ಈ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ತನಿಖೆಯು ಅನ್ಯಾಯದಿಂದ ಕೂಡಿದ್ದು, ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದೇಶಾದ್ಯಂತದ ಹಲವಾರು ಗಣ್ಯರು ಆಗಸ್ಟ್ 25 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.
ದೆಹಲಿ ಪೊಲೀಸರು ಮತ್ತು ವಿಶೇಷ ಅಪರಾಧ ತನಿಖಾ ದಳ ನಡೆಸಿರುವ ತನಿಖೆಯು ಏಕಪಕ್ಷೀಯವಾಗಿದೆ ಮತ್ತು ಇಲ್ಲದನ್ನು ಸೃಷ್ಟಿಸಲಾಗಿದೆ. ಹಾಗಾಗಿ ಇದನ್ನು ದೆಹಲಿ ಸರ್ಕಾರ ಒಪ್ಪಬಾರದು ಮತ್ತು ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೃಂದಾ ಕಾರಟ್, ಹರ್ಷ್ ಮಂದರ್, ಇರ್ಫಾನ್ ಹಬೀಬ್, ಅಶೋಕ್ ಧಾವಲೆ, ಅಡ್ಮಿರಲ್ ರಾಮದಾಸ್, ಅಡ್ಮಿರಲ್ ವಿಷ್ಣು ಭಾಗವತ್, ಪಿ. ಸಾಯಿನಾಥ್, ಆನಂದ್ ಪಟವರ್ಧನ್, ಪ್ರಕಾಶ್ ರಾಜ್, ಶಬನಂ ಹಶ್ಮಿ, ಸುಭಾಷಿನಿ ಅಲಿ ಸೇರಿದಂತೆ ಸಾವಿರಾರು ಗಣ್ಯರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: ಬಿಜೆಪಿ ನಾಯಕರ ವಿರುದ್ಧದ ದೂರುಗಳಿಗೆ ಕ್ರಮವಿಲ್ಲ- ಎನ್ಡಿಟಿವಿ ತನಿಖಾ ವರದಿ
ದೆಹಲಿ ವಿಧಾನಸಭಾ ಚುನಾವಣೆ ಇದ್ದಾಗಲೇ ಈ ಗಲಭೆ ಏಕಾಯಿತು? ಇದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಕೂಲಂಕುಷವಾಗಿ ತನಿಖೆಯಾಗಬೇಕು. ನಿರಪರಾಧಿಗಳನ್ನು ಗಲಭೆಯ ಆರೋಪಿಗಳೆಂದು ಸಿಕ್ಕಿಸುವುದನ್ನು ತಡೆಯಬೇಕು. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಹಾಗಾಗಿ ಇದಕ್ಕೆ ಸ್ವತಂತ್ರ ನ್ಯಾಯಂಗ ತನಿಖೆಯ ಅಗತ್ಯವಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಓದಿ: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಗುಂಡಿಕ್ಕಿ ಕೊಲೆ: ಪೊಲೀಸರೇ ಆರೋಪಿಗಳೆಂದ ಕುಟುಂಬ!