ಆಂಧ್ರಪ್ರದೇಶದ ವಿಜಯವಾಡದಲ್ಲಿ ತಾತ್ಕಾಲಿಕ ಕೊರೊನಾ ಸೌಲಭ್ಯ ಕೇಂದ್ರವಾಗಿ ಬಳಸುತ್ತಿದ್ದ ಖಾಸಗಿ ಹೋಟೆಲ್ನಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 11 ಜನರು ಸಾವನ್ನಪ್ಪಿದ್ದಾರೆ.
ಈ ಸೌಲಭ್ಯ ಕೇಂದ್ರದಲ್ಲಿ ಸುಮಾರು 50 ಕೊರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು, ಉಳಿದವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ. ಅಗ್ನಿಶಾಮಕ ದಳ ಘಟನಾ ಸ್ಥಳಕ್ಕೆ ತಲುಪಿದ್ದು ಬೆಂಕಿ ನಂದಿಸಲು ಪ್ರಯತ್ನಿಸುತ್ತಿದೆ.
ರಮೇಶ್ ಹಾಸ್ಪಿಟಲ್ ಎಂಬ ಖಾಸಗಿ ಅಸ್ಪತ್ರೆಯು ನೆಲ್ಲೂರು ರಸ್ತೆಯಲ್ಲಿರುವ ಸ್ವರ್ಣ ಪ್ಯಾಲೇಸ್ ಹೋಟೆಲ್ ಅನ್ನು ಕೊರೊನಾ ಚಿಕಿತ್ಸೆ ನೀಡಲು ತಾತ್ಕಾಲಿಕವಾಗಿ ಗುತ್ತಿಗೆಗೆ ಪಡೆದಿತ್ತು. ಕಳೆದ ಎರಡು ವಾರದಿಂದ ಹಲವಾರು ರೋಗಿಗಳು ಅಲ್ಲಿ ದಾಖಲಾಗಿದ್ದರು. ಬೆಂಕಿ ಹೊತ್ತಿಕೊಂಡಾಗ 10 ಪ್ಯಾರಮೆಡಿಕಲ್ ಸಿಬ್ಬಂದಿ ಸಹ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಬೆಂಕಿ ಹೊತ್ತಿಕೊಂಡಾಗ ಹೊರಬಂದ ದಟ್ಟ ಹೊಗೆಯು ಹಲವು ಕೊರೊನಾ ರೋಗಿಗಳ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ದಟ್ಟ ಹೊಗೆ ಸಹಿಸಿಕೊಳ್ಳಲಾರದೇ ಮೃತರಾಗಿದ್ದಾರೆ. ಹೋಟೆಲ್ನ ಕಿಟಕಿ ಬಳಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ದೃಶ್ಯ ಕಾಣುತ್ತಿತ್ತು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ಇಮ್ತಿಯಾಜ್ ಎಎನ್ಐಗೆ ತಿಳಿಸಿದ್ದಾರೆ. “ಬೆಳಿಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಹಲವಾರು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಇಡೀ ಕಟ್ಟಡವನ್ನು ಸ್ಥಳಾಂತರಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮೃತರ ರಕ್ತಸಂಬಂಧಿಗಳಿಗೆ 50 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ ಮತ್ತು ಅವಘಡದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
Anguished by the fire at a Covid Centre in Vijayawada. My thoughts are with those who have lost their loved ones. I pray that the injured recover as soon as possible. Discussed the prevailing situation with AP CM @ysjagan Ji and assured all possible support.
— Narendra Modi (@narendramodi) August 9, 2020
ವಿಜಯವಾಡದ ಬೆಂಕಿ ಅವಗಢದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂಬಂಧಿಕರ ದುಃಖ, ಆಕ್ರೋಶದೊಂದಿಗೆ ನಾನಿದ್ದೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲು ಎಂದು ಪ್ರಾರ್ಥಿಸುತ್ತೇನೆ. ಪರಿಸ್ಥಿತಿಯ ಕುರಿತು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರೊಂದಿಗೆ ಮಾತನಾಡಲಿದ್ದು, ಅಗತ್ಯ ಸಹಾಯ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಂಧ್ರಪ್ರದೇಶ ಸರ್ಕಾರಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. “ದುಃಖದ ಈ ಸಮಯದಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ನನ್ನ ಸಂತಾಪವಿದೆ. ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ನನ್ನ ಪ್ರಾರ್ಥನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಅಹಮದಾಬಾದ್ ಕೊರೊನಾ ಆಸ್ಪತ್ರೆಯಲ್ಲಿ ಬೆಂಕಿ; 8 ರೋಗಿಗಳ ಸಾವು!