Homeಅಂಕಣಗಳುಎಲೆಮರೆಯಿಂದಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಎಲೆಮರೆಯಿಂದ: ಸಾಹಿತ್ಯದಿಂದಲೇ ಬದುಕು ಕಟ್ಟಿಕೊಂಡ ಕರಾವಳಿಯ ಮೌಲ್ವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.

- Advertisement -
- Advertisement -

ಕೊರೊನಾ ಲಾಕ್‌ಡೌನ್‌ನಿಂದಾಗಿ ಮಸೀದಿ ಬಾಗಿಲುಗಳು ಮುಚ್ಚಲ್ಪಟ್ಟಾಗ ಮೌಲ್ವಿಗಳು ಅಕ್ಷರಶಃ ನಿರುದ್ಯೋಗಿಗಳಾಗಿಬಿಟ್ಟಿದ್ದರು. ಈ ದುರಿತ ಕಾಲದಲ್ಲಿ ಕೆಲವರು ಜೀವನೋಪಾಯಕ್ಕಾಗಿ ಬೇರೆ ಕಸುಬುಗಳತ್ತ ಮುಖ ಮಾಡಿದರೆ, ಅದರ ಕುರಿತಾಗಿಯೂ ಪರ ವಿರೋಧ ಚರ್ಚೆಗಳೇರ್ಪಡುತ್ತಿವೆ.

ಮೌಲ್ವಿಗಳೆಂದರೆ ಮಸೀದಿಗೇ ಸೀಮಿತವಾಗಿರಬೇಕು, ಅವರ ಉಡುಗೆ-ತೊಡುಗೆಗಳು, ವಿಚಾರಗಳು ಅವರಿಗೆಂದೇ ನಿಗದಿಪಡಿಸಿದ ಅಚ್ಚಿನೊಳಗೆ ಕೂರುವಂತಿರಬೇಕು ಎಂಬುವುದು ನಮ್ಮ ಸಮಾಜದ ಸಂಕುಚಿತ ಧೋರಣೆಯಾಗಿದೆ. ಈ ಅಂತರ್ಗತ ಪೂರ್ವಾಗ್ರಹಗಳಿಗೆ ಅಂಜಿಕೊಂಡು ಅವರು ತಮಗೆ ತಾವೇ ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗಗಳ ನಡುವೆ ಕೇವಲ ಆರು ವರ್ಷಗಳ ಕಾಲವಷ್ಟೇ ಮಸೀದಿಯಲ್ಲಿ ಮೌಲ್ವಿಯಾಗಿ ಸೇವೆ ಸಲ್ಲಿಸಿ ಆ ಬಳಿಕ ಪೂರ್ಣಕಾಲಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಬ್ಯಾರಿ-ಮುಸ್ಲಿಂ ಸಮುದಾಯದ ಅಪ್ರತಿಮ ಪ್ರತಿಭೆ, ಪ್ರಗತಿಪರ ನಿಲುವಿನ ವಿದ್ವಾಂಸ ಸಾಲೆತ್ತೂರು ಅಬೂಬಕರ್ ಫೈಝಿ ನೆನಪಾಗುತ್ತಾರೆ. ಇಸ್ಲಾಮನ್ನು ಕನ್ನಡದಲ್ಲಿ ತೆರೆದಿಟ್ಟ ಬೆರಳೆಣಿಕೆಯ ಮೊದಲ ಹಂತದ ಸಾಹಿತಿಗಳಲ್ಲಿ ಫೈಝಿ ಅಂಗ್ರಪಂಕ್ತಿಯಲ್ಲಿ ಕಾಣಸಿಗುತ್ತಾರೆ. ಇಸ್ಲಾಮಿನ ಬೇರೆ ಬೇರೆ ಪ್ರವಾದಿಗಳ, ಸೂಫಿಗಳ ಮತ್ತು ಇತಿಹಾಸಪುರುಷರ ಬದುಕಿನ ಚಿತ್ರಗಳನ್ನು ಸೃಜನಶೀಲ ಪ್ರಕಾರದಲ್ಲಿ ಕಟ್ಟಿಕೊಟ್ಟವರಲ್ಲಿ ಫೈಝಿ ಮೊದಲಿಗರು. ನನ್ನರಿವಿಗೆ ನಿಲುಕಿದಂತೆ ಕನ್ನಡದಲ್ಲಿ ಸಾಹಿತ್ಯವನ್ನೇ ಜೀವನೋಪಾಯವಾಗಿಸಿದ ವಿರಳಾತಿವಿರಳರಲ್ಲಿ ಶಿವರಾಮ ಕಾರಂತರು ಪ್ರಮುಖರಾಗಿದ್ದರು. ಅಂತೆಯೇ ಈ ಸಾಲೆತ್ತೂರು ಫೈಝಿಯವರಿಗೆ ಸಾಹಿತ್ಯವೇ ಜೀವನೋಪಾಯ. ಚಿಕ್ಕಂದಿನಲ್ಲಿ ಅಂಗಡಿಯವನು ದಿನಸಿ ಕಟ್ಟಿಕೊಡುತ್ತಿದ್ದ – ಓದಿದರೂ ತಲೆಬುಡ ಸಿಗದ ಪತ್ರಿಕೆಗಳ ತುಂಡು ಕಾಗದಗಳು, ಸಾಹಿತ್ಯಾಸಕ್ತರಾಗಿದ್ದ ಅಣ್ಣ ಮುಹಮ್ಮದರು ಓದಿ ಅಟ್ಟದಲ್ಲಿ ಕಟ್ಟಿಹಾಕಿದ್ದ ಕನ್ನಡ ಕಾದಂಬರಿಗಳು ಓದಿನ ದಾಹ ತಣಿಸುತ್ತಿದ್ದವು. ಉದಯವಾಣಿ ಪತ್ರಿಕೆಯ ಅಂದಿನ ಪ್ರಮುಖ ಅಂಕಣಕಾರರಾಗಿದ್ದ ಕು.ಶಿ.ಹರಿದಾಸ ಭಟ್ಟ, ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಬೈಕಾಡಿ ವೆಂಕಟಕೃಷ್ಣ ರಾಯರ ಲೇಖನಗಳು ಅವರ ಓದಿನ ಹರವನ್ನು ವಿಸ್ತರಿಸಿಕೊಳ್ಳಲು ನೆರವಾಯಿತು.

ಫೈಝಿ ಕಲಿತದ್ದು ಐದನೇ ತರಗತಿಯವರೆಗೆ ಮಾತ್ರ. ಅಪಾರ ಓದು, ಸೂಕ್ಷ್ಮಗ್ರಾಹಿತ್ವ, ಸುತ್ತಮುತ್ತಲ ಪರಿಸರದ ಕುರಿತಂತೆ ತೀರದ ಕುತೂಹಲ ಅವರನ್ನು ಸಾಹಿತಿಯಾಗಿಸಿತ್ತು.

ಕರ್ನಾಟಕ – ಕೇರಳದ ಗಡಿಭಾಗದಲ್ಲಿರುವ ಪೊಯ್ಯತ್ತಬೈಲ್ ಎಂಬಲ್ಲಿ ಧಾರ್ಮಿಕ ಶಿಕ್ಷಣ ಕಲಿಯುತ್ತಿದ್ದ ಕಾಲದಲ್ಲಿ ಹಿರಿಯ ಸಾಹಿತಿ, ಸಂಶೋಧಕ ಬಿ.ಎಂ. ಇಚ್ಲಂಗೋಡು ಅವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ “ತವನಿಧಿ” ಪತ್ರಿಕೆಯಲ್ಲಿ ಸೂಫಿಗಳ ಸುಲ್ತಾನ ಬಗ್ದಾದಿನ ಶೇಖ್ ಮುಹಿಯುದ್ದೀನರ ಬದುಕಿನ ಕುರಿತಂತೆ ಫೈಝಿಯವರ ಮೊದಲ ಲೇಖನ ಪ್ರಕಟವಾಯಿತು. ಅಲ್ಲಿಂದ ಮುಂದೆ ದಣಿವರಿಯದೇ ಬರೆಯತೊಡಗಿದರು.
ಕೇರಳದ ಪಟ್ಟಿಕ್ಕಾಡ್ ಎಂಬಲ್ಲಿನ ಜಾಮಿಯಾ ನೂರಿಯಾ ಇಸ್ಲಾಮಿಯಾ ಎಂಬ ಇಸ್ಲಾಮಿಕ್ ವಿದ್ಯಾಲಯದಿಂದ ಫೈಝಿ ಪದವಿ ಪಡೆದು ಮಸೀದಿಯಲ್ಲಿ ಮೌಲ್ವಿ ಉದ್ಯೋಗಕ್ಕೆ ನಿಂತರೂ ಸಾಹಿತ್ಯದೆಡೆಗಿನ ಒಲವು ಕಡಿಮೆಯಾಗಲಿಲ್ಲ. ಮಸೀದಿಯಲ್ಲಿ ಇಮಾಮರಾಗಿದ್ದಾಗಲೇ ’ಅಲ್-ಮುನೀರ್’ ಎಂಬ ಪತ್ರಿಕೆಯೊಂದನ್ನು ಹೊರತರುತ್ತಿದ್ದರು. ಅಲ್ಪಕಾಲದಲ್ಲೇ ಪತ್ರಿಕೆ ಆರ್ಥಿಕ ಅಡಚಣೆಯಿಂದ ಮುಚ್ಚಿಹೋಯಿತು.

1991ರಲ್ಲಿ ಇಬ್ರಾಹಿಂ ಬಾವ ಹಾಜಿ ಎಂಬವರು ಪ್ರಾರಂಭಿಸಿದ ಮುಸ್ಲಿಂ ಸಾಮಾಜಿಕ – ಧಾರ್ಮಿಕ ವಾರಪತ್ರಿಕೆಗೆ ಫೈಝಿಯವರನ್ನು ಸಂಪಾದಕರಾಗಿ ನೇಮಕ ಮಾಡಿದರು. ಮೂರು ವರ್ಷಗಳ ಕಾಲ ಹೆಚ್ಚುಕಡಿಮೆ ಏಕಾಂಗಿಯಾಗಿ ಇಡೀ ಪತ್ರಿಕೆಯನ್ನು ಅತ್ಯಂತ ಜತನದಿಂದ ಮತ್ತು ಜಾಣ್ಮೆಯಿಂದ ನಡೆಸಿದರು. ಆ ಕಾಲದಲ್ಲಿ ಮುಸ್ಲಿಂ ಬರಹಗಾರರ ಸಂಖ್ಯೆ ಬಹಳ ಕಡಿಮೆಯಿತ್ತು. ಹಾಗೆ ಕೆಲವು ಬರಹಗಾರರಿದ್ದರೂ ಅಲ್-ಅನ್ಸಾರ್ ಪತ್ರಿಕೆಯ ಚೌಕಟ್ಟಿನುಸಾರ ಬರೆಯುವವರ ಸಂಖ್ಯೆ ತೀರಾ ವಿರಳವಿತ್ತು. ಆ ಕಾಲದಲ್ಲಿ ಫೈಝಿಯೊಬ್ಬರೇ ಬಹುತೇಕ ಬರಹಗಳನ್ನು ಬೇರೆಬೇರೆ ಹೆಸರುಗಳಲ್ಲಿ ಪ್ರಕಟಿಸಿ ಪತ್ರಿಕೆಗೆ ಜೀವ ತುಂಬುತ್ತಿದ್ದರು. ಪತ್ರಿಕೆಯ ಮುಖಪುಟವು ಸಮಕಾಲೀನ ರಾಜಕೀಯ ವಿಶ್ಲೇಷಣೆಗೆ ಮೀಸಲಾದರೆ, ಒಳಪುಟಗಳಲ್ಲಿ ಇಸ್ಲಾಮೀ ಕರ್ಮಶಾಸ್ತ್ರ್ರ, ಧಾರಾವಾಹಿ, ಪ್ರಶ್ನೋತ್ತರ, ಪದಬಂಧ ಇತ್ಯಾದಿಗಳನ್ನೊಳಗೊಂಡು ಪ್ರಬುದ್ಧ ಪತ್ರಿಕೆಯಾಗಿ ಮುಸ್ಲಿಂ ಓದುಗ ವಲಯದಲ್ಲಿ ಜನಪ್ರಿಯವಾಯಿತು. ಮುಂದೆ ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಮುಸ್ಲಿಂ ಬರಹಗಾರರು ಹೊರಬರಲು ಅಲ್-ಅನ್ಸಾರ್ ಪತ್ರಿಕೆಯ ಕೊಡುಗೆಯೂ ದೊಡ್ಡದಿದೆ ಎಂದರೆ ತಪ್ಪಾಗದು.

ಫೈಝಿ ಓರ್ವ ಧಾರ್ಮಿಕ ಸಾಹಿತಿಯಾಗಿ ಮಾತ್ರ ಉಳಿಯಲಿಲ್ಲ. 1994ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಅವರ ಕಾರು ಅತಿ ವೇಗವಾಗಿ ಚಲಾಯಿಸಿ ರಸ್ತೆಬದಿಯಲ್ಲಿದ್ದ ಬಡಪಾಯಿಯ ಸಾವಿಗೆ ಕಾರಣವಾಗಿತ್ತು. ಅಷ್ಟುಹೊತ್ತಿಗೆ ಸಂಪಾದಕ ಸ್ಥಾನ ಕೈತಪ್ಪಿದ್ದರಿಂದ ಅಲ್-ಅನ್ಸಾರ್‌ನಲ್ಲಿ ಕರುಣಾಕರನ್ ಅವರ ಬೇಜವಾಬ್ದಾರಿಯನ್ನು ವಿರೋಧಿಸಿ ಬರೆಯಲಾಗದ್ದಕ್ಕೆ ಲಂಕೇಶ್ ಪತ್ರಿಕೆಯಲ್ಲ್ಲಿ ಬರೆದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದರು.

ಸಾಮಾನ್ಯವಾಗಿ ದ.ಕ. ಮತ್ತು ಕೊಡಗು ಜಿಲ್ಲೆಯ ಹೆಚ್ಚಿನವರು ಧಾರ್ಮಿಕ ಪದವಿಗಾಗಿ ಕೇರಳದ ವಿದ್ಯಾಲಯಗಳನ್ನು ಆಶ್ರಯಿಸುತ್ತಾರೆ. ಆದುದರಿಂದ ಅವರ ಕನ್ನಡ ಬರಹಗಳಲ್ಲಿ ಮಲ್ಗನ್ನಡ ಪದಗಳು (ಮಲಯಾಳಂ+ಕನ್ನಡ) ಯಥೇಚ್ಛವಾಗಿ ಕಾಣಸಿಗುತ್ತವೆ. ಫೈಝಿಯವರು ಕೇರಳದಲ್ಲಿ ಕಲಿತವರಾದರೂ ಅವರ ಬರಹಗಳಲ್ಲಿ ದುರ್ಬೀನು ಹಿಡಿದು ಹುಡುಕಿದರೂ ಮಲ್ಗನ್ನಡ ಪದ ಸಿಗಲಾರದು. ಸಂಪಾದಕ ದ್ದೆ ಕೈತಪ್ಪಿದ ಬಳಿಕ ಒಂಭತ್ತು ವರ್ಷಗಳ ಕಾಲ ಹೊರಗಿಂದಲೇ ಅಲ್-ಅನ್ಸಾರ್‌ಗೆ ಲೇಖನಗಳನ್ನು ಬರೆಯುತ್ತಿದ್ದರು.
೨೦೦೯ರಲ್ಲ್ಲಿ ಮದರಂಗಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಅವರ ಸಂಪಾದಕತ್ವದಲ್ಲಿ ಮದರಂಗಿ ಮಾಸಿಕ ಕರಾವಳಿ ಮುಸ್ಲಿಮರ ವಲಯದಲ್ಲಿ ಬಹಳ ಜನಪ್ರಿಯವಾಯಿತು. ೨೦೧೦ರ ಮಾರ್ಚ್ ತಿಂಗಳಲ್ಲಿ ಅವರೊಂದು ಅದ್ಭುತ ಸಂಪಾದಕೀಯ ಬರೆದಿದ್ದರು. “ಮಧುಮಾಸದ ಮಧುರಿಮೆ” ಎಂಬ ಶೀರ್ಷಿಕೆಯ ಆ ಸಂಪಾದಕೀಯದ ಪ್ರತಿಯೊಂದು ಪದವೂ “ಮ”ಕಾರದಿಂದ ಪ್ರಾರಂಭವಾಗಿತ್ತು. ಕನ್ನಡ ಪತ್ರಿಕೋದ್ಯಮದಲ್ಲಿ ಅದೊಂದು ವಿಶಿಷ್ಟ ಪ್ರಯೋಗವಾಗಿತ್ತು.
ಮದರಂಗಿಯಲ್ಲಿ ಅವರು ಬರೆಯುತ್ತಿದ್ದ “ಶಮ್ಮಿ ಕಾಲಮ”ನ್ನು ಮೊನ್ನೆ ಅವರಲ್ಲಿ ಮಾತಾಡುವವರೆಗೂ ಅದು ಹೆಣ್ಣೊಬ್ಬಳು ಬರೆಯುತ್ತಿದ್ದ ಅಂಕಣವೆಂದೇ ನಂಬಿದ್ದೆ. ಆ ಮಟ್ಟಿಗೆ ಹೆಣ್ಣೊಬ್ಬಳ ತುಮುಲವನ್ನು ಪರಿಣಾಮಕಾರಿಯಾಗಿ ಬರೆಯುತ್ತಿದ್ದರು.

ಫೈಝಿ ತನ್ನ ಬರಹದ ಆರಂಭಕಾಲದಿಂದಲೂ ವರದಕ್ಷಿಣೆ ಎಂಬ ಮಹಾಮಾರಿಯ ವಿರುದ್ಧ ಲೇಖನಿ ಝಳಪಿಸುತ್ತಾ ಬಂದಿದ್ದಾರೆ. ಕರಾವಳಿಯ ಮುಸ್ಲಿಂ ಸಮುದಾಯದೊಳಗೆ ಹಾಸುಹೊಕ್ಕಾಗಿದ್ದ ಮೌಢ್ಯಗಳ ವಿರುದ್ಧ ತನ್ನ ಬರಹಗಳ ಮೂಲಕ ಸಮರ ಸಾರಿದ್ದರು. ವಾಸ್ತು ಎಂಬ ಮನೆ ಒಡೆಯುವ ಹುಚ್ಚಾಟದಿಂದ ಮುಸ್ಲಿಂ ಸಮುದಾಯವೂ ಹೊರತಾಗಿರಲಿಲ್ಲ. ಅದರ ವಿರುದ್ಧ ಬರೆದಿದ್ದ “ವಾಸ್ತು-ವಾಸ್ತವವೇನು?” ಎಂಬ ಸರಣಿ ಬರಹಗಳು ಮುಸ್ಲಿಂ ವಾಸ್ತುತಜ್ಞರ ನಿದ್ದೆಗೆಡಿಸಿತ್ತು. ವಾಸ್ತು ಇಸ್ಲಾಮಿನಲ್ಲಿ ಇಲ್ಲವೇ ಇಲ್ಲ ಎಂದು ಖುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ವಾಸ್ತುತಜ್ಞರ ಹುನ್ನಾರವನ್ನು ಬಯಲಿಗೆಳೆದು ಪಟ್ಟಭದ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಕರಾವಳಿಯ ಮುಸ್ಲಿಂ ಸಮುದಾಯದಲ್ಲಿ ವಾಸ್ತುವಿನ ಹುಚ್ಚು ಇಂದು ವಿರಳವಾಗಿದ್ದರೆ ಅದರ ಹಿಂದೆ ಫೈಝಿಯವರ ಬರಹದ ಪ್ರಭಾವವಿದೆ.

ಅವರ ಬರಹಗಳಿಗೆ ಓದುಗರನ್ನು ಹಿಡಿದಿಟ್ಟುಕೊಳ್ಳುವ, ಚಿಂತನೆಗೆ ಹಚ್ಚುವ ಮತ್ತು ತಿದ್ದುವ ಶಕ್ತಿ ಇದೆ. ಪ್ರವಾದಿ ಮುಹಮ್ಮದ್ (ಸ): ಬದುಕು ಮತ್ತು ಆದರ್ಶ, ಗುಹೆಯಲ್ಲಿ ಹುಟ್ಟಿದ ಅದ್ಭುತ ಶಿಶು, ಕನಸಿನ ರಾಜ, ಸೇಬು ತಿಂದ ಹುಡುಗ, ಇಸ್ಲಾಮಿನ ಆಂತರ್ಯ, ಆಶುರಾ ಬೀಬಿ, ಲುಕ್ಮಾನುಲ್ ಹಕೀಂ, ಆಧುನಿಕ ವೈದ್ಯಶಾಸ್ತ್ರದ ಪಿತಾಮಹ ಇಬ್ನ್ ಸೀನಾ.. (ಅವಿಸ್ಸಿನ್ನಾ) ಹೀಗೆ ಸುಮಾರು ಇನ್ನೂರಕ್ಕೂ ಮಿಕ್ಕಿದ ಕೃತಿಗಳನ್ನು ಫೈಝಿ ರಚಿಸಿದ್ದಾರೆ. ಅವುಗಳಲ್ಲಿ ಮಲಯಾಳಂ ಮತ್ತು ಅರೆಬಿಕ್‌ನಿಂದ ಅನುವಾದಿಸಿದ ಗ್ರಂಥಗಳೂ ಸೇರಿವೆ. ಪ್ರಕಾಶಕರು ಅವರ ಕೃತಿಗಳನ್ನು ಮುಸ್ಲಿಂ ಧಾರ್ಮಿಕ ಸಮಾರಂಭಗಳಲ್ಲಿ ಮಾರಾಟ ಮಾಡಿ ಮುಗಿಸಿ ಲಾಭ ಗಳಿಸಿದರೇ ಹೊರತು ಕಾಸರಗೋಡು, ದ.ಕ. ಮತ್ತು ಕೊಡಗಿನಾಚೆಗೆ ತಲುಪಿಸುವ ಪ್ರಯತ್ನ ಮಾಡಲೇ ಇಲ್ಲ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ಕೂಡಾ ಬ್ಯಾರಿ ಸಮುದಾಯದ ಈ ಪ್ರತಿಭಾವಂತ ಹಿರಿಯ ಸಾಹಿತಿಯನ್ನು ಗುರುತಿಸದೇ ಇರುವುದು ಖೇದಕರ.


ಇದನ್ನೂ ಓದಿ: ದೇಶದ ಮುಸ್ಲಿಮೇತರರು ಬೇರೆ ಕಣ್ಣು ಪಡೆಯಲಿ; ನ್ಯಾಯಪಥ ಸಂಪಾದಕೀಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...