ಗುಜರಾತ್ನ ಬುಡಕಟ್ಟು ಪ್ರದೇಶಗಳಲ್ಲಿನ ಹತ್ತಿ ಬೀಜೋತ್ಪಾದನೆ ಕೇಂದ್ರಗಳಲ್ಲಿ ಬಾಲ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮುಂದುವರಿಸಿದ್ದಾರೆ ಎಂದು ಸೆಂಟರ್ ಫಾರ್ ಲೇಬರ್ ರಿಸರ್ಚ್ ಆ್ಯಂಡ್ ಆ್ಯಕ್ಷನ್ ಎಂಬ ಎನ್ಜಿಒ ವರದಿ ಬಿಡುಗಡೆ ಮಾಡಿದೆ.
ಅಹಮದಾಬಾದ್ ಮೂಲದ ಈ ಎನ್ಜಿಒ ಆದಿವಾಸಿ ಸರ್ವಾಂಗಿ ವಿಕಾಸ್ ಸಂಘದ ಜೊತೆ ಸೇರಿ ಬನಸ್ಕಂಠ ಜಿಲ್ಲೆಯ ದಂತಾ ತಾಲೂಕಿನಲ್ಲಿನ ಹೊಲಗಳ ಸಮೀಕ್ಷೆಯನ್ನು ಕೈಗೊಂಡಿದೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ಬನಸ್ಕಂಠ ಜಿಲ್ಲೆಯ ದಂತಾ ಮತ್ತು ದೇವಧರ್ ತಾಲ್ಲೂಕುಗಳು ಮತ್ತು ನೆರೆಯ ರಾಜ್ಯವಾದ ರಾಜಸ್ಥಾನದ ಕೊಟಡಾದಲ್ಲಿ 17 ಬೀಜೋತ್ಪಾದನೆಗೆ ಸಂಬಂಧಿಸಿದ ಕೇಂದ್ರಗಳಿಗೆ ಭೇಟಿ ನೀಡಿದ್ದೇವೆ ಎಂದು ಎನ್ಜಿಒದ ಸುಧೀರ್ ಕಟಿಯಾರ್ ತಿಳಿಸಿದ್ದಾರೆ.
“ಹತ್ತಿ ಬೀಜಗಳ ಮಾರಾಟ ಮತ್ತು ಮಾರಾಟದಲ್ಲಿ ತೊಡಗಿರುವ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಹತ್ತಿ ಬೀಜಗಳನ್ನು ಉತ್ಪಾದಿಸುವ ಹೊಲಗಳಲ್ಲಿ, ಪರಾಗಸ್ಪರ್ಶ ಮಾಡಲು ಈ ಮಕ್ಕಳನ್ನು ನೇಮಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನರೇಗಾ: ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ?
‘ಬೀಜೋತ್ಪಾದನೆಗಾಗಿ ಹತ್ತಿ ಕೃಷಿ ಕೈಗೊಂಡವರು ತಮ್ಮ ಹೊಲಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬಹಳ ಕಡಿಮೆ ಕೂಲಿ ನೀಡುತ್ತಾರೆ. ಈ ಹೊಲಗಳಲ್ಲಿ ಕೆಲಸ ಮಾಡುವ ಮಕ್ಕಳಿಗೆ ದಿನಕ್ಕೆ 150 ರೂಪಾಯಿ ಕೂಲಿ ನೀಡಲಾಗುತ್ತದೆ. ಇಷ್ಟು ಕೂಲಿಗೆ ಕೆಲಸ ಮಾಡಲು ದೊಡ್ಡವರು ಒಪ್ಪುವುದಿಲ್ಲ’ ಎಂದು ಆದಿವಾಸಿ ಸರ್ವಾಂಗಿ ವಿಕಾಸ್ ಸಂಘದ ದೀಪಕ್ ದಾಬಿ ಹೇಳಿದ್ದಾರೆ.
’ಗುಜರಾತ್ನಲ್ಲಿ ಹತ್ತಿ ಬೀಜೋತ್ಪಾದನೆ ಕೇಂದ್ರಗಳಲ್ಲಿ ಬಾಲ ಕಾರ್ಮಿಕರು ತೊಡಗಿಸಿಕೊಂಡಿರುವ ವಿಷಯ 2007 -08ರಲ್ಲಿ ಬೆಳಕಿಗೆ ಬಂದಿತ್ತು. ಅಂದಿನಿಂದ ಇದು ಮುಂದುವರೆದಿದೆ. ಮಕ್ಕಳ ವಲಸೆ ಮತ್ತು ಕಳ್ಳಸಾಗಣೆ ತೀವ್ರವಾಗಿ ಕಡಿಮೆಯಾಗಿದೆ. ಆದರೆ ಬೀಜ ಉತ್ಪಾದನೆಯು ಉತ್ತರ ಗುಜರಾತ್ ಮತ್ತು ದಕ್ಷಿಣ ರಾಜಸ್ಥಾನದ ಬುಡಕಟ್ಟು ಜಮೀನುಗಳಿಗೆ ಸ್ಥಳಾಂತರಗೊಂಡಿದೆ’ ಎಂದು ಕಟಿಯಾರ್ ತಿಳಿಸುತ್ತಾರೆ.
ಎನ್ಜಿಒ ಪ್ರಕಟಿಸಿರುವ ವರದಿಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಉಪ ಕಾರ್ಮಿಕ ಆಯುಕ್ತ ಎಂ.ಸಿ.ಕರಿಯಾ, ’ಗುಜರಾತ್ನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಮೊಟಕುಗೊಳಿಸಲು ಗುಜರಾತ್ ಮತ್ತು ರಾಜಸ್ಥಾನ ಸರ್ಕಾರಗಳು ಈ ಹಿಂದೆ ಸಾಕಷ್ಟು ಕೆಲಸಗಳನ್ನು ಮಾಡಿವೆ. ಕೊರೊನಾ ಲಾಕ್ಡೌನ್ ತೆಗೆದು ಹಾಕಿದ ನಂತರ ಆಗಸ್ಟ್ನಿಂದ ನಾವು ಮತ್ತೆ ಪ್ರತಿ ಜಿಲ್ಲೆಯಲ್ಲೂ ದಾಳಿ ನಡೆಸುತ್ತಿದ್ದೇವೆ. ವಸ್ತುಸ್ಥಿತಿ ಅಧ್ಯಯನಕ್ಕಾಗಿ ಇಲಾಖೆಯ ಸಿಬ್ಬಂದಿ ಒಳಗೊಂಡ ತಂಡಗಳನ್ನು ಕಳುಹಿಸಲಾಗಿದೆ. ತಂಡಗಳು ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.