ತಮಿಳಿನಾಡಿನಲ್ಲಿ ಪೊಲೀಸ್ ಅನುಮತಿಯಿಲ್ಲದೆ “ವೆಟ್ರಿವೇಲ್ ಯಾತ್ರೆ” ಪ್ರಾರಂಭಿಸಿದ್ದಕ್ಕಾಗಿ ರಾಜ್ಯ ಬಿಜೆಪಿ ಮುಖ್ಯಸ್ಥ ಎಲ್.ಮುರುಗನ್ ಮತ್ತು ಸುಮಾರು 100 ಮಂದಿ ಬಿಜೆಪಿ ಕಾರ್ಯಕರ್ತರನ್ನು ತಿರುತ್ತಾನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಯನ್ನು ತಡೆಯುವ ಆಡಳಿತರೂಢ AIADMK ಸರ್ಕಾರದ ಕ್ರಮ ಎನ್ನಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ AIADMK ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು.
ತಮಿಳುನಾಡಿನಲ್ಲಿ ನಡೆಯುವ ವೆಟ್ರಿವೇಲ್ ಯಾತ್ರೆಯನ್ನು ನಡೆಸಲು ಅನುಮತಿ ಕೋರಿ ರಾಜ್ಯ ಬಿಜೆಪಿ ಘಟಕವು ಮನವಿ ಸಲ್ಲಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ರಾಜ್ಯ ಸರ್ಕಾರ ಕೊರೊನಾ ಕಾರಣವನ್ನು ನೀಡಿತ್ತು. ಆದರೂ, ಬಿಜೆಪಿ ಚೆನ್ನೈನ ಪಕ್ಕದಲ್ಲಿರುವ ತಿರುವಳ್ಳೂರು ಜಿಲ್ಲೆಯ ತಿರುತ್ತಾನಿ ಮುರುಗನ್ ದೇವಸ್ಥಾನದಿಂದ ಯಾತ್ರೆ ನಡೆಸಲು ಪ್ರಾರಂಭಿಸಿತ್ತು.
2021 ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಹಿಂದೂ ಮತಗಳನ್ನು ಕ್ರೋಢಿಕರಿಸುವ ಪ್ರಯತ್ನವಾಗಿ ಬಿಜೆಪಿ ಈ ಯಾತ್ರೆಯನ್ನು ಆಯೋಜಿಸಿದೆ. ವೆಟ್ರಿವೇಲ್ ಯಾತ್ರೆ ಒಂದು ತಿಂಗಳ ಕಾಲ ನಡೆಯುವ ರ್ಯಾಲಿಯಾಗಿದ್ದು, ಮುರುಗನ್ ದೇವರ ಹೆಸರಲ್ಲಿ ರಥಯಾತ್ರೆಯ ಮಾದರಿಯಲ್ಲಿ ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ತಮಿಳುನಾಡಿನ ಉತ್ತರದ ತಿರುತ್ತಾನಿ ದೇವಸ್ಥಾನದಿಂದ ತಿರುಚೆಂದೂರು ದೇವಸ್ಥಾನದವರೆಗೆ ನಡೆಸಲು ಯೋಜಿಸಲಾಗಿತ್ತು.
ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ರಜನಿಕಾಂತ್ ಬೆಂಬಲ ಕೇಳುತ್ತೇನೆ: ಕಮಲ್ ಹಾಸನ್
ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ರಾಜ್ಯದ ಜನರ ಹಿತದೃಷ್ಟಿಯಿಂದ ನವೆಂಬರ್ 6 ರಿಂದ ಡಿಸೆಂಬರ್ 6 ರವರೆಗೆ ನಿಗದಿಯಾದ ಯಾತ್ರೆ ಅಥವಾ ಪ್ರಯಾಣವನ್ನು ಅನುಮತಿಸಲು ‘ಕಾನೂನುಬದ್ಧವಾಗಿ’ ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಸರ್ಕಾರದ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಹೇಳಿದರು.
“ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ನನಗೆ ಇದೆ. ಪೂಜಿಸುವುದು ನನ್ನ ಸಾಂವಿಧಾನಿಕ ಹಕ್ಕು” ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಮುರುಗನ್ ನಿನ್ನೆ ಹೇಳಿದ್ದರು.
ವೆಟ್ರಿವೇಲ್ ಯಾತ್ರೆ ಮುಗಿಯಬೇಕಿದ್ದ ಡಿಸೆಂಬರ್ 6, 1992 ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ದುರಂತ ರಾಷ್ಟ್ರವ್ಯಾಪಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದಲ್ಲಿ ಆಯೋಜಿಸಿದ ರಥಯಾತ್ರೆಯ ಕೊನೆಯ ದಿನ ನಡೆದಿತ್ತು.
ಬಿಜೆಪಿಯ ವೆಟ್ರಿವೇಲ್ ಯಾತ್ರೆ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು ನವೆಂಬರ್ 15 ರವರೆಗೆ ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಸಭೆಗಳನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ.
ಮೆರವಣಿಗೆಗಳು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುವುದರ ಜೊತೆಗೆ ಕೊರೊನಾ ಹರಡುವಿಕೆಯನ್ನು ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ ಎಂದು ಅನೇಕರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಂಧ್ರ ಪ್ರದೇಶ: 262 ವಿದ್ಯಾರ್ಥಿಗಳಿಗೆ ಕೊರೊನಾ, ಆತಂಕ ಬೇಡ ಎಂದ ಇಲಾಖೆ!
ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನಡುವೆ ಮುಂದಿನ ವರ್ಷದ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಇಬ್ಬರ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಬಿಜೆಪಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿದ್ದು, ಹಲವರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಉದಾಹರಣೆಯಾಗಿ, ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮತ್ತು ಕಾಂಗ್ರೆಸ್ ತೊರೆದು ನಟಿ ಖುಷ್ಬೂ ಕೂಡ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.
1992 ರಲ್ಲಿ ರಥಯಾತ್ರೆ ಆರಂಭಿಸಿ ದೇಶಾದ್ಯಂತ ಯಾತ್ರೆ ಕೈಗೊಂಡು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ಭಧ್ರ ಬುನಾದಿಗೆ ನಾಂದಿ ಹಾಡಿದ ಭಾರತೀಯ ಜನತಾ ಪಾರ್ಟಿ, ತಮಿಳುನಾಡಿನಲ್ಲಿಯೂ ವೆಟ್ರಿವೇಲ್ ಯಾತ್ರೆ ಮೂಲಕ ಮತ್ತೊಮ್ಮೆ ಅದೇ ಸಾಹಸಕ್ಕೆ ಕೈಹಾಕಲು ಹೊರಟಿದೆ. ಆದರೆ ಇದಕ್ಕೆ ಸೆಡ್ಡು ಹೊಡೆದು ತಮಿಳುನಾಡು ಸರ್ಕಾರ ಯಾತ್ರೆಗೆ ಅನುಮತಿ ನಿರಾಕರಿಸಿದೆ.
ಇಷ್ಟೇ ಅಲ್ಲದೆ ಬಿಜೆಪಿ ತಾನು ನೇಮಕ ಮಾಡಿದ ರಾಜ್ಯಪಾಲರನ್ನು ಇಟ್ಟುಕೊಂಡು ಕೂಡ ತಮಿಳುನಾಡಿನಲ್ಲಿ ಹಲವು ಬಾರಿ ಆಡಳಿತದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಇದ್ಯಾವುದಕ್ಕೂ ಬಗ್ಗದೆ ತನ್ನ ಕೆಲಸ ಮಾಡುತ್ತಿದೆ. ನೆಟ್ ತೇರ್ಗಡೆ ಹೊಂದಿದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ ನೀಡುವ ಮಸೂದೆಗೆ ಸಹಿ ಹಾಕಲು ರಾಜ್ಯಪಾಲರು ವಿಳಂಬಮಾಡಿದಾಗಲೂ, ತಮಿಳುನಾಡು ಸರ್ಕಾರ ಅದನ್ನು ಆದೇಶ ಮಾಡಿ ಹೊರಡಿಸಿತು.



ಬಿಜೆಪಿಯ ಸಹವಾಸದಿಂದ AIADMKಗೆ ನಶ್ಟವೇ ಹೊರತು ಲಾಬ ಆಗುವುದಿಲ್ಲವಾದ್ದರಿಂದ ಅಣ್ಣಾ ಡಿಎಂಕೆ ಬಿಜೆಪಿಯ ಸಹವಾಸದಿಂದ ಹೊರಬರುವುದು ಒಳಿತು.