ಎರಡು ದಿನಗಳಿಂದ ಸಂಸತ್ನ ಮುಂಗಾರು ಅಧಿವೇಶನ ನಡೆಯುತ್ತಿದ್ದು ವಲಸೆ ಕಾರ್ಮಿಕರ ಸಾವು, ಅವರು ಅನುಭವಿಸಿದ ಸಂಕಷ್ಟದ ಕುರಿತು ಚರ್ಚೆಯಾಗುತ್ತಿದೆ. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿರುವ 10 ಮಂದಿ ಸಂಸದರು ಕೊರೊನ ಅವಧಿಯಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವನ್ನಪಿದ್ದಾರೆ ಎಂಬ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಕಾರ್ಮಿಕ ಮತ್ತು ಉದ್ಯೋಗ ಖಾತ ಸಚಿವ ಸಂತೋಷ್ ಗಂಗವಾರ್ ಸಂಸತ್ ಅಧಿವೇಶನದಲ್ಲಿ ಉತ್ತರ ನೀಡಿ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಸಾವಿನ ಕುರಿತು ಯಾವುದೇ ಡಾಟಾ ನಿರ್ವಹಣೆ ಮಾಡಿಲ್ಲ ಎಂದು ಹೇಳಿದ್ದಾರೆ.
ಕಾರ್ಮಿಕ ಇಲಾಖೆಯ ರಾಜ್ಯ ಸಚಿವ ಗಂಗವಾರ್ ಉತ್ತರದಿಂದ ಕ್ರೋಧಗೊಂಡಿರುವ ಪ್ರತಿಪಕ್ಷಗಳು ಕೇಂದ್ರ ಸರ್ಕಾರ ಬೇಕೆಂದೇ ವಲಸೆ ಕಾರ್ಮಿಕರ ಸಾವು ಪ್ರಕರಣಗಳನ್ನು ಮುಚ್ಚಡಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿವೆ. ಲಾಕ್ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಮನೆ ತಲುಪುವಂತಹ ಕ್ಷಿಷ್ಟಕರ ಸನ್ನಿವೇಶವನ್ನು ಸೃಷ್ಟಿಸಿತು. ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಿದ ಪರಿಣಾಮ ವಲಸೆ ಕಾರ್ಮಿಕರು ಬಿರುಬಿಸಿಲಿನಲ್ಲೇ ತಮ್ಮ ಹಳ್ಳಿಗಳತ್ತ ಸಾಗಿದರು. ಹಲವರು ಮೃತಪಟ್ಟರು ಎಂದು ಟೀಕಿಸಿವೆ.
ಇದನ್ನೂ ಓದಿ: ಯಾವೊಬ್ಬ ವಲಸೆ ಕಾರ್ಮಿಕರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಇದಾದ ಬಹುದಿನಗಳ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಶ್ರಮಿಕ ರೈಲುಗಳು, ಬಸ್ಗಳು ಮತ್ತು ಖಾಸಗಿ ವಾಹನಗಳ ಪ್ರಯಾಣಕ್ಕೆ ಅವಕಾಶ ಕೊಟ್ಟಿದೆ. ನಗರ ಕೇಂದ್ರಗಳಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಸಾಗಲು ಮುಗಿಬೀಳುವಂತಹ ಸನ್ನಿವೇಶ ನಿರ್ಮಾಣವಾಯಿತು. ಇಲ್ಲಿಯೂ ಕೂಡ ವಲಸೆ ಕಾರ್ಮಿಕರು ತೊಂದರೆ ಅನುಭವಿಸಿದರು ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿವೆ.
ಸಚಿವರ ಹೇಳಿಕೆಯ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ವಲಸೆ ಕಾರ್ಮಿಕರ ಸಾವು ಪ್ರಕರಣಗಳ ಮಾಹಿತಿ ಸಂಗ್ರಹಿಸಿರುವ ದಿವೈರ್.ಕಾಂ ಕೊರೊನ ಅವಧಿಯಲ್ಲಿ 80 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಕೊರೊನ ಸೋಂಕಿನಿಂದ ಬಳಲುತ್ತಿದ್ದ ವಲಸೆ ಕಾರ್ಮಿಕರು ವಿಶೇಷ ಶ್ರಮಿಕ ರೈಲುಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ದಿವೈರ್ ವರದಿ ಮಾಡಿದೆ.
ಭಾರತೀಯ ರೈಲ್ವೆ 70 ವಿಭಾಗಗಳು, 18 ವಲಯಗಳಲ್ಲಿ ಹರಡಿಕೊಂಡಿದೆ. ಈ ಪೈಕಿ 14 ವಿಭಾಗಗಳು ಮಾಹಿತಿ ನೀಡಿವೆ. ಭಾರತೀಯ ರೈಲ್ವೆಯ 18 ವಲಯಗಳಲ್ಲಿ 80 ಮಂದಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಶ್ರಮಿಕ ರೈಲುಗಳಲ್ಲಿ ಪ್ರಯಾಣಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಸಂಗ್ರಹಿಸಿರುವ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದೆ.
ಇದನ್ನೂ ಓದಿ: ಲಾಕ್ಡೌನ್ ಸಮಯದಲ್ಲಿ ಮೃತಪಟ್ಟ ವಲಸಿಗರ ಮಾಹಿತಿ ಇಲ್ಲ: ಕೇಂದ್ರ ಸರ್ಕಾರ
ರೈಲ್ವೆ ಸಂರಕ್ಷಣಾ ದಳ ವಲಸೆ ಕಾರ್ಮಿಕರ ಸಾವುಗಳ ನೋಂದಣಿ ಮಾಡಿಕೊಂಡಿದೆ ಮತ್ತುಸಂಬಂಧಪಟ್ಟ ರೈಲ್ವೆ ವಲಯ ಮತ್ತು ವಿಭಾಗಗಳಿಗೆ ಮಾಹಿತಿಯನ್ನು ರವಾನೆ ಮಾಡಿದೆ ಎಂದು ವರದಿ ಹೇಳಿದೆ. ಕೊರೊನ ಸೋಂಕಿನಿಂದ ಹಲವು ಮಂದಿ ವಲಸೆ ಕಾರ್ಮಿಕರು ಬಳಲುತ್ತಿದ್ದರು. ಜ್ವರ, ಕಫ, ವಾಂತಿಯಿಂದಾಗಿ ಅವರ ಸ್ಥಿತಿ ಕ್ಷೀನಿಸಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.

ಈಸ್ಟ್-ಸೆಂಟ್ರಲ್ ರೈಲ್ವೆಯ ದೀನ್ ದಯಾಳ್ ಉಪಾಧ್ಯ ರೈಲ್ವಿನಲ್ಲಿ ಮೇ1, 2020ರಂದು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ 5 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು, ಓರ್ವ ಪುರುಷ ಮತ್ತು ಓರ್ವ ಮಗು ಇದರಲ್ಲಿ ಸೇರಿದೆ. ಭರಸವಾಲ್ ವಿಭಾಗದಲ್ಲಿ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇವರೆಲ್ಲರೂ 22 ರಿಂದ 27 ವರ್ಷ ಒಳಗಿನ ಯುವ ಕಾರ್ಮಿಕರು ಎಂಬುದನ್ನು ಬೊಟ್ಟುಮಾಡಲಾಗಿದೆ.
ಕೊರೊನ-ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ 216 ಮಂದಿ ಸಾವನ್ನಪ್ಪಿದ್ದರೆ, ರಸ್ತೆ-ರೈಲು ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದಾರೆ. 133 ಮಂದಿ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ 49 ಮಂದಿ ಮರಣ ಹೊಂದಿದ್ದಾರೆ. ಲಾಕ್ಡೌನ್ ಅಪರಾಧದಲ್ಲಿ 18 ಮಂದಿ, ಪೊಲೀಸರ ಹಿಂಸೆಯಿಂದ 12 ಮಂದಿ, ಮಧ್ಯ ನಿಲ್ಲಿಸಿದ್ದರಿಂದ 49 ಮಂದಿ, ಇತರೆ ಕಾರಣಗಳಿಗಾಗಿ 113 ಮಂದಿ ಸೇರಿ 297 ಮಂದಿ ಸಾವು ಕಂಡಿದ್ದಾರೆ.
ವಿಶೇಷವೆಂದರೆ ಕೊರೊನ ಸೋಂಕಿನ ಭಯದಿಂದ, ಏಕಾಂತ, ಪ್ರಯಾಣ ನಿರ್ಬಂಧ, ಮನೆಗಳಿಗೆ ತಲುಪಲು ಸಾಧ್ಯವಾಗದೇ ಇರುವ ಕಾರಣದಿಂದ 133 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 96 ಮಂದಿ ವಲಸೆ ಕಾರ್ಮಿಕರು ಸಾವಿನ್ನಪ್ಪಿರುವುದು ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲೇ 49 ಮಂದಿ ಮೃತಪಟ್ಟಿರುವುದು ಕೊರೊನ ಸಂಬಂಧಿತ ಸಾವುಗಳಾಗಿವೆ ಎಂದು ವೈರ್ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್; ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸುಳ್ಳುಸುದ್ಧಿಗಳೇ ಕಾರಣ: ಕೇಂದ್ರ ಸರ್ಕಾರ
ಗೌರಿ ಲಂಕೇಶ್ – ನ್ಯಾಯಪಥ ವಾರಪತ್ರಿಕೆಯನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಲು https://bit.ly/3huPexp ಕ್ಲಿಕ್ಕಿಸಿ.
ನಾನುಗೌರಿ ವಾಟ್ಸಪ್ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.


