ಲಾಕ್ಡೌನ್ ನಿರ್ವಹಣೆ, ಸಂತ್ರಸ್ತರಿಗೆ ಪರಿಹಾರ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ಮಾರ್ಗಗಳ ವಿಷಯದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಜೂನ್ 08ರ ಸೋಮವಾರ ವಿರೋಧ ಪಕ್ಷಗಳ ಆನ್ಲೈನ್ ಸಂವಾದ ನಡೆಯಲಿದೆ.
ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಆಯೋಸಿರುವ ಈ ಝೂಮ್ ಆನ್ಲೈನ್ ಸಂವಾದದಲ್ಲಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ, ನಿಯೋಜಿತ ಕೆಪಿಸಿಸಿ ಅಧ್ಯಕ್ಷರದ ಡಿ.ಕೆ ಶಿವಕುಮಾರ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ರವರು ಭಾಗವಹಿಸಲಿದ್ದಾರೆ.
ವಲಸೆ ಕಾರ್ಮಿಕರಿಗೆ ನೆರವು, ಬಡವರಿಗೆ ಆರ್ಥಿಕ ಸಹಾಯ, ಸಣ್ಣ, ಅತಿ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಸಹಾಯಧನ ಸೇರಿದಂತೆ ಲಾಕ್ಡೌನ್ನಿಂದ ತೊಂದರೆಗೊಳಗಾದ ಎಲ್ಲಾ ಜನರಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ರಾಜ್ಯದ ವಿರೋಧ ಪಕ್ಷಗಳು ಜಂಟಿಯಾಗಿ ಮುಖ್ಯಮಂತ್ರಿಗಳಿಗೆ 24 ಅಂಶಗಳ ಮನವಿ ಸಲ್ಲಿಸಿವೆ. ಅದೇ ರೀತಿ ದೇಶದ 22 ಪಕ್ಷಗಳು ಈ ಸಂದರ್ಭದಲ್ಲಿ ಸರ್ಕಾರ ಅನುಸರಿಸಬೇಕಾದ ಪರ್ಯಾಯ ಮಾದರಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಈ ವಿಚಾರಗಳ ಕುರಿತು ಸಂವಾದ ನಡೆಯಲಿದೆ ಎಂದು ತಿಳಿಸಲಾಗಿದೆ.
ಆನ್ಲೈನ್ ಸಂವಾದವು ಜೂನ್ 08 ರ ಸೋಮವಾರ ಸಂಜೆ ನಾಲ್ಕರಿಂದ ಆರು ಗಂಟೆಯವರೆಗೆ ನಡೆಯಲಿದೆ. ಮೊದಲ 500 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಆಸಕ್ತರು Meeting Id: 84316376672, Password: 082790 ಮೂಲಕ ಸೇರಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ನಮ್ಮ ದೇಶದ ಶೇ.1 ರಷ್ಟು ಜನರಿಗೂ ನ್ಯಾಯ ಸಿಗುತ್ತಿಲ್ಲ : ಪ್ರಶಾಂತ್ ಭೂಷಣ್