ವಿವಾದಿತ ಕೃಷಿ ಮಸೂದೆಗಳನ್ನು ತೀವ್ರವಾಗಿ ವಿರೋಧಿಸಿದ ರಾಜ್ಯವೆಂದರೆ ಪಂಜಾಬ್ ಮತ್ತು ಹರಿಯಾಣ. ಪಂಜಾಬಿನ ರೈತರು ಕಾಯ್ದೆ ಜಾರಿಯಾದಾಗಿನಿಂದಲೂ ತೀವ್ರತರದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ದೆಹಲಿ ಚಲೋ ನಡೆಯಲು ಮೂಲ ಕಾರಣ ಪಂಜಾಬಿನ ರೈತರು.
ಪಂಜಾಬ್ನ ರೈತರೆಲ್ಲರೂ ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದ ಕಾರಣ, ಬಂಜಾಬಿನ ಹಲವು ಸಂಘಟನೆಗಳು, ವಿದ್ಯಾರ್ಥಿ ಗುಂಪುಗಳು ರೈತರಿಗೆ ಸಾಥ್ ನೀಡಿವೆ. ಈಗ ಪಂಜಾಬಿನ ದಂತ ವೈದ್ಯಕೀಯ ವಿದ್ಯಾರ್ಥಿ ಸಂಘ (ಡಿಎಸ್ಎಪಿ) ದಿಂದ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ.
“2020ರ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಪಂಜಾಬ್ ಮತ್ತು ಇಡೀ ದೇಶದ ರೈತ ಸಂಘಗಳ ಜೊತೆಗೆ ಡಿಎಸ್ಎಪಿ ಕೂಡ ನಿಂತಿದೆ. ಈ ಕಾನೂನುಗಳು ಜಾರಿಗೆ ಬಂದರೆ ಪಂಜಾಬ್ ಕೃಷಿ ರಾಜ್ಯವಾಗಿರುವುದರಿಂದ ತೀವ್ರ ಕೆಟ್ಟ ಮಟ್ಟದಲ್ಲಿ ಹೊಡೆತ ಬೀಳುತ್ತದೆ. ವಾಸ್ತವದಲ್ಲಿ ಈ ಕಾನೂನುಗಳು ದೇಶದಲ್ಲಿ ಕೃಷಿಯನ್ನು ಖಾಸಗೀಕರಣಗೊಳಿಸುವ ಸಾಧನಗಳಾಗಿವೆ” ಎಂದು ಡಿಎಸ್ಎಪಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್ಡಿಎ ತೊರೆಯುತ್ತೇವೆ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿಯ ಮತ್ತೊಂದು
“ಭಾರತದ ಕೃಷಿ ಮತ್ತು ರೈತರನ್ನು ಕಾರ್ಪೋರೆಟ್ ಶಕ್ತಿಗಳಿಂದ ರಕ್ಷಿಸಲು ಸಮಾಜದ ಎಲ್ಲಾ ವರ್ಗದವರು ರೈತರ ಹೋರಾಟದಲ್ಲಿ ಕೈಜೋಡಿಸಬೇಕಾಗಿದೆ. ರೈತರ ಹಕ್ಕುಗಳು ಮತ್ತು ಜೀವನೋಪಾಯಕ್ಕಾಗಿ ನಡೆಸುತ್ತಿರುವ ಈ ಹೋರಾಟಕ್ಕೆ ಸೇರಲು ನಾವು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇವೆ” ಎಂದಿದ್ದಾರೆ.
ರೈತ ಹೋರಾಟದ ವಿವಿಧ ಹಂತಗಳಲ್ಲಿ ಪೊಲೀಸರು ರೈತರ ಮೇಲೆ ಅಮಾನವೀಯವಾಗಿ ವರ್ತಿಸುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ರೈತರ ದೆಹಲಿ ಚಲೋಗೆ ಈಗಾಗಲೇ ದೇಶಾದ್ಯಂತ ಒಗ್ಗಟ್ಟಿನ ಬೆಂಬಲ ವ್ಯಕ್ತವಾಗಿದ್ದು, ಹಲವು ರಾಜ್ಯಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯಾರ್ಥಿ ಸಂಘಟನೆಗಳು, ದಲಿತ, ಕಾರ್ಮಿಕ ಸಂಘಟನೆಗಳು ರೈತರ ಪರವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿವೆ.