ಬಿಹಾರ ಚುನಾವಣೆಗೆ ಅಖಾಡ ಸಿದ್ದವಾಗುತ್ತಿದ್ದು, ಎಲ್ಲಾ ಪಕ್ಷಗಳು ಅಧಿಕ ಸ್ಥಾನಗಳನ್ನು ಗಳಿಸುವ ಸಲುವಾಗಿ ಭರದ ಸಿದ್ಧತೆಯಲ್ಲಿ ತೊಡಗಿವೆ. ಈ ನಡುವೆ ಮೈತ್ರಿ ಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ನಡುವೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ನಡೆಸುವ ಸಲುವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಇಂದು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರನ್ನು ಅವರ ಪಾಟ್ನಾ ನಿವಾಸದಲ್ಲೇ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಸ್ಥಾನ ಹಂಚಿಕೆ ಕುರಿತು ಅನೌಪಚಾರಿಕ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭಿಯಾನ ನಡೆಸುವ ಜವಾಬ್ದಾರಿಯನ್ನು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರಿಗೆ ನೀಡಲಾಗಿದ್ದು, ಅವರೂ ಸಹ ಇಂದಿನ ಚರ್ಚೆಯಲ್ಲಿ ಭಾಗವಹಿಸಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸುಶಾಂತ್ ಸಾವನ್ನು ಬಿಹಾರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ!
ಎನ್ಡಿಎ ಮೈತ್ರಿಯಲ್ಲಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಜೆಪಿ) ದೊಂದಿಗೆ ಈ ಬಾರಿ ಮೈತ್ರಿ ಇಲ್ಲ ಎನ್ನಲಾಗಿದ್ದು, ಈ ಕಾರಣಕ್ಕಾಗಿ ಬಿಜೆಪಿ ಮತ್ತು ಜೆಡಿಯು ನಡುವಿನ ಸಭೆ ಮಹತ್ವ ಪಡೆದುಕೊಂಡಿದೆ. ಈ ಬಾರಿ ಬಿಜೆಪಿ ಮತ್ತು ಜೆಡಿಯು ಮಾತ್ರ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಿರುವುದು ಬಹುತೇಕ ಖಚಿತವಾಗಿದೆ.
ಎನ್ಡಿಎ ಮೈತ್ರಿಕೂಟದ ಭಾಗವಾಗುವ ಕುರಿತು ಈ ಹಿಂದೆಯೇ ತನ್ನ ಅಭಿಪ್ರಾಯವನ್ನು ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದ್ದರು. ಅವರು “ಎನ್ಡಿಎ ಜೊತೆಗಿನ ಮೈತ್ರಿಯ ಕುರಿತು ನನಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ನಿತೀಶ್ ಕುಮಾರ್ ಎನ್ಡಿಎ ನಾಯಕನಾಗಿ ಬಿಹಾರದಲ್ಲಿ ಗುರುತಿಸುವುದರಲ್ಲಿ ನಮಗೆ ಒಪ್ಪಿಗೆ ಇಲ್ಲ. ಬಿಜೆಪಿ ಪಕ್ಷದ ಬೇರೆ ಯಾವುದೇ ನಾಯಕ ಬೇಕಿದ್ದರೂ ಎನ್ಡಿಎ ಮುಖವಾಗಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅಲ್ಲದೆ, ಬಿಹಾರದಲ್ಲಿ ಬಿಹಾರಿಗಳಿಗೆ ಮೊದಲ ಆದ್ಯತೆ ಎಂಬ ನಿಮ್ಮ ಸಿದ್ಧಾಂತ, ಅಭಿಯಾನದ ಕುರಿತು ತಮ್ಮ ನಿಲುವನ್ನು ಬಿಜೆಪಿ ಮೊದಲು ಸ್ಪಷ್ಟಪಡಿಸಲಿ” ಎಂದಿದ್ದರು.
ಕೊರೊನಾ ವೈರಸ್ ಅನ್ನು ನಿಯಂತ್ರಿಸುವಲ್ಲಿ ಮತ್ತು ಪ್ರವಾಹದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಎಡವಿದೆ ಎಂದು ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ನಿರಂತರವಾಗಿ ಟೀಕಾಪ್ರಹಾರವನ್ನು ನಡೆಸುತ್ತಲೇ ಇದೆ.
ಈ ಎಲ್ಲಾ ಕಾರಣಗಿಂದ ಎಲ್ಜೆಪಿಯನ್ನು ಹೊರಗಿಟ್ಟು ಮೈತ್ರಿಗೆ ಎರಡೂ ಪಕ್ಷಗಳು ಮುಂದಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಆಜಾದ್ ಸಮಾಜ ಪಕ್ಷ ಸ್ಪರ್ಧೆ: ಚಂದ್ರಶೇಖರ್ ಆಜಾದ್