ರಿಪಬ್ಲಿಕ್ ಟಿವಿ ವ್ಯವಸ್ಥಾಪಕ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಪರವಾಗಿ ಮಾತನಾಡುತ್ತಿರುವ ಬಿಜೆಪಿ ನಾಯಕರ ದ್ವಿನೀತಿ ಬಗ್ಗೆ ಕೇರಳ ಪತ್ರಕರ್ತನ ಪತ್ನಿ ಟೀಕಿಸಿದ್ದಾರೆ. ಕಳೆದ 36 ದಿನಗಳಿಂದ ಉತ್ತರ ಪ್ರದೇಶದ ಜೈಲಿನಲ್ಲಿರುವ ಕೇರಳ ಮೂಲದ ಪತ್ರಕರ್ತನ ಬಂಧನದ ಬಗ್ಗೆ ಮತಾನಾಡದ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
36 ದಿನಗಳ ಹಿಂದೆ ಹತ್ರಾಸ್ನ ದಲಿತ ಯುವತಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವರದಿ ಮಾಡಲು ಉತ್ತರಪ್ರದೇಶಕ್ಕೆ ತೆರಳಿದ್ದ ಕೇರಳ ಮೂಲದ ಪರ್ತಕರ್ತ ಸಿದ್ದೀಕ್ ಕಪ್ಪನ್ ಅವರನ್ನುಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಪರ್ತಕರ್ತ ಸಿದ್ದೀಕ್ ಕಪ್ಪನ್ ದೆಹಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ತನ್ನ ಪತಿ ಆತನ ಕೆಲಸವನ್ನು ಮಾಡಲು ತೆರಳಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಪತ್ನಿ ರೈಹನಾಥ್ ಕಪ್ಪನ್ ಹೇಳಿದ್ದಾರೆ. ಬಿಜೆಪಿ ನಾಯಕರ ಈ ದ್ವಿನೀತಿ ಏಕೆ..? ಗೋಸ್ವಾಮಿ ಆತ್ಮಹತ್ಯೆ ಪ್ರಕರಣದ ಆರೋಪಿ. ಅವರ ಬಂಧನವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ನನ್ನ ಪತಿ ಮತ್ತು ಇತರ ಪತ್ರಕರ್ತರು ಮತ್ತು ಕಾರ್ಯಕರ್ತರ ಬಂಧನವನ್ನು ಈ ಜನರು ಏಕೆ ಪ್ರಶ್ನಿಸುತ್ತಿಲ್ಲ? ಎಂದು ರೈಹನಾಥ್ ಪ್ರಶ್ನಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಇದನ್ನೂ ಓದಿ: PFI ಸಂಬಂಧ ಆರೋಪ; ಹತ್ರಾಸ್ಗೆ ಹೊರಟ ಕೇರಳದ ಪತ್ರಕರ್ತ ಸೇರಿ ಮೂವರ ಬಂಧನ
PFI ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ, ಕೇರಳದ ಮಲಪ್ಪುರಂ ಮೂಲದ 41 ವರ್ಷದ ಸಿದ್ದಿಕ್ ಅವರನ್ನು ಇತರ ಮೂವರೊಂದಿಗೆ ಉತ್ತರ ಪ್ರದೇಶ ಪೊಲೀಸರು ಮಥುರಾದಲ್ಲಿ ಬಂಧಿಸಿದ್ದರು. ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ದಂಡ ಸಂಹಿತೆಯ ಇತರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
’ದೆಹಲಿಯಲ್ಲಿ ನಮ್ಮವರೇ ಆದ ಸಚಿವ ವಿ.ಮುರಳೀಧರನ್, ಅರ್ನಾಬ್ ಗೋಸ್ವಾಮಿಯ ಬಂಧನವನ್ನು ಖಂಡಿಸಿ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಎಂದು ಕರೆದರು. ಆದರೆ ಯುಪಿ ಜೈಲಿನಲ್ಲಿ ಬಂಧಿಸಲ್ಪಟ್ಟಿರುವ ತನ್ನ ಸ್ವಂತ ರಾಜ್ಯದ ವ್ಯಕ್ತಿಯ ಬಗ್ಗೆ ಅವರು ಯೋಚಿಸಲಿಲ್ಲ” ಎಂದು ರೈಹನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.
ಕಪ್ಪನ್ ದೀರ್ಘಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಿಗೆ ನಿಯಮಿತವಾಗಿ ಔಷಧಿ ಮತ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಅವರಿಗೆ ವೈದ್ಯಕೀಯ ಸವಲತ್ತು ಸಿಗುತ್ತಿದ್ದೇಯೋ ಇಲ್ಲವೋ ತಿಳಿದಿಲ್ಲ. ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ಒಂದೇ ಈಗ ನಮಗೆ ಉಳಿದಿರುವ ಏಕೈಕ ನಂಬಿಕೆ” ಎಂದಿದ್ದಾರೆ. ಅರ್ಜಿ ವಿಚಾರಣೆ ನವೆಂಬರ್ 16 ರಂದು ನಡೆಯಲಿದೆ.
ಇದನ್ನೂ ಓದಿ: ತಮಿಳುನಾಡು: ಅನ್ಯಾಯಗಳ ವಿರುದ್ಧ ವರದಿ ಮಾಡಿದ ಪತ್ರಕರ್ತನ ಬರ್ಬರ ಹತ್ಯೆ!
ಇನ್ನು, ಬಂಧಿತ ಪತ್ರಕರ್ತ ಕಪ್ಪನ್ ಅಪಾರ ಪ್ರಮಾಣದ ಹಣವನ್ನು ಪಡೆದಿದ್ದಾರೆ ಎಂದು ವರದಿ ಮಾಡುತ್ತಿರುವ ಮಾಧ್ಯಮಗಳ ಮೇಲೆ ರೈಹನಾಥ್ ವಾಗ್ದಾಳಿ ನಡೆಸಿದ್ದಾರೆ. “ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಮನೆಯ ನಿರ್ಮಾಣವನ್ನು ಪೂರ್ಣಗೊಳಿಸಲು ಇನ್ನೂ ನಮಗೆ ಸಾಧ್ಯವಾಗಲಿಲ್ಲ. ನಮ್ಮ ಬಳಿ ಏನು ಇರುವುದೋ ಅಷ್ಟರಲ್ಲೇ ಖರ್ಚು ಮಾಡಬೇಕು ಎಂದು ನಂಬಿರುವ ನನ್ನ ಪತಿ ಬ್ಯಾಂಕ್ ಸಾಲವನ್ನು ಸಹ ತೆಗೆದುಕೊಂಡಿಲ್ಲ” ಎಂದು ಅವರು ಹೇಳಿದರು.
“ನಾನು ಕುಟುಂಬ ಮತ್ತು ಸ್ನೇಹಿತರ ಸಹಾಯದಿಂದ ಬದುಕುಳಿದಿದ್ದೇನೆ. ಆದರೆ ಈ ಸಮಯದಲ್ಲಿ ನನಗೆ ನನ್ನ ಗಂಡನ ಬಗ್ಗೆಯೇ ಆತಂಕ ಇದೆ. ಅವರು ಆದಷ್ಟು ಬೇಗನೆ ಮನೆಗೆ ಹಿಂದಿರುಗಬೇಕೆಂದು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಸಿದ್ದೀಕ್ ಕಪ್ಪನ್ ಪಕತ್ರಕರ್ತರಾಗಿದ್ದು, ’ಹತ್ರಾಸ್ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವರದಿಗಾಗಿ ಹೊರಟಿದ್ದರು’ ಎಂದು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಅವರು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ದೆಹಲಿ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.
VARSHAGINDA BIDDIRO CASE TAFONDILLA.. KEVALA ONEDE DINADALLI TAGONDIDARE ANDRE ALLE GOTTAGUTTE..