ಬೆಂಗಳೂರಿನಲ್ಲಿ ಐಎಸ್ಐಎಸ್, ಐಎಸ್ಐಎಲ್ ಸಂಘಟನೆಗೆ ಸೇರಿದ್ದಾರೆ ಎನ್ನಲಾಗಿರುವ ಇಬ್ಬರು ಶಂಕಿತ ಉಗ್ರರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಶಂಕಿತರನ್ನು ತಮಿಳುನಾಡು ಮೂಲದ ಅಹಮದ್ ಅಬ್ದುಲ್ ಖಾದರ್ (40) ಹಾಗೂ ಬೆಂಗಳೂರಿನ ಫ್ರೆಜರ್ ಟೌನ್ ವಾಸಿ ಇರ್ಫಾನ್ ನಾಸಿರ್ (33) ಎಂದು ಗುರುತಿಸಲಾಗಿದೆ.
2013-14ರಲ್ಲಿ ಬೆಂಗಳೂರಿನಿಂದ ಕನಿಷ್ಠ 13-14 ಜನರು ಇರಾಕ್ ಮತ್ತು ಸಿರಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. 2014ರಲ್ಲಿ ಐಎಸ್ (Islamic State) ಇರಾಕ್ ಮತ್ತು ಸಿರಿಯಾದ ಮೇಲೆ ಅತಿಕ್ರಮಣ ಮಾಡಿತು. ಅಲ್ಲಿ ಐಸ್ ಪರ ಹೋರಾಡುವಾಗ ಅವರಲ್ಲಿ ಇಬ್ಬರು ಸಿರಿಯಾದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಮತ್ತೆ ಕೆಲವರು 2014 ರಲ್ಲಿ ಸದ್ದಿಲ್ಲದೆ ಮರಳಿದ್ದಾರೆ. ಅವರಲ್ಲಿ ಹಲವರು ಇನ್ನೂ ಪರಾರಿಯಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಶೋಪಿಯಾನ ಯುವಕರ ಹತ್ಯೆಯಲ್ಲಿ ಸೈನಿಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ: ಭಾರತೀಯ ಸೇನೆ
ಚೆನ್ನೈನ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರ ಖಾದರ್ ಮತ್ತು ಅಕ್ಕಿ ವ್ಯಾಪಾರಿ ಆಗಿದ್ದ ಆರೋಪಿ ಇರ್ಫಾನ್ ಐಎಸ್ ಘಟಕಕ್ಕೆ ಹೆಚ್ಚಿನ ಸದಸ್ಯರನ್ನು ಸೇರಿಸಿದ್ದರು. ಜೊತೆಗೆ ಕನಿಷ್ಠ ಐದು ಮಂದಿ ಸದಸ್ಯರ ಪ್ರಯಾಣಕ್ಕೆ ಹಣಕಾಸು ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಐಎಸ್ ಜೊತೆ ಸಂಪರ್ಕ ಹೊಂದಿದ್ದಕ್ಕಾಗಿ ಇತ್ತೀಚೆಗೆ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆ ವೈದ್ಯನನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಬಸವನಗುಡಿಯ ಅಪಾರ್ಟ್ಮೆಂಟ್ ನಲ್ಲಿದ್ದ ನೇತ್ರಶಾಸ್ತ್ರಜ್ಞ ಅಬ್ದುಲ್ ರೆಹಮಾನ್ ವಿಚಾರಣೆಯ ವೇಳೆ ಈ ಆರೋಪಿಗಳ ವಿವರವನ್ನ ಹೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
NIA Arrests Two Accused in ISIS Case of Bengaluru pic.twitter.com/Q2KdjWIlv7
— NIA India (@NIA_India) October 8, 2020
‘ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮಾಹಿತಿ ಇದೆ. ಇಬ್ಬರ ಮನೆಯಲ್ಲೂ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಕಲೆಹಾಕಬೇಕಿದೆ’ ಎಂದು ಎನ್ಐಎ ಅಧಿಕಾರಿಯೊಬ್ಬರು ಹೇಳಿದರು.
2013-14ರಲ್ಲಿ ಸಿರಿಯಾಗೆ ಹೋಗಿ ಬಂದಿದ್ದ ಶಂಕಿತರ ಉಗ್ರರು, ‘ಕುರಾನ್ ಸರ್ಕಲ್’ ಎಂಬ ವಾಟ್ಸ್ಆ್ಯಪ್ ಗುಂಪು ಕಟ್ಟಿಕೊಂಡಿದ್ದರು. ಅದಕ್ಕೆ ನಗರದ ಮುಸ್ಲಿಂ ಯುವಕರನ್ನ ಒಟ್ಟುಗೂಡಿಸಿ ಪ್ರಚೋದಿಸಿದ್ದರು. ಅದರ ಮೂಲಕವೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.