲ. ವಿಶೇಷ ಸ್ಥಾನಮಾನ ನೀಡಿದ ಕಾರಣ ಭಯೋತ್ಪಾದನೆ ಹೆಚ್ಚಾಯಿತು ಎನ್ನುವ ವಾದವನ್ನು ಸಮರ್ಥನೆಗಾಗಿ ಮುಂದಿಡಲಾಯಿತು. ಹಾಗಾದರೆ ವಿಶೇಷ ಸ್ಥಾನಮಾನ ಕಿತ್ತುಕೊಂಡ ನಂತರ ಭಯೋತ್ಪಾದನೆಯ ಹುಟ್ಟಡಗಿದೆಯೇ? ಅಲ್ಲಿನ ಪರಿಸ್ಥಿತಿ ಸಂಪೂರ್ಣ ಸರಕಾರದ ಹತೋಟಿಗೆ ಬಂದಿದೆಯೇ? ಬಂದಿದ್ದರೆ ಇನ್ನೂ ಭಾರತದ ಪರವಾಗಿಯೇ ಇಷ್ಟು ವರ್ಷ ರಾಜಕೀಯ ಮಾಡಿದ್ದ ಅಲ್ಲಿನ ಜನನಾಯಕರನ್ನೆಲ್ಲಾ ಯಾಕೆ ಇನ್ನೂ ಬಂಧನದಲ್ಲಿ ಇಟ್ಟಿರುವುದು? ತ್ರಿವಳಿ ತಲಾಕ್ ಕೊನೆಯಾಯಿತು? ಸರಿ. ಮುಸ್ಲಿಮರಲ್ಲಿ ಒಂದು ಪಂಗಡದ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಸಮಸ್ಯೆಯನ್ನು ಕಾನೂನಿನಲ್ಲಿ ಪರಿಹರಿಸಲಾಯಿತು ಅಂತ ಇಟ್ಟುಕೊಳ್ಳೋಣ. ಆದರೆ ಅದೇ ವೇಳೆ ಇಡೀ ಮುಸ್ಲಿಂ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚು ಅಭದ್ರತೆಯನ್ನು ಎದುರಿಸುತ್ತಿರುವಂತೆ ಯಾಕಾಯಿತು?

ಸಿಎಎ ಮತ್ತು ಎನ್‍ಆರ್‌ಸಿ ದೇಶಾದ್ಯಂತ ಅನುಷ್ಠಾನಗೊಂಡರೆ ದೇಶ ಎದುರಿಸಬೇಕಾದ ಸಾಂವಿಧಾನಿಕ ಮತ್ತು ಮಾನವೀಯ ಬಿಕ್ಕಟ್ಟು ಹೇಗಿರಬಹುದು? ಸಿಎಎ ಮತ್ತು ಎನ್‍ಆರ್‌ಸಿ ಈ ದೇಶದಲ್ಲಿ ಹುಟ್ಟುಹಾಕಿದ ಸಾಮಾಜಿಕ-ಧಾರ್ಮಿಕ ಕಂದರಗಳು ಮತ್ತು ಅಭದ್ರತೆ ಮುಂದೆ ದೇಶವನ್ನು ಹೇಗೆ ಕಾಡಬಹುದು? ಅಯೋಧ್ಯೆಯ ರಾಮ ಮಂದಿರ ಈ ದೇಶದ ಬಹುದೊಡ್ಡ ಅಗತ್ಯವೇ? ಹೀಗೆ ಸಾಧನೆ ಎಂದು ಯಾವುದನ್ನು ಮುಂದಿಡಲಾಯಿತೋ, ಅವುಗಳಲ್ಲಿ ಪ್ರತಿಯೊಂದರ ಸುತ್ತಲೂ ಎಷ್ಟೋ ಪ್ರಶ್ನೆಗಳಿವೆ. ನೋವಿನ ಚಿತ್ರಗಳಿವೆ. ಈ ಪ್ರಶ್ನೆಗಳನ್ನು ಕೇಳುವವರಿಲ್ಲ. ಪ್ರಶ್ನೆಗಳನ್ನು ಕೊಲ್ಲಲಾಗುವುದಿಲ್ಲ. ಆದರೆ ಪ್ರಶ್ನೆ ಕೇಳುವ ಸಾಂಸ್ಥಿಕ ನಾಲಿಗೆಗಳನ್ನು ಕೊಲ್ಲಬಹುದು ಅಥವಾ ಕೊಳ್ಳಬಹುದು. ಆಗ ಪ್ರಶ್ನೆಗಳು ಕೇಳಿಸುವುದಿಲ್ಲ. ಪ್ರಶ್ನೆಗಳೇ ಇಲ್ಲದಲ್ಲಿ ಹೇಳಿದೆಲ್ಲವೂ ಸಾಧನೆಗಳೇ ಆಗುತ್ತವಲ್ಲ.

ಇದು ಸಾಧನೆಗಳೆಂದು ಬಿಂಬಿಸಲಾದ ಬೆಳವಣಿಗೆಗಳಲ್ಲಿ ಹುದುಗಿರುವ ವೈಫಲ್ಯದ ಕತೆಯಾದರೆ, ಇನ್ನು ಏನು ಮಾಡಿದರೂ ಅಡಗಿಸಿಡಲಾಗದ ವೈಫಲ್ಯಗಳ ಕತೆಯೇ ಬೇರೆ. ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

ಕೋರೋನಾ ಪೂರ್ವದಲ್ಲೇ ಉದ್ಯೋಗ ಕಳೆದುಕೊಂಡವರೆಷ್ಟೋ? ವರಮಾನ ಕಡಿತ ಅನುಭವಿಸಿದವರೆಷ್ಟೋ? ನಿರಾಶೆಯಿಂದ ಕುಸಿದು ಆತ್ಮಹತ್ಯೆಗೆ ಶರಣಾದವರೆಷ್ಟೋ? ಅರ್ಥ ವ್ಯವಸ್ಥೆಯನ್ನು ನಿಭಾಯಿಸುವ ಕನಿಷ್ಠ ಸಾಮಥ್ರ್ಯವಾದರೂ ಸರಕಾರಕ್ಕೆ ಇದೆಯೇ ಎನ್ನುವ ಪ್ರಶ್ನೆ ದೇಶದಲ್ಲಿ ದೊಡ್ಡದಾಗಿ ಅನುರಣಿಸಬೇಕಿತ್ತು. ಆದರೆ ಅಂತಹ ಪ್ರಶ್ನೆ ಎತ್ತುವವರು ಯಾರು? ಕೋರೋನಾ ಕಾಲಿಟ್ಟ ನಂತರವಂತೂ ಅದನ್ನು ನಿಭಾಯಿಸಿದ ರೀತಿಯಲ್ಲಿ ಆಡಳಿತ ನೈಪುಣ್ಯವನ್ನೂ, ನಾಯಕತ್ವದ ಹೆಚ್ಚುಗಾರಿಕೆಯನ್ನು ಕಾಣಬೇಕಾದರೆ ಅಂತಿತಹಾ ಭಕ್ತಿಯ ಕಣ್ಣುಗಳು ಸಾಲದು. ಕೊರೋನ ಬಂದದ್ದು ಇಡೀ ವಿಶ್ವದ ದುರ್ದೈವ ಇರಬಹುದು. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಇದೊಂದು ಬಯಸದೆ ಬಂದ ಅನುಕೂಲ. ಇನ್ನು ಮುಂದೆ ಎಲ್ಲಾ ವೈಫಲ್ಯಗಳನ್ನು, ವಿಶೇಷವಾಗಿ ಅರ್ಥ ವೈಫಲ್ಯಗಳನ್ನು ಕೋರೋನ ಸಂಕಷ್ಟದತ್ತ ಬೊಟ್ಟು ಮಾಡಿ ಪಾರಾಗಬಹುದು. ಕೋರೋನ ಒಂದು ಬಾರದೆ ಇದ್ದರೆ ಭಾರತವನ್ನು ಪ್ರಪಂಚದ ಏಕಮೇವಾದ್ವಿತೀಯ ಆರ್ಥಿಕ ಶಕ್ತಿಯನ್ನಾಗಿ ಕಟ್ಟುತಿದ್ದೆವು ಅಂತ ಈ ಸರಕಾರದ ಮಂದಿ ಇನ್ನೇನು ಹೇಳಲು ಪ್ರಾರಂಭಿಸುತ್ತಾರೆ. ಕೊರೋನಾ ಎಷ್ಟೇ ಸಂಖ್ಯೆಯ ಸಾವು ನೋವುಗಳನ್ನು ತರಲಿ ಅದು ಸರಕಾರವನ್ನು ಬಾಧಿಸದೆ ಇರುವ ಹಾಗೆ, ‘ನಮ್ಮ ಆಡಳಿತ, ನಮ್ಮ ನಾಯಕ ಇಲ್ಲದೆ ಹೋಗಿದ್ದರೆ ಈ ಸಂಖ್ಯೆ ಇನ್ನೂ ನೂರು ಪಾಲು ಹೆಚ್ಚಾಗಿರುತ್ತಿತ್ತು’ ಎನ್ನುವ ಸಂಕಥನ ಹುಟ್ಟಲಿದೆ. ಇವನ್ನೆಲ್ಲಾ ಜನ ನಂಬುವಂತೆ ಮಾಡಲು ಏನೇನು ಮಾಡಬೇಕೋ ಅದಕ್ಕೆ ಬೇಕಾದ ವ್ಯವಸ್ಥೆ ಈಗಗಾಲೇ ಆಗಿರುತ್ತದೆ.

ಕೆಲವರ ಪ್ರಕಾರ ಕೊರೋನಾ ಮುಂದಿನ ಚುನಾವಣೆಯನ್ನೂ ನಿರ್ಣಯಿಸಿ ಬಿಟ್ಟಿದೆ. ಆದುದರಿಂದ ಸಂದ ವರ್ಷ ಏನಾಯಿತು, ಮುಂದಿನ ನಾಲ್ಕು ವರ್ಷಗಳಲ್ಲಿ ಏನೇನಾಗಲಿವೆ ಇತ್ಯಾದಿಗಳೆಲ್ಲಾ ಒಂದರ್ಥದಲ್ಲಿ ಅಪ್ರಸ್ತುತ ವಿಷಯಗಳು. ಆದರೆ, ಭವಿಷ್ಯದ ಹಾದಿ ಅಷ್ಟೊಂದು ನೇರವಾಗಿ ಇರುವುದಿಲ್ಲ. ಅಲ್ಲಿ ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತವೆ. ಸದ್ಯ ಅಂತಹ ತಿರುವುಗಳ ನಿರೀಕ್ಷೆ ಮಾತ್ರವೇ ಭರವಸೆ.

ಸದ್ಯಕ್ಕಂತೂ ಸಂದ ವರುಷ ನೋಡುವವರ ದೃಷ್ಟಿಯನ್ನು ಅನುಸರಿಸಿ ಅತ್ಯುತ್ತಮ ಕಾಲ ಅಥವಾ ಅತೀ ಕೆಟ್ಟ ಕಾಲ.


ಇದನ್ನೂ ಓದಿ: ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು – ಅಭದ್ರತೆಯೇ ಆಡಳಿತ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...