Homeಮುಖಪುಟಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ... - ಎ.ನಾರಾಯಣ

ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ… – ಎ.ನಾರಾಯಣ

ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

- Advertisement -
- Advertisement -

ಯಾವ ಕಾಲವೂ ಇಷ್ಟೊಂದು ಉತ್ತಮವಾಗಿರಲಿಲ್ಲ, ಯಾವ ಕಾಲವೂ ಇದಕ್ಕಿಂತ ಕೆಟ್ಟದಾಗಿರಲಿಲ್ಲ…(It was the best of times, it was the worst of times…)

ಇಂಗ್ಲಿಷ್ ಲೇಖಕ ಚಾಲ್ರ್ಸ್ ಡಿಕೆನ್‍ಸನ್ ಫ್ರೆಂಚ್ ಕ್ರಾಂತಿಯ ಸುತ್ತಲ ವಿದ್ಯಮಾನಗಳನ್ನು ಆದರಿಸಿ ಬರೆದ ಎ ಟೇಲ್ ಆಫ್ ಟು ಸಿಟೀಸ್ ಕಾದಂಬರಿಯ ಆರಂಭದ ವಾಕ್ಯ ಇದು. ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದು ಪೂರೈಸಿದ ಒಂದು ವರ್ಷವನ್ನು ಮೆಲುಕು ಹಾಕುವಾಗ ಈ ಸಾಲುಗಳು ನೆನಪಾಗುತ್ತವೆ.

ಹೌದು, ಕೆಲವರ ದೃಷ್ಟಿಯಲ್ಲಿ ಸಂದ ವರ್ಷಕ್ಕಿಂತ ಉತ್ತಮ ಕಾಲವೇ ಇರಲಿಲ್ಲ. ಯಾರ ದೃಷ್ಟಿಯಲ್ಲಿ ಹಾಗೆ?

ದೆಹಲಿಯ ಇಂಗ್ಲಿಷ್ ಲೇಖಕರೊಬ್ಬರು ಬರೆದರು. ಯಾವುದರದ್ದೇ ಆಗಿರಲಿ ಎರಡನೆಯ ಇನ್ನಿಂಗ್ಸ್ ನಲ್ಲಿ ವಿಶೇಷ ಸತ್ವ ಉಳಿದಿರುವುದಿಲ್ಲ ಅಂತ. ಸಚಿನ್ ತೆಂಡೂಲ್ಕರ್ ಅವರ ಎರಡನೆಯ ಇನ್ನಿಂಗ್ಸ್ ಆಟದಿಂದ ಹಿಡಿದು, ಹಲವು ಕಾದಂಬರಿಗಳ, ಸಿನೆಮಾಗಳ ಎರಡನೆಯ ಭಾಗದವರೆಗೆ ನೋಡಿದರೆ, ನಂತರದ್ದು ಮೊದಲಿನಷ್ಟು ಗಮನ ಸೆಳೆಯುವುದಿಲ್ಲ ಎನ್ನುತ್ತಾ ಇದಕ್ಕೆ ತದ್ವಿರುದ್ಧವಾಗಿ ಕಂಡದ್ದು ನರೇಂದ್ರ ಮೋದಿಯವರ ಸರಕಾರದ ಎರಡನೆಯ ಆವೃತ್ತಿ ಎನ್ನುತ್ತಾರೆ ಆ ಲೇಖಕ. ಯಾಕೆ?

ಯಾಕೆಂದರೆ ಗಮನ ಸೆಳೆಯುವುದೊಂದೇ ಸರಕಾರವೊಂದರ ಸಾಧನೆ ಎನ್ನುವುದಾದರೆ ಎರಡನೆಯ ಆವೃತ್ತಿಯಲ್ಲಿ ನರೇಂದ್ರ ಮೋದಿಯವರ ಸರಕಾರ ಮಾಡಿದ್ದೇನು ಕಡಿಮೆಯಲ್ಲ. ಯಾರ ಗಮನ, ಯಾತಕ್ಕಾಗಿ ಗಮನ, ಎಲ್ಲಿಗೆ ಗಮನ ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ ಹೋದಾಗ ಮಾತ್ರ ಈ ಸಾಧನೆಗಳ ಹಲವು ಬಗೆಯ ಜ್ಞಾತ, ಅಜ್ಞಾತ ಮುಖಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುವುದು.

ಭಾರತೀಯ ಜನತಾ ಪಕ್ಷದವರು ಮತ್ತು ಅವರ ಸೈದ್ಧಾಂತಿಕ ಮಾರ್ಗದರ್ಶಕರು ದಶಕಗಳಿಂದ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ಮಾದರಿಯನ್ನು ಒಪ್ಪಿಕೊಂಡು, ಅದರ ಅಮಲನ್ನು ನಖಶಿಖಾಂತವಾಗಿ ಏರಿಸಿಕೊಂಡವರಿಗೆ ಎರಡನೆಯ ಬಾರಿಗೆ ಮೋದಿ ಅಧಿಕಾರ ವಹಿಸಿಕೊಂಡ ನಂತರ ಸಂದ ಒಂದು ವರುಷ ಅಂತಿಂತಹಾ ಸಮಯವಲ್ಲ. ಅವರ ಪಾಲಿಗೆ ಇಂತಹ ಸುಸಮಯವೇ ಇರಲಿಲ್ಲ. ಹೇಳಿ ಕೇಳಿ ಅವರದ್ದೇ ಏಕಚಕ್ರಾಧಿಪತ್ಯ. ಹನ್ನೆರಡು ತಿಂಗಳುಗಳ ಈ ಅವಧಿಯಲ್ಲಿ ಎಷ್ಟೋ ಕಾಲ ಬಿಜೆಪಿಯ ‘ರಾಷ್ಟ್ರೀಯ’ ಅಜೆಂಡಾದಲ್ಲೇ ಬಾಕಿ ಉಳಿದಿದ್ದ ಎಷ್ಟೊಂದು ಯೋಜನೆಗಳೆಲ್ಲಾ ಸಾಕಾರವಾಗಿ ಬಿಟ್ಟವು? ಸಂವಿಧಾನದ 370ನೆಯ ವಿಧಿಯ ಅಡಿ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಮುಸ್ಲಿಂ ಧರ್ಮದ ಕೆಲ ಸಮುದಾಯಗಳಲ್ಲಿ ಅಸ್ತಿತ್ವದಲ್ಲಿದ್ದ ತ್ರಿವಳಿ ತಲಾಕ್ ಮೂಲಕ ವಿಚ್ಛೇದನ ನೀಡುವ ಸಂಪ್ರದಾಯವನ್ನು ರದ್ದು ಪಡಿಸಲಾಯಿತು.

ಭಯೋತ್ಪಾದನಾ ವಿರೋಧಿ ಕಾನೂನುಗಳಿಗೆ ಮತ್ತಷ್ಟೂ ಹಲ್ಲುಗಳನ್ನು ಸೇರಿಸಿ ಯಾರಿಗಾದರೂ ಭಯೋತ್ಪಾದಕರ ಪಟ್ಟ ಕಟ್ಟುವ ಅಧಿಕಾರವನ್ನು ಆಂತರಿಕ ಭದ್ರತಾ ಪಡೆಯವರಿಗೆ ನೀಡಲಾಯಿತು. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಜನ್ಮಭೂಮಿ ವಿವಾದವನ್ನು ಸುಪ್ರೀಂಕೋರ್ಟ್ ಹಿಂದೂಗಳ ಪರವಾಗಿ ಇತ್ಯರ್ಥಗೊಳಿಸುವ ಮೂಲಕ ಬಿಜೆಪಿಯ ಬಹುದಿನದ ಭರವಸೆಯಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿತು. ಹಿಂದೂ ವಲಸಿಗರಿಗೆ ನೆರವಾಗಲು ಸಿಎಎ, ಮುಸ್ಲಿಂ ನುಸುಳುಕೋರರನ್ನು ಹೊಡೆದೋಡಿಸಲು ಎನ್‍ಆರ್‍ಸಿ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗೆ ಅನನ್ಯ ಬಾಂಧವ್ಯ… ಹೀಗೆ ಹಿಂದೂ ರಾಷ್ಟ್ರವಾದಿಗಳ ಬಹುದಿನದ ಕನಸುಗಳೆಲ್ಲಾ ನನಸಾದ ವರ್ಷ ಇದು. ದಿ ಬೆಸ್ಟ್ ಆಫ್ ದಿ ಟೈಮ್ಸ್.

ಮೇಲ್ನೋಟಕ್ಕೆ ‘ರಾಷ್ಟ್ರನಿರ್ಮಾಣ’ದ ದೊಡ್ಡ ದೊಡ್ಡ ಆಧಾರ ಸ್ಥಂಭಗಳಂತೆ ಕಾಣಿಸುವ ಈ ಸಾಧನೆಗಳನ್ನು ಸಾವಿರ ಪಾಲು ಹಿಗ್ಗಿಸಿ, ವಿಜೃಂಭಿಸಿ ಜನರ ಮುಂದಿಡುವ ಮೂಲಕ ಇನ್ನೇನು ರಾಮರಾಜ್ಯ ಸ್ಥಾಪನೆ ಆಗಿಯೇಬಿಟ್ಟಿತು ಎನ್ನುವ ಜನಾಭಿಪ್ರಾಯ ರೂಪಿಸುವ ಪ್ರಯತ್ನ ಎಂದಿನಂತೆ ನಡೆಯಿತು. ಅದೇ ವೇಳೆ ಇನ್ನೊಂದೆಡೆ ಮೊದಲೇ ಹಲ್ಲುಕಿತ್ತ ಹಾವಿನಂತಾಗಿದ್ದ ವಿರೋಧ ಪಕ್ಷಗಳ ಚರ್ಮ ಸುಲಿದು, ಬಾಲ ತುಂಡರಿಸಿ ಮಲಗಿಸುವ ಮೂಲಕ, ಮಾಧ್ಯಮಗಳನ್ನು ದಾನ, ಬೇಧ, ದಂಡ ಎಲ್ಲವನ್ನೂ ವಿಧಿವತ್ತಾಗಿ ಪ್ರಯೋಗಿಸಿ ಮಕ್ಕಾಡೆ ಮಲಗಿಸುವ ಮೂಲಕ ಯಾವುದೇ ಪ್ರತಿಮತ ಇಲ್ಲದಂತೆ, ಎರಡನೆಯ ಅಭಿಪ್ರಾಯಕ್ಕೆ ಅನುವೇ ಇಲ್ಲದಂತೆ, ಪ್ರಶ್ನೆಗಳಿಗೆ ಅವಕಾಶವೇ ಇಲ್ಲದಂತೆ ಮಾಡಿ ಸಾಧನೆಗಳ ಸೊಗಸನ್ನು ಜನರಿಗೆ ಯಾವುದೇ ಅಡೆತಡೆ ಇಲ್ಲದೆ ಉಣಬಡಿಸಲಾಯಿತು.

ಇನ್ನು ನ್ಯಾಯಾಂಗ. ಅದು ತಾನಾಗಿಯೇ ರಾಜಕೀಯ ಅಧಿಕಾರದ ಅಬ್ಬರಕ್ಕೆ ಒಲಿಯಿತೋ, ಅಥವಾ ಅದನ್ನು ಒಲಿಸಿಕೊಳ್ಳಲಾಯಿತೋ? ಈ ಪ್ರಶ್ನೆಗೆ ಚರಿತ್ರೆ ಮುಂದೊಂದು ದಿನ ಉತ್ತರ ನೀಡಿತು. ಸದ್ಯಕ್ಕಂತೂ ಸರಕಾರವೊಂದು ನ್ಯಾಯಾಂಗದಿಂದ ಎದುರಿಸಬಹುದಾದ ಯಾವ ಅಡೆತಡೆಗಳು ಇಲ್ಲ. ಎಲ್ಲವೂ ಸುಗಮ. ಎಲ್ಲವೂ ಸಲೀಸು. ಆನೆ ನಡೆದದ್ದೇ ದಾರಿ. ಕಾಶ್ಮೀರ ಭಾರತದಲ್ಲಿ ಈಗ ಸಂಪೂರ್ಣ ವಿಲೀನ ಆಗಿದೆ ಎನ್ನುವ ವಾದ ಸರಿಯೇ? ಒಂದು ರಾಜ್ಯ ಭಾರತೀಯ ಒಕ್ಕೂಟದೊಂದಿದೆ ವಿಲೀನವಾಗುವುದು ಎಂದರೆ ಅದು ಜನರ ಮನಸ್ಸುಗಳನ್ನು ಬೆಸೆಯುವುದೇ ಅಥವಾ ಭೂಬಾಗವನ್ನು ಭೂಪಟದಲ್ಲಿ ಜೋಡಿಸುವುದೇ? ಈ ಪಶ್ನೆ ಕೇಳುವವರಿರಲಿಲ್ಲ. ಹೌದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಆದರೆ ಅಲ್ಲಿನ ಪರಿಸರ ಪರಿಸ್ಥಿತಿ ಹಾಗಿತ್ತು ಮತ್ತು ಹಾಗಿದೆ ಎನ್ನುವ ಸತ್ಯ ಬದಲಾಗಿದೆಯೇ? ಈ ಪ್ರಶ್ನೆ ಕೇಳುವವರಿಲ್ಲ. ವಿಶೇಷ ಸ್ಥಾನಮಾನ ನೀಡಿದ ಕಾರಣ ಭಯೋತ್ಪಾದನೆ ಹೆಚ್ಚಾಯಿತು ಎನ್ನುವ ವಾದವನ್ನು ಸಮರ್ಥನೆಗಾಗಿ ಮುಂದಿಡಲಾಯಿತು. ಹಾಗಾದರೆ ವಿಶೇಷ ಸ್ಥಾನಮಾನ ಕಿತ್ತುಕೊಂಡ ನಂತರ ಭಯೋತ್ಪಾದನೆಯ ಹುಟ್ಟಡಗಿದೆಯೇ? ಅಲ್ಲಿನ ಪರಿಸ್ಥಿತಿ ಸಂಪೂರ್ಣ ಸರಕಾರದ ಹತೋಟಿಗೆ ಬಂದಿದೆಯೇ? ಬಂದಿದ್ದರೆ ಇನ್ನೂ ಭಾರತದ ಪರವಾಗಿಯೇ ಇಷ್ಟು ವರ್ಷ ರಾಜಕೀಯ ಮಾಡಿದ್ದ ಅಲ್ಲಿನ ಜನನಾಯಕರನ್ನೆಲ್ಲಾ ಯಾಕೆ ಇನ್ನೂ ಬಂಧನದಲ್ಲಿ ಇಟ್ಟಿರುವುದು? ತ್ರಿವಳಿ ತಲಾಕ್ ಕೊನೆಯಾಯಿತು? ಸರಿ. ಮುಸ್ಲಿಮರಲ್ಲಿ ಒಂದು ಪಂಗಡದ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಸಮಸ್ಯೆಯನ್ನು ಕಾನೂನಿನಲ್ಲಿ ಪರಿಹರಿಸಲಾಯಿತು ಅಂತ ಇಟ್ಟುಕೊಳ್ಳೋಣ. ಆದರೆ ಅದೇ ವೇಳೆ ಇಡೀ ಮುಸ್ಲಿಂ ಸಮುದಾಯ ಹಿಂದೆಂದಿಗಿಂತಲೂ ಹೆಚ್ಚು ಅಭದ್ರತೆಯನ್ನು ಎದುರಿಸುತ್ತಿರುವಂತೆ ಯಾಕಾಯಿತು?

ಸಿಎಎ ಮತ್ತು ಎನ್‍ಆರ್‌ಸಿ ದೇಶಾದ್ಯಂತ ಅನುಷ್ಠಾನಗೊಂಡರೆ ದೇಶ ಎದುರಿಸಬೇಕಾದ ಸಾಂವಿಧಾನಿಕ ಮತ್ತು ಮಾನವೀಯ ಬಿಕ್ಕಟ್ಟು ಹೇಗಿರಬಹುದು? ಸಿಎಎ ಮತ್ತು ಎನ್‍ಆರ್‌ಸಿ ಈ ದೇಶದಲ್ಲಿ ಹುಟ್ಟುಹಾಕಿದ ಸಾಮಾಜಿಕ-ಧಾರ್ಮಿಕ ಕಂದರಗಳು ಮತ್ತು ಅಭದ್ರತೆ ಮುಂದೆ ದೇಶವನ್ನು ಹೇಗೆ ಕಾಡಬಹುದು? ಅಯೋಧ್ಯೆಯ ರಾಮ ಮಂದಿರ ಈ ದೇಶದ ಬಹುದೊಡ್ಡ ಅಗತ್ಯವೇ? ಹೀಗೆ ಸಾಧನೆ ಎಂದು ಯಾವುದನ್ನು ಮುಂದಿಡಲಾಯಿತೋ, ಅವುಗಳಲ್ಲಿ ಪ್ರತಿಯೊಂದರ ಸುತ್ತಲೂ ಎಷ್ಟೋ ಪ್ರಶ್ನೆಗಳಿವೆ. ನೋವಿನ ಚಿತ್ರಗಳಿವೆ. ಈ ಪ್ರಶ್ನೆಗಳನ್ನು ಕೇಳುವವರಿಲ್ಲ. ಪ್ರಶ್ನೆಗಳನ್ನು ಕೊಲ್ಲಲಾಗುವುದಿಲ್ಲ. ಆದರೆ ಪ್ರಶ್ನೆ ಕೇಳುವ ಸಾಂಸ್ಥಿಕ ನಾಲಿಗೆಗಳನ್ನು ಕೊಲ್ಲಬಹುದು ಅಥವಾ ಕೊಳ್ಳಬಹುದು. ಆಗ ಪ್ರಶ್ನೆಗಳು ಕೇಳಿಸುವುದಿಲ್ಲ. ಪ್ರಶ್ನೆಗಳೇ ಇಲ್ಲದಲ್ಲಿ ಹೇಳಿದೆಲ್ಲವೂ ಸಾಧನೆಗಳೇ ಆಗುತ್ತವಲ್ಲ.

ಇದು ಸಾಧನೆಗಳೆಂದು ಬಿಂಬಿಸಲಾದ ಬೆಳವಣಿಗೆಗಳಲ್ಲಿ ಹುದುಗಿರುವ ವೈಫಲ್ಯದ ಕತೆಯಾದರೆ, ಇನ್ನು ಏನು ಮಾಡಿದರೂ ಅಡಗಿಸಿಡಲಾಗದ ವೈಫಲ್ಯಗಳ ಕತೆಯೇ ಬೇರೆ. ಕಳೆದ ಒಂದು ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಕಂಡ ಪತನ, ಸೃಷ್ಟಿಯಾದ ನಿರುದ್ಯೋಗದ ಪ್ರಮಾಣ ಕಂಡುಕೇಳರಿಯದ್ದು. ಮೊದಮೊದಲಿಗೆ ಅಂಕಿ-ಅಂಶಗಳನ್ನು ಅಡಗಿಸಲಾಯಿತು, ಬಜೆಟ್‍ನಲ್ಲಿ ಸುಳ್ಳುಗಳನ್ನು ಹೇಳಲಾಯಿತು.

ಕೋರೋನಾ ಪೂರ್ವದಲ್ಲೇ ಉದ್ಯೋಗ ಕಳೆದುಕೊಂಡವರೆಷ್ಟೋ? ವರಮಾನ ಕಡಿತ ಅನುಭವಿಸಿದವರೆಷ್ಟೋ? ನಿರಾಶೆಯಿಂದ ಕುಸಿದು ಆತ್ಮಹತ್ಯೆಗೆ ಶರಣಾದವರೆಷ್ಟೋ? ಅರ್ಥ ವ್ಯವಸ್ಥೆಯನ್ನು ನಿಭಾಯಿಸುವ ಕನಿಷ್ಠ ಸಾಮಥ್ರ್ಯವಾದರೂ ಸರಕಾರಕ್ಕೆ ಇದೆಯೇ ಎನ್ನುವ ಪ್ರಶ್ನೆ ದೇಶದಲ್ಲಿ ದೊಡ್ಡದಾಗಿ ಅನುರಣಿಸಬೇಕಿತ್ತು. ಆದರೆ ಅಂತಹ ಪ್ರಶ್ನೆ ಎತ್ತುವವರು ಯಾರು? ಕೋರೋನಾ ಕಾಲಿಟ್ಟ ನಂತರವಂತೂ ಅದನ್ನು ನಿಭಾಯಿಸಿದ ರೀತಿಯಲ್ಲಿ ಆಡಳಿತ ನೈಪುಣ್ಯವನ್ನೂ, ನಾಯಕತ್ವದ ಹೆಚ್ಚುಗಾರಿಕೆಯನ್ನು ಕಾಣಬೇಕಾದರೆ ಅಂತಿತಹಾ ಭಕ್ತಿಯ ಕಣ್ಣುಗಳು ಸಾಲದು. ಕೊರೋನ ಬಂದದ್ದು ಇಡೀ ವಿಶ್ವದ ದುರ್ದೈವ ಇರಬಹುದು. ಆದರೆ ಮೋದಿ ಸರ್ಕಾರಕ್ಕೆ ಮಾತ್ರ ಇದೊಂದು ಬಯಸದೆ ಬಂದ ಅನುಕೂಲ. ಇನ್ನು ಮುಂದೆ ಎಲ್ಲಾ ವೈಫಲ್ಯಗಳನ್ನು, ವಿಶೇಷವಾಗಿ ಅರ್ಥ ವೈಫಲ್ಯಗಳನ್ನು ಕೋರೋನ ಸಂಕಷ್ಟದತ್ತ ಬೊಟ್ಟು ಮಾಡಿ ಪಾರಾಗಬಹುದು. ಕೋರೋನ ಒಂದು ಬಾರದೆ ಇದ್ದರೆ ಭಾರತವನ್ನು ಪ್ರಪಂಚದ ಏಕಮೇವಾದ್ವಿತೀಯ ಆರ್ಥಿಕ ಶಕ್ತಿಯನ್ನಾಗಿ ಕಟ್ಟುತಿದ್ದೆವು ಅಂತ ಈ ಸರಕಾರದ ಮಂದಿ ಇನ್ನೇನು ಹೇಳಲು ಪ್ರಾರಂಭಿಸುತ್ತಾರೆ. ಕೊರೋನಾ ಎಷ್ಟೇ ಸಂಖ್ಯೆಯ ಸಾವು ನೋವುಗಳನ್ನು ತರಲಿ ಅದು ಸರಕಾರವನ್ನು ಬಾಧಿಸದೆ ಇರುವ ಹಾಗೆ, ‘ನಮ್ಮ ಆಡಳಿತ, ನಮ್ಮ ನಾಯಕ ಇಲ್ಲದೆ ಹೋಗಿದ್ದರೆ ಈ ಸಂಖ್ಯೆ ಇನ್ನೂ ನೂರು ಪಾಲು ಹೆಚ್ಚಾಗಿರುತ್ತಿತ್ತು’ ಎನ್ನುವ ಸಂಕಥನ ಹುಟ್ಟಲಿದೆ. ಇವನ್ನೆಲ್ಲಾ ಜನ ನಂಬುವಂತೆ ಮಾಡಲು ಏನೇನು ಮಾಡಬೇಕೋ ಅದಕ್ಕೆ ಬೇಕಾದ ವ್ಯವಸ್ಥೆ ಈಗಗಾಲೇ ಆಗಿರುತ್ತದೆ.

ಕೆಲವರ ಪ್ರಕಾರ ಕೊರೋನಾ ಮುಂದಿನ ಚುನಾವಣೆಯನ್ನೂ ನಿರ್ಣಯಿಸಿ ಬಿಟ್ಟಿದೆ. ಆದುದರಿಂದ ಸಂದ ವರ್ಷ ಏನಾಯಿತು, ಮುಂದಿನ ನಾಲ್ಕು ವರ್ಷಗಳಲ್ಲಿ ಏನೇನಾಗಲಿವೆ ಇತ್ಯಾದಿಗಳೆಲ್ಲಾ ಒಂದರ್ಥದಲ್ಲಿ ಅಪ್ರಸ್ತುತ ವಿಷಯಗಳು. ಆದರೆ, ಭವಿಷ್ಯದ ಹಾದಿ ಅಷ್ಟೊಂದು ನೇರವಾಗಿ ಇರುವುದಿಲ್ಲ. ಅಲ್ಲಿ ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತವೆ. ಸದ್ಯ ಅಂತಹ ತಿರುವುಗಳ ನಿರೀಕ್ಷೆ ಮಾತ್ರವೇ ಭರವಸೆ.

ಸದ್ಯಕ್ಕಂತೂ ಸಂದ ವರುಷ ನೋಡುವವರ ದೃಷ್ಟಿಯನ್ನು ಅನುಸರಿಸಿ ಅತ್ಯುತ್ತಮ ಕಾಲ ಅಥವಾ ಅತೀ ಕೆಟ್ಟ ಕಾಲ.


ಇದನ್ನೂ ಓದಿ: ಮೋದಿ 2.1: ಆರು ವರ್ಷ ಆಡಳಿತದ ಮೋದಿಯ ಮಹಾನ್ ಕಣ್ಕಟ್ಟು – ಅಭದ್ರತೆಯೇ ಆಡಳಿತ! 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...