Homeಮುಖಪುಟಪೂರ್ಣಚಂದ್ರ ತೇಜಸ್ವಿ ಜೀವನದ ಕುರಿತೊಂದು ಆಪ್ತ ಬರಹ..

ಪೂರ್ಣಚಂದ್ರ ತೇಜಸ್ವಿ ಜೀವನದ ಕುರಿತೊಂದು ಆಪ್ತ ಬರಹ..

ತೇಜಸ್ವಿಯವರ ಕಿವಿ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಕನ್ನಡದ ಮಹತ್ವದ ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ 83ನೇ ಜನ್ಮದಿನ ಇಂದು. ಅವರ ಬರಹಗಳು ಸಾಕಷ್ಟು ಜನರನ್ನು ಪ್ರಭಾವಿಸಿವೆ. ಅಂತಹ ಲೇಖಕನ ಬದುಕಿನ ಒಂದು ಮುಖ್ಯ ಭಾಗದ ಕುರಿತು ಶಿಕ್ಷಕರು ಮತ್ತು ಪ್ರತಿಭಾವಂತ ಛಾಯಾಗ್ರಾಹಕರಾದ ಕಲೀಂ ಉಲ್ಲಾ ರವರು 4 ವರ್ಷದ ಹಿಂದೆ ಬರೆದಿದ್ದ ಆಪ್ತಬರಹವೊಂದನ್ನು ಮರುಮುದ್ರಿಸುತ್ತಿದ್ದೇವೆ.

ತೇಜಸ್ವಿಯವರು ತೀರಿಕೊಂಡ ಮೇಲೆ ಮನಸ್ಸಿನ ಕಳವಳ ಹೆಚ್ಚಾಗಿತ್ತು. ಅದೇಕೋ ಶ್ರೀಮತಿ ರಾಜೇಶ್ವರಿ ಅವರನ್ನು ಕಂಡು ಮಾತಾಡಿಸುವ ಆಸೆ ಹೆಚ್ಚಾಗಿತ್ತು. ನಮ್ಮೊಳಗೂ ತೇಜಸ್ವಿ ಸಾವಿನ ನೋವು ಜೀರ್ಣವಾಗಿರಲಿಲ್ಲ. ತವರಿನ ಜನ ತಮ್ಮಕ್ಕನಿಗೆ ಭಾವನ ಅಗಲಿಕೆಯ ಸಾಂತ್ವನ ಹೇಳಲು ಹೊಸ ಸೀರೆ ಕೊಂಡು ಹೋಗುತ್ತಾರೆ. ನಾವೆಲ್ಲಾ ಅದೇ ಥರ ನಿರುತ್ತರಕ್ಕೆ ಹೋದೆವು. ಮಾತಿನಲ್ಲಿ ಅವರನ್ನು ಸಮಾಧಾನ ಪಡಿಸುವ ಶಕ್ತಿ ನಮಗಿರಲಿಲ್ಲ. ಮಾತುಗಳ ಕೇಂದ್ರ ಸೆಳೆತ ಸಹಜವಾಗಿ ತೇಜಸ್ವಿಯೇ ಆಗಿದ್ದರು. ಸಹಜವಾಗಿ ಇರಲು ಯತ್ನಿಸುತ್ತಿದ್ದ ರಾಜೇಶ್ವರಿಯವರ ಆಳದಲ್ಲಿ ಕಣ್ಣೀರ ಝರಿ ಸದ್ದಿಲ್ಲದೆ ಹರಿಯುತ್ತಿತ್ತು. ಯಾವ ಕ್ಷಣದಲ್ಲಾದರೂ ಅವರ ದುಃಖ ಸ್ಪೋಟಗೊಂಡೀತು ಎಂಬ ದುಗಡದಲ್ಲೇ ಇದ್ದೆವು. ತೇಜಸ್ವಿ ಅವರ ಬದುಕಿನ ವಿಶೇಷಗಳ ಹೇಳುತ್ತಾ ಸಹಜವಾಗಿದ್ದ ಮೇಡಂ ತಮ್ಮ ಮನೆ ನಾಯಿ ‘ಕಿವಿಯ’ ವಿಷಯ ಬಂದಾಗ ಮಾತ್ರ ತಡೆಯಲಾರದೆ ಹೋದರು.

ನಾಯಿ `ಕಿವಿಗೆ’ ವಯೋ ಸಹಜ ಕೊನೆಗಾಲ ಸಮೀಪಿಸಿತ್ತು. ಅದು ನಡೆಯಲಾಗದೆ ದೃಷ್ಟಿ ಮಂದವಾಗಿ ಕೂತಲ್ಲೇ ಚಡಪಡಿಸುತ್ತಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡೆಲ್ಲ ಸುತ್ತುತ್ತಿದ್ದ ತೇಜಸ್ವಿ ಅವರ ಚಲನೆಯನ್ನೂ ಕಿವಿ ಕಟ್ಟಿ ಹಾಕಿತ್ತು. ಚಲನೆ ನಿಂತ ಕಿವಿ ಮಂಕಾಗಿತ್ತು. ಅದರ ಸಾವು ನಿಶ್ಚಯವಾದ ಕೊನೇ ದಿನ ತೇಜಸ್ವಿ ಅದನ್ನು ಮಗುವಿನಂತೆ ಎದೆಗವುಚಿಕೊಂಡು ಮನೆ, ತೋಟ ಎಲ್ಲಾ ಕಡೆ ಸುತ್ತಾಡಿಸಿದರಂತೆ.

“ನೋಡೋ ಕಿವಿ ಈ ಜಾಗದಲ್ಲಿ ನೀನು ಹಾವೊಂದನ್ನು ಹೆದರಿ ಓಡಿಸಿದ್ದೆ. ಅಗೋ ಆ ತಾವಿನಲ್ಲಿ ನಿನ್ನ ಗಂಟಲಲ್ಲಿ ಸಿಕ್ಕ ಮೂಳೆ ಚೂರು ನಾನು ಎಳೆದು ತೆಗೆದಿದ್ದೆ. ಪ್ಯಾರನ ಜತೆ ನೀನಿಲ್ಲಿ ತಕರಾರು ಮಾಡಿದ್ದೆ. ಇಗೋ ಅಲ್ಲಿ ಜೇನುನೊಣಗಳು ನಿನ್ನ ಕಚ್ಚಿ ಸತಾಯಿಸಿದ್ದವು. ಈ ಕಿರುದಾರಿಯಲ್ಲೇ ನಾನು ನೀನು ಕಾಡಿಗೆ ಹೋಗುತ್ತಿದ್ದೆವು. ಇದೆಲ್ಲ ನಿನಗೆ ನೆನಪಿದೆ ಅಲ್ವೇನೋ” ಎಂದು ಮಮತೆ ತುಂಬಿ ಕಿವಿಯನ್ನು ಒಪ್ಪಿಸುತ್ತಿದ್ದರು. ಏಕಪಾತ್ರಾಭಿನಯದಂತೆ ಕಾಣುತ್ತಿದ್ದ ಈ ಘಟನೆಯಲ್ಲಿ ತೇಜಸ್ವಿಯ ನಿರಂತರ ಮಾತು, ಕಿವಿಯ ಭಯಾನಕ ಮೌನ ಇಡೀ ಸಂದರ್ಭದ ಸಂಕಟ ಹೆಚ್ಚಿಸಿತ್ತು. ಹೀಗೆ ಸಾಕು ನಾಯಿಯ ಹೊತ್ತುಕೊಂಡು ಅಲೆದಾಡಿ ಚಡಪಡಿಸಿದ ಸಂದರ್ಭ ಕೇಳುತ್ತಾ ರಾಜೇಶ್ವರಿ ಮೇಡಂ ಗೊಳೋ ಎಂದು ರೋಧಿಸತೊಡಗಿದರು. ಆ ಕ್ಷಣ ನಾವೆಲ್ಲಾ ಮಾತು ಮರೆತು ಥಂಡ ಹೊಡೆದು ಕೂತೆವು. ತುಂಬಾ ಹೊತ್ತು ನೀರವ ಮೌನ ಆವರಿಸಿತು. ಮನಸ್ಸಿನಲ್ಲಿ ತೇಜಸ್ವಿ ಗೆಳೆತನಕ್ಕೆ ಅಷ್ಟು ಹತ್ತಿರವಾಗಿದ್ದ ಆ ಕಿವಿಯ ಅದೃಷ್ಟ ನೆನೆದು ಹೆಮ್ಮೆ ಎನಿಸಿತು.

ಸಾಕು ನಾಯಿಯೊಂದು ಗೆಳೆಯನಂತಾಗಿ ಮನೆ ಯಜಮಾನನ ಮನಸ್ಸಿಗೆ ಆಪ್ತವಾಗುವ ಈ ಪ್ರೀತಿಯ ಸೆಲೆಯೇ ವಿಶಿಷ್ಟ ಎನಿಸುತ್ತದೆ. ಮಲೆನಾಡಿನ ಜನ ನಾಯಿಯನ್ನು ತಮ್ಮ ಪ್ರಾಣದಷ್ಟೇ ಗೌರವಿಸುತ್ತಾರೆ. ಅನೇಕ ಆಪತ್ಕಾಲಗಳಲ್ಲಿ ಅವು ಹಿತೈಷಿಗಿಂತ ಹೆಚ್ಚಾಗಿ ನಡೆದುಕೊಂಡಿರುತ್ತವೆ. ಕುಪ್ಪಳ್ಳಿಗೆ ಹೋದವರು ಕುವೆಂಪು ಬಾಲ್ಯದ ಫೋಟೋವೊಂದನ್ನು ಅಲ್ಲಿ ನೋಡಿರಬಹುದು. ಅಲ್ಲಿ ಪುಟ್ಟಪ್ಪನವರು ತಂದೆ ವೆಂಕಟಪ್ಪನವರ ಜೊತೆ ಕೂತು ತೆಗೆಸಿಕೊಂಡ ಅಪರೂಪದ ಫೋಟೋ ಒಂದಿದೆ. ಅಲ್ಲಿ ಕುಟುಂಬದ ಸದಸ್ಯರಂತೆ ಫೋಸು ಕೊಟ್ಟಿರುವ ಅನೇಕ ಶ್ವಾನಗಳನ್ನು ನೋಡಬಹುದು. ಇದು ಮಲೆನಾಡಿನ ಜನರ ಬದುಕಿನೊಳಗೆ ಪ್ರಾಣಿಲೋಕ ಮಿಳಿತಗೊಂಡು ಒಂದಾಗಿರುವ ಬಗೆ. ಕುವೆಂಪು ಕಾದಂಬರಿಯ ‘ಹುಲಿಯಾ’ ತೇಜಸ್ವಿ ಕಥನಗಳ ‘ಕಿವಿ’ ಎರಡೂ ಪ್ರಾಣಿಗಳು ಅವರ ಸಾಹಿತ್ಯದಲ್ಲಿ ಗಳಿಸಿರುವ ಪ್ರಾಮುಖ್ಯತೆಯೇ ಇದಕ್ಕೆ ಸಾಕ್ಷಿ. ಶಿಕಾರಿಯಲ್ಲಿ ಜತೆಯಾಗಿ, ಮನೆಗೆ ಕಾವಲಾಗಿ, ಕಾಡುಪ್ರಾಣಿಗಳ ಆಕ್ರಮಣದಿಂದ ಜೀವ ಕಾಪಾಡುವ ನಾಯಿಗಳ ನಿಯತ್ತು ಮಲೆನಾಡಿಗರಿಗೆ ಇಷ್ಟವಾಗಿದೆ. ಬಯಲು ಸೀಮೆಯ ಕುರಿ ಕಾಯುವ ಜನರೂ ನಾಯಿಗಳನ್ನು ಒಡಹುಟ್ಟಿದವರಂತೆ ಕಾಣುತ್ತಾರೆ. ಅವರ ಇಡೀ ಕುರಿಮಂದೆಯನ್ನು ಜೋಪಾನ ಮಾಡುವ ಬಯಲಿನ ಆಕ್ರಮಣಗಳಿಂದ ಅವರನ್ನು ಕಾಪಾಡುವ ಪ್ರಾಣಿಲೋಕವನ್ನು ಬಲು ಶ್ರದ್ಧೆಯಿಂದ ಗೌರವಿಸುತ್ತಾರೆ.

ತೇಜಸ್ವಿ ತಮ್ಮ ನಾಯಿ ಕಿವಿ ಕುರಿತು “ಕಿವಿ ನನ್ನ ಬಳಿ ಇದ್ದ ಒಂದು ಸ್ಪಾನಿಯಲ್ ಜಾತಿಯ ಬಿಳಿಯ ನಾಯಿ. ಮನೆ ಕಾಯುವುದರಿಂದ ಹಿಡಿದು ಶಿಕಾರಿಯವರೆಗೆ ಎಲ್ಲದರಲ್ಲೂ ಅದ್ವಿತೀಯನಾಗಿದ್ದ. ಅದರ ಗುಣ ಬುದ್ದಿವಂತಿಕೆಗಳನ್ನು ನೋಡಿ ಅನೇಕ ಬಾರಿ ನಾನೂ ಆಶ್ಚರ್ಯಪಡುತ್ತಿದ್ದೆ. ಕೇವಲ ಜಾನಪದ ಗೀತೆಗಳಲ್ಲಿ, ದಂತಕತೆಗಳಲ್ಲಿ ಮಾತ್ರ ಆ ರೀತಿಯ ನಾಯಿ ಇರುತ್ತದೆಂದು ಕೇಳಿದ್ದೆ. ಕಿವಿಯನ್ನು ಸಾಕಿದ ಅನಂತರ ಅದನ್ನು ಸಾಕ್ಷಾತ್ತಾಗಿ ನೋಡಿದಂತಾಗಿತ್ತು” ಎನ್ನುತ್ತಾರೆ.

ಪ್ರಾಣಿಲೋಕದಿಂದಲೂ ಮನುಷ್ಯ ಕಲಿಯಬೇಕಾದ ಜ್ಞಾನದ ಅನೇಕ ಪಾಠಗಳಿವೆ ಎನ್ನುತ್ತಿದ್ದರು ತೇಜಸ್ವಿ. ಪ್ರಕೃತಿ ಹಾಗೂ ಮನುಷ್ಯನ ನಡುವೆ ಅರ್ಥವಾಗದ ಅನೇಕ ಸಂಗತಿಗಳಿರುತ್ತವೆ. ಕೆಲವು ಮನುಷ್ಯನ ಅರಿವಿಗೆ ಬಾರದ ಸೂಕ್ಷ್ಮ ವಿಷಯಗಳು. ಇಂಥವನ್ನು ಮೊದಲು ಕಾಣುವ ಶಕ್ತಿ ನಾಯಿಗಿದೆ. ಈ ನಿಸರ್ಗದ ಸಣ್ಣ ಶಬ್ದ, ಭಿನ್ನ ನಡೆ, ಸೂಕ್ಷ್ಮ ಬದಲಾವಣೆಗಳನ್ನು ನಾಯಿ ಬಲು ಬೇಗ ಗ್ರಹಿಸುತ್ತದೆ. ನಾಯಿಯ ಈ ಪ್ರತಿಭೆಯಿಂದ ನಿಸರ್ಗದ ಜ್ಞಾನದ ಎಳೆಗಳನ್ನು ಹುಡುಕಬಹುದು. ನಾಯಿಯೆಂಬ ಪ್ರಾಣಿಯನ್ನು ನಿರ್ಲಕ್ಷ್ಯ ಮನೋಭಾವದಿಂದ ನೋಡುವ ಅನೇಕರಿಗೆ ನಾಯಿಯ ಕುರಿತ ಇಷ್ಟೊಂದು ವ್ಯಾಖ್ಯಾನಗಳು ವಿಚಿತ್ರ ಎನಿಸಬಹುದು.

ನಾಯಿಯನ್ನು ಕುರಿತ ವ್ಯಾಮೋಹ, ಅದನ್ನು ಸಾಕುವ ಕಳಕಳಿ ತೇಜಸ್ವಿ ಅವರಿಗೆ ಮೊದಲಿನಿಂದಲೂ ಇದ್ದ ಹಾಗೆ ಕಾಣುತ್ತದೆ. ಅವರ ಪರಿಸರದ ಕಥೆ ಶುರುವಾಗುವುದೇ ನಾಯಿಯ ಮೂಲಕ. ಅನ್ವೇಷಣೆ ಮಾಡುವ ಆನುಷಂಗಿಕ ಗುಣ ನಿರೂಪಕನಲ್ಲಿ ಹೆಚ್ಚಾಗಲು ನಾಯಿ ಜೊತೆಗಿನ ಗೆಳೆತನವೇ ಕಾರಣವಾಗಿರಬೇಕು. ಇದು ಮಲೆನಾಡಿನ ಸಾಕಷ್ಟು ಜನರಿಗೆ ಸಿಕ್ಕಿರುವ ಒಂದು ಪ್ರಾಕೃತಿಕ ವರ. ಕುವೆಂಪು ಅವರಿಗೆ ತೇಜಸ್ವಿ ಬಾಲಕರಾಗಿದ್ದಾಗ “ನಮಗೆ ಎರಡು ನಾಯಿ ಮರಿ ಬೇಕೇಬೇಕು. ಮಾವನಿಗೆ ಕಾಗದ ಬರೆಯುತ್ತಾ ನಮಗೆ ಒಂದು ಹೆಣ್ಣು ನಾಯಿ ಮರಿ ಬೇಕು ಎಂದು ಬರೆಯಿರಿ” ಎಂದು ಒತ್ತಾಯಿಸಿ ಬರೆದಿರುವ ಮೊದಲ ಪತ್ರ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ.

ತೇಜಸ್ವಿ ತಮ್ಮ ಮಿಲನಿಯಮ್ ಸರಣಿಯಲ್ಲಿ ‘ಜರ್ಮನ್ ಷಪರ್ಢ್’ ನಾಯಿಯ ಬಗ್ಗೆ ಬರೆಯುತ್ತಾರೆ. ನಮ್ಮಲ್ಲಿನ ‘ಪರಮವೀರ ಚಕ್ರ’ ಪ್ರಶಸ್ತಿಗೆ ಸಮನಾದ ‘ಡಿಕೆನ್ಸ್ ಕ್ರಾಸ್’ ಪ್ರಶಸ್ತಿಯನ್ನು ಈ ಜರ್ಮನ್ ನಾಯಿ ಗಳಿಸುತ್ತದೆ. ಅದಕ್ಕಿಟ್ಟ ಹೆಸರು ‘ಅಂಟಿಸ್’ ಎಂದು. ಯುದ್ಧದಲ್ಲಿ ತೋರಿದ ಧೈರ್ಯ, ಸಾಹಸ, ಪರಾಕ್ರಮಗಳಿಗೆ ಪ್ರಶಸ್ತಿ ಪಡೆಯುವ ಅಂಟಿಸ್ ಅಸಾಧಾರಣ ಬುದ್ಧಿಶಕ್ತಿಯ ನಾಯಿ ಎನಿಸಿತ್ತು, ಜನರ ಕಿವಿಗೆ ಕೇಳಿಸದ ನಿಗೂಢ ಸದ್ದು ಅದಕ್ಕೆ ಮೊದಲೇ ಕೇಳಿಸುತ್ತಿತ್ತು. ತನ್ನ ಅಧ್ಭುತ ಶಕ್ತಿಯಿಂದ, ಜ್ಞಾನಪ್ರತಿಭೆಯಿಂದ ನೂರಾರು ಜನರ ಹಾಗೂ ಸೈನಿಕರ ಪ್ರಾಣವನ್ನು ಯುದ್ಧದಲ್ಲಿ ಉಳಿಸಿದ ಈ ನಾಯಿಯ ಬಗ್ಗೆ ತೇಜಸ್ವಿ ಹೆಮ್ಮೆಯಿಂದ ಬರೆಯುತ್ತಾರೆ. ನಾಯಿಯ ಇಂದ್ರಿಯಗಳ ಅಸಾಧಾರಣ ಸೂಕ್ಷ್ಮಜ್ಞತೆ, ಅವುಗಳಿಗಿರುವ ಅಸಾಧಾರಣ ಬುದ್ಧಿಶಕ್ತಿಯ ಬಗ್ಗೆ ಹೆಚ್ಚು ಒಲವಿದ್ದ ಕಾರಣಕ್ಕೆ ತೇಜಸ್ವಿ ಕಥನಗಳು ನಾಯಿಯ ಕುರಿತು ಹೆಚ್ಚು ಶ್ರದ್ಧೆ ತೋರುತ್ತವೆ.

‘ಪರಿಸರ ಕಥೆ’ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ‘ಕರ್ವಾಲೊ’ ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿ ಬರುವ ಕಿವಿ ಎಂಬ ನಾಯಿಯ ಪಾತ್ರವನ್ನು ತೇಜಸ್ವಿ ಬಲು ಜತನದಿಂದ ನಿರೂಪಿಸುತ್ತಾರೆ. ಕಾಡಿನ ಅರಿವನ್ನು ಕಲಿಸುವ ಒಬ್ಬ ಗುರುವಾಗಿ ನಾಯಿ ಇಲ್ಲಿ ಕಾಣುತ್ತದೆ. ಕಾಡಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಲೇಖಕರಿಗೆ ತಿಳಿಯುವಂತೆ ಮಾಡುವ ಕಿವಿ ಪ್ರಕೃತಿ ಹಾಗೂ ಮನುಷ್ಯನ ನಡುವೆ ಜ್ಞಾನದ ಕೊಂಡಿಯಾಗಿ ಕೆಲಸ ಮಾಡುತ್ತದೆ.

“ನಾನು ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕೋವಿ ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಕಿವಿಯೊಂದಿಗೆ ಅಲೆಯುವುದು ನನ್ನ ಕೆಲಸವಾಗಿತ್ತು. ಓದುವುದು, ಬರೆಯುವುದು, ಎಲ್ಲದಕ್ಕೂ ತಿಲಾಂಜಲಿಯಿತ್ತು. ಹೀಗೆ ನಿರ್ಜನ ಕಾಡುಗಳಲ್ಲಿ ಗೊತ್ತು, ಗುರಿಯಿಲ್ಲದೆ ಅಲೆಯುತ್ತಿರುವ ನನ್ನನ್ನು ನೋಡಿ ಅನೇಕರು ಇವನು ಸಂಪೂರ್ಣ ಹಾಳಾದನೆಂದು ವ್ಯಸನ ಸೂಚಿಸಿದವರಿದ್ದಾರೆ. ಅನೇಕರು `ಎಂಥವರಿಗೆ ಎಂಥಾ ಮಗ’ ಎಂದು ವಿಷಾದಪಟ್ಟವರೂ ಅನೇಕರಿದ್ದಾರೆ. ಕೆಲವರು ‘ಈ ನಾಯಿಯ ದೆಸೆಯಿಂದ ಹಾಳಾದ’ ಎಂದು ಕಿವಿಯನ್ನೂ ದೂಷಿಸಿದವರೂ ಇದ್ದಾರೆ” ಎನ್ನುತ್ತಾರೆ ತೇಜಸ್ವಿ

ಕುವೆಂಪು ಸಾಹಿತ್ಯ ಪ್ರಕೃತಿಯ ವಿವರಗಳಿಂದ ಸೌಂದರ್ಯ ಮತ್ತು ಧ್ವನಿ ಪಡೆದು ಭಾವನಾತ್ಮಕವಾದರೆ, ಅದೇ ತೇಜಸ್ವಿ ಕಥನ ನಿಸರ್ಗದಲ್ಲಿ ಕಾಣದ ಬದುಕಿನ ವಿವರಗಳೆಡೆಗೆ ಆಸಕ್ತಿ ವಹಿಸಿ ಸೃಜನಾತ್ಮಕವಾಗುತ್ತದೆ. ಕುವೆಂಪು ಅವರ ನಾಯಿಗುತ್ತಿ ಪ್ರಕೃತಿಯ ನಡುವೆ ಒಂದು ಲಯವಾಗಿ ಬದುಕುವವನು. ಆತನ ನಾಯಿ ಹುಲಿಯ ನಿಸರ್ಗವನ್ನು ನೋಡುವ ಅವನ ನೋಟವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಅವನಿಗೂ ನಿಸರ್ಗದ ಅರಿವಿನ ಪಾಠ ಹೇಳುವ ಸೂಕ್ಷ್ಮ ಜೀವಿ ಅದು. ಇದರ ಹಾಗೆಯೇ ತೇಜಸ್ವಿ ಕಥನದ ನಾಯಿ ‘ಕಿವಿ’ ಕೂಡ ನಿಸರ್ಗದ ಕಾಣದ ಅನೇಕ ಮುಖಗಳನ್ನು ತೋರಿಸುತ್ತಾ ಹೋಗುತ್ತದೆ. ಪ್ರಾಣಿಯಿಂದ ಮನುಷ್ಯ ಕೂಡ ಕಲಿಯುತ್ತಾನೆ ಮತ್ತು ಕಲಿಯಬೇಕು ಎಂಬ ಸಂಗತಿಯೇ ಇಲ್ಲಿ ಮುಖ್ಯ.

ಅಲೆದಾಟದಲ್ಲಿ, ಸಾಕು ಪ್ರಾಣಿಯೊಟ್ಟಿಗಿನ ಆಪ್ತತೆಯಲ್ಲಿ ಜ್ಞಾನ ಗಳಿಸುತ್ತಿದ್ದ ತೇಜಸ್ವಿ ಹೊರ ಜಗತ್ತಿಗೆ ಹಾಳಾದವರಂತೆ ಕಂಡಿರುವುದು ಉತ್ಪ್ರೇಕ್ಷೆಯ ಸಂಗತಿಯಲ್ಲ. ಮನುಷ್ಯ ತನ್ನೆಲ್ಲಾ ಸಂಬಂಧಗಳಷ್ಟೇ ಮಿಗಿಲಾಗಿ ಪ್ರಾಣಿಲೋಕದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವುದು ಬಯಲ ಮತ್ತು ಕಾಡಿನ ಬದುಕಿನವರಿಗೆ ಎಷ್ಟು ಅನಿವಾರ್ಯ ಎನ್ನುವುದನ್ನು ತೇಜಸ್ವಿ ಕಥನಗಳು ಹೇಳುತ್ತವೆ.

ಮನುಷ್ಯನಿಗಿಂತ ಮಿಗಿಲಾದ ವಾಸನಾ ಜ್ಞಾನ, ಮತ್ತು ಎಚ್ಚರದ ಸ್ಥಿತಿ ಇರುವ ನಾಯಿ ತೇಜಸ್ವಿ ಅವರಿಗೆ ಹೊಸ ಸಂಗತಿಗಳನ್ನು ತಿಳಿಸುವ ಗುರುವಾಗಿದೆ. ತನ್ನ ಸೂಕ್ಷ್ಮ ಗ್ರಹಿಕೆಗಳಿಂದ ನಿರೂಪಕನ ಅರಿವನ್ನು ವಿಸ್ತಾರಿಸುವ ನಾಯಿ ಜಗದ ಕಣ್ಣಿಗೆ ಮಾತ್ರ ಸಾಮಾನ್ಯ ಪ್ರಾಣಿ. ಇಂಥ ಸಾಮಾನ್ಯ ಜೀವದಿಂದಲೂ ಕಲಿಯುವ ಸಾಕಷ್ಟು ಸಂಗತಿಗಳಿವೆ ಎಂಬ ಸರಳ ಸತ್ಯವನ್ನು ತೇಜಸ್ವಿ ಕಥನಗಳು ತೆರೆದಿಡುತ್ತವೆ. “ಮನುಷ್ಯನ ಮಿತ್ರ ಶೇಷ್ಠನಾದ ನಾಯಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ನಮಗೆ ಪರಿಚಯವಾದಾಗ ಮಾತ್ರ ನಾಯಿಯ ಹಿರಿಮೆ ನಮಗೆ ಅರ್ಥವಾಗುತ್ತದೆ. ನಮ್ಮ ಅಂತಃಕರಣವನ್ನು ಈ ಜೀವಗಳು ಎಷ್ಟು ಕಲಕುತ್ತವೆ ಎಂದರೆ ಇದನ್ನು ಇತರರಿಗೆ ವಿವರಿಸಿ, ವಿಶ್ಲೇಷಿಸಿ ಹೇಳುವುದು ಕಷ್ಟ ಎನಿಸುತ್ತದೆ” ಎನ್ನುತ್ತಾರೆ ತೇಜಸ್ವಿ. ನಮ್ಮ ಪರಿಸರದಲ್ಲೇ ಬದುಕುವ ಜೀವಿಗಳ ಜೊತೆಗೆ ಸಹಜವಾಗಿ ಬಾಳುವ ಜೊತೆಗೆ ಅವುಗಳ ಅಂತಃಸತ್ವವನ್ನೂ ಅರಿತು ಗೌರವಿಸುವ ವಿವೇಕವನ್ನು ತೇಜಸ್ವಿ ಬರೆಹಗಳು ಕಲಿಸುತ್ತವೆ.

“ನಾಯಿಗೆ ನಾವು ಮಾಡುವಂತೆ ಮಾನವೀಯ ವ್ಯಕ್ತಿತ್ವವನ್ನೂ ಆರೋಪಿಸಿ ನಮ್ಮಂತೆಯೇ ಅದು ಕೂಡ ಎಂದು ನೋಡುವುದರಿಂದ ನಾಯಿಗೆ ಸಂತೋಷವಾಗಲೀ, ಪ್ರಯೋಜನವಾಗಲೀ ಉಂಟೆ ಎಂದು ನನಗೆ ಅನುಮಾನ” ಎನ್ನುವ ತೇಜಸ್ವಿ ಮನುಷ್ಯ ಮತ್ತು ಪ್ರಾಣಿಲೋಕದ ನಡುವೆ ಇಕಾಲಜಿ ರೂಪಿಸಿರುವ ಮಿತಿಗಳನ್ನೂ ಗಮನಿಸಿ ಹೇಳಬಲ್ಲರು. ಪರಿಸರ ಲೋಕದ ಇಂಥ ಬೆಸುಕೊಂಡಿಗಳನ್ನು ನಮ್ಮ ನಮ್ಮ ಬುದ್ಧಿಶಕ್ತಿಯ ಮಿತಿಗೆ ತಕ್ಕಂತೆ ನಾವೆಲ್ಲಾ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಈ ಪ್ರಾಣಿಲೋಕವನ್ನು ಕರುಣೆ, ಸಹಾನುಭೂತಿಯಿಂದ ನೋಡಬೇಕೇ ಹೊರತು ನಮ್ಮಂತೆ ಅವೂ ಕೂಡ ಇರಬೇಕು ಎಂದು ಬಯಸುವುದು ಮನುಕುಲದ ಆಲೋಚನಾ ಪರಿಮಿತಿ.

ತನ್ನ ಜಾಣತನ, ನಿಷ್ಠ್ಠೆ ಮತ್ತು ಪ್ರತಿಭೆಗಳನ್ನು ತನ್ನ ಸಾಕುವ ಮಾಲೀಕನಿಗೆ ಪರಿಚಯಿಸಲು ಹೋಗಿ ಹತವಾದ ನಾಯಿಗಳ ಕಥೆ ಅನೇಕ ಇವೆ. ಹುಚ್ಚು ಸಾಹಸಗಳ ತೋರಿಸಲು ಹೋಗಿ ಶತ್ರುಗಳಿಂದ ಕೊಲ್ಲಲ್ಪಟ್ಟ ನಾಯಿಗಳಿವೆ. ಕಾಡಿನ ಪ್ರಾಣಿಗಳ ಜತೆ ಸೆಣೆಸಿ ಪ್ರಾಣ ಬಿಡುವ ಅನೇಕ ನಾಯಿ ಪಾತ್ರಗಳು ತೇಜಸ್ವಿ ಕಥೆಗಳಲ್ಲಿವೆ. ಭಿಕ್ಷುಕರು ಬಂದರೆ ಬೊಗಳುವುದು, ಸಿರಿವಂತರು ಬಂದರೆ ಗೌರವಿಸುವ ಗುಣ ತಮ್ಮ ನಾಯಿ ಕಿವಿ ಕಲಿತ ಬಗ್ಗೆ ತೇಜಸ್ವಿಯವರಿಗೆ ಆಶ್ಚರ್ಯವೆನಿಸುತ್ತದೆ. ತರತಮ ಭಾವ ಮನುಷ್ಯರಲ್ಲಿ ಸಹಜ. ಆದರೆ ನಾಯಿಯೂ ಇದನ್ನು ಪಾಲಿಸುವುದು ಹೇಗೆಂದು ಅವರಿಗೂ ಗೊತ್ತಾಗುವುದಿಲ್ಲ. “ಇದು ನಾಯಿಗೆ ಇರುವ ತಾರತಮ್ಯ ಭಾವವೋ, ಪ್ರಕೃತಿ ಅದಕ್ಕೆ ಕಲಿಸಿರುವ ಪಾಠವೋ ಗೊತ್ತಿಲ್ಲ. ಮನುಷ್ಯರಂತೆಯೇ ಬೇರೆ ಬೇರೆ ಸ್ವಭಾವ, ವರ್ತನೆ ಇರುವ ಪ್ರಾಣಿ ಲೋಕವೂ ಇರುತ್ತದೆ ಎನ್ನುವುದಕ್ಕೆ ನಾಯಿ ಕಿವಿಯೇ ಉದಾಹರಣೆ” ಎನ್ನುತ್ತಾರೆ.

ಪ್ರಾಣಿ ಪಕ್ಷಿಗಳಿಗೆ ಮನುಷ್ಯರಂತೆ, ಬದುಕಿನ ವಿವರಗಳು, ಜಿದ್ದು, ನೆನಪು, ಭಾವುಕತೆ, ಉಪಕಾರ ಸ್ಮರಣೆ, ಸ್ನೇಹ, ನಂಬಿಕೆಗಳು, ಸಂಬಂಧಗಳನ್ನು ಕಾಪಾಡುವ ಜವಾಬ್ದಾರಿ ಇತ್ಯಾದಿಗಳು ಇರುತ್ತವೆಯೋ ಇಲ್ಲವೋ ಎನ್ನುವ ಚರ್ಚೆ ಅನೇಕ ಕಡೆ ಬರುತ್ತದೆ. ಮನುಷ್ಯ ಪ್ರತಿಯೊಂದು ಜೀವದ ಜತೆ ದಿನನಿತ್ಯದ ಸಖ್ಯ, ಒಡನಾಟ ಬೆಳೆಸಿಕೊಂಡರೆ ತನ್ನತನದ ಸ್ವರೂಪಗಳನ್ನು, ಮನುಷ್ಯನ ವ್ಯಕ್ತಿತ್ವಕ್ಕೆ ಹತ್ತಿರದ ಗುಣ ಸ್ವಭಾವಗಳನ್ನು ಪ್ರಾಣಿ ಪಕ್ಷಿಗಳಲ್ಲಿ ಹುಡುಕಲು ಆರಂಭಿಸುತ್ತಾನೆ. ಇದೊಂದು ಸಹಜ ಪ್ರಕ್ರಿಯೆ.

ಲೇಖಕರ ಕೈಯ್ಯಲ್ಲಿ ಕೋವಿ ನೋಡಿದರೆ ನಾಯಿ ಕಿವಿ ಬೆಳಗಾಗುವವರೆಗೂ ಹಿಂದಿರುಗದೆ ರಾತ್ರಿ ಎಲ್ಲಾ ಕಾಡೊಳಗೇ ಶಿಕಾರಿ ಹುಡುಕಿಕೊಂಡು ತಿರುಗುವ ಸ್ವಭಾವ ಹೊಂದಿದೆ. ತಿರುಗಾಟದ, ಶಿಕಾರಿಯ ಹಿಂದೆ ಅಲೆಯುವ ಸ್ವಭಾವ ಪ್ರಧಾನ ಗುಣವಾದ ಕಾರಣ ಲೇಖಕನಿಗೆ ಕಿವಿ ಮುಖ್ಯ ಸಂಗಾತಿ ಎನಿಸುತ್ತದೆ. ಶಿಕಾರಿ ಸಮಯದಲ್ಲಿ ಟಾರ್ಚ್ ಬೆಳಕನ್ನೂ, ನಿರೂಪಕನ ಧ್ವನಿಯನ್ನೂ ಕೇಳುತ್ತಲೇ ಅದನ್ನೇ ತನ್ನ ಪ್ರೋತ್ಸಾಹವೆಂದು ತಿಳಿದು ಮತ್ತಷ್ಟು ಜೋರಾಗಿ ಬೊಗಳುತ್ತಾ, ಪೊದೆಯ ಮುಳ್ಳು, ಅಪಾಯ ಒಂದನ್ನೂ ಲೆಕ್ಕಿಸದೆ ಪ್ರಾಣಿಯ ಮೇಲೆ ಹಾರಿ ಆಕ್ರಮಣ ಮಾಡುವ ಕಿವಿ ತನ್ನ ಈ ವಿಶೇಷ ಪ್ರತಿಭೆಯ ಕಾರಣಕ್ಕೆ ಹೆಚ್ಚು ಮನ್ನಣೆ ಪಡೆಯುತ್ತದೆ. ಮನುಷ್ಯರ ಜೊತೆ ಬದುಕುತ್ತಾ ಅವರ ಬೇಕು ಬೇಡಗಳನ್ನು ಅರಿತು ಅವರಂತಾಗುವ ವಿಶೇಷ ಗುಣ ನಾಯಿಗಳಿಗಿದೆ.


ಇದನ್ನೂ ಓದಿ: ತೇಜಸ್ವಿಯವರ ಒಂದು ಸೀಟಿನ ಸ್ಕೂಟರ್‍ರೂ… ಡ್ರಾಪಾಯಣದ ಸಮೃದ್ಧ ಅನುಭವವೂ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...