ಕೊರೊನಾ ಸಾಂಕ್ರಾಮಿಕ ರೋಗ ಮತ್ತು ದೀಪಾವಳಿ ಸಂದರ್ಭದಲ್ಲಿ ಬಳಸಲಾಗುವ ಪಟಾಕಿಗಳಿಂದ ವಾಯಮಾಲಿನ್ಯ ಹೆಚ್ಚಾಗುವ ಕಾರಣ ಈ ಬಾರಿ ಪಟಾಕಿ ನಿಷೇಧಿಸಲಾಗಿದೆ. ಕರ್ನಾಟಕ ಸರ್ಕಾರ ಸಾಂಪ್ರದಾಯಿಕ ಪಟಾಕಿಗೆ ನಿಷೇಧ ಹೇರಿ, ಹಸಿರು ಪಟಾಕಿಗೆ ಅಸ್ತು ಎಂದಿದೆ. ನವೆಂಬರ್ 16ರ ವರೆಗೆ ಹಸಿರು ಪಟಾಕಿ ಮಾರಾಟ ಮಾಡಲು ಅನುಮತಿ ಕೂಡ ನೀಡಿದೆ. ಆದರೆ ಸಚಿವ ಸುಧಾಕರ್ ಮಾತ್ರ ಗೊಂದಲದ ಹೇಳಿಕೆ ನೀಡಿದ್ದಾರೆ.
ಆದರೆ, ರಾಜ್ಯ ಸರ್ಕಾರದ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಹಸಿರು ಪಟಾಕಿ ಎಂದರೇನು ಎಂದು ತಿಳಿದಿಲ್ಲವಂತೆ. ‘ಹಸಿರು ಪಟಾಕಿ ಎಂದರೇನು ಎಂಬುದು ನನಗೂ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ’ ಎಂದು ಮೈಸೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ
‘ದೀಪಾವಳಿಯಲ್ಲಿ ಪಟಾಕಿ ನಿಷೇಧದ ಬಗ್ಗೆ ನಮ್ಮ ಇಲಾಖೆಯಿಂದ ಮಾರ್ಗಸೂಚಿ ವರದಿ ಬಂದಿತ್ತು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸರ್ಕಾರಕ್ಕೆ ಸಲ್ಲಿಸಿದ್ದೆ. ಆ ನಂತರ ಮುಖ್ಯಮಂತ್ರಿ, ಹಸಿರು ಪಟಾಕಿ ಸಿಡಿಸಲು ಮಾತ್ರ ಅನುಮತಿ ನೀಡಿದ್ದಾರೆ. ಸಮಯ ಕೂಡ ನಿಗದಿ ಮಾಡಿದ್ದಾರೆ. ಆದರೆ, ಹಸಿರು ಪಟಾಕಿ ಎಂದರೇನು ಎಂಬುದು ನನಗೂ ಗೊತ್ತಿಲ್ಲ, ಆ ಬಗ್ಗೆ ನಾನು ತಿಳಿದುಕೊಂಡು ಹೇಳುತ್ತೆನೆ’ ಎಂದಿದ್ದಾರೆ.
ಸರ್ಕಾರ ಮೊದಲು ಪಟಾಕಿ ನಿಷೇಧದ ಬಗ್ಗೆ ಆದೇಶ ಹೊರಡಿಸಿ ನಂತರ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿದೆ. ಆದರೆ ಆರೋಗ್ಯ ಸಚಿವರೇ ನನಗೆ ಇದರ ಬಗ್ಗೆ ಗೊತ್ತಿಲ್ಲ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ.
ಹಸಿರು ಪಟಾಕಿಯು ಸಾಮಾನ್ಯ ಪಟಾಕಿಯಂತೆಯೇ ಕಾಣುವ ಪರಿಸರ ಸ್ನೇಹಿ ಪಟಾಕಿಯಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಮತ್ತು ನ್ಯಾಷನಲ್ ಎನ್ವಿರಾನ್ಮೆಂಟ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ ಟಿಟ್ಯೂಟ್ (ಎನ್ಇಇಆರ್ಐ)ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಪಟಾಕಿಗಳು ಕೇವಲ ಶೇಕಡಾ 30ರಷ್ಟು ಪ್ರಮಾಣದ ಹೊಗೆಯನ್ನು ಹೊರಹಾಕುತ್ತದೆ.