ಅಂದು ಸೆಪ್ಟೆಂಬರ್ 6, ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿ, ಡ್ರಗ್ ಕೇಸ್ನಲ್ಲಿ ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿ ಎನ್ಸಿಬಿ ಕಚೇರಿಗೆ ಆಗಮಿಸಿದ್ದರು. ಆಕೆ ಬರುತ್ತಿದ್ದಂತೆ ಮಾಧ್ಯಮಗಳ ವರ್ತನೆ ನಿಜಕ್ಕೂ ವಾಕರಿಕೆ ಬರುವಂತಿತ್ತು.
ಸುದ್ದಿ ಸಂಸ್ಥೆಗಳ ನೂರಾರು ಜನ ಗಂಡಸರು ಒಮ್ಮೆಲೇ ಆಕೆಯ ಮೇಲೆ ಮುಗಿಬಿದ್ದಿದ್ದರು. ಆಕೆಯನ್ನು ಕಚೇರಿಯ ಒಳಗೆ ಹೋಗಲು ಸಹ ಅವಕಾಶ ನೀಡದೇ ಸುತ್ತುವರೆದಿದ್ದವು. ಯಾವುದೇ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಗೌರವಗಳಿರುತ್ತವೆ. ಆದರೆ ರಿಯಾ ವಿಚಾರಣೆಗೆ ಆಗಮಿಸಿದಾಗ ಮಾಧ್ಯಮಗಳು ತಮ್ಮ ಎಲ್ಲಾ ಮಿತಿಗಳನ್ನು ಉಲ್ಲಂಘಿಸಿದ್ದವು.
ಅಂದು ನಟಿ ರಿಯಾಳ ಖಾಸಗಿ ಸಮಯ, ತನ್ನದೇ ದೇಹದ ಮೇಲಿನ ಹಕ್ಕುಗಳು ಕೂಡ ಆಕೆಯಿಂದ ಕಿತ್ತುಕೊಳ್ಳಲಾಯಿತು. ಕ್ಯಾಮೆರಾ, ಚಾನೆಲ್ ಲೋಗೋ ಅಷ್ಟೇ ಏಕೆ ವರದಿಗಾರರ ಕೈಗಳು ಆಕೆಯ ದೇಹವನ್ನು ಚುಚ್ಚುತ್ತಿದ್ದವು. ಇದ್ಯಾವುದು ಕೂಡಾ ದೌರ್ಜನ್ಯ ಎಂದು ಅಲ್ಲಿದ್ದವರಿಗೆ ಅನ್ನಿಸಲೇ ಇಲ್ಲ. ಅವರಿಗೆ ಬೇಕಾಗಿದ್ದು ಆಕೆ ಛಾಯಾಚಿತ್ರಗಳು, ದೃಶ್ಯಾವಳಿಗಳು ಮಾತ್ರ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಹದ್ದುಗಳಂತೆ ಆಕೆಯ ಮೇಲೆ ದಾಳಿ ನಡೆಸಿದ್ದು, ತಾವು ಆಕೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದೇವೆ ಅನ್ನಿಸಿರಲಿಲ್ಲ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ
ಆದರೆ ಮರುದಿನ ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಯಿತು. ಹಲವು ಮಂದಿ ಮಾಧ್ಯಮಗಳ ನಡೆಯನ್ನು ಖಂಡಿಸಿದರು. ಆಕೆಯ ಮೇಲಾದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದರು.
A hundred men, their cameras touching her, violating her space, her body. This could be you tomorrow. But you will choose silence because watching this is fun right now. She is the villain of your amoral world. A country whose Prime Minister claims to champion womens rights pic.twitter.com/P4M8zOHeXh
— Rana Ayyub (@RanaAyyub) September 7, 2020
ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, ನಟಿ ಸ್ವರಾ ಭಾಸ್ಕರ್, ತಾಪ್ಸಿ ಪನ್ನು ಸೇರಿದಂತೆ ಅನೇಕ ಮಂದಿ ಟ್ವೀಟ್ ಮಾಡಿ ಸರ್ಕಾರವನ್ನು ಟೀಕಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಪರಿಸ್ಥಿತಿಯನ್ನು ವ್ಯಂಗ್ಯಚಿತ್ರಗಳ ಮೂಲಕ ತೋರಿಸಲಾಗಿತ್ತು.
ಅಂದು ಮುಂಬೈ ಪೊಲೀಸರು ಆಕೆಯ ಸಹಾಯಕ್ಕೆ ಬಂದಿರಲಿಲ್ಲ. ಮಾಧ್ಯಮಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದರೆ ಆಕೆಯ ಮೇಲೆ ಮಾಧ್ಯಮಗಳು ದೌರ್ಜನ್ಯ ನಡೆಸುತ್ತಿರಲಿಲ್ಲ.
ಇಂದು ರಿಯಾ ಕಳೆದ 28 ದಿನಗಳ ನಂತರ ಜಾಮೀನು ಪಡೆದು ಬೈಕುಲಾ ಜೈಲಿನಿಂದ ಹೊರಬಂದಿದ್ದಾರೆ. ಕಳೆದ ತಿಂಗಳು ತಾವು ನಿರ್ಲಕ್ಷ್ಯ ವಹಿಸಿದಕ್ಕೆ ನಡೆದ ಘಟನೆ ಕುರಿತು ಎಚ್ಚರ ವಹಿಸಿರುವ ಮುಂಬೈ ಪೊಲೀಸರು ಇಂದು ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ‘ಕೊಲೆ ಸಿದ್ದಾಂತ’ ಸಂಪೂರ್ಣ ಸುಳ್ಳು: ಏಮ್ಸ್ ಮೂಲಗಳು
ನಟ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಕೂಡಲೇ, ಎಚ್ಚೆತ್ತ ಮುಂಬೈ ಪೊಲೀಸರು ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಸೆಲೆಬ್ರಿಟಿ, ವಕೀಲರನ್ನು ಅಥವಾ ಸಂದರ್ಶನ ಮಾಡಲು ಬಯಸುವ ಯಾವುದೇ ವ್ಯಕ್ತಿಯ ವಾಹನವನ್ನು ಬೆನ್ನಟ್ಟಿದರೆ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
“ನೀವು ಯಾವುದೇ ಸೆಲೆಬ್ರಿಟಿ, ವಕೀಲ ಅಥವಾ ನೀವು ಸಂದರ್ಶನ ಮಾಡಲು ಬಯಸುವ ಯಾವುದೇ ವ್ಯಕ್ತಿಯ ವಾಹನವನ್ನು ಬೆನ್ನಟ್ಟಬಾರದು. ನಿಮ್ಮ ಜೀವ, ಆ ವ್ಯಕ್ತಿಯ ಜೀವ ಅಥವಾ ಪಾದಚಾರಿಗಳ ಜೀವವನ್ನು ಅಪಾಯಕ್ಕೆ ತಳ್ಳಬಾರದು. ಇದು ಅಪರಾಧವಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇಷ್ಟೇ ಅಲ್ಲದೆ ಚಾಲಕನ ವಿರುದ್ಧ ಮಾತ್ರವಲ್ಲ ಆತನನ್ನು ಬೆನ್ನಟ್ಟಲು ಪ್ರಚೋದಿಸುವ ವ್ಯಕ್ತಿಯ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮುಂಬೈ ಪೊಲೀಸ್ ಉಪ ಆಯುಕ್ತ ಸಂಗ್ರಾಮ್ ಸಿಂಗ್ ನಿಶಂದರ್ ತಿಳಿದ್ದಾರೆ.
ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ತನ್ನ ಡ್ರಗ್ಸ್ ತನಿಖೆಯನ್ನು ವಿಸ್ತರಿಸಿ ವಿಚಾರಣೆಗೆ ಕರೆದಿದ್ದರಿಂದ ನಟರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರನ್ನು ಕೂಡ ಮಾಧ್ಯಮಗಳು ಬೆನ್ನಟ್ಟಿದ್ದ ಫೋಟೋಗಳು ಮತ್ತು ವೀಡಿಯೊಗಳು ವೈರಲ್ ಆಗಿದ್ದವು.
ಇಂತಹ ಘಟನೆಗಳ ನಂತರವಾದರೂ ಮಾಧ್ಯಮಗಳು ತಮ್ಮ ಮಿತಿಯನ್ನು ಅರಿತುಕೊಳ್ಳುತ್ತವೆಯೋ ಇಲ್ಲವೋ, ಆದರೆ ಸರ್ಕಾರ, ಪೊಲೀಸ್ ಇಲಾಖೆ ಇಂತಹ ಘಟನೆಗಳು ಜರುಗದಂತೆ ನಿಗಾ ವಹಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದು ಮುಂಬೈ ಪೊಲೀಸರ ನಡೆಯನ್ನು ಶ್ಲಾಘಿಸಿದ್ದಾರೆ.