ಉತ್ತರ ಪ್ರದೇಶದ ಹತ್ರಾಸ್ನಲ್ಲಿ 20 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐಗೆ ತನಿಖೆ ನಡೆಸಲು ವಹಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಶನಿವಾರ ಸಂಜೆ ತಿಳಿಸಿದೆ. ನಿನ್ನೆ ರಾತ್ರಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹತ್ರಾಸ್ಗೆ ಭೇಟಿ ನೀಡಿದ ಬೆನ್ನಲ್ಲೇ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಆದೇಶ ಹೊರಬಿದ್ದಿದೆ.
“ಇಡೀ ಹತ್ರಾಸ್ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಬಿಐಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ” ಎಂದು ಯುಪಿ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಗುಜರಾತ್ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ & ಕೊಲೆ… ಪೊಲೀಸ್ ನಿರ್ಲಕ್ಷ್ಯವೇ ಕಾರಣ.. ಭುಗಿಲೆದ್ದ ಆಕ್ರೋಶ
मुख्यमंत्री श्री @myogiadityanath जी ने सम्पूर्ण हाथरस प्रकरण की जांच सीबीआई से कराए जाने के आदेश दिए हैं।
— CM Office, GoUP (@CMOfficeUP) October 3, 2020
ಶುಕ್ರವಾರ, ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಸೇರಿದಂತೆ ದೇಶಾದ್ಯಂತ ಪೊಲೀಸರು ಮತ್ತು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗಿದ್ದು, ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಾಜರಿದ್ದು ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಎರಡು ದಿನಗಳ ಹಿಂದೆಯಷ್ಟೇ ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯನ್ನು ಉತ್ತರ ಪ್ರದೇಶದ ಪೊಲೀಸರು ತಳ್ಳಾಡಿ ಬಂಧಿಸಿದ್ದರು. ಆದರೆ ಅವರು ನಿನ್ನೆ ಪಟ್ಟು ಬಿಡದೆ ಹತ್ರಾಸ್ಗೆ ಪ್ರಯಾಣಿಸಿದ್ದರು.
ಇದನ್ನೂ ಓದಿ: ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರದ ಈ ಅಂಕಿ-ಅಂಶಗಳನ್ನು ನೋಡಿ: ನೀವೇ ಪ್ರಶ್ನಿಸಿಕೊಳ್ಳಿ
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ ನಡೆಸಿ, ಇದನ್ನು 2012ರ ನಿರ್ಭಯಾ ಪ್ರಕರಣದೊಂದಿಗೆ ಸಮೀಕರಿಸಿ ತಮ್ಮ ಆಕ್ರೋಶವನ್ನು ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಹೊರಹಾಕಿದ್ದರು. ನಿನ್ನೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿತ್ತು. ದೆಹಲಿಯ ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಭೀಮ್ ಆರ್ಮಿಯ ಹೋರಾಟಗಾರರು ಸೇರಿದಂತೆ ನೂರಾರು ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಯೋಗಿ ಸರ್ಕಾರದ ವಿರುದ್ಧ ಜನಾಕ್ರೋಶ ಮತ್ತು ಪ್ರತಿಭಟನೆಗಳು ಮುಗಿಲುಮುಟ್ಟಿದ್ದು, ಯೋಗಿ ರಾಜಿನಾಮೆ ನೀಡಬೇಕು, ಮತ್ತು ರಾಷ್ಟ್ರಪತಿ ಆಡಳಿತವನ್ನು ಹೇರಬೆಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB
ಪ್ರಸ್ತುತ ಉತ್ತರಪ್ರದೇಶದ ಸ್ಥಿತಿ ಪ್ರಕ್ಷುಬ್ದ ವಾತಾವರಣದಲ್ಲಿದ್ದು, ಮಾಧ್ಯಮ ಸೇರಿದಂತೆ ಯಾವುದೇ ರಾಜಕಾರಣಿಗಳನ್ನೂ ಸಂತ್ರಸ್ತೆಯ ಕುಟುಂಬದ ಭೇಟಿಗೆ ಅನುಮತಿಸುತ್ತಿಲ್ಲ. ಗುರುವಾರ ಅವರ ಭೇಟಿಗಾಗಿ ಹೊರಟಿದ್ದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ತಡೆದು, ಅವರೊಟ್ಟಿಗೆ ಯುಪಿ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ನಿನ್ನೆ ಸಂತ್ರಸ್ತೆಯ ಸಹೋದರನೊಬ್ಬ ಯುಪಿ ಪೊಲೀಸರ ಗೃಹಬಂಧನದಿಂದ ತಪ್ಪಿಸಿಕೊಂಡು ಬಂದು, ಜಿಲ್ಲಾಡಳಿತ ಮತ್ತು ಪೊಲೀಸರು ತಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಆರೋಪಿಸಿದ್ದ. ಇನ್ನು ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟಿದ್ದ ವಕೀಲೆ ಸೀಮಾ ಅವರನ್ನೂ ಪೊಲೀಸರು ತಡೆದಿದ್ದಾರೆ.
ಈ ವಿಷಯವನ್ನು ಸ್ವಯಂ ಕೈಗೆತ್ತಿಕೊಂಡ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಿತ್ತು.
ಇದನ್ನೂ ಓದಿ: ದಲಿತ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಪರ ನಿಂತ ಸವರ್ಣ ಪರಿಷತ್!
ಕ್ರೂರವಾದ ಲೈಂಗಿಕ ದೌರ್ಜನ್ಯದಿಂದ ಯುವತಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಹೇಳಿದೆ. ಆದರೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್, “ಯುವತಿಯ ಕುತ್ತಿಗೆಗೆ ಪೆಟ್ಟಾಗಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ವಿಧಿವಿಜ್ಞಾನದ ವರದಿಗಳಲ್ಲಿ ಯಾವುದೇ ವೀರ್ಯದ ಸಾಕ್ಷ್ಯ ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ಇದರ ನಡುವೆ ನಿನ್ನೆ, ಆದಿತ್ಯನಾಥ್, “ತಮ್ಮ ಸರ್ಕಾರ ಮಹಿಳೆಯರ ಸ್ವಾಭಿಮಾನವನ್ನು ಕಾಪಾಡಲು ಬದ್ಧ” ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಹತ್ರಾಸ್ ಜಿಲ್ಲೆಯಾದ್ಯಂತ ಒಂದು ತಿಂಗಳವರೆಗೆ ನಿಷೇದಾಜ್ಞೆಯನ್ನು ಹೇರಲಾಗಿದ್ದು, ವಿರೋಧ ಪಕ್ಷ ಸೇರಿದಂತೆ ದೇಶದ ಮಾಧ್ಯಮಗಳು ಮತ್ತು ಹಲವು ಜನರು ಇದನ್ನು ವ್ಯಾಪಕವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಕುರಿತು ನೀವು ದನಿಯೆತ್ತದಿದ್ದರೆ..: ರಮ್ಯಾ ದಿವ್ಯಸ್ಪಂದನ ಮನವಿ ಮಾಡಿದ್ದೇನು?