ಉತ್ತರಪ್ರದೇಶದಲ್ಲಿ ಜಾರಿಯಾಗಿರುವ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮಹಿಳೆಯ ಪತಿ ಮತ್ತು ಪತಿಯ ಸಹೋದರನನ್ನು ಬಂಧಿಸಿದ ನಂತರ ಯುವ ಗರ್ಭಿಣಿ ಯುವತಿಯನ್ನು ಸರ್ಕಾರಿ ಆಶ್ರಯ ತಾಣದಲ್ಲಿ ಇರಿಸಲಾಗಿದೆ. ಆದರೆ, ಹೊಟ್ಟೆನೋವು, ರಕ್ತಸ್ರಾವ ಸೇರಿದಂತೆ ಗರ್ಭಧಾರಣೆ ಸಂಬಂಧಿತ ತೊಂದರೆಗಳ ಹಿನ್ನೆಲೆ ಮೂರು ದಿನಗಳಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೊರಾದಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 22 ವರ್ಷದ ಹಿಂದೂ ಯುವತಿ ಜುಲೈನಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಈ ದಂಪತಿ ಡಿಸೆಂಬರ್ 5 ರಂದು ಮದುವೆಯನ್ನು ನೋಂದಾಯಿಸಲು ಹೋಗಿದ್ದಾಗ, ಬಜರಂಗದಳದ ಕಾರ್ಯಕರ್ತರು ಆಕೆಯ ಪತಿ ಮತ್ತು ಪತಿಯ ಸಹೋದರನನ್ನು ಪೊಲೀಸರಿಗೆ ಒಪ್ಪಿಸಿ ಈಕೆಯನ್ನು ಎಳೆದೊಯ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ವಿವಾಹಕ್ಕಾಗಿ ಮತಾಂತರ ಸೇರಿದಂತೆ ಮೋಸದ ಮತ್ತು ಬಲವಂತದ ಮತಾಂತರಗಳನ್ನು ನಿಷೇಧಿಸುವ ಹೊಸ ಕಾನೂನುಗಳ ಅಡಿಯಲ್ಲಿ ಮಹಿಳೆಯ ಪತಿ ಮತ್ತು ಅವರ ಸಹೋದರನನ್ನು ಬಂಧಿಸಲಾಯಿತು.
ಆದರೆ, ಕಾನೂನು ಜಾರಿಗೆ ಬರುವ ನಾಲ್ಕು ತಿಂಗಳ ಮೊದಲು ತಾನು ಮದುವೆಯಾಗಿದ್ದೇನೆ ಎಂದು ಮಹಿಳೆ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಆಕೆಯ ಯಾವ ಮಾತುಗಳು ಪೊಲೀಸರನ್ನು ತಲುಪಲಿಲ್ಲ. ಆಕೆಯನ್ನು ಜಿಲ್ಲೆಯ ಸರ್ಕಾರಿ ಮಹಿಳಾ ಆಶ್ರಯಕ್ಕೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ಉತ್ತರ ಪ್ರದೇಶ: ವೈದ್ಯಕೀಯ ಕೋರ್ಸ್ ಬಳಿಕ 10 ವರ್ಷ ಸರ್ಕಾರಿ ಸೇವೆ ಕಡ್ಡಾಯ
ಜಿಲ್ಲೆಯ ಸರ್ಕಾರಿ ಮಹಿಳಾ ಆಶ್ರಯದಲ್ಲಿ ಮಹಿಳೆಗೆ ಗರ್ಭಪಾತವಾಗಿದೆ ಎಂಬ ವರದಿಗಳು ಹರಡಿದ್ದವು. ಈ ಎಲ್ಲಾ ವದಂತಿಗಳನ್ನು ಸರ್ಕಾರ ನಿರಾಕರಿಸಿತ್ತು. ’ಪತ್ರಿಕೆಯಲ್ಲಿ ವರದಿಯಾಗಿರುವುದು ಸುಳ್ಳು’ ಎಂದು ರಾಜ್ಯದ ಮಕ್ಕಳ ಹಕ್ಕುಗಳ ಸಮಿತಿಯ ಮುಖ್ಯಸ್ಥ ವಿಶೇಶ್ ಗುಪ್ತಾ ಹೇಳಿದ್ದಾರೆ.
“ಮಹಿಳೆಯನ್ನು ಭಾನುವಾರ ಡಿಸ್ಚಾರ್ಜ್ ಮಾಡಿ ಕಳುಹಿಸಲಾಗಿದೆ. ಆ ಸಮಯದಲ್ಲಿ ಅವರು ಮೂರು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ಮಗುವಿಗೆ ಹೃದಯ ಬಡಿತವಿತ್ತು’ ಎಂದು ಹೇಳಿದ್ದಾರೆ.
ಆದರೆ, ಕೆಲವೇ ಗಂಟೆಗಳಲ್ಲಿ ಮಹಿಳೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್ಡಿಟಿವಿ ಖಚಿತಪಡಿಸಿದೆ. ಹೊಟ್ಟೆನೋವಿನ ಬಗ್ಗೆ ದೂರು ನೀಡಿದ ನಂತರ ಡಿಸೆಂಬರ್ 11 ರಂದು (ಶುಕ್ರವಾರ) ಆಕೆಯನ್ನು ಮೊದಲು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಭಾನುವಾರ ಡಿಸ್ಚಾರ್ಜ್ ಮಾಡಲಾಯಿತು.
ಆದರೆ, ಆಕೆ ಡಿಸ್ಚಾರ್ಜ್ ಆದ ಕೆಲವೇ ಗಂಟೆಗಳ ನಂತರ, ರಕ್ತಸ್ರಾವ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಂದ ಭಾನುವಾರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಡಾ. ಗುಪ್ತಾ ದೃಢಪಡಿಸಿದ್ದಾರೆ ಎಂದು ಎನ್ಡಿಟಿವಿ ಉಲ್ಲೇಖಿಸಿದೆ.
“ಆಸ್ಪತ್ರೆಗೆ ಬಂದ ನಂತರ ಗರ್ಭಿಣಿ ರಕ್ತಸ್ರಾವವೂ ನಿಂತುಹೋಗಿದೆ. ಇಲ್ಲಿಗೆ ಬಂದ ನಂತರ ಆಕೆಗೆ ರಕ್ತಸ್ರಾವವಾಗಲಿಲ್ಲ” ಎಂದು ಮೊರಾದಾಬಾದ್ನ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಸುನೀತಾ ಪಾಂಡೆ ಹೇಳಿದ್ದಾರೆ. ಯುವತಿಯ ಕುಟುಂಬವನ್ನು ಸಹ ಆಕೆಯಿಂದ ದೂರವಿರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದ ವೀಡಿಯೊಗಳಲ್ಲಿ, ಯುವತಿ ಮತ್ತು ಆಕೆಯ ಪತಿಗೆ ಬಜರಂಗದಳದ ಸದಸ್ಯರು “ನಿಮ್ಮಂತಹ ಜನರಿಂದಲೇ ಈ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಬೇಕಾಯಿತು” ಎಂದು ಹೇಳಿದ್ದು ದಾಖಲಾಗಿದೆ.